Advertisement

ಖಾಕಿ ಕಾವಲಲ್ಲಿ ಟಿಪ್ಪು ಸ್ಮರಣೆ

11:17 AM Nov 11, 2017 | Team Udayavani |

ಬೆಂಗಳೂರು: ಸೂಕ್ಷ್ಮಪ್ರದೇಶಗಳೂ ಸೇರಿದಂತೆ ನಗರದಾದ್ಯಂತ ಮುಂಜಾಗ್ರತಾ ಕ್ರಮವಾಗಿ ಸೂಕ್ತ ಬಿಗಿಬಂದೋಬಸ್ತ್ ಹಿನ್ನೆಲೆಯಲ್ಲಿ ಶುಕ್ರವಾರ ಟಿಪ್ಪುಜಯಂತಿ ಶಾಂತಿಯುತವಾಗಿ ನಡೆಯಿತು.

Advertisement

ಈ ಮುಂಚೆ ನಿಗದಿಯಾಗಿದ್ದ ಟಿಪ್ಪುಜಯಂತಿ ಕಾರ್ಯಕ್ರಮಗಳನ್ನು ಹೊರತುಪಡಿಸಿ, ಪ್ರತ್ಯೇಕವಾಗಿ ಟಿಪ್ಪು ಪರ- ವಿರೋಧದ ಪ್ರತಿಭಟನೆ, ಮೆರವಣಿಗೆಗೆ ಅವಕಾಶ ನೀಡಿರಲಿಲ್ಲ. ಜತೆಗೆ ಯಾವುದೇ ಕಾರ್ಯಕ್ರಮದಲ್ಲಿಯೂ ಘೋಷಣೆ ಕೂಗುವುದು, ಅಸಂಬದ್ಧ ಭಾಷಣ ಮಾಡುವುದಕ್ಕೆ ಪೊಲೀಸರು ನಿರ್ಬಂಧ ಹೇರಿದ್ದರು.

ಖಾಕಿ ಸರ್ಪಗಾವಲಿನ ನಡುವೆ ವಿಧಾನಸೌಧದ ಬಾಂಕ್ವೆಟ್‌ಹಾಲ್‌ನಲ್ಲಿ ಶುಕ್ರವಾರ ಸಂಜೆ ನಡೆದ ಟಿಪ್ಪುಜಯಂತಿ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಜನರು ಬಂದಿದ್ದರು. ಸಾವಿರಾರು ಮಂದಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಈ ವೇಳೆ ಉಂಟಾದ ತಳ್ಳಾಟ, ನೂಕಾಟದಲ್ಲಿ ಸಾರಾಯಿಪಾಳ್ಯದ ಯುವಕ ಇರ್ಫಾನ್‌ ಎಂಬಾತನನ್ನು ಪೊಲೀಸರು ಎಳೆದಿದ್ದಾರೆ. ಕೆಳಗೆ ಬಿದ್ದ ಆತನ ಕಾಲಿಗೆ ಪೆಟ್ಟಾಗಿದ್ದು ರಕ್ತಹರಿದಿದೆ. ಆತನ ಸ್ನೇಹಿತರು ಹಾಗೂ ಪೊಲೀಸರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು, ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಯುವಕರನ್ನು ಕಳುಹಿಸಿಕೊಟ್ಟರು.

ಪೊಲೀಸರು ಬಲವಂತಾಗಿ ಟಿಪ್ಪುಬಾವುಟ ಕಿತ್ತುಕೊಂಡು  ಒಳಗೆ ಬಿಡದೆ ಹೊಡೆದಿದ್ದಾರೆ ಎಂಬ ಯುವಕನ ಆರೋಪ ನಿರಾಧಾರ. ಹೆಚ್ಚು ಗುಂಪಿದ್ದರಿಂದ ಸಿಬ್ಬಂದಿ ಗದರಿಸಿರಬಹುದು, ಎಳೆದುಕೊಂಡಿರಬಹುದು ಗದ್ದಲದಲ್ಲಿ ಆತನಿಗೆ ಪೆಟ್ಟಾಗಿರಬಹುದು ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

Advertisement

ಮತ್ತೂಂದೆಡೆ ಟೌನ್‌ಹಾಲ್‌, ರವೀಂದ್ರ ಕಲಾಕ್ಷೇತ್ರ ಸುತ್ತಮುತ್ತಲ ಭಾಗಗಳಲ್ಲಿ ಶುಕ್ರವಾರ ಮಧ್ಯಾಹ್ನ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ, ವಾಹನ ಸಂಚಾರವನ್ನೂ ಕೆಲಕಾಲ ನಿರ್ಭಂಧಿಸಲಾಗಿತ್ತು. ಎಲ್ಲಾ ಕಡೆ ಗಸ್ತು ತಿರುಗುತ್ತಿದ್ದ ಹೊಯ್ಸಳ ಸಿಬ್ಬಂದಿ ಸಾರ್ವಜನಿಕ ಸ್ಥಳಗಳಲ್ಲಿ ಜನ ಹೆಚ್ಚುಹೆಚ್ಚು ಗುಂಪುಗೂಡದಂತೆ ಕಳುಹಿಸಿಕೊಡುತ್ತಿದ್ದರು.

ಕೆಲ ಪ್ರದೇಶಗಲ್ಲಿ ಸಾರ್ವಜನಿಕರೇ ಸ್ವಯಂಪ್ರೇರಿತವಾಗಿ ಅಂಗಡಿಬಾಗಿಲುಗಳನ್ನು ಮುಚ್ಚಿದ್ದ ದೃಶ್ಯ ಕಂಡು ಬರುತ್ತಿತ್ತು. ಬನಶಂಕರಿಯ ಯಾರಾಬ್‌ ನಗರದಲ್ಲಿ ಟಿಪ್ಪುಜಯಂತಿ ವೇಳೆ ಕೆಲ ಯುವಕರು ಟಿಪ್ಪುಬಾವುಟ ಹಿಡಿದು ಘೋಷಣೆ ಕೂಗಿದರು. ಆದರೆ, ಪೊಲೀಸರು ಘೋಷಣೆ ಹಾಗೂ ಮೆರವಣಿಗೆ ನಡೆಯುವ ಯತ್ನವನ್ನು ಮೊಟಕುಗೊಳಿಸಿದರು.

 ನವೆಂಬರ್‌ 9ರ ರಾತ್ರಿಯಿಂದಲೇ ಭದ್ರತೆಗೆ ನಿಯೋಜನೆಗೊಂಡಿದ್ದ 30 ಕೆಸ್‌ಆರ್‌ಪಿ, 25 ಸಶಸ್ತ್ರ ಮೀಸಲು ಪಡೆ. ಗರುಡಪಡೆ, ಹೊಯ್ಸಳ  ಸೇರಿದಂತೆ 11 ಸಾವಿರ ಸಿಬ್ಬಂದಿಯೂ, ವಿಧಾನಸೌಧ, ಟೌನ್‌ ಹಾಲ್‌, ಶಿವಾಜಿನಗರ, ಕೆ.ಜಿ ಹಳ್ಳಿ, ಸೇರಿದಂತೆ ನಗರದ ಎಲ್ಲಾ ಭಾಗಗಳಲ್ಲಿಯೂ ಕರ್ತವ್ಯಕ್ಕೆ ಹಾಜರಾಗಿದ್ದರು. ಜೊತೆಗೆ  ಆಯಾ ವಿಭಾಗದ ಆಯುಕ್ತರು, ಡಿಸಿಪಿಗಳು, ಎಸಿಪಿಗಳು  ಗಸ್ತು ತಿರುಗಿ ಪರಿಸ್ಥಿತಿ ಅವಲೋಕಿಸಿ ಆಯುಕ್ತರಿಗೆ ಮಾಹಿತಿ ನೀಡುತ್ತಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಟ್ರಾಫಿಕ್‌ ಜಾಂ ಬಿಸಿ!: ಅರಮನೆ ಮೈದಾನದಲ್ಲಿ ಅಹಿಂಸಾ ಸಂಘಟನೆ ಹಮ್ಮಿಕೊಂಡಿದ್ದ ಪ್ರತಿಭಟನೆ ಹಿನ್ನೆಲೆಯಲ್ಲಿ ಮಧ್ಯಾಹ್ನ ಅರಮನೆ ರಸ್ತೆ, ಕುಮಾರಕೃಪಾ ರಸ್ತೆ, ಲೀಲಾಪ್ಯಾಲೇಸ್‌ ರಸ್ತೆಗಳಲ್ಲಿ  ಭಾರೀ ಟ್ರಾಫಿಕ್‌ ಜಾಮ್‌ ಉಂಟಾಗಿ ವಾಹನ ಸವಾರರು ತೊಂದರೆ ಅನುಭವಿಸುಂತಾಯಿತು.  ಸಂಜೆ ವಿಧಾನಸೌಧದ ಬಾಂಕ್ವೆಟ್‌ ಹಾಲ್‌ನಲ್ಲಿ ನಡೆದ ಟಿಪ್ಪುಜಯಂತಿಗೆ ನಿರೀಕ್ಷೆಗೂ ಮೀರಿ ವಾಹನಗಳಲ್ಲಿ ಜನ ಆಗಮಿಸಿದ್ದರಿಂದ ಸುತ್ತಮುತ್ತಲ ರಸ್ತೆಗಳಲ್ಲಿ ಟ್ರಾಫಿಕ್‌ ಜಾಮ್‌  ಉಂಟಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next