Advertisement

ಸ್ವಾಮಿ ಹುಂಡಿಗೆ ಚಿನ್ನ -ಬೆಳ್ಳಿ, ಬೇಡಿಕೆ ಪತ್ರ

07:33 PM Mar 10, 2021 | Team Udayavani |

ನಾಯಕನಹಟ್ಟಿ: ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಮಂಗಳವಾರ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ 28.43 ಲಕ್ಷ ರೂ. ಸಂಗ್ರಹವಾಗಿದೆ. ಒಳಮಠದ ಹುಂಡಿಯಲ್ಲಿ 23,88,363 ರೂ., ಹೊರಮಠದ ಹುಂಡಿಗಳಲ್ಲಿ 4,55,480 ರೂ. ಸೇರಿ ಒಟ್ಟು 28,43,843 ರೂ. ಸಂಗ್ರಹವಾಗಿದೆ.

Advertisement

ಈ ಹಿಂದೆ 3.11.2020ರಂದು ಹುಂಡಿ ಹಣವನ್ನು ಎಣಿಕೆ ಮಾಡಲಾಗಿತ್ತು. ಆಗ ಎರಡೂ ದೇವಾಲಯಗಳಿಂದ ಒಟ್ಟಾರೆ 26,10,880 ರೂ. ಸಂಗ್ರಹವಾಗಿತ್ತು. ಈ ಬಾರಿ ಎಣಿಕಾ ಕಾರ್ಯದಲ್ಲಿ 2.32 ಲಕ್ಷ ರೂ. ಹೆಚ್ಚಿನ ಪ್ರಮಾಣದ ಹಣ ಸಂಗ್ರಹವಾಗಿದೆ. ನಾಲ್ಕು ತಿಂಗಳು 6 ದಿನಗಳಲ್ಲಿ ಸಂಗ್ರಹವಾಗಿರುವ ಹುಂಡಿ ಹಣ ಇದಾಗಿದೆ. ಎರಡೂ ದೇವಾಲಯಗಳಲ್ಲಿ ಭಾರೀ ಪ್ರಮಾಣದ ಚಿಲ್ಲರೆ ಸಂಗ್ರಹವಾಗಿತ್ತು. ಹೊರಮಠದಲ್ಲಿ 23,240 ರೂ., ಒಳಮಠದಲ್ಲಿ 89,035 ರೂ. ಸೇರಿದಂತೆ ಒಟ್ಟಾರೆ 1,12,275 ರೂ.ಗಳಷ್ಟು ಚಿಲ್ಲರೆ ನಾಣ್ಯಗಳು ಸಂಗ್ರಹವಾಗಿದ್ದವು.

ಭಕ್ತರು ಹಣದ ಜತೆಗೆ ಬೆಳ್ಳಿ ಹಾಗೂ ಬಂಗಾರದ ವಸ್ತುಗಳನ್ನು ಹುಂಡಿಗೆ ಹಾಕುವ ರೂಢಿಯಿದೆ. ಒಳಮಠದ ಹುಂಡಿಯಲ್ಲಿ ಚೈನ್‌, ಉಂಗುರ, ಪಾದುಕೆ, ಛತ್ರಿ, ಕರಡಿಗೆ, ತೊಟ್ಟಿಲು, ಕಣ್ಣು, ವಿನಾಯಕ ಮೂರ್ತಿ  ಸೇರಿದಂತೆ ವಿಧ ರೀತಿಯ ಬೆಳ್ಳಿ ಹಾಗೂ ಬಂಗಾರದ ವಸ್ತುಗಳು ಕಂಡುಬಂದವು.

ಹರಕೆ ಫಲಿಸಿದ ಭಕ್ತರು ಬೆಳ್ಳಿ ಅಥವ ಬಂಗಾರದ ವಸ್ತುಗಳನ್ನು ಹುಂಡಿಗೆ ಹಾಕುತ್ತಾರೆ. ಮಕ್ಕಳ ಫಲ, ಪದನ್ನೋತಿ, ವಿದ್ಯೆ, ವ್ಯಾಪಾರದಲ್ಲಿ ಲಾಭ ಸೇರಿದಂತೆ ವಿವಿಧ ಹರಕೆಗಳಿಂದ ಭಕ್ತರು ಚಿನ್ನದ ವಸ್ತುಗಳನ್ನು ದೇವರಿಗೆ ಸಮರ್ಪಿಸಿದ್ದಾರೆ. ಚಿನ್ನದ ಕಿವಿ ಓಲೆ, 1911ರ ಕಾಲದ ಚಿನ್ನದ ನಾಣ್ಯ ವಿಶೇಷವಾಗಿ ಗಮನ  ಸೆಳೆದವು. ಬೆಳ್ಳಿ, ಬಂಗಾರದ ವಸ್ತುಗಳನ್ನು ಸಂಗ್ರಹಿಸಿ, ಅಕ್ಕಸಾಲಿಗರಿಂದ ಪರೀಕ್ಷಿಸಿ ದೇವಾಲಯದ ಖಜಾನೆಗೆ ಸಲ್ಲಿಸಲಾಯಿತು.

ಎರಡು ತಿಂಗಳ ಹಿಂದೆ ಗ್ರಾಪಂ ಚುನಾವಣೆ ನಡೆದ ಈ ಹಿನ್ನೆಲೆಯಲ್ಲಿ ಹಲವಾರು ಭಕ್ತಾದಿಗಳು ದೇವಾಲಯದ ಹುಂಡಿಗೆ ಹಣದ ಜತೆಗೆ ಹರಕೆ ರೂಪದಲ್ಲಿ ಅರ್ಜಿ ಹಾಕಿದ್ದರು. ಭರಮಸಾಗರ, ಮಲ್ಲೇಬೋರನಹಟ್ಟಿ, ಚಿಕ್ಕಮ್ಮನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಗ್ರಾಪಂ ಅಭ್ಯರ್ಥಿಗಳು ಚುನಾವಣೆ ಕರಪತ್ರ ಹುಂಡಿಗೆ ಹಾಕಿ ಗೆಲ್ಲಿಸುವಂತೆ ದೇವರಲ್ಲಿ ವಿನಂತಿಸಿದ್ದಾರೆ.

Advertisement

ಆಂಧ್ರ ಮೂಲದ ವ್ಯಕ್ತಿಯೊಬ್ಬರು ತಮ್ಮ ಮಗ ಸಾಗರ್‌ ತಿಪ್ಪೇಶನ ದಯೆಯಿಂದ ಎಸ್ಸೆಸ್ಸೆಲ್ಸಿ ಪಾಸಾಗಿದ್ದಾನೆ. ಆದ್ದರಿಂದ 5001 ರೂ.ಗಳನ್ನು ದೇವರಿಗೆ ಅರ್ಪಿಸುತ್ತಿದ್ದೇನೆ. ಮುಂದೆ ಅವನ ವಿದ್ಯಾಭ್ಯಾಸ ಉತ್ತಮವಾಗಿರಲಿ ಎಂದು ಬೇಡಿಕೊಳ್ಳುತ್ತೇನೆ ಎಂದು ಪತ್ರ ಬರೆದು ಹುಂಡಿಗೆ ಹಾಕಿದ್ದಾರೆ.

ಪತ್ರಗಳು, ಕರಪತ್ರಗಳೂ ಬೇಡಿಕೆಗಳು ಹುಂಡಿಯಲ್ಲಿದ್ದವು. ವರ್ಷದಲ್ಲಿ ನಾಲ್ಕು ಬಾರಿ ಹುಂಡಿ ಹಣ ಎಣಿಸಲಾಗುತ್ತಿದೆ. ತಳಕು, ನಾಯಕನಹಟ್ಟಿ, ಚಳ್ಳಕೆರೆ ಸೇರಿದಂತೆ 80ಕ್ಕೂ ಹೆಚ್ಚು ಕಂದಾಯ ಇಲಾಖೆ ಸಿಬ್ಬಂದಿ, ಕೆನರಾ ಬ್ಯಾಂಕ್‌ ಸಿಬ್ಬಂದಿ ಎಣಿಕಾ ಕಾರ್ಯದಲ್ಲಿ ಪಾಲೊಂಡಿದ್ದರು. ತಹಶೀಲ್ದಾರ್‌ ಎಂ.ಮಲ್ಲಿಕಾರ್ಜುನ, ದೇವಾಲಯದ ಇಒ ಮಂಜುನಾಥ ಬಿ. ವಾಲಿ, ಉಪ ತಹಶೀಲ್ದಾರ್‌ ಟಿ.ಜಗದೀಶ್‌, ಕೆನರಾ ಬ್ಯಾಂಕ್‌ ಮ್ಯಾನೇಜರ್‌ ಸೂರ್ಯದೇವ ನಾಯಕ್‌, ರಾಜಸ್ವ ನಿರೀಕ್ಷಕ ಚೇತನ್‌, ಗ್ರಾಮ ಲೆಕ್ಕಿಗ ಉಮಾ, ದೇವಾಲಯದ ಸಿಬ್ಬಂದಿ ಸತೀಶ್‌, ವಿರೂಪಾಕ್ಷಪ್ಪ ಮತ್ತಿತರರಿದ್ದರು. !

Advertisement

Udayavani is now on Telegram. Click here to join our channel and stay updated with the latest news.

Next