Advertisement

ಸಹಾಯ ದೂರುಗಳಿಗೆ ಕಾಲಮಿತಿಯಲ್ಲೇ ಪರಿಹಾರ

12:31 AM Oct 16, 2019 | Team Udayavani |

ಬೆಂಗಳೂರು: ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ರೂಪಿಸಿರುವ “ಸಹಾಯ ಆ್ಯಪ್‌’ನಲ್ಲಿ ದಾಖಲಾಗುವ ದೂರುಗಳನ್ನು ಕಾಲಮಿತಿಯೊಳಗೆ ಬಗೆಹರಿಸುವುದಕ್ಕೆ ಬಿಬಿಎಂಪಿ ಮುಂದಾಗಿದೆ.

Advertisement

ಮುಖ್ಯವಾಗಿ ಘನತ್ಯಾಜ್ಯ ನಿರ್ವಹಣೆಯ ಸಮಸ್ಯೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಾಲಮಿತಿಯ ಒಳಗೆ ಪರಿಹರಿಸುವುದಕ್ಕೆ ಬಿಬಿಎಂಪಿಯ ಸಹಾಯ ಆ್ಯಪ್‌ಗೆ ಸರ್ವಿಸ್‌ ಲೆವೆಲ್‌ ಅಗ್ರಿಮೆಂಟ್‌ ಎನ್ನುವ ಸಾಫ್ಟ್ವೇರ್‌ ಅಳವಡಿಸುವುದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು 12 ಗಂಟೆಗಳ ಒಳಗೆ ಮುಗಿಸಬೇಕು ಎನ್ನುವ ನಿಯಮವಿದೆ. ಬಿಬಿಎಂಪಿ ಸಹಾಯ ಆ್ಯಪ್‌ನಲ್ಲಿ ದಾಖಲಾಗುವ ದೂರುಗಳನ್ನು ಪರಿಹರಿಸುತ್ತಿದೆಯಾದರೂ, ಕಾಲಮಿತಿಯ ಒಳಗೆ ಸಮಸ್ಯೆಯನ್ನು ಪರಿಹರಿಸುತ್ತಿಲ್ಲ. ಇದೇ ಕಾರಣಕ್ಕೆ ಕಳೆದ ವರ್ಷ ನಡೆದ ಸ್ವಚ್ಛ ಸರ್ವೇಯಲ್ಲಿ ನಿಗದಿತ ವಿಷಯದಲ್ಲಿ ಬಿಬಿಎಂಪಿ ಸೊನ್ನೆ ಸುತ್ತಿತ್ತು.

ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಬಿಬಿಎಂಪಿಯು ಸಮಸ್ಯೆಗಳನ್ನು ಕಾಲಮಿತಿಯ ಒಳಗಾಗಿ ಪರಿಹರಿಸುವುದಕ್ಕೆ ಆದ್ಯತೆ ನೀಡಲು ಮುಂದಾಗಿದೆ. ಇದರ ಜತೆಗೆ ಯಾವ ಸಮಸ್ಯೆಗಳು ಹೆಚ್ಚು ದಾಖಲಾಗುತ್ತಿವೆ, ಯಾವ ಕಾರಣಕ್ಕೆ ಈ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಬಗ್ಗೆಯೂ ಪರಿಶೀಲನೆ ನಡೆಸಲು ಮುಂದಾಗಿದೆ.

ಗಣನೀಯ ಪ್ರಮಾಣದಲ್ಲಿ ದೂರು ದಾಖಲು: ಬಿಬಿಎಂಪಿಯ ಸಹಾಯ ಆ್ಯಪ್‌ನಲ್ಲಿ ಈ ವರ್ಷ ಜನವರಿಯಿಂದ ಅ.14ರ ವರೆಗೆ ಒಟ್ಟು 93,232 ದೂರುಗಳು ದಾಖಲಾಗಿದ್ದು, ಇದರಲ್ಲಿ 53,360 ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಇನ್ನು 23,958 ದೂರುಗಳು ಪ್ರಗತಿ ಹಂತದಲ್ಲಿವೆ. ದಿರ್ಘಾವಧಿಯಲ್ಲಿ ಪರಿಹರಿಸ ಬೇಕಾಗಿರುವ 1,911 ದೂರುಗಳಿವೆ ಎಂದು ಗುರುತಿಸಲಾಗಿದೆ.

Advertisement

ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ದೂರುಗಳೇ ಹೆಚ್ಚು: ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ದೂರುಗಳು ಹೆಚ್ಚು ದಾಖಲಾಗುತ್ತಿವೆ. ಬ್ಲಾಕ್‌ಸ್ಪಾಟ್‌ಗಳ ನಿರ್ಮಾಣ, ರಸ್ತೆ ಬದಿಗಳಲ್ಲಿ ಸ್ವಚ್ಛತೆ ಕಾಪಾಡದಿರುವುದು ಹಾಗೂ ತ್ಯಾಜ್ಯ ವಿಲೇವಾರಿಗೆ ವಾಹನಗಳು ಬರದೆ ಇರುವ ಬಗ್ಗೆಯೂ ದೂರುಗಳು ದಾಖಲಾಗುತ್ತಿವೆ.

ಈ ಸಮಸ್ಯೆಗಳನ್ನು ಕಾಲಮಿತಿಯೊಳಗೆ ಪರಿಹರಿಸದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಸಾಫ್ಟ್ವೇರ್‌ ಅಭಿವೃದ್ಧಿ ಮಾಡಲಾಗುತ್ತಿದೆ. ಉಳಿದಂತೆ ಶಿಕ್ಷಣಕ್ಕೆ ಸಂಬಂಧಿಸಿದಂತೆ 21 ದೂರು, ನಗರ ಯೋಜನೆಗೆ ಸಂಬಂಧಿಸಿ 62, ಆರೋಗ್ಯ 136, ತೋಟಗಾರಿಕೆ 437, ಹಣಕಾಸು 1,142 ಹಾಗೂ ಕಲ್ಯಾಣ ವಿಭಾಗ 22 ಮಾರುಕಟ್ಟೆಯಲ್ಲಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ 84 ದೂರುಗಳು ದಾಖಲಾಗಿವೆ.

ಆಯುಕ್ತರ ಖಾತೆಯಲ್ಲೂ ದೂರುಗಳ ಸುರಿಮಳೆ!: ಬಿಬಿಎಂಪಿಯ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿರುವುದರಿಂದ ಸಾರ್ವಜನಿಕರು ಇಲ್ಲೂ ದೂರುಗಳನ್ನು ಸಲ್ಲಿಸುತ್ತಿದ್ದಾರೆ! ಆಯುಕ್ತರ ಫೇಸ್‌ಬುಕ್‌ ಮತ್ತು ಟ್ವಿಟರ್‌ ಖಾತೆಗಳಲ್ಲೂ ಸಾರ್ವಜನಿಕರು ಚಿತ್ರ ಸಹಿತ ದೂರು ದಾಖಲಿಸಿ, ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸುತ್ತಿದ್ದಾರೆ. ಇದರಲ್ಲಿ ಕೆಲವು ದೂರುಗಳಿಗೆ ಆಯುಕ್ತರು ಸ್ಪಂದಿಸಿದ್ದಾರೆ.

ಸಾರ್ವಜನಿಕರು ದಾಖಲಿಸುವ ದೂರುಗಳನ್ನು ಕಾಲಮಿತಿಯ ಒಳಗೆ ಪರಿಹರಿಸಲು ಆದ್ಯತೆ ನೀಡಲಾಗುತ್ತಿದೆ. ಸಮಸ್ಯೆ ಸರ್ಮಪಕವಾಗಿ ಪರಿಹಾರವಾಗದಿದ್ದರೆ ಮತ್ತೆ ದೂರು ದಾಖಲಿಸಬಹುದು. ಈ ರೀತಿ ಎರಡನೇ ಬಾರಿ ದಾಖಲಾಗುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ.
-ಲೋಕೇಶ್‌, ಬಿಬಿಎಂಪಿ ವಿಶೇಷ ಆಯುಕ್ತ (ಹಣಕಾಸು)

ವಿಭಾಗ ನಿಗದಿ ಪ್ರಗತಿ ಪರಿಹಾರ ಒಟ್ಟು
ಜಾಹೀರಾತು 1 22 92 116
ಪ್ರಾಣಿಗಳ ಸಮಸ್ಯೆ 1,353 3062 3803 8,294
ಒತ್ತುವರಿ 6 63 54 125
ಎಂಜಿನಿಯರಿಂಗ್‌ 6,431 14036 25,707 49,105
ಅರಣ್ಯ ಇಲಾಖೆ 471 1,408 1920 3,809
ಕೆರೆ 7 13 450 528
ಘನತ್ಯಾಜ್ಯ ನಿರ್ವಹಣೆ 3,309 4,547 19,448 28,288

* ಹಿತೇಶ್‌ ವೈ.

Advertisement

Udayavani is now on Telegram. Click here to join our channel and stay updated with the latest news.

Next