Advertisement

ಹುಲಿ ಗಣತಿ ವರದಿ: ಶ್ಲಾಘನೀಯ ಸಾಧನೆ

01:45 AM Aug 01, 2019 | mahesh |

ಹುಲಿ ಸಂರಕ್ಷಣೆಯ ವಿಚಾರದಲ್ಲಿ ಕಳೆದ ಕೆಲವು ವರ್ಷಗಳಿಂದ ಜಗತ್ತಿನಾದ್ಯಂತ ತೀವ್ರ ಜಾಗೃತಿ ವಹಿಸಲಾಗುತ್ತಿದೆ. ಆದರೂ, ಈ ವಿಷಯದಲ್ಲಿ ಸಕಾರಾತ್ಮಕವೆನ್ನುವಂಥ ಸುದ್ದಿಗಳೇನೂ ಹೆಚ್ಚು ಹೊರಹೊಮ್ಮುತ್ತಲೇ ಇರಲಿಲ್ಲ. ಆದರೆ ಈಗ ಹುಲಿಗಳ ಸಂಖ್ಯೆಯ ಮೇಲೆ ಹೊರಬಿದ್ದಿರುವ ಅಂಕಿಅಂಶಗಳು, ಇದೆಲ್ಲ ಇಷ್ಟು ವರ್ಷಗಳ ಪ್ರಯತ್ನಗಳ ಒಟ್ಟು ಸಕಾರಾತ್ಮಕ ಫ‌ಲ ಎಂಬ ಸಂದೇಶವನ್ನು ಕಳುಹಿಸಿವೆ.

Advertisement

ವಿಶ್ವ ಹುಲಿಗಳ ದಿನದಂದು ಪ್ರಧಾನಿ ಮೋದಿಯವರು ಬಿಡುಗಡೆ ಮಾಡಿದ ಹುಲಿ ಗಣತಿ ವರದಿಯು ಭಾರತದಲ್ಲಿ ಹುಲಿಗಳ ಸಂಖ್ಯೆ ದ್ವಿಗುಣಗೊಂಡಿರುವುದನ್ನು ಸಾರುತ್ತಿದೆ. 2018ರ ಹುಲಿ ಗಣತಿಯ ಪ್ರಕಾರ ಭಾರತದಲ್ಲಿ 2,967 ಹುಲಿಗಳಿದ್ದು, 2006ರಲ್ಲಿದ್ದ 1,411 ಹುಲಿಗಳ ಸಂಖ್ಯೆಗಿಂತ ಇದು ಎರಡು ಪಟ್ಟು ಅಧಿಕ.

‘ಒಂಬತ್ತು ವರ್ಷಗಳ ಹಿಂದೆ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಡೆದಿದ್ದ ವನ್ಯಜೀವಿ ಸಂರಕ್ಷಣೆ ಕುರಿತ ಸಮ್ಮೇಳನದಲ್ಲಿ ಎಲ್ಲಾ ರಾಷ್ಟ್ರಗಳು ತಮ್ಮಲ್ಲಿರುವ ಹುಲಿ ಸಂತತಿಯನ್ನು 2022ರೊಳಗೆ ದುಪ್ಪಟ್ಟು ಮಾಡಬೇಕೆಂದು ಕರೆ ನೀಡಲಾಗಿತ್ತು, ಭಾರತವು ಆ ಗಡಿ ಮುಗಿಯಲು ಇನ್ನೂ ನಾಲ್ಕು ವರ್ಷ ಬಾಕಿ ಇರುವಂತೆಯೇ ಗುರಿ ತಲುಪಿದೆ’ ಎಂಬ ಪ್ರಧಾನಿಯ ಮಾತು, ನಿಜಕ್ಕೂ ಹೆಮ್ಮೆಪಡಬೇಕಾದ ವಿಚಾರ.

ಅದರಷ್ಟೇ ಹೆಮ್ಮೆಯ ವಿಚಾರವೆಂದರೆ, ದೇಶದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ ಸಿಕ್ಕಿದೆ ಎನ್ನುವುದು. ಆದಾಗ್ಯೂ, ಹಿಂದಿನ ಎರಡು ಗಣತಿಗಳಲ್ಲಿ ಕರ್ನಾಟಕವೇ ಮೊದಲ ಸ್ಥಾನದಲ್ಲಿತ್ತು, ಹಾಗೆಂದು, ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಕಡಿಮೆಯಾಗಿದೆ ಎಂದೇನೂ ಇದರರ್ಥವಲ್ಲ, ಬದಲಾಗಿ ಮಧ್ಯಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿರುವುದು ಇದಕ್ಕೆ ಕಾರಣ.

2006ರಲ್ಲಿ ಹುಲಿಗಳ ಸಂಖ್ಯೆ ಹದಿನಾಲ್ಕು ನೂರಕ್ಕೆ ಬಂದು ನಿಂತಾಗ ನಿಜಕ್ಕೂ ಕಳವಳ ಉಂಟಾಗಿದ್ದು ಸುಳ್ಳಲ್ಲ. ಆ ಸಮಯದಿಂದಲೇ ಹುಲಿ ಸಂರಕ್ಷಣೆಗಾಗಿ ಅಭಯಾರಣ್ಯಗಳ ವಿಸ್ತರಣೆಯಿಂದ ಹಿಡಿದು, ಅವುಗಳಿಗೆ ಅನುಕೂಲಕರ ವಾತಾವರಣ ನಿರ್ಮಿಸುವಂಥ ಉಪಕ್ರಮಗಳನ್ನು ಜಾರಿಗೆ ತರಲಾಯಿತು. ಇದೆಲ್ಲದರ ಪರಿಣಾಮವಾಗಿ ಇಂದು ಸಂತೋಷದಾಯಕ ಫ‌ಲಿತಾಂಶ ಹೊರಬಂದಿದೆ. ಈ ಬಾರಿ ಹುಲಿಗಳ ಗಣತಿಗೆ 28 ಮಾನದಂಡಗಳನ್ನು ಉಪಯೋಗಿಸಲಾಗಿತ್ತು. ಇನ್ನು 2014ರ ಗಣತಿಯಲ್ಲಿ ಒಂದೂವರೆ ವರ್ಷಕ್ಕೂ ಮೇಲ್ಪಟ್ಟ ಹುಲಿಗಳನ್ನು ಎಣಿಸಲಾಗಿತ್ತು, ಅದೇ 2018ರ ಸರ್ವೇಯಲ್ಲಿ ಒಂದು ವರ್ಷದ ಹುಲಿಗಳನ್ನೂ ಪರಿಗಣಿಸಲಾಗಿದೆ. 2014ರಲ್ಲಿ 692ರಷ್ಟಿದ್ದ ದೇಶದಲ್ಲಿನ ಹುಲಿಗಳ ಸಂರಕ್ಷಿತ ವಲಯಗಳ ಸಂಖ್ಯೆ, 2019ರ ಹೊತ್ತಿಗೆ 860ಕ್ಕೆ ಏರಿದೆ. ಅಲ್ಲದೇ ಹುಲಿಗಳ ಮೀಸಲು ಕೇಂದ್ರಗಳ ಸಂಖ್ಯೆಯು 2014ರಲ್ಲಿ 43ರಷ್ಟಿದ್ದದ್ದು 2019ರ ವೇಳೆಗೆ 100ಕ್ಕೆ ತಲುಪಿದೆ.

Advertisement

ಪರಿಣತರ ಪ್ರಕಾರ ಇದುವರೆಗೂ ಬೇರಾವ ದೇಶದಲ್ಲೂ ಇಷ್ಟೊಂದು ಬೃಹತ್‌ ಸರ್ವೇ ನಡೆದೇ ಇಲ್ಲ.

ಆದಾಗ್ಯೂ ಪ್ರಸಕ್ತ ಅಂಕಿ-ಅಂಶಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿವೆಯಾದರೂ, ಸತ್ಯವೇನೆಂದರೆ, ಈಗಲೂ ಅಪಾಯ ದೂರವಾಗಿಲ್ಲ. ಹುಲಿಗಳ ವಾಸ ಪ್ರದೇಶಗಳಲ್ಲಿ ವಿವಿಧ ರೂಪದಲ್ಲಿ ಮನುಷ್ಯನ ಉಪಸ್ಥಿತಿಯು ಸಮಸ್ಯೆಯನ್ನು ಹೆಚ್ಚಿಸುತ್ತಿದೆ. ಇದಷ್ಟೇ ಅಲ್ಲದೆ, ಯಾವ ಸುಂದರಬನ್‌ ಪ್ರದೇಶವನ್ನು ಹುಲಿಗಳ ಸ್ವರ್ಗ ಎಂದು ಕರೆಯಲಾಗುತ್ತಿತ್ತೋ ಆ ಪ್ರದೇಶದ ಬಹಳಷ್ಟು ಭಾಗವೂ ಕೂಡ ಸಾಗರದ ಹೊಡೆತಕ್ಕೆ ಮುಳುಗಿ ಹೋಗುವ ಅಪಾಯವೂ ಇದೆ. ಇದೇನಾದರೂ ಆದರೆ ಹೊಸ ಸವಾಲು ಎದುರಾಗಿ ನಿಲ್ಲುತ್ತದೆ. ಆ ಸವಾಲನ್ನು ಸಕ್ಷಮವಾಗಿ ಎದುರಿಸಲು ಭಾರತ ಸಿದ್ಧವಿರಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next