Advertisement

ಪ್ರಯಾಣದರ ಹೆಚ್ಚಳ: ಸಂಚಾರ ನಿಯಂತ್ರಕ ತರಾಟೆಗೆ

04:20 AM Jun 02, 2018 | Team Udayavani |

ಉಪ್ಪಿನಂಗಡಿ: ಮಂಗಳೂರು – ಸುಬ್ರಹ್ಮಣ್ಯ ನಡುವೆ ಸಂಚರಿಸುವ ಸಾರಿಗೆ ಸಂಸ್ಥೆಯ ಸಾಮಾನ್ಯ ಬಸ್‌ ಗಳನ್ನೇ ವೇಗದೂತ ಬಸ್‌ಗಳನ್ನಾಗಿ ಪರಿವರ್ತಿಸಿದ್ದು, ಪ್ರಯಾಣ ದರ ಹೆಚ್ಚಿಸಿರುವ ಕುರಿತು  ಆಕ್ರೋಶ ವ್ಯಕ್ತಪಡಿಸಿರುವ ಪ್ರಯಾಣಿಕರು ಶುಕ್ರವಾರ ಇಲ್ಲಿನ ಕೆ.ಎಸ್‌.ಆರ್‌.ಟಿ.ಸಿ. ಸಂಚಾರ ನಿಯಂತ್ರಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ಈ ಮೊದಲು ಸಾಮಾನ್ಯ ಬಸ್‌ಗಳಲ್ಲಿ 51 ರೂ. ಟಿಕೆಟ್‌ ಇರುತ್ತಿತ್ತು. ಈಗ ಅಷ್ಟೇ ಸಂಖ್ಯೆಯ ನಿಲುಗಡೆಗಳನ್ನು ನೀಡಿ, 106 ರೂ. ಸ್ವೀಕರಿಸಲಾಗುತ್ತಿದೆ. ಉಪ್ಪಿನಂಗಡಿಯಿಂದ ಕಡಬಕ್ಕೆ 33 ರೂ. ಇದ್ದ ಟಿಕೆಟ್‌ ದರ ವೇಗದೂತ ಎಂಬ ಕಾರಣಕ್ಕೆ 6 ರೂ. ಹೆಚ್ಚಳವಾಗಿದೆ. ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಕಡಬದಿಂದ ಶುಕ್ರವಾರ ಸುಬ್ರಹ್ಮಣ್ಯ- ಮಂಗಳೂರು ವೇಗದೂತ ಬಸ್‌ ನಲ್ಲಿ ಬಂದ ಕೆಲ ಪ್ರಯಾಣಿಕರು ಏಕಾಏಕಿ ಟಿಕೆಟ್‌ ದರ ಹೆಚ್ಚಿಸಿದ ಕುರಿತು ಸಂಚಾರ ನಿಯಂತ್ರಕರನ್ನು ತರಾಟೆಗೆ ತೆಗೆದುಕೊಂಡರು. ಸಾಮಾನ್ಯ ಬಸ್‌ ಗಳಂತೆ ಸಿಕ್ಕಸಿಕ್ಕಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು, ಇಳಿಸುವುದು ಮಾಡುತ್ತಿವೆ. ಅವಧಿಯೇನೂ ಕಡಿಮೆಯಾಗಿಲ್ಲ. ದರ ಮಾತ್ರ ಏಕೆ ಹೆಚ್ಚು ಎಂದು ಪ್ರಶ್ನಿಸಿದರು.

ಕೆ.ಎಸ್‌.ಆರ್‌.ಟಿ.ಸಿ. ಡಿಸಿ ದೀಪಕ್‌ ಮಾತನಾಡಿ, ಮೊದಲು ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ಸಾಮಾನ್ಯ ಬಸ್‌ ಗಳು ಮಾತ್ರ ಪ್ರಯಾಣಿಸುತ್ತಿದ್ದವು. ಪ್ರಯಾಣದ ಅವಧಿ ಹೆಚ್ಚುವುದರಿಂದ 106 ಕಿ.ಮೀ.ನಷ್ಟು ದೂರ ಸಾಮಾನ್ಯ ಬಸ್‌ ನಲ್ಲಿ ಪ್ರಯಾಣಿಸಲು ಜನ ಇಷ್ಟಪಡುತ್ತಿಲ್ಲ. ಈಗ ಎಲ್ಲ ಬಸ್‌ ಗಳನ್ನು ವೇಗದೂತ ಬಸ್‌ ಗಳಾಗಿ ಬದಲಿಸಿ, ಟಿಕೆಟ್‌ ದರ ಹೆಚ್ಚಿಸಲಾಗಿದೆ. ಸ್ಥಳೀಯರಿಗೆ ತೊಂದರೆಯಾಗದಂತೆ ಎರಡು ಸಾಮಾನ್ಯ ಬಸ್‌ಗಳನ್ನು ಉಪ್ಪಿನಂಗಡಿಯಿಂದ ಸುಬ್ರಹ್ಮಣ್ಯಕ್ಕೆ ಪುತ್ತೂರು ಡಿಪೋದವರು ಹಾಕಬೇಕಿತ್ತು. ಅವರು ಸ್ಪಂದಿಸಿಲ್ಲ. ಹೀಗಾಗಿ, ಮಂಗಳೂರು ಡಿಪೋದಿಂದಲೇ ಎರಡು ಸಾಮಾನ್ಯ ಬಸ್‌ ಓಡಿಸಲಾಗುವುದು. ವೇಗದೂತ ಬಸ್‌ ಗಳು ಇತರೆ ಸಾಮಾನ್ಯ ಬಸ್‌ ಗಳಂತೆ ಎಲ್ಲ ಕಡೆ ನಿಲ್ಲುತ್ತವೆ ಎಂಬ ದೂರಿನ ಕುರಿತು ಪರಿಶೀಲಿಸಿ, ನಿಗದಿತ ಸ್ಥಳದಲ್ಲಿ ಮಾತ್ರ ನಿಲುಗಡೆಗೊಳಿಸಲು ಸೂಚಿಸಲಾಗುವುದು ಎಂದು ತಿಳಿಸಿದರು.


ಹೆಸರಿಗೆ ಮಾತ್ರ ವೇಗದೂತ!

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಪುತ್ತೂರು ತಾಲೂಕು ದಲಿತ್‌ ಸೇವಾ ಸಮಿತಿಯ ಅಧ್ಯಕ್ಷ ರಾಜು ಹೊಸ್ಮಠ, ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ಬರುವ ಬಸ್‌ಗಳು ಹೆಸರಿಗೆ ಮಾತ್ರ ವೇಗದೂತ ಬಸ್‌ಗಳಾಗಿ ಬದಲಾಗಿವೆ. ಕಡಬದಿಂದ ಉಪ್ಪಿನಂಗಡಿಗೆ ಸಂಚರಿಸಲು ಸಾಮಾನ್ಯ ಬಸ್‌ಗಳು ಒಂದು ಗಂಟೆ ತೆಗೆದುಕೊಳ್ಳುತ್ತವೆ. ಈಗಲೂ ಅಷ್ಟೇ ಅವಧಿ, ನಿಲುಗಡೆಗಳಿವೆ. ದರ ಹೆಚ್ಚಳ ಮಾಡಿರುವ ಉದ್ದೇಶವೇನು ಎಂದು ಪ್ರಶ್ನಿಸಿದರು. ಪ್ರಯಾಣದರ ಇಳಿಸಲು ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ದಲಿತ್‌ ಸೇವಾ ಸಮಿತಿಯಿಂದ ಮನವಿ ಸಲ್ಲಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next