Advertisement

ರಾಜ್ಯಸಭೆಗೆ ಟಿಕೆಟ್‌ ಕೇಳಿರಲಿಲ್ಲ: ಸಂಕೇಶ್ವರ

06:00 AM Mar 14, 2018 | |

 ಹುಬ್ಬಳ್ಳಿ: ರಾಜ್ಯಸಭಾ ಚುನಾವಣೆಗೆ ನನ್ನ ಹೆಸರು ಇದ್ದದ್ದು ನಿಜ. ಆದರೆ ಬಿಜೆಪಿ ಹೈಕಮಾಂಡ್‌ ರಾಜೀವ್‌ ಚಂದ್ರಶೇಖರ್‌
ಅವರನ್ನು ಅಭ್ಯರ್ಥಿಯಾಗಿಸಿದೆ. ನಾನು ಟಿಕೆಟ್‌ಗೆ ಅರ್ಜಿಯನ್ನೇ ಹಾಕಿರಲಿಲ್ಲ. ಹಾಗಿರುವಾಗ ಅಸಮಾಧಾನದ ಪ್ರಶ್ನೆ ಎಲ್ಲಿಂದ ಬಂತು
ಎಂದು ವಿಆರ್‌ಎಲ್‌ ಸಮೂಹ ಸಂಸ್ಥೆ ಚೇರ್ಮನ್‌ ಡಾ|ವಿಜಯ ಸಂಕೇಶ್ವರ ಹೇಳಿದರು.

Advertisement

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ  ಯಲ್ಲಿ ಮಾತನಾಡಿದ ಅವರು, ರಾಜೀವ್‌ ನನ್ನ ಆತ್ಮೀಯ ಗೆಳೆಯರು. ಅವರ ಆಯ್ಕೆ ಬಗ್ಗೆ
ನನಗೆ ಯಾವುದೇ ಅಸಮಾಧಾನ ಇಲ್ಲವೆಂದು ಸ್ಪಷ್ಟಪಡಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್‌ ನನ್ನನ್ನು ಸಂಪರ್ಕಿಸಿ ರಾಜ್ಯಸ ಭೆಗೆ ಅಭ್ಯರ್ಥಿಗಳ ಪಟ್ಟಿಯಲ್ಲಿ ನಿಮ್ಮ ಹಾಗೂ ರಾಜೀವ್‌ ಚಂದ್ರಶೇಖರ್‌ ಹೆಸರಿದೆ. ಸಂಬಂಧಪಟ್ಟ ದಾಖಲೆಗಳನ್ನು ಸಿದ್ಧಪಡಿಸಿ ಕೊಳ್ಳಿ ಎಂದು ಸೂಚಿಸಿದ್ದರು. ಹಾಗೆಯೇ ಬಿಜೆಪಿಯ ಸುಮಾರು 30-40 ಜನಪ್ರತಿನಿಧಿ  ಗಳು, ಮುಖಂಡರೂ ಕರೆ ಮಾಡಿ ನಿಮ್ಮನ್ನು ಅಭ್ಯರ್ಥಿಯಾಗಿಸಲು ಬೆಂಬಲಿಸಿದ್ದೇವೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ಹೈದರಾಬಾದ್‌ ಪ್ರವಾಸದಿಂದ ಶನಿವಾರ ಹುಬ್ಬಳ್ಳಿಗೆ ಆಗಮಿಸಿ ಅಗತ್ಯ ದಾಖಲೆಗಳನ್ನು ಸಿದಟಛಿಪಡಿಸಿಕೊಂಡಿದ್ದೆ
ಎಂದು ತಿಳಿಸಿದರು.

ಕಾಂಗ್ರೆಸ್‌ ಕುತಂತ್ರ: ಪಕ್ಷದ ರಾಷ್ಟ್ರೀಯ ವರಿಷ್ಠರು ಕೇರಳದಲ್ಲಿ ಪಕ್ಷಕ್ಕೆ ಲಾಭವಾಗುವ ದೃಷ್ಟಿಯಿಂದ ರಾಜೀವ್‌ ಚಂದ್ರಶೇಖರ್‌ ಹೆಸರ
ನ್ನು ಅಂತಿಮಗೊಳಿಸಿರಬಹುದು. ರಾಜೀವ್‌ ಕನ್ನಡಿಗರಲ್ಲ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಯುತ್ತಿದೆ. ಅವರ ತಂದೆ ಕೇರಳದಲ್ಲಿದ್ದರು. ಆದರೆ ರಾಜೀವ್‌ ಮಂಗಳೂರಿನಲ್ಲೇ ವ್ಯಾಸಂಗ ಮಾಡಿದ್ದಾರೆ.  ರಾಜ್ಯಸಭೆ ಆಯ್ಕೆಗೆ ರಾಷ್ಟ್ರೀಯ ಹಿತ ಮುಖ್ಯವಾಗಿರುತ್ತದೆ. ಅವರು ಕನ್ನಡಿಗ ರಲ್ಲ ಎಂಬ ಅಪಪ್ರಚಾರ ಕಾಂಗ್ರೆಸ್‌ನ ಕುತಂತ್ರವಾಗಿದೆ ಎಂದರು. ಈ ಹಿಂದೆ ವೆಂಕಯ್ಯನಾಯ್ಡು ಕರ್ನಾಟಕ ದಿಂದ ಎರಡು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಇದೀಗ ಅರುಣ ಜೇಟ್ಲಿ ಉತ್ತರಪ್ರದೇಶದಿಂದ ಸ್ಪರ್ಧಿಸುತ್ತಿದ್ದಾರೆ. ಈ ಹಿಂದೆ ಇಂದಿರಾಗಾಂಧಿಯನ್ನು ಚಿಕ್ಕ ಮಗಳೂರಿನಿಂದ, ಸೋನಿಯಾ ಗಾಂಧಿಯವರನ್ನು ಬಳ್ಳಾರಿಯಿಂದ ಲೋಕಸಭೆಗೆ ಕಣಕ್ಕಿಳಿಸಿದಾಗ ಕಾಂಗ್ರೆಸ್‌ನವರಿಗೆ ಅವರು ಕನ್ನಡಿಗರಲ್ಲ ಎಂದು ತಿಳಿದಿರಲಿಲ್ಲವೇ ಎಂದು ಪ್ರಶ್ನಿಸಿದರು.

ನನಗೆ 12 ವರ್ಷ ವಯಸ್ಸಿದ್ದಾಗಿನಿಂದ ಆರ್‌ ಎಸ್‌ಎಸ್‌ ಕಾರ್ಯಕರ್ತನಾಗಿದ್ದೇನೆ. ರಾಜ್ಯದಲ್ಲಿ ಬಿಜೆಪಿ ಕಟ್ಟುವಲ್ಲಿ ಶ್ರಮಿಸಿದ್ದೇನೆ.
ಈ ಹಿಂದೆ ವಾಜಪೇಯಿ ಸರಕಾರದಲ್ಲಿ ಸಚಿವ ಸ್ಥಾನದ ಆಹ್ವಾನ ಬಂದಿದ್ದರೂ ಬೇಡ ಎಂದು ಹೇಳಿದ್ದೆ. ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷ ಒಪ್ಪಿಸುವ, ಸೂಚಿಸುವ ಕೆಲಸ ಮಾಡುತ್ತೇನೆ ವಿನಃ ವರಿಷ್ಠರ ನಿರ್ಧಾರಗಳನ್ನು ಪ್ರಶ್ನಿಸುವುದಿಲ್ಲ. ಇದು ಬಿಜೆಪಿ ಸಂಸ್ಕೃತಿ ಎಂದರು.
ಯಾವುದೇ ಸ್ಥಾನ-ಹುದ್ದೆಯ ಆಕಾಂಕ್ಷಿ ನಾನಲ್ಲ. ಪಕ್ಷ ಸೂಚಿಸಿದರೆ ಯಾವುದೇ ಚುನಾವಣೆ ಸ್ಪರ್ಧೆಗೂ ಸಿದ್ದ. ವಿಧಾನಸಭೆ
ಚುನಾವಣೆಗೆ ಹುಬ್ಬಳ್ಳಿ-ಧಾರವಾಡದಲ್ಲಿ ಸ್ಪರ್ಧೆ ವಿಷಯವಾಗಿ ಪಕ್ಷದ ನಾಯ ಕರು ತಮ್ಮೊಂದಿಗೆ ಚರ್ಚಿಸಿಲ್ಲ ಎಂದರು.

ಉದಯವಾಣಿ ಮೂಲಕ ಗೊತ್ತಾಯ್ತು
ರಾಜ್ಯಸಭೆ ಚುನಾವಣೆಗೆ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ತಮ್ಮ ಹೆಸರಿದೆ ಎಂಬುದು ಮೊದಲಿಗೆ “ಉದಯವಾಣಿ’ಯಲ್ಲಿ ಪ್ರಕಟವಾಗಿತ್ತು. ಅದನ್ನು ನೋಡಿ ಹಿತೈಷಿಗಳು ಹೈದರಾಬಾದ್‌ನಲ್ಲಿದ್ದ ನನ್ನನ್ನು ಸಂಪರ್ಕಿಸಿ ಈ ಬಗ್ಗೆ ಕೇಳಿದ್ದರು. ಬಳಿಕ ನಾನು
ಪತ್ರಿಕೆಯ ಸುದ್ದಿಯ ಕಟಿಂಗ್‌ ತರಿಸಿಕೊಂಡು ನೋಡಿದ್ದೆ. ಅನಂತರ ಬೇರೆ ಮಾಧ್ಯಮಗಳೂ ಈ ವಿಷಯವನ್ನು ಪ್ರಸ್ತಾಪಿಸಿದವು ಎಂದು
ವಿಜಯ ಸಂಕೇಶ್ವರ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next