Advertisement

Education: ಮೂರು ಪರೀಕ್ಷೆ, ಲಾಭವೋ? ನಷ್ಟವೋ?

12:14 AM Sep 13, 2023 | Team Udayavani |

ಇತ್ತೀಚೆಗಷ್ಟೇ ರಾಜ್ಯ ಸರಕಾರ ವರ್ಷಕ್ಕೆ ಮೂರು ಬಾರಿ ಪರೀಕ್ಷೆ ನಡೆಸಲು ತೀರ್ಮಾನಿಸಿದೆ. ಇದರ ಸರಿ-ತಪ್ಪುಗಳ  ಬಗ್ಗೆ ವಿಮರ್ಶೆ ನಡೆಯುತ್ತಿದೆ. ಈ ಕುರಿತಂತೆ ಚರ್ಚಾ ಚಾವಡಿಯಲ್ಲಿ ಚರ್ಚೆ.

Advertisement

ಮಕ್ಕಳ ಮೇಲೆ ಒತ್ತಡ ಹೆಚ್ಚಾಗುವುದು

ಈಗಾಗಲೇ ಹತ್ತನೇ ಮತ್ತು ಹನ್ನೆರಡನೇ ತರಗತಿಯ ಪಬ್ಲಿಕ್‌ ಪರೀಕ್ಷೆಗಳೆಂದರೆ ಮಕ್ಕಳಿಗೆ ಒಂದು ರೀತಿಯ ಭಯವಿರುವುದು. ಹೀಗಾಗಿ ಮಕ್ಕಳಿಗೆ ವರ್ಷಕ್ಕೆ ಮೂರು ಬಾರಿ ಪಬ್ಲಿಕ್‌ ಪರೀಕ್ಷೆ ಮಾಡುವುದರಿಂದ ಮಕ್ಕಳಿಗೂ, ಪೋಷಕರಿಗೂ ಒತ್ತಡ ಹೆಚ್ಚಾಗುವ ಸಂಭವವಿದೆ. ಶಿಕ್ಷರಿಗೂ ಮೂರು ಬಾರಿಯ ಉತ್ತರ ಪತ್ರಿಕೆಗಳನ್ನು ತಿದ್ದುವುದು ಕಷ್ಟದ ಕೆಲಸವಾದೀತು. ಅಲ್ಲದೆ ವರ್ಷಕ್ಕೆ ಒಂದೇ ಬಾರಿ ಪಬ್ಲಿಕ್‌ ಪರೀಕ್ಷೆ ಇದ್ದರಷ್ಟೇ ಆಯಾ ಪರೀಕ್ಷೆಗಳಿಗೆ ಮೌಲ್ಯ. ಜತೆಗೆ ಈ ಬಾರಿ ಮೂರು ಬಾರಿ ಪರೀಕ್ಷೆ ಬರೆಯುವ ಅವಕಾಶವಿದೆಯಲ್ಲ ಎಂಬ ತಾತ್ಸರ ಭಾವವೂ ಮಕ್ಕಳಿಗೆ ಸಮಾಜದಿಂದ ಎದುರಾಗಬಹುದು. ಚೆನ್ನಾಗಿ ಓದಿ ಬರೆಯುವವರಿಗೆ ಇದು ಕಿರಿಕಿರಿಯೂ ಆದೀತು. ಚೆನ್ನಾಗಿ ಅಭ್ಯಾಸ ಮಾಡುವವರು ಒಂದೇ ಪರೀಕ್ಷೆಯಲ್ಲಿ ಬರೆಯಬಲ್ಲರು. ಹಾಗಾಗಿ ಮಕ್ಕಳು ಹೇಗಾದರೂ ಪಾಸ್‌ ಆಗಲಿ ಎಂದುಕೊಂಡು ವರ್ಷಕ್ಕೆ ಮೂರು ಬಾರಿ ಪರೀಕ್ಷೆ ನಡೆಸುವುದು ಸಮಂಜಸವಲ್ಲ.

ವೃಂದಾ ತಾಮನಕರ್‌, ಅರಸಿನ‌ಮಕ್ಕಿ

ಆಗಾಗ ಬದಲಾವಣೆ ಸರಿಯೇ?

Advertisement

ಬದಲಾವಣೆ ಜಗದ ನಿಯಮವೇನೋ ಸರಿ. ಆದರೆ ನಿಯಮಗಳೇ ಆಗಾಗ ಬದಲಾವಣೆ ಆಗ್ತಾ ಇರೋದು ಎಷ್ಟು ಸರಿ? ಸರಕಾರ ಬದಲಾವಣೆ ಆದಂತೆ ನಿಯಮಗಳು ಬದಲಾಗುತ್ತಲೇ ಇವೆ. ಇದರಿಂದ ಪೋಷಕರು, ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಬೀರುವ ಪರಿಣಾಮದ ಕುರಿತು ಆಲೋಚಿಸುವುದು ಅತ್ಯಗತ್ಯ. ಪರೀಕ್ಷಾ ವಿಷಯಕ್ಕೆ ಬಂದರೆ ಹಿಂದಿನ ಪದ್ಧತಿಯೇ ಸೂಕ್ತ. ಪರೀಕ್ಷೆಗಳ ಸಂಖ್ಯೆ ಜಾಸ್ತಿ ಆದಂತೆ ಮೌಲ್ಯಮಾಪನ ಅಂಕ ಪರಿಷ್ಕರಣೆ ಎಂದೆಲ್ಲ ಅಧ್ಯಾಪಕರ ಮೇಲೆ ಬೀಳುವ ಒತ್ತಡವೇ ಜಾಸ್ತಿ. ಇಲ್ಲಿ ಒಂದು ಮಾತು ಹೇಳಲೇಬೇಕು, ಪದವಿ ತರಗತಿಯ 3ನೇ ಸೆಮಿಸ್ಟರ್‌ನ ಫಲಿತಾಂಶ ಇನ್ನೂ ಬಂದಿಲ್ಲ. ಆ ವಿದ್ಯಾರ್ಥಿಗಳು ಈಗಾಗಲೇ 4ನೇ ಸೆಮಿಸ್ಟರ್‌ ಮುಗಿಸಿ 5ನೇ ಸೆಮಿಸ್ಟರ್‌ ಓದುತ್ತಿದ್ದಾರೆ. ಈಗ ಫಲಿತಾಂಶ ಬಂದರೆ ಅವರಿಗೆ 3ನೇ ಸೆಮಿಸ್ಟರ್‌ನಲ್ಲಿ ಯಾವ ಪ್ರಶ್ನೆ ಬಂದಿತ್ತು? ತಾನು ಅದಕ್ಕೆ ಹೇಗೆ ಉತ್ತರಿಸಿದ್ದೇನೆ ಎಂಬುದೇ ಮರೆತು ಹೋಗಿದೆ ಎನ್ನುತ್ತಿದ್ದಾರೆ ಮಕ್ಕಳು. ಪರೀಕ್ಷೆ ಜಾಸ್ತಿ ಮಾಡಿದಷ್ಟೂ ಮಕ್ಕಳಲ್ಲಿ ಇದಲ್ಲದಿದ್ರೆ ಇನ್ನೊಂದು ಇದೆಯಲ್ಲ ಅನ್ನೋ ಭಾವನೆ ಬಂದು ಬಿಡುತ್ತದೆ. ಪರೀಕ್ಷೆಗಳ ಸಂಖ್ಯೆ ಕಡಿಮೆ ಇರಲಿ. ಸರಿಯಾದ ಸಮಯಕ್ಕೆ ಮೌಲ್ಯಮಾಪನ ನಡೆಯಲಿ.

ರಾಧಿಕಾ ಜಿ. ಕಾಮತ್‌, ಮೂಲ್ಕಿ

ಮೂರು ಪರೀಕ್ಷೆಯಿಂದ ವರದಾನ

ಸದ್ಯದ ಸಂದರ್ಭದಲ್ಲಿ ಒಮ್ಮೆ ಫೇಲ್‌ ಆದರೆ ಮುಂದಿನ ತರಗತಿಗೆ ಹೋಗಲು ಒಂದು ವರ್ಷ ಕಾಯಬೇಕಾಗುತ್ತದೆ ಎಂಬ ಕಾರಣದಿಂದ ಮಕ್ಕಳು ಪಬ್ಲಿಕ್‌ ಪರೀಕ್ಷೆಯನ್ನು ಗಂಭೀರವಾಗಿ ತೆಗೆದುಕೊಂಡು, ವರ್ಷಪೂರ್ತಿ ಪಾಠಗಳನ್ನು ಓದಿ, ಬರೆದು ಅಭ್ಯಾಸ ಮಾಡುತ್ತಾರೆ. ಆದರೆ ಮೂರು ಪರೀಕ್ಷೆ ಮಾಡುವುದರಿಂದ ಮೊದಲ ಪ್ರಯತ್ನದಲ್ಲಿ ಫೇಲ್‌ ಆದರೆ ಎರಡನೇ ಪ್ರಯತ್ನದಲ್ಲಿ ಬರೆಯಬಹುದು. ಎರಡನೆಯದರಲ್ಲಿ ಫೇಲಾದರೆ ಮೂರನೆಯದರಲ್ಲಿ ಬರೆಯಬಹುದು ಎಂಬ ಕಾರಣದಿಂದಾಗಿ ನಿರಾತಂಕವಾಗಿ ಓದುವ ಮಕ್ಕಳು ಸಹ ಓದಿನ ಮೇಲೆ ಇರುವ ಆಸಕ್ತಿಯನ್ನು ಕಡಿಮೆ ಮಾಡಿಕೊಳ್ಳಬಹುದು. ಓದಿನ ಬಗ್ಗೆ ಉದಾಸೀನತೆ ಹೆಚ್ಚಾಗಬಹುದು. ಶಿಕ್ಷಕರ ಅಮೂಲ್ಯ ಸಮಯ ಪದೇ ಪದೆ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸುವುದು, ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿಯೇ ಕಳೆದು ಹೋಗಬಹುದು. ಇಷ್ಟೆಲ್ಲ ಅನನುಕೂಲತೆಗಳ ನಡುವೆ ಕೆಲವೊಂದು ಅನುಕೂಲಗಳು ಸಹ ಇವೆ. ಅದೇನೆಂದರೆ ಕೆಲವು ಮಕ್ಕಳು ಒಮ್ಮೊಮ್ಮೆ ಒಂದು, ಎರಡು ಅಂಕಗಳಿಂದ ಫೇಲಾಗಿರುತ್ತಾರೆ. ಅವಮಾನ ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅಂತಹ ಮಕ್ಕಳಿಗೆ ಮೂರು ಪರೀಕ್ಷೆ ವರದಾನವೇ ಸರಿ. ಓದಿನಲ್ಲಿ ಹಿಂದಿರುವ ಮಕ್ಕಳಿಗೆ ಮೂರು ಪರೀಕ್ಷೆ ನಡೆಸುವ ನಿಯಮದಿಂದ ಉಪಯೋಗವಿದೆ.

ಭವ್ಯ ಗುರುಪ್ರಸಾದ್‌, ಪ್ರೌಢಶಾಲಾ ಶಿಕ್ಷಕರು, ಬೆಂಗಳೂರು

ಒತ್ತಡ ಹೆಚ್ಚು

ವರ್ಷದಲ್ಲಿ ಮೂರು  ಪರೀಕ್ಷೆ ಬರೆಯುವ ಈ ಹೊಸ ಪದ್ದತಿಯಿಂದ ಖಂಡಿತವಾಗಿಯೂ ವಿದ್ಯಾರ್ಥಿಗಳಲ್ಲಿ,ಪೋಷಕರಲ್ಲಿ ಮತ್ತು ಶಿಕ್ಷಕರಲ್ಲಿ ಒತ್ತಡವನ್ನು ಹೆಚ್ಚಿಸುತ್ತದೆ. ಪೋಷಕರು ಪೈಪೋಟಿಗೆ ಬಿದ್ದು ಮಕ್ಕಳಿಗೆ ಒತ್ತಡ ಹೇರಿದರೆ, ಮಕ್ಕಳಲ್ಲಿ ಪರೀಕ್ಷೆಯ ಬಗ್ಗೆ, ಶಿಕ್ಷಕರ ಬಗ್ಗೆ ತಾತ್ಸಾರ ಭಾವನೆ ಬೆಳೆಯಬಹುದು. ಈಗಾಗಲೇ ಕೆಲವೊಂದು ಶಾಲೆಗಳಲ್ಲಿ ಇತರ ಚಟುವಟಿಕೆಗಳ ಮೀಸಲು ಸಮಯವನ್ನು  ಕೂಡ ಪಠ್ಯಕ್ಕಾಗೇ ವಿನಿಯೋಗಿಸುತ್ತಿದ್ದರೆ ಇತರ ಚಟುವಟಿಕೆಗಳಿಗೆ ಪೂರಕ ವಾತಾವರಣ ಇಲ್ಲದೇ ಮಕ್ಕಳಲ್ಲಿ ಸರ್ವಾಂಗೀಣ ಬೆಳವಣಿಗೆಯನ್ನು ಹೇಗೆ ಕಾಣಲು ಸಾಧ್ಯ ? ಶಿಕ್ಷಣವೆಂದರೆ ಬರೀ ಅಂಕವನ್ನು ದಾಖಲಿಸುವ ಕಾರ್ಯಕ್ರಮವಾಗದೇ, ಮಕ್ಕಳಲ್ಲಿ ಜೀವನ ಮೌಲ್ಯವನ್ನು ತಿಳಿಯುವ, ಸಂಸ್ಕಾರವನ್ನು ಮತ್ತು ರಾಷ್ಟ್ರ ಪ್ರೇಮವನ್ನು ಬೆಳೆಸುವ ಕಾರ್ಯಾಗಾರವಾಗಬೇಕೆಂಬ ಚಿಂತನೆಯ ಈ ಕಾಲಘಟ್ಟದಲ್ಲಿ ನಾವು ಪುನಃ ಮಕ್ಕಳನ್ನು ಅಂಕಗಳ ಬೇಟೆಗಾರರನ್ನಾಗಿ ಪರಿವರ್ತಿಸುವುದು ಸರಿಯೇ? ಈ ಪದ್ದತಿಯು ಅನಿವಾರ್ಯವೆಂದಾದಲ್ಲಿ ಒಂದಕ್ಕಿಂತ ಹೆಚ್ಚಿನ ಪರೀಕ್ಷೆಗಳನ್ನು ಮತ್ತು ವಿಷಯಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ  ವಿದ್ಯಾರ್ಥಿಗಳಿಗೆ ನೀಡಬೇಕು.

ಸುನಿಲ್‌ ದಾಸ್‌ ಎಂ. ಮಲ್ಪೆ

 

Advertisement

Udayavani is now on Telegram. Click here to join our channel and stay updated with the latest news.

Next