Advertisement

ಪ್ರಜ್ವಲ್‌ ಕೈಯಲ್ಲಿ ಮೂರು ಮತ್ತೊಂದು ಚಿತ್ರ

09:19 AM Apr 16, 2019 | Lakshmi GovindaRaju |

ಪ್ರಜ್ವಲ್‌ ದೇವರಾಜ್‌ ಇದೀಗ ಒಂದು ದಶಕ ಮುಗಿಸಿ ಮುನ್ನುಗ್ಗಿದ್ದಾರೆ. ಅವರು ಚಿತ್ರರಂಗಕ್ಕೆ ಕಾಲಿಟ್ಟು ಹನ್ನೆರೆಡುವ ವರ್ಷಗಳು ಕಳೆದಿವೆ. ಸದಾ ಒಂದಿಲ್ಲೊಂದು ಚಿತ್ರದಲ್ಲಿ ಬಿಝಿಯಾಗಿರುವ ಪ್ರಜ್ವಲ್‌ ದೇವರಾಜ್‌ ಕೈಯಲ್ಲಿ ಈಗ ಮೂರು ಮತ್ತೊಂದು ಸಿನಿಮಾ ಇದೆ.

Advertisement

“ಇನ್ಸ್‌ಪೆಕ್ಟರ್‌ ವಿಕ್ರಂ’, “ಜಂಟಲ್‌ ಮ್ಯಾನ್‌’ ಮತ್ತು “ಅರ್ಜುನ್‌ ಗೌಡ’ ಚಿತ್ರಗಳು ಕೈಯಲ್ಲಿದ್ದರೆ, ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ನಟಿಸುವ ಗ್ರೀನ್‌ಸಿಗ್ನಲ್‌ ಕೊಟ್ಟಿದ್ದಾರೆ. ಆ ಚಿತ್ರಕಿನ್ನೂ ನಾಮಕರಣ ಮಾಡಿಲ್ಲ. ಆದರೆ, ನಿರ್ದೇಶಕ ಪಿ.ಸಿ.ಶೇಖರ್‌ ಆ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂಬುದು ಪ್ರಜ್ವಲ್‌ ಮಾತು.

ಈ ಹಿಂದೆ ಕೂಡ ಪ್ರಜ್ವಲ್‌ ದೇವರಾಜ್‌ ಅವರು ಪಿ.ಸಿ.ಶೇಖರ್‌ ನಿರ್ದೇಶನದ “ಅರ್ಜುನ’ ಚಿತ್ರದಲ್ಲಿ ನಟಿಸಿದ್ದರು. ಅದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರವಾಗಿದ್ದು, ಆ ಚಿತ್ರದಲ್ಲಿ ಪ್ರಜ್ವಲ್‌ ತಂದೆ ದೇವರಾಜ್‌ ಅವರು ಸಹ ನಟಿಸಿದ್ದರು. ಅದಾದ ಬಳಿಕ ಪ್ರಜ್ವಲ್‌ ಪುನಃ ನಿರ್ದೇಶಕ ಪಿ.ಸಿ.ಶೇಖರ್‌ ಅವರೊಂದಿಗೆ ಹೊಸ ಚಿತ್ರದಲ್ಲಿ ನಟಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಆ ಚಿತ್ರದ ಒನ್‌ಲೈನ್‌ ಕುರಿತು ಹೇಳುವ ಪ್ರಜ್ವಲ್‌ ದೇವರಾಜ್‌, ಅದೊಂದು ಮಾಫಿಯಾ ಬ್ಯಾಕ್‌ಡ್ರಾಪ್‌ ಕುರಿತಾದ ಚಿತ್ರ. ಹೊಸ ಶೇಡ್‌ ಇರುವಂತಹ ಪಾತ್ರವಿದೆ. ಒಂದು ರೀತಿ ರೌಡಿಸಂ ವಿಷಯದ ಸ್ಪರ್ಶವಿದೆ. ಈ ಹಿಂದೆ ನಾನು ಕೂಡ ರೌಡಿಸಂ ವಿಷಯ ಇರುವಂತಹ “ಗೆಳೆಯ’ ಮತ್ತು “ಗುಲಾಮ’ ಚಿತ್ರಗಳಲ್ಲೂ ನಟಿಸಿದ್ದೇನೆ.

ಈಗ ಪಿ.ಸಿ.ಶೇಖರ್‌ ಅವರ ನಿರ್ದೇಶನದ ಚಿತ್ರದಲ್ಲಿ ನಟಿಸುವುದು ಪಕ್ಕಾ ಆಗಿದ್ದರೂ, ಆ ಚಿತ್ರಕ್ಕಿನ್ನೂ ಹೆಸರು ಇಟ್ಟಿಲ್ಲ. ಕಲಾವಿದರಾಗಲಿ, ಉಳಿದ ತಾಂತ್ರಿಕ ವರ್ಗವಾಗಲಿ ಆಯ್ಕೆ ಅಂತಿಮವಾಗಿಲ್ಲ. ಸದ್ಯಕ್ಕೆ “ಇನ್ಸ್‌ಪೆಕ್ಟರ್‌ ವಿಕ್ರಂ’ ಮತ್ತು “ಜಂಟಲ್‌ಮ್ಯಾನ್‌’ ಚಿತ್ರಗಳು ಮುಗಿಯುವ ಹಂತ ತಲುಪಿವೆ. “ಅರ್ಜುನ್‌ ಗೌಡ’ ಚಿತ್ರಕ್ಕೆ ಸ್ವಲ್ಪ ಕೆಲಸವಿದೆ.

Advertisement

“ಇನ್ಸ್‌ಪೆಕ್ಟರ್‌ ವಿಕ್ರಂ’ ನನ್ನ 30 ನೇ ಸಿನಿಮಾ ಎಂಬುದು ವಿಶೇಷ’ ಎನ್ನುತ್ತಾರೆ ಪ್ರಜ್ವಲ್‌ ದೇವರಾಜ್‌. ನಿರ್ದೇಶಕ ಪಿ.ಸಿ.ಶೇಖರ್‌ “ಟೆರರಿಸ್ಟ್‌’ ಬಳಿಕ ಎರಡು ತಿಂಗಳು ಗ್ಯಾಪ್‌ ಪಡೆದಿದ್ದರು. ಈಗ ಅವರು ಪ್ರಜ್ವಲ್‌ ಚಿತ್ರಕ್ಕೆ ತಯಾರು ಮಾಡಿಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜೂನ್‌ 1 ರಿಂದ ಚಿತ್ರಕ್ಕೆ ಚಾಲನೆ ಸಿಗಲಿದೆ.

ಈ ಮಧ್ಯೆ ಪಿ.ಸಿ.ಶೇಖರ್‌ ಅವರು “ಆದಿನಗಳು’ ಚೇತನ್‌ ಅವರಿಗೊಂದು ಚಿತ್ರ ಮಾಡಬೇಕಿತ್ತು. ಆ ಚಿತ್ರ ಸಂಪೂರ್ಣ ವಿದೇಶದಲ್ಲೇ ನಡೆಯಲಿದೆ. ಅದಕ್ಕೆ ವೀಸಾ ಲೇಟ್‌ ಆದ ಕಾರಣ, ಆ ಚಿತ್ರವನ್ನು ಸದ್ಯಕ್ಕೆ ಪಕ್ಕಕ್ಕೆ ಇಟ್ಟು ಹೊಸ ಚಿತ್ರದತ್ತ ತಲೆಕೆಡಿಸಿಕೊಂಡಿದ್ದಾರೆ. ಈ ಮಧ್ಯೆ ಅವರು ಮೇ 1 ರಂದು ಹೊಸ ಚಿತ್ರ ಶುರು ಮಾಡುವ ಯೋಚನೆಯಲ್ಲೂ ಇದ್ದಾರೆ.

ಆದರೆ, ಯಾವ ಚಿತ್ರ ಯಾವಾಗ ನಡೆಯುತ್ತೆ ಎಂಬುದಕ್ಕೆ ಸ್ಪಷ್ಟ ಉತ್ತರವಿಲ್ಲ. ಇವುಗಳ ಜೊತೆಯಲ್ಲೇ ಪಿ.ಸಿ.ಶೇಖರ್‌ ಅವರು ಗಣೇಶ್‌ ಜೊತೆಗೊಂದು ಚಿತ್ರ ಮಾಡಲಿದ್ದಾರಂತೆ. ಈ ಹಿಂದೆ ಗಣೇಶ್‌ ಜೊತೆ “ರೋಮಿಯೋ’ ನಿರ್ದೇಶಿಸಿದ್ದ ಪಿ.ಸಿ.ಶೇಖರ್‌ ಇದೀಗ ಗಣೇಶ್‌ ಕಾಂಬಿನೇಷನ್‌ನಲ್ಲೂ ಇನ್ನೊಂದು ಹೊಸ ಚಿತ್ರ ಮಾಡುವ ಯೋಚನೆಯಲ್ಲಿದ್ದಾರೆ.

ಅತ್ತ ಶಿವರಾಜಕುಮಾರ್‌ ಅವರೊಂದಿಗೂ ಹೊಸದೊಂದು ಚಿತ್ರ ಮಾಡುವ ಉತ್ಸಾಹದಲ್ಲಿದ್ದಾರೆ. ಅದಾಗಲೇ ಎರಡು ಸಲ ಮಾತುಕತೆಯೂ ನಡೆದಿದೆ. ಅಂತಿಮವಾಗಿ, ಯಾವ ಚಿತ್ರ ಯಾವಾಗ ಶುರುವಾಗುತ್ತೆ ಎಂಬುದಕ್ಕೆ ಇನ್ನಷ್ಟು ದಿನ ಕಾಯಲೇಬೇಕು.

Advertisement

Udayavani is now on Telegram. Click here to join our channel and stay updated with the latest news.

Next