ಮಡಿಕೇರಿ : ಒಂದೇ ಕುಟುಂಬದ ಮೂವರು ನೇಣಿಗೆ ಶರಣಾದ ದಾರುಣ ಘಟನೆ ಮಂಗಳವಾರ ರಾತ್ರಿ ಭಾಗಮಂಡಲದಲ್ಲಿ ನಡೆದಿದೆ. ಮಂಜುಳಾ(28) ಪ್ರದೀಪ್(32) ಹಾಗು ಗೋಪಾಲ್(64) ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು.
ಮೂಡಬಿದಿರೆಯ ಅಲಂಗಾರು ನಿವಾಸಿ ಅಣ್ಣಿ ಆಚಾರ್ಯ ಅವರ ಪುತ್ರಿ ಮಂಜುಳಾಗೆ 8 ತಿಂಗಳ ಹಿಂದೆ ಪ್ರದೀಪ್ ನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಮಂಜುಳಾ, ಪ್ರದೀಪ್ ಹಾಗೂ ಮಾವ ಒಂದು ಮನೆಯಲ್ಲಿ ವಾಸವಾಗಿದ್ದು, ಆದರೆ ಮಂಜುಳಾ ಅವರ ಅತ್ತೆ ಹಾಗೂ ನಾದಿನಿ ಇನ್ನೊಂದು ಮನೆಯಲ್ಲಿ ವಾಸವಾಗಿದ್ದರು ಎಂದು ವರದಿಯಾಗಿದೆ.
ಪ್ರತಿದಿನವೂ ಮನೆಯಲ್ಲಿ ಗಲಾಟೆ ನಡೆಯುತ್ತಿದ್ದು, ಇದೇ ಕಿರಿಕಿರಿಯಲ್ಲಿ ನೊಂದು ಮಂಜುಳಾ ಆತ್ಮಹತ್ಯೆಗೆ ಶರಣಾಗಿದ್ದು, ಬಳಿಕ ಪತಿ ಪ್ರದೀಪ್ ನೇಣಿಗೆ ಶರಣಾಗಿದ್ದು, ಕಂಗಾಲಾದ ತಂದೆಯೂ ದಿಕ್ಕು ತೋಚದೆ ನೇಣಿಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ.
ಮಂಜುಳಾ ಮರಣ ಪತ್ರ ಬರೆದಿಟ್ಟಿದ್ದು ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ ಎಂದು ಬರೆದಿಟ್ಟಿದ್ದಾರೆ.
ಭಾಗಮಂಡಲ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.