Advertisement

Udupi Gangwar; ಮತ್ತೆ ಮೂವರನ್ನು ಬಂಧಿಸಿದ ಪೊಲೀಸರು

12:11 AM May 27, 2024 | Team Udayavani |

ಉಡುಪಿ: ಇಲ್ಲಿನ ಕುಂಜಿಬೆಟ್ಟುವಿನಲ್ಲಿ ಮೇ 18ರ ತಡರಾತ್ರಿ ನಡುರಸ್ತೆಯಲ್ಲಿ ನಡೆದ ಗ್ಯಾಂಗ್‌ ವಾರ್‌ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇದುವರೆಗೆ 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ರವಿವಾರ ಬೆಳಗ್ಗೆ ಆರೋಪಿಗಳನ್ನು ಸ್ಥಳ ಮಹಜರಿಗೆ ಒಳಪಡಿಸಲಾಯಿತು. ಘಟನೆಯಲ್ಲಿ ಶಾಮೀಲಾದ ಇನ್ನೂ ಕೆಲವರ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ.

Advertisement

ಗರುಡ ಗ್ಯಾಂಗ್‌ನ ಬ್ರಹ್ಮಾವರದ ಶರೀಫ್ (36), ಕಾಪುವಿನ ಮಜೀದ್‌ (26), ಅಲ್ಫಾಝ್ (25) ಬಂಧಿತರು. ಈ ಮೊದಲು ಪ್ರಮುಖ ಆರೋಪಿ ಕಾಪು ಕೊಂಬಗುಡ್ಡೆ ಮೂಲದ ಆಶಿಕ್‌ (26), ತೋನ್ಸೆ ಹೂಡೆಯ ರಾಕೀಬ್‌ (21) ಹಾಗೂ ಮೇ 25ರಂದು ಸಕ್ಲೈನ್‌ (26) ನನ್ನು ಪೊಲೀಸರು ಬಂಧಿಸಿದ್ದರು. ರವಿವಾರ ಬಂಧಿಸಿರುವ ಮೂವರಲ್ಲಿ ಕಾರು ಢಿಕ್ಕಿ ಹೊಡೆದು ಗಾಯಗೊಂಡ ಶರೀಫ್ ಕೂಡ ಇದ್ದಾನೆ. ಈತನಿಗೆ ಗಾಯಗಳಾಗಿದ್ದು, ಈಗಾಗಲೇ ಚಿಕಿತ್ಸೆ ಪಡೆದುಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ವೀಡಿಯೋ ವೈರಲ್‌ ಆದ
ಬಳಿಕ ಎಚ್ಚೆತ್ತ ಪೊಲೀಸರು
ಮೇ 19ರಂದು ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಕಳ್ಳತನ, ಕಾರು ಜಖಂ ಪ್ರಕರಣ ದಾಖಲಾಗಿದ್ದು, ಪೊಲೀಸರು ಉನ್ನತ ತನಿಖೆ ನಡೆಸಿರಲಿಲ್ಲ. ಆದರೆ ಈ ಘಟನೆಯ ದೃಶ್ಯಾವಳಿಗಳು ಮೇ 25ರಂದು ವೈರಲ್‌ ಆದ ಬಳಿಕ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದರು. ಘಟನೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಯದ ವಾತಾವರಣ ಉಂಟಾಗಿದ್ದು, ಪೊಲೀಸ್‌ ಗಸ್ತು ವೈಫ‌ಲ್ಯವೇ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಜಿಲ್ಲೆಯಲ್ಲಿ ಗರಿಬಿಚ್ಚಿದ
ಅಕ್ರಮ ಚಟುವಟಿಕೆ
ಜಿಲ್ಲಾದ್ಯಂತ ಕೆಲವು ಸಮಯಗಳ ಕಾಲ ಸ್ಥಗಿತವಾಗಿದ್ದ ಅಕ್ರಮ ಚಟುವಟಿಕೆಗಳು ಗರಿಗೆದರಿದ್ದೇ ಇಂತಹ ಕುಕೃತ್ಯಗಳಿಗೆ ಎಡೆಮಾಡಿಕೊಡುತ್ತಿವೆ. ಗಾಂಜಾಡ್ರಗ್ಸ್‌ನಂತಹ ಅಮಲು ಪದಾರ್ಥಗಳನ್ನು ಸೇವಿಸಿ ಆರೋಪಿಗಳು ಇಂತಹ ಕೃತ್ಯಗಳನ್ನು ಎಸಗುತ್ತಿದ್ದು, ಕುಂಜಿಬೆಟ್ಟುವಿನಲ್ಲಿ ನಡೆದ ಈ ಘಟನೆಯ ಸಂದರ್ಭದಲ್ಲಿಯೂ ಆರೋಪಿಗಳು ಗಾಂಜಾ ಸೇವನೆ ಮಾಡಿದ್ದಾರೆ ಎನ್ನಲಾಗಿದ್ದು, ಕಾರಿನಲ್ಲಿ 3 ಗ್ರಾಂನಷ್ಟು ಗಾಂಜಾ ಪತ್ತೆಯಾಗಿದೆ.

ಮಣಿಪಾಲದ ಈಶ್ವರನಗರ, ಪೆರಂಪಳ್ಳಿ, ಉಡುಪಿಯ 80 ಬಡಗಬೆಟ್ಟು ಭಾಗಗಳಲ್ಲಿ ಗಾಂಜಾ ಪ್ರಕರಣಗಳು ಇತ್ತೀಚೆಗೆ ನಿರಂತರವಾಗಿ ವರದಿಯಾಗುತ್ತಿದ್ದು, ಇದನ್ನು ಮಟ್ಟ ಹಾಕಲು ಪೊಲೀಸರು ವಿಫ‌ಲವಾಗಿದ್ದಾರೆ. ಆರೋಪಿಗಳ ಮೇಲೆ ಸಣ್ಣ-ಪುಟ್ಟ ಪ್ರಕರಣಗಳನ್ನು ದಾಖಲಿಸುವ ಕಾರಣ ಇಂತಹ ಘಟನೆಗಳು ಜಿಲ್ಲೆಯಲ್ಲಿ ನಡೆಯುತ್ತಿದೆ.

Advertisement

ವಾರಾಂತ್ಯದಲ್ಲಿ ಅನ್ಯ
ರಾಜ್ಯದ ವಾಹನಗಳು
ಪ್ರವಾಸಿ ಸ್ಥಳಗಳನ್ನು ಹೊರತುಪಡಿಸಿ ರಾತ್ರಿ ವೇಳೆ ಬಾರ್‌, ಪಬ್‌ ಸಹಿತ ಕೆಲವೊಂದು ಪ್ರದೇಶಗಳಲ್ಲಿ ಅನ್ಯ ಜಿಲ್ಲೆ, ರಾಜ್ಯದ ವಾಹನಗಳು ಕಂಡುಬರುತ್ತಿವೆ. ವಾರಾಂತ್ಯದ ವೇಳೆ ಇನ್ನೂ ಅಧಿಕ. ಜಿಲ್ಲೆಗೆ ಮಾದಕ ವಸ್ತು ಪೂರೈಕೆ ವಿವಿಧ ಮಾರ್ಗಗಳ ಮೂಲಕ ನಡೆಯುವ ಸಾಧ್ಯತೆಗಳಿವೆಯಾದರೂ ಇದರ ಬಗ್ಗೆ ನಿಗಾ ಇರಿಸುವವರು ಯಾರು ಎಂಬುವುದೇ ಈಗ ಸಾರ್ವಜನಿಕ ವಲಯದಲ್ಲಿ ಎದ್ದಿರುವ ಪ್ರಶ್ನೆಯಾಗಿದೆ.

ಸಿಸಿಟಿವಿ ಇರಲಿಲ್ಲ
ಘಟನೆ ನಡೆದ ಆಸುಪಾಸು ಸಿಸಿಟಿವಿ ಇರಲಿಲ್ಲ. ಪೊಲೀಸರು ವಿವಿಧ ಅಂಗಡಿಗಳಿಗೆ ಭೇಟಿ ನೀಡಿದರೂ ಪ್ರಯೋಜನವಾಗಿರಲಿಲ್ಲ. ಅಲ್ಲಿಯೇ ಪಕ್ಕದಲ್ಲಿದ್ದ ಮಾಲ್‌ವೊಂದರಲ್ಲಿ ಸಿಸಿಟಿವಿ ಇತ್ತಾದರೂ ಅದರ ಮುಖ ಬೇರೆ ದಿಕ್ಕಿಗೆ ಇದ್ದ ಪರಿಣಾಮ ಪೊಲೀಸರಿಗೆ ಸಾಕ್ಷಿಯ ಕೊರತೆ ಎದುರಾಗಿತ್ತು. ಬಳಿಕ ವೀಡಿಯೋ ವೊಂದು ವೈರಲ್‌ ಆದ ಕಾರಣ ಇದರ ಭೀಕರತೆ ಅರಿವಿಗೆ ಬಂದಿದೆ. 3ರಿಂದ 4 ನಿಮಿಷಗಳ ಅಂತರದಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯರು 112ಕ್ಕೆ ಕರೆಮಾಡಿ ಪೊಲೀಸರು ಬರುವಾಗ ಆರೋಪಿಗಳೆಲ್ಲ ಪರಾರಿಯಾಗಿದ್ದರು ಎನ್ನಲಾಗಿದೆ.

ಇಲಾಖೆಯಲ್ಲಿಲ್ಲ ಸಿಸಿಟಿವಿ
ಅಪರಾಧ ಕೃತ್ಯಗಳು ನಡೆದ ಸಂದರ್ಭದಲ್ಲಿ ಸ್ಥಳೀಯ ಅಂಗಡಿ-ಮುಂಗಟ್ಟು, ಮನೆ, ಫ್ಲ್ಯಾಟ್‌ಗಳಿಗೆ ತೆರಳಿ ಸಿಸಿಟಿವಿ ಫ‌ೂಟೇಜ್‌ ತೆಗೆದುಕೊಳ್ಳುವ ಪೊಲೀಸರು ತಮ್ಮ ಇಲಾಖೆಯ ಮೂಲಕ ಯಾವುದೇ ಸಿಸಿಟಿವಿಗಳನ್ನು ಅಳವಡಿಕೆ ಮಾಡಿಲ್ಲ. ಕೆಲವೆಡೆ ಸಿಸಿಟಿವಿ ವ್ಯವಸ್ಥೆ ಇದೆಯಾದರೂ ಸಮರ್ಪಕವಾಗಿ ಕಾರ್ಯ ನಿವಹಿಸುತ್ತಿಲ್ಲ. ಕೆಲವು ಜಂಕ್ಷನ್‌ಗಳಲ್ಲಿ ಕೆಲವು ವರ್ಷಗಳ ಹಿಂದೆಯೇ ಟವರ್‌ ನಿರ್ಮಿಸಿ ಸಿಸಿಟಿವಿ ಕೆಮರಾ ಅಳವಡಿಸಿದ್ದರೂ ಅದು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನಲಾಗಿದೆ.

ಪೊಲೀಸರ ಮೂಲಕ ವಾರಕ್ಕೆ ಒಂದು ಬಾರಿಯಾದರೂ ಆಯಕಟ್ಟಿನ ಪ್ರದೇಶಗಳಲ್ಲಿರುವ ಖಾಸಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಕೆಲಸವೂ ನಡೆಯುತ್ತಿಲ್ಲ. ಗಂಭೀರ ಪ್ರಕರಣಗಳು ನಡೆದರಷ್ಟೇ ಪರಿಶೀಲನೆ ಮಾಡಲಾಗುತ್ತದೆ. ಪರಿಣಾಮ ಹಲವಾರು ಪ್ರಕರಣಗಳು ನಡೆದರೂ ಯಾರಿಗೂ ತಿಳಿಯದ ಸ್ಥಿತಿ ಎದುರಾಗಿದೆ. ಸಿಸಿಟಿವಿ ಅಳವಡಿಕೆ ಬಗ್ಗೆ ಹಲವಾರು ವರ್ಷಗಳಿಂದ ಪ್ರಸ್ತಾವನೆ ಸಲ್ಲಿಸಲಾಗುತ್ತಿದ್ದು, ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಕಾರ್ಯಾಚರಣೆಗೆ “ಹೊಯ್ಸಳ’ ಕೊರತೆ
ಒಂದು ವರ್ಷದಿಂದ ಜಿಲ್ಲಾದ್ಯಂತ 15 ವರ್ಷ ಹಳೆಯ ಹೊಯ್ಸಳ ವಾಹನಗಳನ್ನು ಹಿಂಪಡೆಯಲಾಗಿದೆ. ಉಡುಪಿ ನಗರ, ಮಣಿಪಾಲ, ಮಲ್ಪೆ, ಕುಂದಾಪುರ ಭಾಗದಲ್ಲಿ ಈ ವಾಹನಗಳ ಗಸ್ತು ಕಾರ್ಯಾಚರಣೆಯಿಂದ ಅನೈತಿಕ ಚಟುವಟಿಕೆಗಳು ನಿಯಂತ್ರಣದಲ್ಲಿತ್ತು. ಪ್ರಸ್ತುತ ಉಡುಪಿಯಲ್ಲಿ ಎಲ್ಲಿಯೂ ಹೊಯ್ಸಳ ವಾಹನವಿಲ್ಲ. ಹೆದ್ದಾರಿ ಗಸ್ತು ವಾಹನಗಳು ಹಾಗೂ 112 ವಾಹನಗಳಷ್ಟೇ ಕಾರ್ಯಾಚರಣೆ ಮಾಡಿಕೊಂಡಿವೆ. ನಗರ ಭಾಗದಲ್ಲಿ ಏನಾದರೂ ಘಟನೆಗಳು ನಡೆದರೆ ಪೊಲೀಸರು ತಮ್ಮ ಖಾಸಗಿ ವಾಹನ ಅಥವಾ ಅಟೋದಲ್ಲಿ ಬಂದು ಆರೋಪಿಗಳನ್ನು ಠಾಣೆಗೆ ಕರೆದುಕೊಂಡು ಹೋಗುತ್ತಿರುವ ಉದಾಹರಣೆಗಳೂ ಇವೆ ಎನ್ನುತ್ತಾರೆ ಪೊಲೀಸರೊಬ್ಬರು.

6 ಮಂದಿ ಬಂಧನ
ಕುಂಜಿಬೆಟ್ಟುವಿನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಒಟ್ಟು 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಶಾಮೀಲಾದ ಇತರ ಆರೋಪಿಗಳನ್ನೂ ಶೀಘ್ರದಲ್ಲಿ ಪತ್ತೆ ಹಚ್ಚಲಾಗುವುದು.
-ಡಾ| ಕೆ.ಅರುಣ್‌,
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next