Advertisement

ಕಲ್ಲು ಗಣಿಗಳಿಂದ ಜಲ ಮೂಲಗಳಿಗೆ ಧಕ್ಕೆ -ಆತಂಕ

10:04 AM Apr 21, 2022 | Team Udayavani |

ಶಿರಸಿ: ನೆರೆಯ ಸೊರಬ-ಚಂದ್ರಗುತ್ತಿ ಹೋಬಳಿಯ ಹಳ್ಳಿಗಳು ಭಾರೀ ಕಲ್ಲುಗಾರಿಕೆಯಿಂದ ನಿರ್ಜೀವ ಆಗುವ ಪರಿಸ್ಥಿತಿಗೆ ಬಂದಿದ್ದು, ಶಿರಸಿ, ಸಿದ್ದಾಪುರ ತಾಲೂಕಿನಲ್ಲಿಯೂ ದುಷ್ಪರಿಣಾಮ ಬೀರಬಹುದು ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿ ನಿಕಟಪೂರ್ವ ಅಧ್ಯಕ್ಷ ಅನಂತ ಅಶೀಸರ ಆತಂಕ ವ್ಯಕ್ತಪಡಿಸಿದ್ದಾರೆ.

Advertisement

ಚಂದ್ರಗುತ್ತಿ ಬಸ್ತಿಕೊಪ್ಪದಲ್ಲಿ ನಡೆದಿರುವ ಗಣಿಗಾರಿಕೆಯಿಂದ ಪ್ರಸಿದ್ಧ ರೇಣುಕಾಂಬಾ ದೇವಾಲಯದ ಅಸ್ತಿತ್ವಕ್ಕೆ ಧಕ್ಕೆ ಬರುತ್ತಿದೆ. ಗ್ರಾಮಗಳ ಮನೆಗಳು ಸ್ಫೋಟದಿಂದ ಬಿರುಕು ಬಿಟ್ಟಿವೆ. ಕೃಷಿ ತೋಟಗಾರಿಕೆ ನಾಶವಾಗಿ ಬರಗಾಲ ಎದುರಿಸುತ್ತಿವೆ. ಬೋರ್‌ವೆಲ್‌ಗ‌ಳಲ್ಲಿ ತೆರೆದ ಬಾವಿಗಳಲ್ಲಿ ನೀರಿಲ್ಲ, ಸ್ವಲ್ಪ ನೀರಿದ್ದರೂ ಮಾಲಿನ್ಯವಾಗಿದೆ. ಪ್ರತಿದಿನ ಗಣಿ ಸ್ಫೋಟಕ ನಡೆಯುವುದರಿಂದ ಆರೋಗ್ಯ ಹಾಳಾಗಿದೆ. ಕಾಯಿಲೆಗಳು ಹೆಚ್ಚಾಗಿವೆ. ಎಲ್ಲ ಧೂಳಿನಿಂದ ತುಂಬಿದೆ. ರಸ್ತೆ ಸಂಪೂರ್ಣ ಹಾಳಾಗಿದೆ. ಚಂದ್ರಗುತ್ತಿ ಜನರ ಆಹ್ವಾನದಂತೆ ವೃಕ್ಷಲಕ್ಷ ಆಂದೋಲನದ ತಜ್ಞರ ತಂಡ ಮಾರ್ಚ್‌ 2ನೇ ವಾರ ಚಂದ್ರಗುತ್ತಿಗೆ ಭೇಟಿ ನೀಡಿ ಸ್ಥಳ ಸಮೀಕ್ಷೆ ಮಾಡಿತು. ಸ್ಥಳೀಯ ಗ್ರಾಪಂ ಜೀವ ವೈವಿಧ್ಯ ಸಮಿತಿಯವರನ್ನು ಭೇಟಿ ಮಾಡಿತು. ನಂತರ ಶಿವಮೊಗ್ಗಾ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚಂದ್ರಗುತ್ತಿ ಜನರ ಜೊತೆ ಅಲ್ಲಿನ ಪರಿಸ್ಥಿತಿ ವರದಿ ನೀಡಿತು. ಜಿಲ್ಲಾಧಿಕಾರಿಗಳು ಅಧಿಕಾರಿಗಳ ತಂಡವನ್ನು ಕಳಿಸಿ ಸ್ಥಳ ವರದಿ ಪಡೆದರು.

ಜಿಲ್ಲಾಧಿಕಾರಿಗಳು ಸ್ವತಃ ಚಂದ್ರಗುತ್ತಿ ಗಣಿಗಾರಿಕೆ ಅಧ್ವಾನ ಪರಿಶೀಲಿಸಿ ಗಣಿ ಕಾಮಗಾರಿ ನಿಲ್ಲಿಸಿದರು. ಚಂದ್ರಗುತ್ತಿ ಸುತ್ತಲಿನ ಹಳ್ಳಿಗಳು ಸೇರಿದಂತೆ ಅಂಚಿನ ಶಿರಸಿ ಸಿದ್ದಾಪುರ ತಾಲೂಕಿನ ಅರಣ್ಯ, ಹಳ್ಳಿಗಳು, ಜಲ ಮೂಲಗಳ ಮೇಲೆ ಭಾರೀ ಗಣಿಗಾರಿಕೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ ಎಂಬ ತಜ್ಞರ ವರದಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ರಾಜ್ಯ ಗಣಿ, ಅರಣ್ಯ, ಪರಿಸರ ಇಲಾಖೆ ಮುಖ್ಯಸ್ಥರ ಗಮನ ಸೆಳೆಯಲಾಗಿದೆ. ಚಂದ್ರಗುತ್ತಿ, ಬಸ್ತಿಕೊಪ್ಪ ಹಳ್ಳಿಗಳ ಜಲ, ಆರೋಗ್ಯ, ಸಂಪರ್ಕ, ಕೃಷಿ ಪರಿಸ್ಥಿತಿ, ಪರಿಹಾರ ನೆರವು ನೀಡುವ ಕುರಿತು ಗ್ರಾಮೀಣ ಅಭಿವೃದ್ಧಿ ಇಲಾಖೆ ಧಾವಿಸಬೇಕು ಎಂದು ವೃಕ್ಷಲಕ್ಷ ಆಂದೋಲನ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next