ಚಿಕ್ಕವಯಸ್ಸಲ್ಲಿ ನನ್ನನ್ನು ನೋಡಿದವರೆಲ್ಲಾ ಹೇಳುತ್ತಿದ್ದದ್ದು ಒಂದೇ ಮಾತು- “ಇದೇನು ಇವ್ನು ಗೊಣ್ಣೆ ಸುರಿಸಿಕೊಂಡು ದದ್ನನ್ಮಗನ ಥರ ಇದ್ದಾನೆ. ಮುಂದೆ ಏನಾಗ್ತಾನೋ’ ಹೀಗನ್ನೋರು. ಅವರು ಹೇಳುತ್ತಿದ್ದುದರಲ್ಲಿ ತಪ್ಪೇನಿಲ್ಲ, ನಾನು ಹೆಚ್ಚು ಕಮ್ಮಿ 10ನೇ ತರಗತಿ ತನಕವೂ ಹೀಗೇ ಇದ್ದೆ. ಎದ್ದು ಬಿದ್ದು ಓದುತ್ತಿದ್ದೆ. ಹೇಳಿದ್ದಾಗಲಿ, ಓದಿದ್ದಾಗಲಿ ತಲೆಗೆ ಹೋಗುತ್ತಿರಲಿಲ್ಲ. 8ನೇ ತರಗತಿಯಲ್ಲಿ ಒಂದು ಸಲ, 10ನೇ ತರಗತಿಯಲ್ಲಿ ಎರಡು ಸಲ ಫೇಲು. ಫೇಲಿನ ನೋವನ್ನು ನೀಗಿಕೊಳ್ಳಲು, ತಾತನ ಜೊತೆಯಲ್ಲಿ ಹೋಟೆಲ್ ಕೆಲಸಕ್ಕೆ ಹೋಗುತ್ತಿದ್ದೆ. ಅದೇ ನನ್ನ ಮೊದಲ ಪ್ರೊಫೆಷನ್. ಬಹುಶಃ ನನ್ನ ಜಾಗದಲ್ಲಿ ಯಾರೇ ಇದ್ದರೂ ಬೇಸರವಾಗಿ ಊರು ಬಿಟ್ಟು ಓಡಿ ಹೋಗುತ್ತಿದ್ದರೋ ಏನೋ. ಆದರೆ, ನಾನು ಜಗಮಂಡ. ಬಂದಿದ್ದೆಲ್ಲ ಬರಲಿ ನೋಡೇ ಬಿಡೋಣ ಅನ್ನೋ ಉಡಾಫೆ ನನ್ನದು.
ನನಗೇನು ಅಂಥಾ ಸ್ನೇಹಿತರೂ ಇರಲಿಲ್ಲ. ನಮ್ಮದು ಸಂಪ್ರದಾಯಸ್ತ ಕುಟುಂಬ. ಅಪ್ಪನಿಗೆ ಫ್ಯಾಕ್ಟ್ರೀ ಕೆಲಸ. ನನ್ನ ಓದಿಸಲಿಕ್ಕೆ ಹೆಚ್ಚುವರಿ ದುಡಿತ ಬೇರೆ. ನೀಲಗಿರಿ ಎಲೆಗಳನ್ನು ತಂದು ಮಾರುತ್ತಿದ್ದರು. ದೊಡ್ಡವನಾದ ಮೇಲೆ ನಾನೂ ಇದೇ ರೀತಿ ಮಾಡಿದರೆ ಹೇಗೆ ಅನಿಸಿತ್ತು. ಅದೇನಾಯೊ¤à ಏನೋ, ಒನ್ ಫೈನ್ ಡೇ ಫ್ಯಾಕ್ಟರಿಯ ಬಾಗಿಲು ಹಾಕಿದರು. ಊರು ಬಿಡಬೇಕಾಗಿ ಬಂತು. ಎಲ್ಲಿಗೆ ಹೋಗೋದು? ಮನೆ ನಡೆಸುವುದು ಹೇಗೆ? ಅಪ್ಪನ ಮುಂದೆ ಬರೀ ಪ್ರಶ್ನೆಗಳಿದ್ದವು.
ವಯಸ್ಸಿಗೆ ಬಂದಿದ್ದರೂ ನಾನು ಕೆಲಸಕ್ಕೆ ಬಾರದವನಾಗಿದ್ದೆ. ಅಪ್ಪ-ಅಮ್ಮ ಗೊಳ್ಳೋ ಅಂತ ಅಳುವುದನ್ನು ಕಂಡು ತೀರ್ಮಾನ ಮಾಡಿದೆ ಏನಾದರು ಉದ್ಯೋಗ ಹುಡುಕಲೇ ಬೇಕು ಅಂತ. ಆದರೆ, ನೆರವಿಗೆ ಯಾವ ಡಿಗ್ರಿಗಳೂ ಇರಲಿಲ್ಲ. ಓದು ತಲೆಗೆ ಹತ್ತುತ್ತಿಲ್ಲ. ಬಡತನ ಬೇರೆ. ಹೀಗಿರಲು, ಅಪ್ಪನಿಗೆ ದೂರದ ಪೆರಲುಕೊಂಡ ಅನ್ನೋ ಊರಲ್ಲಿ ದೇವಸ್ಥಾನದ ಪೂಜೆ ಮಾಡುವ ಅವಕಾಶ ಸಿಕ್ಕಿತು. ತಿಂಗಳಿಗೆ ಹತ್ತು ಸಾವಿರ ಸಂಬಳ, ಇರುವುದಕ್ಕೆ ನೆಲೆ ಅಲ್ಲೇ. ತಕ್ಷಣ ಅಲ್ಲಿಗೆ ಹೋದೆವು. ಹೊಸ ಪರಿಸರ. ಅಲ್ಲೊಂದು ಪೆಟ್ಟಿ ಅಂಗಡಿ ಇಟ್ಟು ಬಿಡೋಣ. ಬಂದ ಹಣದಿಂದ ಅಪ್ಪ-ಅಮ್ಮನಿಗೆ ನೆರವಾಗಬಹುದು ಅಂತಲೂ ಯೋಚನೆ ಬಂತು. ಆದರೆ, ಬರಿಗೈ ದಾಸಯ್ಯನಿಗೆ ಯಾರು ತಾನೇ ನೆರವಾಗುತ್ತಾರೆ? ಅಪ್ಪನಿಗೆ, ಅಭಿಷೇಕಕ್ಕೆ ನೀರು ತಂದುಕೊಡುವುದು, ನೈವೇದ್ಯ ಮಾಡಲು ಸಹಾಯ ಮಾಡುವುದು. ದೇವಸ್ಥಾನಕ್ಕೆ ಬಂದವರಿಗೆ ಮಂಗಳಾರತಿ ಕೊಡುವುದು. ಹೀಗೆ ಮಾಡುವುದು ನನ್ನ ಎರಡನೇ ಪ್ರೊಫೆಷನ್ ಆಯಿತು. ಅಪ್ಪ ಹೇಳುತ್ತಿದ್ದ ಮಂತ್ರಗಳು ಆಗಾಗ ಕಿವಿಗೆ ಬೀಳತೊಡಗಿದವು. ದೇವಾಲಯಕ್ಕೆ ಬರುತ್ತಿದ್ದ ಅಪ್ಪನ ಗೆಳೆಯರಲ್ಲಿ ಒಬ್ಬರು ನನಗೆ, ಸ್ವಲ್ಪ ಜಪ, ಮಂತ್ರಗಳನ್ನು ಹೇಳಿಕೊಡುತ್ತಿದ್ದರು. ಓದು ತಲೆಗೆ ಹತ್ತದ ನನಗೆ , ಮಂತ್ರಗಳ ಪಟಪಟನೇ ತಲೆಗೆ ಹೋಗುತ್ತಿದ್ದವು. ಇದು ನನಗೂ ಮತ್ತು ಹೆತ್ತವರಿಗೂ ಆಶ್ಚರ್ಯತಂದಿತು.
ಅದೇ ಊರಲ್ಲಿ, ಪೌರೋಹಿತ್ಯ ಮಾಡಿಸಲು ಹೋಗುವಷ್ಟು ಮಂತ್ರಗಳು ನನ್ನ ನಾಲಿಗೆಯ ಮೇಲೆ ಹರಿದಾಡಲು ಶುರುವಾದವು. ಆದರೆ, ಕೇವಲ, ಪೂಜೆ ಪುನಸ್ಕಾರಗಳನ್ನು ಮಾಡಿಸುವುದರಿಂದ ವರ್ಷ ಪೂರ್ತಿ ಹೊಟ್ಟೆ ಹೊರೆಯಲು ಸಾಧ್ಯವಿರಲಿಲ್ಲ. ನಾನು ಗಳಿಸಿಕೊಂಡ ಗೆಳೆಯರಲ್ಲಿ ಒಬ್ಬನು ಬೆಂಗಳೂರು ಪಾಲಾಗಿ, ಇಂಥದೇ ಪೌರೋಹಿತ್ಯದಲ್ಲಿ ತೊಡಗಿದ್ದ. ಅವನು ನನ್ನ ಪರಿಸ್ಥಿತಿ ನೋಡಿ, ಕರಣಿಕರ ಪಾಠ ಶಾಲೆಗೆ ಸೇರಿಸಿದ. ಊಟ, ತಿಂಡಿ, ವಾಸ್ತವ್ಯ ಎಲ್ಲವೂ ಅಲ್ಲೇ. ಇದೊಂಥರ ಹೆತ್ತವರ ಹೆಗಲ ಮೇಲಿದ್ದ ಭಾರ ಇಳಿಸಿದಂತೆ ಆಯಿತು. ಅಲ್ಲಿ ಮೂರು ವರ್ಷ ವೇದ ಪಾಠಗಳು ಆದವು. ಪಾಠಶಾಲೆಯ ಸಂಪರ್ಕ ಜಾಲದಿಂದಲೇ ತಿಂಗಳಿಗೆ ಎರಡು, ಮೂರು ಕಡೆಗೆ ಹೋಮ, ಹವನ ಮಾಡಿಸಲು ಹೋಗುತ್ತಿದ್ದೆ. ಬೆಂಗಳೂರು ದಟ್ಟ ಧಾರ್ಮಿಕ ಕೇಂದ್ರ ಕೂಡ. ಇಲ್ಲಿ ಮಾನವೀಯತೆ, ಅಮಾನವೀಯತೆ ಜೊತೆಗೆ ನಂಬಿಕೆ ಕೂಡ ಹೆಚ್ಚಿದೆ. ಹೀಗಾಗಿ, ಮದುವೆ, ಮುಂಜಿ, ಗೃಹಪ್ರವೇಶ, ಹೋಮಗಳು, ನಾಮಕರಣಗಳಂಥ ಶುಭಕಾರ್ಯಕ್ರಮಗಳು ಒಂದರ ಹಿಂದೆ ಒಂದರಂತೆ ದೊರೆಯುತ್ತಾ ಹೋದವು. ಸಿನಿಮಾನಟರು, ರಾಜಕೀಯ ವ್ಯಕ್ತಿಗಳ ಮನೆಗಳಲ್ಲೂ ಪೌರೋಹಿತ್ಯ ನಡೆಸುವ ಅವಕಾಶ ಹೇರಳವಾಗಿ ದೊರಕುತ್ತಿತ್ತು. ತಿಂಗಳಿಗೂ ಮೂರು ನಾಲ್ಕು ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುತ್ತಿದ್ದವನು, ದಿನಕ್ಕೆ ಎರಡು, ಮೂರಕ್ಕೆ ಬರುವಂತಾಯಿತು. ಇಲ್ಲಿ ಸಂಪಾದನೆ ಹೆಚ್ಚಾದಂತೆ ಮನೆಯಲ್ಲಿ ಅಪ್ಪ-ಅಮ್ಮನ ಬಡತನ ನೀಗುತ್ತಾ ಬಂತು.
ಇದು ಯಾವ ಮಟ್ಟಕ್ಕೆ ಹೋಯಿತು ಅಂದರೆ, ಮದುವೆ ಕಾರ್ಯಕ್ರಮ ಎಂದರೆ, ಚಪ್ಪರದಿಂದ, ಮನೆಗೆ ಸೀರಿಯಲ್ ಸೆಟ್ ಹಾಕುವುದರಿಂದ ಹಿಡಿದು, ಊಟ ತಿಂಡಿ, ಪೌರೋಹಿತ್ಯ ಕಷ್ಟ ಎಂತಾದರೆ, ಚೌಲಿó ಕೂಡ ಹುಡುಕಿಕೊಡುವ ಕಾಂಟ್ರಾಕ್ಟ್ ಶುರು ಮಾಡಿದೆ. ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಅನ್ನೋ ಮಾತೇ ಸುಳ್ಳು ಅನ್ನುವಂತೆ ಮಾಡಿ ತೋರಿಸುತ್ತಿದ್ದೆ.
ಈ ನನ್ನ ಬಳಿ ಓಡಾಡಲು ಕಾರ್ ಇದೆ. ಇರಲು ಸ್ವಂತ ಮನೆ, ಬ್ಯಾಂಕ್ ಬ್ಯಾಲೆನ್ಸ್. ಕೈತುಂಬಾ ಕೆಲಸ. ನೆರವಾಗಲು 10 ಜನ ಸಹಾಯಕರಿದ್ದಾರೆ. ಬದುಕು ಬಹಳ ಸುಂದರವಾಗಿದೆ. ಇದಕ್ಕೆಲ್ಲಾ ಕಾರಣ, ಊರು ಬಿಟ್ಟಿದ್ದು, ಇನ್ನೊಂದು, ಶ್ರದ್ಧೆಯಿಂದ ಕೆಲಸ ಮಾಡಿದ್ದು. ಆವತ್ತು ನಾನು ಊರಿನ ಜನ ಹೀಗೆಲ್ಲಾ ಬೈಯ್ತಾರೆ ಅಂತ ಅವರ ಮಾತನ್ನು ತಲೆಗೆ ತೆಗೆದುಕೊಂಡಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ.
ಕಟಕಾಚಾರ್ಯ, ಚಿಕ್ಕನಹಳ್ಳಿ