Advertisement

ಈ ಬಾರಿ ವಿನೂತನ ವಿಶ್ವ ಯೋಗ ದಿನಾಚರಣೆ

10:24 AM Jun 16, 2018 | Team Udayavani |

ದಾವಣಗೆರೆ: ಏಕಕಾಲದಲ್ಲಿ 35 ಸಾವಿರ ವಿದ್ಯಾರ್ಥಿಗಳಿಂದ ಯೋಗ ಜಾಥಾ…ಸೈಕಲ್‌ ಜಾಥಾ…,   ರಕ್ತದಾನ ಶಿಬಿರ.., ಯೋಗ ಮತ್ತು ಚಿತ್ರಕಲಾ ಸ್ಪರ್ಧೆ… 5 ಸಾವಿರಕ್ಕೂ ಹೆಚ್ಚು ಯೋಗಾಸಕ್ತರಿಂದ ಬೃಹತ್‌ ಯೋಗ ಪ್ರದರ್ಶನ… ಇವು ಜೂ. 21ರ ನಾಲ್ಕನೇ ವಿಶ್ವ ಯೋಗ ದಿನಾಚರಣೆಯ ಯಶಸ್ಸಿಗೆ ಜಿಲ್ಲಾಡಳಿತ, ಜಿಪಂ, ಆಯುಷ್‌ ಇಲಾಖೆ, ಜಿಲ್ಲಾ ಯೋಗ ಒಕ್ಕೂಟ, ತಪೋವನ ಹಾಗೂ ಅಶ್ವಿ‌ನಿ ಆಯುರ್ವೇದಿಕ್‌ ಮೆಡಿಕಲ್‌ ಕಾಲೇಜು, ಪತಂಜಲಿ ಯೋಗ ಸಂಸ್ಥೆ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಂಸ್ಥೆ, ರಾಷ್ಟ್ರೀಯ ಸೇವಾದಳ, ಎಎಫ್‌ಐ,  ಎನ್‌ಐಎಂಎ, ಎನ್‌ಸಿಸಿ, ಎನ್‌ ಎಸ್‌ಎಸ್‌, ಸಾರ್ವಜನಿಕ ಶಿಕ್ಷಣ, ಪಪೂ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಸಂಘ ಸಂಸ್ಥೆ ಮತ್ತು ಇಲಾಖೆಗಳು ಹಮ್ಮಿಕೊಂಡಿರುವ ಕಾರ್ಯಕ್ರಮಗಳು.

Advertisement

ಯೋಗದ ಮಹತ್ವ, ಜೀವನದಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಸಾರ್ವಜನಿಕರು, ಯುವ, ವಿದ್ಯಾರ್ಥಿ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಜೊತೆಗೆ ವಿಶ್ವ ಯೋಗ ದಿನವನ್ನು ವಿನೂತನವಾಗಿ ಆಚರಿಸುವ ಉದ್ದೇಶದಿಂದ ಜೂ.16 ರಿಂದ 21ರ ವರೆಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

16ರಂದು ಬೆಳಗ್ಗೆ 9ಕ್ಕೆ ದೇವರಾಜ ಅರಸು ಬಡಾವಣೆಯ ಲಯನ್ಸ್‌ ಸಮುದಾಯ ಭವನದಲ್ಲಿ ವಿವಿಧ ವಯೋಮಾನದ ಮಕ್ಕಳು ಮತ್ತು ಸಾರ್ವಜನಿಕರಿಗೆ ಪ್ರತ್ಯೇಕವಾಗಿ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆ ಏರ್ಪಡಿಸಲಾಗಿದೆ. ಮಾಹಿತಿಗೆ ಮೊ: 90087-35273ಗೆ ಸಂಪರ್ಕಿಸುವಂತೆ ಕೋರಿದರು.

17ರಂದು ಭಾನುವಾರ ಬೆಳಗ್ಗೆ 7 ರಿಂದ ಮೋತಿ ವೀರಪ್ಪ ಕಾಲೇಜಿನಿಂದ ನಮ್ಮ ನಡಿಗೆ ಆರೋಗ್ಯದೆಡೆಗೆ…
ಎಂಬ ಘೋಷವಾಕ್ಯದಡಿ ಬೃಹತ್‌ ಯೋಗ ಜಾಥಾ ಏರ್ಪಡಿಸಲಾಗಿದೆ. ಜಾಥಾ ವಿದ್ಯಾರ್ಥಿ ಭವನ ವೃತ್ತ,
ಕೆಇಬಿ ವೃತ್ತ, ಜಯದೇವ ವೃತ್ತ, ಮಹಾನಗರಪಾಲಿಕೆ, ಮಹಾತ್ಮಗಾಂಧಿ ವೃತ್ತ, ಪಿಜೆ ಹೋಟೆಲ್‌, ಎವಿಕೆ ಕಾಲೇಜು ರಸ್ತೆ, ರಾಂ ಅಂಡ್‌ ಕೋ ವೃತ್ತ, ಚರ್ಚ್‌ ರಸ್ತೆ ಮೂಲಕ ಮೋತಿ ವೀರಪ್ಪ ಕಾಲೇಜು ಆವರಣದಲ್ಲಿ ಮುಕ್ತಾಯವಾಗಲಿದೆ. 2 ಸಾವಿರಕ್ಕೂ ಹೆಚ್ಚು ಯೋಗಾಸಕ್ತರು ಭಾಗವಹಿಸುವರು ಎಂದು ತಿಳಿಸಿದರು.

18ರಂದು ಬೆಳಗ್ಗೆ 9ರಿಂದ ಶಿವಯೋಗಿ ಮಂದಿರದಲ್ಲಿ ವಿವಿಧ ವಯೋಮಾನದ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ. ಜೂ. 19ರಂದು ಯೋಗ ಕುರಿತು ಅರಿವು ಮೂಡಿಸುವ ಸಲುವಾಗಿ ಇಂಧನ ಉಳಿಸಿ-ಆರೋಗ್ಯ ಬೆಳೆಸಿ… ಘೋಷವಾಕ್ಯದಡಿ ಸೈಕಲ್‌ ಜಾಥಾ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 7.30 ರಿಂದ ಮೋತಿವೀರಪ್ಪ ಕಾಲೇಜು  ಮೈದಾನದಿಂದ ಪ್ರಾರಂಭವಾಗುವ ಸೈಕಲ್‌ ಜಾಥಾದಲ್ಲಿ ಪ್ರೌಢಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು, ಅಧಿಕಾರಿಗಳು, ಸಾರ್ವಜನಿಕರು ಪಾಲ್ಗೊಳ್ಳುವರು ಎಂದು ತಿಳಿಸಿದರು.

Advertisement

ಜೂ. 20ರಂದು ಯೋಗ ಜಾಥಾ ನಡೆಯಲಿದೆ. ಅಂದು ಬೆಳಗ್ಗೆ 7.30ಕ್ಕೆ ಸರ್ಕಾರಿ ಹೈಸ್ಕೂಲ್‌ ಮೈದಾನದಲ್ಲಿ ಯೋಗ ಜಾಗೃತಿಗಾಗಿ ವೀರಶೈವ ಪಂಚಮಸಾಲಿ ಸಮಾಜದ ಜಗದ್ಗುರು ವಚನಾನಂದ ಶ್ರೀಗಳ ಸಾರಥ್ಯದಲ್ಲಿ ವಿವಿಧ ಶಾಲಾ-ಕಾಲೇಜುಗಳ ಸುಮಾರು 30 ರಿಂದ 35 ಸಾವಿರ ವಿದ್ಯಾರ್ಥಿಗಳಿಂದ ಮಾನವ ಸರಪಳಿ ನಿರ್ಮಿಸಲಾಗುವುದು. ಮೈದಾನದ ಮಧ್ಯಭಾಗದಲ್ಲಿ ನಿರ್ಮಿಸಿರುವ ವೇದಿಕೆಯಲ್ಲಿ ಶ್ರೀ ವಚನಾನಂದ ಸ್ವಾಮೀಜಿ ಯೋಗ ಪ್ರದರ್ಶಿಸುವರು.
ವಿದ್ಯಾರ್ಥಿಗಳು ಸಾಮೂಹಿಕವಾಗಿ ಯೋಗ ಪ್ರದರ್ಶನದಲ್ಲಿ ಭಾಗವಹಿಸಲಿದ್ದು, ದಾವಣಗೆರೆಯಲ್ಲಿ ಪ್ರಪ್ರಥಮ ಬಾರಿಗೆ 35 ಸಾವಿರ ವಿದ್ಯಾರ್ಥಿಗಳ ಸಾಮೂಹಿಕವಾಗಿ ಯೋಗ ಪ್ರದರ್ಶನ ನಡೆಸಲಾಗುತ್ತಿದೆ ಎಂದು ತಿಳಿಸಿದರು.

21ರಂದು ಮೋತಿವೀರಪ್ಪ ಕಾಲೇಜು ಆವರಣದಲ್ಲಿ ಬೆಳಗ್ಗೆ 5 ರಿಂದ 8.45 ರವರೆಗೆ ನಾಲ್ಕನೇ ಅಂತಾರಾಷ್ಟ್ರೀಯ
ಯೋಗ ದಿನಾಚರಣೆ ಏರ್ಪಡಿಸಲಾಗಿದೆ. ಬೆಳಗ್ಗೆ 5 ರಿಂದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಧ್ಯಾನ
ಕಾರ್ಯಕ್ರಮ, 6 ರಿಂದ 7 ರವರೆಗೆ ಯೋಗಾಯೋಗ ಸಂಗಮ… ವೇದಿಕೆ ಕಾರ್ಯಕ್ರಮದಲ್ಲಿ ವೈದ್ಯಶ್ರೀ
ಚನ್ನಬಸವಣ್ಣನವರು ಹಾಗೂ ಹಾಸ್ಯ ಸಾಹಿತಿ ಪ್ರೊ| ಕೃಷ್ಣೇಗೌಡರಿಂದ ಉಪನ್ಯಾಸವಿದೆ. ಬೆಳಗ್ಗೆ 7 ರಿಂದ
7.45 ರವರೆಗೆ 5 ಸಾವಿರಕ್ಕೂ ಹೆಚ್ಚು ಯೋಗಾಸಕ್ತರು ಬೃಹತ್‌ ಯೋಗ ಪ್ರದರ್ಶನ ಪ್ರಸ್ತುತಪಡಿಸುವರು
ಎಂದು ತಿಳಿಸಿದರು.

ಜಿಲ್ಲಾ ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎನ್‌. ವಾಸುದೇವ ರಾಯ್ಕರ್‌ ಮಾತನಾಡಿ, ಯೋಗ
ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿರುವ ವಿವಿಧ ಕಾರ್ಯಕ್ರಮಗಳಿಗೆ ಎಲ್ಲ ಸಂಘ ಸಂಸ್ಥೆಗಳ ಮತ್ತು
ವಿವಿಧ ಇಲಾಖೆಗಳ ಸಹಕಾರ ಇದೆ. ಎಲ್ಲರೂ ಯೋಗ ದಿನಾಚರಣೆಯ ಯಶಸ್ಸಿಗೆ ಸಹಕರಿಸಬೇಕು ಎಂದು
ಮನವಿ ಮಾಡಿದರು.

ಜಿಲ್ಲಾ ಆಯುಷ್‌ ಅಧಿಕಾರಿ ಡಾ|ಯು. ಸಿದ್ದೇಶ್‌ ಮಾತನಾಡಿ, ಜಿಲ್ಲಾಧಿಕಾರಿಯವರ ಪ್ರಯತ್ನದ ಫಲವಾಗಿ ಈ ಬಾರಿ ಜಿಲ್ಲೆಯ ಎಲ್ಲ ಯೋಗ ಸಂಸ್ಥೆಗಳು ಒಂದೇ ವೇದಿಕೆಯಡಿ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ ಎಂದು ತಿಳಿಸಿದರು. ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಂಚಾಲಕಿ ಬಿ.ಕೆ. ಲೀಲಾ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next