Advertisement

ದೂರದೃಷ್ಟಿ-ಕ್ರಿಯಾಶಕ್ತಿಯ ಸಮ್ಮಿಶ್ರಣವೇ ಈ ಬಜೆಟ್‌

10:00 AM Feb 03, 2020 | Team Udayavani |

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿರುವ ಆಯವ್ಯಯವು ಆರ್ಥಿಕತೆಗೆ ವರವಾಗಿ ಪರಿಣಮಿಸಲಿದ್ದು, ಅಲ್ಲಿ ಘೋಷಿಸಲಾದ ಸುಧಾರಣಾ ಯೋಜನೆಗಳು ದೂರದೃಷ್ಟಿ ಹಾಗೂ ಕ್ರಿಯಾಶಕ್ತಿ ಎರಡನ್ನೂ ಹೊಂದಿವೆ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ಜತೆಗೆ, ಇದಕ್ಕಾಗಿ ಸಚಿವೆ ನಿರ್ಮಲಾ ಮತ್ತು ತಂಡವನ್ನು ಅಭಿನಂದಿಸಲು ಬಯಸುತ್ತೇನೆ ಎಂದಿದ್ದಾರೆ.

Advertisement

ಬಜೆಟ್‌ನಲ್ಲಿ ಘೋಷಿಸಲಾದ ಸುಧಾರಣಾ ಕ್ರಮಗಳು ದೇಶದಲ್ಲಿ ಉದ್ಯೋಗಾವ ಕಾಶಗಳನ್ನು ಸೃಷ್ಟಿಸಲಿದೆ ಮತ್ತು ರೈತರ ಆದಾಯವನ್ನು ದುಪ್ಪಟ್ಟುಗೊಳಿಸಲು ನೆರವಾಗಲಿದೆ. ನಾಗರಿಕರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲಿದೆ ಎಂದೂ ಮೋದಿ ಹೇಳಿದ್ದಾರೆ.

ಕೃಷಿ, ಮೂಲಸೌಕರ್ಯ, ಜವಳಿ ಮತ್ತು ತಂತ್ರಜ್ಞಾನದಂಥ ನಾಲ್ಕು ಪ್ರಮುಖ ವಲಯಗಳ ಮೇಲೆ ಗಮನ ಕೇಂದ್ರೀಕರಿಸಿರುವ ಕಾರಣ ಉದ್ಯೋಗ ಸೃಷ್ಟಿ ಸಾಧ್ಯವಾಗಲಿದೆ. ಇನ್ನು ಕೃಷಿ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಮತ್ತು ಹೊಸ ವಿಧಾನಗಳೆರಡಕ್ಕೂ ಒತ್ತು ಕೊಟ್ಟಿರುವ ಕಾರಣ ಇಲ್ಲೂ ಉದ್ಯೋಗ ಸೃಷ್ಟಿಯಾಗುವುದಲ್ಲದೆ, ಯುವಜನತೆ ಮೀನು ಸಂಸ್ಕರಣೆ ಮತ್ತು ಮಾರ್ಕೆಟಿಂಗ್‌ನಂಥ ಕ್ಷೇತ್ರಗಳತ್ತ ಮುಖ ಮಾಡುವಂತೆ ಮಾಡಲಿದೆ ಎಂದೂ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಕನಿಷ್ಠ ಸರಕಾರ, ಗರಿಷ್ಠ ಆಡಳಿತಕ್ಕೆ ಸಂಬಂಧಿಸಿ ಸರಕಾರದ ಬದ್ಧತೆಯನ್ನು ಈ ಬಜೆಟ್‌ ಮತ್ತಷ್ಟು ಬಲಪಡಿಸಿದೆ ಎಂದೂ ಮೋದಿ ಶ್ಲಾಘಿಸಿದ್ದಾರೆ.

ಕ್ರಮೇಣ ಎಲ್ಲ ತೆರಿಗೆ ವಿನಾಯ್ತಿಗೂ ಕೊಕ್‌: ನಿರ್ಮಲಾ
ದೀರ್ಘಾವಧಿಯಲ್ಲಿ ಎಲ್ಲ ರೀತಿಯ ತೆರಿಗೆ ವಿನಾಯ್ತಿಗಳನ್ನೂ ತೆಗೆದುಹಾಕುವ ಉದ್ದೇಶ ಸರಕಾರಕ್ಕಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಬಜೆಟ್‌ ಬಳಿಕ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, “ನಾವು ತೆರಿಗೆ ದರ ಸರಳೀಕರಣ ಮತ್ತು ಇಳಿಕೆ ಎರಡರತ್ತಲೂ ಗಮನ ಹರಿಸಿದ್ದೇವೆ. ಕ್ರಮೇಣ ನಾವು ತೆರಿಗೆ ದರ ಕಡಿತ ಮಾಡುತ್ತೇವೆ. ಆಗ ವಿನಾಯ್ತಿಗಳಿದ್ದಷ್ಟೂ ಸಮಸ್ಯೆಗಳು ಹೆಚ್ಚು. ಹೀಗಾಗಿ, ದೀರ್ಘಾವಧಿಯಲ್ಲಿ ಎಲ್ಲ ತೆರಿಗೆ ವಿನಾಯ್ತಿಗಳನ್ನೂ ತೆಗೆದುಹಾಕುವ ಉದ್ದೇಶವಿದೆ’ ಎಂದು ಹೇಳಿದ್ದಾರೆ. ಅಭಿಲಾಷೆಯ ಭಾರತ, ಸರ್ವರಿಗೂ ಆರ್ಥಿಕ ಅಭಿವೃದ್ಧಿ ಮತ್ತು ಕಾಳಜಿಯ ಸಮಾಜ ಎಂಬ ಮೂರು ಥೀಮ್‌ಗಳನ್ನು ಇಟ್ಟುಕೊಂಡು ಬಜೆಟ್‌ ಸಿದ್ಧಪಡಿಸಲಾಗಿದೆ ಎಂದೂ ನಿರ್ಮಲಾ ತಿಳಿಸಿದ್ದಾರೆ. ಪ್ರಸ್ತುತ ಸುಧಾರಣಾ ಕ್ರಮಗಳ ಧ್ಯೇಯವೇನೆಂದರೆ, ತೆರಿಗೆದಾರರ ಕೈಯಲ್ಲಿ ಹಣ ಓಡಾಡುತ್ತಿರಬೇಕು ಮತ್ತು ಅದನ್ನು ತನಗಿಷ್ಟಬಂದಂತೆ ಬಳಸುವಂಥ ಸ್ವಾತಂತ್ರ್ಯ ಆತನಿಗಿರಬೇಕು. ಇದುವೇ ನಮ್ಮ ಗುರಿ’ ಎಂದೂ ನಿರ್ಮಲಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next