Advertisement

ಅವ್ಯವಸ್ಥೆಯ ಆಗರವಾದ ಸಾರ್ವಜನಿಕ ಕ್ರೀಡಾಂಗಣ

11:14 AM May 02, 2019 | Naveen |

ತೀರ್ಥಹಳ್ಳಿ: ವಿವಿಧ ಕ್ರೀಡೆಗಾಗಿ ರೂಪಿಸಿದ್ದ ಪಟ್ಟಣದ ಸಾರ್ವಜನಿಕ ಕ್ರೀಡಾಂಗಣದ ದುರಂತದ ಕಥೆ ಇದು. ಕ್ರೀಡಾ ಚಟುವಟಿಕೆ ಉತ್ತೇಜಿಸುವ ಸಲುವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪಟ್ಟಣದ ಮುಖ್ಯ ಬಸ್‌ ನಿಲ್ದಾಣದ ಬಳಿ ಲೋಕೋಪಯೋಗಿ ಇಲಾಖೆ ಮೂಲಕ ನಿರ್ಮಿಸಿರುವ ಸಾರ್ವಜನಿಕ ಕ್ರೀಡಾಂಗಣ ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿದೆ. ಸಂಬಂಧಪಟ್ಟ ಇಲಾಖೆಯವರ ಕಣ್ಣಿಗೆ ಕಾಣದಂತಾಗಿದೆ.

Advertisement

ರೂ.1 ಕೋಟಿ ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಕ್ರೀಡಾಂಗಣ ಕ್ರೀಡಾಪಟುಗಳಿಗೆ ಈಗ ಇದ್ದೂ ಇಲ್ಲದಂತಾಗಿದೆ. ತಾಲೂಕು ಕೇಂದ್ರದಲ್ಲಿ ಉತ್ತಮ ಸೌಲಭ್ಯಗಳನ್ನು ಒಳಗೊಂಡ ಕ್ರೀಡಾಂಗಣದ ಕೊರತೆ ಎದ್ದು ಕಾಣುತ್ತಿದೆ.

2003-04ರಲ್ಲಿ ಶಾಸಕರಾಗಿದ್ದ ಆರಗ ಜ್ಞಾನೇಂದ್ರ ಅವರು ಆರಂಭ ಮಾಡಿದ ಕ್ರೀಡಾಂಗಣದ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಈಗ ಅವರೇ ಶಾಸಕರಾಗಿದ್ದಾರೆ. ರೂ. 80 ಲಕ್ಷ ಅನುದಾನದಲ್ಲಿ ಆರಂಭಗೊಂಡ ತಾಲೂಕು ಮಟ್ಟದ ಸಾರ್ವಜನಿಕ ಕ್ರೀಡಾಂಗಣದ ನಿರ್ಮಾಣ ಕಾಮಗಾರಿ ಕುಂಟುತ್ತಾ ಸಾಗಿದರೂ ಪೂರ್ಣ ಪ್ರಮಾಣದ ಕ್ರೀಡಾಂಗಣವಾಗಿ ರೂಪುಗೊಂಡಿಲ್ಲ.

ಪಟ್ಟಣದ ಸರ್ಕಾರಿ ಪಪೂ ಕಾಲೇಜು ಸಮೀಪದಲ್ಲಿನ ಪಾಳುಬಿದ್ದ ಕೆರೆ ಅಂಗಳದಲ್ಲಿ ಕ್ರೀಡಾಂಗಣ ತಲೆ ಎತ್ತಿದೆ. ಇದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಸಂಘ-ಸಂಸ್ಥೆಗಳು, ಕ್ರೀಡಾ ಪ್ರೇಮಿಗಳು ಕ್ರೀಡಾಂಗಣದಲ್ಲಿ ಆಗಾಗ್ಗೆ ನಡೆಯುವ ಕ್ರಿಕೆಟ್ ಪಂದ್ಯಗಳನ್ನು ಹೊರತು ಪಡೆಸಿದರೆ ರಾಜಕೀಯ ಪಕ್ಷಗಳ ಸಾರ್ವಜನಿಕ ಸಭೆಗಳಿಗೆ ಮಾತ್ರ ನೀಮಿತಗೊಂಡಿದೆ.

ಕ್ರೀಡಾಂಗಣದಲ್ಲಿ ನಿರ್ಮಾಣಗೊಂಡಿರುವ ಪೆವಿಲಿಯನ್‌ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ಬೀಡಾಡಿ ಜಾನುವಾರು, ನಾಯಿಗಳ, ಕೊಟ್ಟಿಗೆಯಂತಾಗಿ ಅನೈತಿಕ ಚಟುವಟಿಕೆಯ ತಾಣವಾಗಿ ರೂಪುಗೊಂಡಿದೆ. ಪೆವಿಲಿಯನ್‌ ಕಟ್ಟಡದ ಕಾಮಗಾರಿ ಕಳಪೆಯಾಗಿದ್ದು, ಕಟ್ಟಡದ ಗೋಡೆಯ ಮೇಲಿನ ಅಶ್ಲೀಲ ಬರಹಗಳು ಅಸಹ್ಯ ಹುಟ್ಟಿಸುತ್ತಿವೆ.

Advertisement

ಪೆವಿಲಿಯನ್‌ ಕಟ್ಟಡ ಕ್ರೀಡಾ ಸಾಮಗ್ರಿಗಳು, ಕಚೇರಿ, ವಿಶ್ರಾಂತಿ ಗೃಹ, ಶೌಚಾಲಯವನ್ನು ಒಳಗೊಂಡಿದ್ದರು ನಿರ್ವಹಣೆ ಇಲ್ಲದಂತಾಗಿದೆ. ಪೆವಿಲಿಯನ್‌ ಕಟ್ಟಡದ ಮುಂಭಾಗದಲ್ಲಿ ವೀಕ್ಷಣೆಗೆ ಅಳವಡಿಸಿದ್ದ ಮೆಟ್ಟಿಲುಗಳು ಹಾಳಾಗಿವೆ. ಮಳೆಗಾಲದಲ್ಲಿ ನೀರು ನಿಲ್ಲುವುದರಿಂದ ಕೆಸರಿನಿಂದ ತುಂಬಿಕೊಳ್ಳಲಿದೆ. ಆಟದ ಮೈದಾನದ ಸುತ್ತ ಕಸ ಕಡ್ಡಿ, ಗಿಡಗಂಟೆಗಳು ಹಬ್ಬಿಕೊಂಡಿವೆ.

ಲೋಕೋಪಯೋಗಿ ಇಲಾಖೆ ನಿರ್ಮಿಸಿರುವ ಕ್ರೀಡಾಂಗಣವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಿಸಲಿಲ್ಲ. 20 ವರ್ಷಗಳಿಂದ ಕಾಮಗಾರಿ ಪೂರ್ಣಗೊಳ್ಳದಿರುವುದರಿಂದ ತಮ್ಮ ಆಗತ್ಯಕ್ಕೆ ತಕ್ಕಂತೆ ಕೆಲವರು ಕ್ರೀಡಾಂಗಣವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಲೋಕೋಪಯೋಗಿ ಇಲಾಖೆ, ಪಪಂ ಆಡಳಿತಕ್ಕೆ ಕ್ರೀಡಾಂಗಣದ ಕಾಮಗಾರಿ ಪೂರ್ಣಗೊಳಿಸಿ ಹಸ್ತಾಂತರಿಸಿದ್ದರೆ ಕ್ರೀಡಾಂಗಣದ ನಿರ್ವಹಣೆ ಆಗುತ್ತಿತ್ತು, ಆದರೆ, ಪಿಡಬ್ಲ್ಯೂಡಿ ಇಲಾಖೆ ಈ ಕೆಲಸವನ್ನು ಮಾಡಿಲ್ಲ ಎನ್ನುತ್ತಾರೆ ಪಪಂ ಮಾಜಿ ಅಧ್ಯಕ್ಷ ಸಂದೇಶ ಜವಳಿ. ಒಟ್ಟಾರೆ ಸಾರ್ವಜನಿಕರ ಉಪಯೋಗಕ್ಕೆ ಇರಬೇಕಾದ ಕ್ರೀಡಾಂಗಣದ ಅವ್ಯವಸ್ಥೆ ಬಗ್ಗೆ ಇನ್ನಾದರೂ ಸಂಬಂದ ಪಟ್ಟ ಇಲಾಖೆ ಗಮನ ಹರಿಸಬೇಕಾಗಿದೆ. ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಕ್ರೀಡಾಂಗಣದ ದುರಂತದ ತಾಣದ ಬಗ್ಗೆ ಕಣ್ಣು ಹಾಯಿಸಬೇಕು ಎಂಬುದು ಕ್ರೀಡಾ ಅಭಿಮಾನಿಗಳ ಒತ್ತಾಯವಾಗಿದೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಕ್ರೀಡಾಂಗಣವನ್ನು ಇಲಾಖೆಗೆ ಹಸ್ತಾಂತರಿಸುವ ಬಗ್ಗೆ ಪತ್ರ ಬರೆದಿದ್ದು ಇಲ್ಲಿಯ ತನಕ ಆ ಇಲಾಖೆಯಿಂದ ಯಾವುದೇ ಉತ್ತರ ಬಂದಿಲ್ಲ . ಇನ್ನೊಮ್ಮೆ ಆ ಇಲಾಖೆಯ ಗಮನಕ್ಕೆ ತರುತ್ತೇನೆ.
ದಿವಾಕರ್,
ಎಇಇ, ಲೋಕೋಪಯೋಗಿ ಇಲಾಖೆ

ನನ್ನ ಅವಧಿಯಲ್ಲಿ ಅನುದಾನದಿಂದ ಆರಂಭಗೊಂಡ ಈ ಕ್ರೀಡಾಂಗಣದ ದುಸ್ಥಿತಿ ಹೀಗಾಗಬಾರದಿತ್ತು. ಈ ಸಂಬಂಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ಮುಂದಿನ ತಿಂಗಳು ಸರ್ಕಾರದ ಕ್ರೀಡಾ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಇದಕೊಂದು ಕಾಯಕಲ್ಪ ನೀಡುತ್ತೇನೆ.
•ಆರಗ ಜ್ಞಾನೇಂದ್ರ,
ಶಾಸಕರು ತೀರ್ಥಹಳ್ಳಿ.

ರಾಂಚಂದ್ರ ಕೊಪ್ಪಲು

Advertisement

Udayavani is now on Telegram. Click here to join our channel and stay updated with the latest news.

Next