ತುಮಕೂರು: ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರು ತಮ್ಮ ಕೊನೆಯ ದಿನಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿದ್ಧಗಂಗಾ ಆಸ್ಪತ್ರೆಯ ಮೂರನೇ ಕೊಠಡಿ ಈಗ ಪ್ರಾರ್ಥನಾ ಮಂದಿರವಾಗಿದೆ.
ಸಿದ್ಧಗಂಗಾ ಆಸ್ಪತ್ರೆಯ ಮೂರನೇ ಮಹಡಿಯ ಅತ್ಯಾಧುನಿಕ ಕೊಠಡಿಯಲ್ಲಿ ಶ್ರೀಗಳು ಚಿಕಿತ್ಸೆ ಪಡೆಯುತ್ತಿದ್ದರು. ಈಗ ಆ ಕೊಠಡಿಯಲ್ಲಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರ ಇಟ್ಟು ನಿತ್ಯವೂ ಪೂಜೆ ಮಾಡಲಾಗುತ್ತಿದೆ. ಆಸ್ಪತ್ರೆಗೆ ಬರುವ ರೋಗಿಗಳು, ರೋಗಿಗಳ ಪೋಷಕರು ಮತ್ತು ಆಸ್ಪತ್ರೆಯ ಸಿಬ್ಬಂದಿ ಪ್ರತಿನಿತ್ಯ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸುತ್ತಿದ್ದು, ಜೊತೆಗೆ ಅಲ್ಲಿಯೇ ಕುಳಿತು ಧ್ಯಾನ ಮಾಡುತ್ತಿದ್ದಾರೆ. ಪ್ರತಿ ನಿತ್ಯವೂ ಈ ಕೊಠಡಿಯಲ್ಲಿ ಶ್ರೀಗಳ ಪೂಜೆ ನಡೆಯುತ್ತಿರುವುದರಿಂದ ಇದು ಪ್ರಾರ್ಥನಾ ಮಂದಿರವಾಗಿ ಪರಿವರ್ತನೆಗೊಂಡಿದೆ. ಶ್ರೀಗಳನ್ನು ನೆನಪಿಸಿಕೊಂಡು ಧ್ಯಾನ ಮಾಡುತ್ತೇವೆ ಎಂದು ಧ್ಯಾನದಲ್ಲಿ ನಿರತರಾಗಿದ್ದ ಯೋಗೇಶ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂಬಂಧ ಸಿದ್ಧಗಂಗಾ ಆಸ್ಪತ್ರೆಯ ಮುಖ್ಯಸ್ಥ ಹಾಗೂ ಶ್ರೀಗಳ ಆಪ್ತ ವೈದ್ಯ ಡಾ. ಪರಮೇಶ್ “ಉದಯವಾಣಿ’ಯೊಂದಿಗೆ ಮಾತನಾಡಿ, ಶ್ರೀಗಳು ಸಿದ್ಧಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದು ಎಂದಿಗೂ ಮರೆಯಲಾಗದ ಕ್ಷಣ.
ಶ್ರೀಗಳಿಗಾಗಿಯೇ ಈ ಕೊಠಡಿ ನಿರ್ಮಾಣಮಾಡಲಾಗಿತ್ತು. ಶ್ರೀಗಳು ಚೆನ್ನೈನ ರೇಲಾ ಆಸ್ಪತ್ರೆಯಿಂದ ಮಠಕ್ಕೆ ಬಂದ ನಂತರ ಮಠದಲ್ಲಿಯೇ ಚಿಕಿತ್ಸೆ ಮುಂದುವರಿಸಿದ್ದೆವು. ಆದರೆ, ಮಠದಲ್ಲಿ ಶ್ರೀಗಳಿಗೆ ಸೋಂಕು ಹೆಚ್ಚಾಗುತ್ತಿದ್ದುದ್ದರಿಂದ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡು ಸಿದ್ಧಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದೆವು ಎಂದರು.
ಶ್ರೀಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಅವರನ್ನು ಮಠಕ್ಕೆ ಮತ್ತೆ ಕರೆದುಕೊಂಡು ಹೋದಾಗಿನಿಂದ ಕೊಠಡಿಯಲ್ಲಿ ಶ್ರೀಗಳ ಭಾವಚಿತ್ರ ಇಟ್ಟು ಪೂಜೆ ಮಾಡಲಾಗುತ್ತಿದೆ. ಇನ್ನು ಮುಂದೆ ಈ ಕೊಠಡಿಯನ್ನು ಯಾರಿಗೂ ನೀಡದೆ ಪ್ರಾರ್ಥನಾ ಮಂದಿರವಾಗಿ ಮುಂದುವರಿಸುತ್ತೇವೆ.ಶ್ರೀಗಳು ಪಡೆಯುತ್ತಿದ್ದ ಕಾಟ್ನ್ನು ಹಾಗೆಯೇ ಇಡಲಾಗುವುದು. ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ಮಠದ ಸಿಬ್ಬಂದಿ ಹಾಗೂ ನಾವು ಶ್ರೀಗಳಿಗೆ ಪೂಜೆ ಸಲ್ಲಿಸಿ, ಧ್ಯಾನ ಮಾಡುತ್ತೇವೆ ಎಂದರು.