Advertisement

ಕರ್ನಾಟಕದಲ್ಲೂ ಧಾರ್ಮಿಕ ಕಾರಿಡಾರ್‌ ಗಳ ಅಭಿವೃದ್ದಿಯತ್ತ ಚಿಂತನೆ: ಸಚಿವೆ ಶಶಿಕಲಾ ಜೊಲ್ಲೆ

03:01 PM Oct 14, 2022 | Team Udayavani |

ಕೆ.ಆರ್‌.ಪೇಟೆ: ಪ್ರಧಾನಿ ನರೇಂದ್ರ ಮೋದಿ ಅವರ ಮುತುವರ್ಜಿಯಿಂದ ದೇಶದಲ್ಲಿ ಧಾರ್ಮಿಕ ಕ್ಷೇತ್ರಗಳನ್ನು ಪುನರುಜ್ಜೀವನಗೊಳಿಸುತ್ತಿರುವಂತೆ ಕರ್ನಾಟಕ ರಾಜ್ಯದಲ್ಲೂ ಧಾರ್ಮಿಕ ಕಾರಿಡಾರ್‌ ಗಳ ಅಭಿವೃದ್ದಿಗೆ ಸನ್ಮಾನ್ಯ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಒಲವು ತೋರಿಸಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿರುವ ಅವಕಾಶಗಳ ಬಗ್ಗೆ ವರದಿ ನೀಡುವಂತೆ ಮುಜರಾಯಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

Advertisement

ಇಂದು ಮಂಡ್ಯ ಜಿಲ್ಲೆಯ ಕೆ ಆರ್‌ ಪೇಟೆಯ ಅಂಬಿಗರಹಳ್ಳಿ – ಸಂಗಾಪುರ – ಪುರ ಗ್ರಾಮಗಳ ತ್ರಿವೇಣಿ ಸಂಗಮದಲ್ಲಿ ನಾಲ್ಕು ದಿನಗಳ ಐತಿಹಾಸಿಕ ಮಹಾಕುಂಭಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೆ ಆರ್‌ ಪೇಟೆಯಲ್ಲಿ ದಕ್ಷಿಣ ಭಾರತದ ಮಹಾಕುಂಭಮೇಳವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ. ಮಲೆ ಮಹದೇಶ್ವರರು ಶ್ರೀಶೈಲದಿಂದ ಬಂದಾಗ ಪಾದಸ್ಪರ್ಶ ಮಾಡಿದ್ದ ಪವಿತ್ರ ಸ್ಥಳದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಬಹಳ ವಿಶೇಷ. ಪೂಜ್ಯರ ನೇತೃತ್ವದಲ್ಲಿ ನಡೆಯುತ್ತಿರುವ ಇಂತಹ ಕಾರ್ಯಕ್ರಮಗಳ ಮೂಲಕ ನಮ್ಮ ಮೂಲ ಧಾರ್ಮಿಕ ಸಂಸ್ಕೃತಿಯನ್ನ ಜನ ಮಾನಸದಲ್ಲಿ ಬಿತ್ತಿ ಬೆಳೆಸುವ ಕಾರ್ಯ ನಡೆಸಲಾಗುತ್ತಿದೆ. ಸಂಸ್ಕೃತಿಯನ್ನು ಉಳಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಹಾಗೂ ನಮ್ಮ ಸರಕಾರವೂ ಚಿಂತನೆ ನಡೆಸಿದ್ದು, ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ಹೇಳಿದರು.

ಇದನ್ನೂ ಓದಿ:ಕರ್ನಾಟಕದಲ್ಲಿ ಹೆಚ್ಚಿನ ಹೂಡಿಕೆಗೆ ಕೊವ್ಯಾಕ್ಸಿನ್‌ ಉತ್ಪಾದಕ ಭಾರತ್ ಬಯೋಟೆಕ್ ಒಲವು

2014 ರಲ್ಲಿ ಭಾರತದ ಪ್ರಧಾನಿ ಸ್ಥಾನ ವಹಿಸಿಕೊಂಡಾಗಿನಿಂದಲೂ ನರೇಂದ್ರ ಮೋದಿಯವರು ಹಲವಾರು ಹಿಂದೂ ದೇವಾಲಯಗಳ ಗತ ವೈಭವ ಮರಳುವಂತೆ ಕ್ರಮವಹಿಸಿದ್ದಾರೆ. ಪ್ರಖ್ಯಾತ ದೇವಸ್ಥಾನಗಳ ಜೀರ್ಣೋದ್ದಾರವೂ ನಡೆಸಲಾಗಿದೆ. ಕಾಶಿ ವಿಶ್ವನಾಥ ಧಾಮ, ಶ್ರೀ ಮಹಾಕಾಲ್‌ ಲೋಕ, ಕೇದಾರನಾಥ್‌ ದೇವಾಲಯ, ಸೋಮನಾಥ ದೇವಾಲಯ, ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾದಾಗಿನಿಂದ ಅಲ್ಲೂ ದೇವಸ್ಥಾನಗಳ ಜೀರ್ಣೋದ್ದಾರ ನಡೆಸಲಾಗುತ್ತಿದೆ. ಇದೇ ರೀತಿಯಲ್ಲಿ ನಮ್ಮ ರಾಜ್ಯದಲ್ಲೂ ಧಾರ್ಮಿಕ ಕಾರಿಡಾರ್‌ಗಳನ್ನು ಅಭಿವೃದ್ದಿಗೊಳಿಸುವತ್ತ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.

Advertisement

ಧಾರ್ಮಿಕ ಕಾರಿಡಾರ್‌ಗೆ ಸಿಎಂ ಒಲವು: ಕಳೆದ 10 ವರ್ಷಗಳಲ್ಲೇ ಅತಿ ಹೆಚ್ಚು ಅನುದಾನ ನೀಡುವ ಮೂಲಕ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಮುಜರಾಯಿ ಇಲಾಖೆಗೆ ಮಹತ್ವ ನೀಡಿದೆ. ಇದರಿಂದಾಗಿ 10 ಹಲವು ವಿಶೇಷ ಯೋಜನೆಗಳನ್ನು ಪ್ರಾರಂಭಿಸಲು ಸಾಧ್ಯವಾಗಿದೆ. ರಾಜ್ಯದಲ್ಲೂ ಕಾಶಿ, ಉಜ್ಜೈನಿ ನಂತಹ ಕಾರಿಡಾರ್‌ ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ತಮ್ಮ ಒಲವು ವ್ಯಕ್ತಪಡಿಸಿದ್ದಾರೆ. ವಿಜಯನಗರ ಜಿಲ್ಲೆಯ ಪ್ರವಾಸ ಸಂಧರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮುತುವರ್ಜಿಯಲ್ಲಿ ಅಭಿವೃದ್ದಿಗೊಳಿಸಲಾದ ಕಾರಿಡಾರ್‌ ಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಅಲ್ಲದೇ ರಾಜ್ಯದಲ್ಲೂ ಇಂತಹ ಅಭಿವೃದ್ದಿಯನ್ನು ಕೈಗೊಳ್ಳುವ ಇಂಗಿತ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ರಾಜ್ಯದಲ್ಲಿರುವ ಅವಕಾಶಗಳ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿಯವರ ದೇವಸ್ಥಾನಗಳ ಸಮಗ್ರ ಅಭಿವೃದ್ದಿಯ ಕನಸನ್ನ ಸಾಕಾರಗೊಳಿಸುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next