Advertisement

ಶುರುವಾಗಿದೆ ಸ್ವಯಂಪ್ರೇರಿತ ಲಾಕ್‌ಡೌನ್‌ ಚಿಂತನೆ

04:13 PM Jul 08, 2020 | Suhan S |

ಧಾರವಾಡ: ಪ್ರತಿದಿನ ಧಾರವಾಡ ಜಿಲ್ಲೆಯಲ್ಲಿ ಅರ್ಧಶತಕ ದಾಟುತ್ತಿರುವ ಕೋವಿಡ್ ಸೋಂಕಿತರ ಸಂಖ್ಯೆ, ಎಲ್ಲಿ ನೋಡಿದರೂ ಆತಂಕದ ಛಾಯೆ, ಸೀಲ್‌ ಡೌನ್‌ ಆಗುತ್ತಿರುವ ಬೀದಿ, ಅಪಾರ್ಟ್ ಮೆಂಟ್‌ ಮತ್ತು ಗ್ರಾಮಗಳು. ಒಂದೆಡೆ ಧಾರಾಕಾರ ಮಳೆ, ಇನ್ನೊಂದೆಡೆ ಕೋವಿಡ್‌ ಸೋಂಕು ಹರಡುವ ಭೀತಿ ಜಿಲ್ಲೆಯ ಜನರನ್ನು ಹೈರಾಣು ಮಾಡಿದ್ದು, ಇದೀಗ ಇಡೀ ಜಿಲ್ಲೆಯೇ ಸ್ವಯಂ ಪ್ರೇರಣೆಯಿಂದ ಲಾಕ್‌ಡೌನ್‌ಗೆ ಒಳಗಾಗುವುದು ಸೂಕ್ತ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

Advertisement

ಈ ಬಗ್ಗೆ ಪಕ್ಷಬೇಧ ಮರೆತು ಎಲ್ಲರೂ ಒಂದಾಗಿ ಲಾಕ್‌ಡೌನ್‌ ಮಾಡೋಣ ಎನ್ನುವ ಪೋಸ್ಟ್‌ಗಳು ಕೆಲವು ರಾಜಕೀಯ ಮುಖಂಡರು ಮತ್ತು ಸಮಾಜ ಸೇವಕರ ಫೇಸ್‌ಬುಕ್‌ನಲ್ಲಿ ರಾರಾಜಿಸುತ್ತಿದ್ದು, ಇದಕ್ಕೆ ಪರ-ವಿರೋಧ ಪ್ರತಿಕ್ರಿಯೆಗಳು ಕೂಡ ವ್ಯಕ್ತವಾಗುತ್ತಿವೆ. 25ಕ್ಕೂ ಹೆಚ್ಚು ವಿವಿಧ ಪಕ್ಷಗಳ ಸ್ಥಳೀಯ ಮುಖಂಡರು ಈ ಚರ್ಚೆಯಲ್ಲಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹರಡುವ ರೀತಿ ನೋಡಿದರೆ ಮುಂದಿನ ದಿನಗಳಲ್ಲಿ ಮನೆ ಮನೆಗೂ ಇದು ವ್ಯಾಪಿಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಹೀಗಾಗಿ ಕೂಡಲೇ ಎಲ್ಲರೂ, ಧರ್ಮ, ಜಾತಿ,ಪಕ್ಷಬೇಧ ಮರೆತು ಎಚ್ಚೆತ್ತುಕೊಂಡು ಲಾಕ್‌ಡೌನ್‌ ಮಾಡಲೇಬೇಕಾಗಿದೆ ಎನ್ನುವ ಮಾತುಗಳು ರಿಂಗಣಿಸುತ್ತಿವೆ.

ನಿಂತಿಲ್ಲ ಶುಭಕಾರ್ಯಗಳು : ಕೋವಿಡ್ ಇಷ್ಟು ವೇಗವಾಗಿ ಹರಡುತ್ತಿರುವುದು ಗೊತ್ತಿದ್ದರೂ, ಜನರು ಮಾತ್ರ ಕ್ಯಾರೇ ಎನ್ನದೇ ತಮ್ಮದೇ ಲೋಕದಲ್ಲಿದ್ದಾರೆ. ಜಿಲ್ಲೆಯ ಹಳ್ಳಿಗಳಲ್ಲಿ ಮದುವೆ, ಸೀಮಂತ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಮಾಡಿ ನೂರಾರು ಜನರು ಒಟ್ಟಿಗೆ ಸೇರುತ್ತಿದ್ದಾರೆ. ಸಾಮೂಹಿಕ ಭೋಜನ, ಕಾರ್ಯಕ್ರಮ, ಮನರಂಜನೆಗಳಿಗೆ ಕೊರತೆಯೇ ಇಲ್ಲ. ಹಳ್ಳಿಗರು ಲಾಕ್ ಡೌನ್‌ ಸಂದರ್ಭ ತೋರಿಸಿದ್ದ ಸ್ವಯಂ ಶಿಸ್ತನ್ನು ಮರೆತು ಬಿಟ್ಟಿದ್ದು, ಇದೀಗ ಸುರಿವ ಮಳೆಯ ಮಧ್ಯೆಯೂ ಹಳ್ಳಿಗಳಲ್ಲಿ ಶುಭ ಸಮಾರಂಭಗಳು ಎಗ್ಗಿಲ್ಲದೇ ಸಾಗಿವೆ. ಅದೂ ತಮ್ಮ ಮನೆಗಳ ಮುಂದೆ ದೊಡ್ಡ ಪೆಂಡಾಲ್‌ಗ‌ಳನ್ನು ಹಾಕಿಯೇ ಕಾರ್ಯಕ್ರಮ ಮಾಡಲಾಗುತ್ತಿದೆ. ದುರಂತ ಎಂದರೆ ಈ ಕಾರ್ಯಕ್ರಮಗಳಿಗೆ ಈಗಾಗಲೇ ಕೋವಿಡ್ ಪ್ರಕರಣಗಳಿರುವ ಹಳ್ಳಿಯ ಜನತೆ ಬಂದು ಭಾಗಿಯಾಗಿ ಹೋಗುತ್ತಿದ್ದಾರೆ. ಇದು ಹೀಗೆ ಮುಂದು ವರಿದರೆ ಹಳ್ಳಿಗಳ ಇನ್ನಷ್ಟು ಕಷ್ಟ ಅನುಭವಿಸಬೇಕಾಗುತ್ತದೆ.

ಮಳೆಗೆ ಹೆಚ್ಚುವುದೇ ಕೋವಿಡ್ ?: ತಂಪು ವಾತಾವರಣಕ್ಕೆ ಕೋವಿಡ್ ಅತೀ ವೇಗವಾಗಿ ಹರಡುತ್ತದೆ ಎನ್ನುವ ಪರಿಕಲ್ಪನೆಯನ್ನು ಮಾಧ್ಯಮಗಳು ಈಗಾಗಲೇ ಬಿತ್ತಿಬಿಟ್ಟಿವೆ. ವೈದ್ಯರು ಹೇಳುವ ಪ್ರಕಾರ ಕೊರೊನಾಗೆ ಯಾವುದೇ ವಾತಾವರಣವೂ ಅಷ್ಟೇ. ಆದರೆ ಶೀತ ಪ್ರದೇಶಗಳಲ್ಲಿ ಮೊದಲೇ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಅಂತಹ ಸಂದರ್ಭ ಕೋವಿಡ್ ಕೂಡ ಕೈಜೋಡಿಸಿ ಬಿಟ್ಟರೆ ಇನ್ನಷ್ಟು ತೊಂದರೆಯಾಗುತ್ತದೆ ಎನ್ನುತ್ತಿದ್ದಾರೆ. ಜಿಲ್ಲೆಯಲ್ಲಿ ಡೆಂಗಿ, ಮಲೇರಿಯಾ, ಜ್ವರ-ನೆಗಡಿ, ಕೆಮ್ಮು, ದಮ್ಮಿನ ಪ್ರಕರಣಗಳು ಕೂಡ ಹೆಚ್ಚುತ್ತಿವೆ. ಇನ್ನು ಚಿಕ್ಕಮಕ್ಕಳಿಗೆ ಪ್ರತಿವರ್ಷದಂತೆ ಈ ವರ್ಷವೂ ಸತತ ಮಳೆಗೆ ಹಬ್ಬುವ ಶೀತಜ್ವರ (ತಂಡಿಜ್ವರ) ಕಾಡುತ್ತಿದೆ. ಇತರ ಖಾಯಿಲೆಯಿಂದ ಬಳಲುವವರು ಕೂಡ ತಂಪಿಗೆ ಅಂಜಿಕೊಂಡೇ ಇದ್ದು, ಇದೀಗ ಕೋವಿಡ್ ಮತ್ತಷ್ಟು ಹರಡುತ್ತಿರುವ ಹಿನ್ನೆಲೆಯಲ್ಲಿ ಆತಂಕದಲ್ಲಿದ್ದಾರೆ.

ಮಾರಡಗಿ ಲಾಕ್‌ಡೌನ್‌: ತಾಲೂಕಿನ ಸೋಮಾಪೂರದಲ್ಲಿ ಕೋವಿಡ್ ಸೋಂಕು ಪತ್ತೆ ಆಗಿರುವ ಹಿನ್ನಲೆಯಲ್ಲಿ ಪಕ್ಕದ ಹಳ್ಳಿ ಮಾರಡಗಿ ಗ್ರಾಮದಲ್ಲಿ ಸ್ವಯಂ ಪ್ರೇರಿತವಾಗಿ ಜು.20ರವರೆಗೆ ಸಂಪೂರ್ಣ ಲಾಕಡೌನ್‌ ಮಾಡಲು ನಿರ್ಧರಿಸಲಾಗಿದೆ. ಈ ಹಿನ್ನಲೆಯಲ್ಲಿ ಗ್ರಾ.ಪಂ. ಸದಸ್ಯರು ಹಾಗೂ ಗ್ರಾಮಸ್ಥರು ಗ್ರಾಮದ ಪಿಡಿಓ ಅವರಿಗೆ ಮನವಿ ಸಲ್ಲಿಸಿದ್ದು, ಕೋವಿಡ್ ದಿಂದ ಸೋಮಾಪೂರ ಸೀಲ್‌ಡೌನ್‌ ಆಗಿರುವ ಕಾರಣ ಮಾರಡಗಿಯಲ್ಲೂ ಸ್ವಯಂಪ್ರೇರಿತವಾದ ಸಂಪೂರ್ಣ ಲಾಕಡೌನ್‌ ಮಾಡುವಂತೆ ಒತ್ತಾಯಿಸಲಾಗಿದೆ. ಗ್ರಾಮಕ್ಕೆ ಕೆಎಸ್‌ಆರ್‌ ಟಿಸಿ ಬಸ್‌ ಹಾಗೂ ಖಾಸಗಿ ವಾಹನಗಳನ್ನು ತಕ್ಷಣದಿಂದ ಜು.20ರವರೆಗೆ ಬಂದ್‌ ಮಾಡಲು ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ವ್ಯವಹಾರ ಮಾಡಬೇಕು. ಗ್ರಾಮದ ಮುಖ್ಯ ರಸ್ತೆಗಳಲ್ಲಿರುವ ಚಹಾದಂಗಡಿ, ಕಿರಾಣಿ ಹಾಗೂ ಹೇರ್‌ ಕಟಿಂಗ್‌ ಸಲೂನ್‌ ಸೇರಿದಂತೆ ವಾಣಿಜ್ಯ-ವಹಿವಾಟುಗಳನ್ನು ಹೊಂದಿರುವ ಅಂಗಡಿಗಳನ್ನು ಬಂದ್‌ ಮಾಡಬೇಕು. ಗ್ರಾಮಕ್ಕೆ ಬರುವ ಎಲ್ಲ ಸರಕಾರಿ ಅರೆ ಸರಕಾರಿ ನೌಕರಸ್ಥರು ಕೋವಿಡ್‌-19ಕ್ಕೆ ಸಂಬಂಧಪಟ್ಟಂತೆ ಸರಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು. ಗ್ರಾಮದಿಂದ ಹೊರಗಡೆ ಕೆಲಸಕ್ಕೆ ಹೋಗುವ ಜನರ ಕಂಪೆನಿಗಳಿಗೆ ಗ್ರಾ.ಪಂ.ನಿಂದಲೇ ಪತ್ರ ಬರೆದು, ಲಾಕಡೌನ್‌ ಬಳಿಕ ಅವರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವಂತೆ ಅನುಮತಿ ಪಡೆಯಬೇಕು ಎಂದು ಆಗ್ರಹಿಸಲಾಗಿದೆ.

Advertisement

ಪಾಲನೆಯಾಗದ ನಿಯಮಗಳು :  ಕೋವಿಡ್ ಕುಣಿದು ಕುಪ್ಪಳಿಸುತ್ತಿದ್ದರೂ ಜಿಲ್ಲೆಯ ಜನರಿಗೆ ಮಾತ್ರ ಯಾವುದರ ಪರಿವೆಯೂ ಇಲ್ಲ, ಮಾಸ್ಕ್ ಬಳಕೆ ಸರಿಯಾಗಿ ಆಗುತ್ತಿಲ್ಲ, ಸ್ಯಾನಿಟೈಜರ್‌ ಹಚ್ಚಿಕೊಳ್ಳುತ್ತಿಲ್ಲ. ಎಲೆ ಅಡಿಕೆ, ಗುಟಕಾ ತಿಂದು ಸಾರ್ವಜನಿಕ ರಸ್ತೆಗಳು, ಬಸ್‌ ನಿಲ್ದಾಣಗಳಲ್ಲಿ ಉಗಿಯುವುದು ಇನ್ನು ನಿಂತಿಲ್ಲ. ಸಂಭ್ರಮದ ಕಾರ್ಯಕ್ರಮಗಳೂ ನಡೆಯುತ್ತಲೇ ಇವೆ. ಕೋವಿಡ್ ನಿಯಂತ್ರಣ ಕ್ರಮಗಳ ಬಗ್ಗೆ ಎಷ್ಟೇ ಅರಿವು ನೀಡಿದರೂ ಜನರು ಅರ್ಥಮಾಡಿಕೊಂಡು ಸ್ಪಂದಿಸುತ್ತಿಲ್ಲ. ಇದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ಇನ್ನು ಲಾಕ್‌ಡೌನ್‌ ಸಂದರ್ಭ ಜಿಲ್ಲಾಡಳಿತವೂ ತೆಗೆದು ಕೊಂಡ ಕಟ್ಟುನಿಟ್ಟಿನ ಕ್ರಮಗಳು ಈಗಿಲ್ಲ. ಹೀಗಾಗಿ ಜಿಲ್ಲೆಯ ಹಳ್ಳಿಗಳು ಮತ್ತು ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಕೋವಿಡ್ ವ್ಯಾಪಕವಾಗಿ ಹರಡುತ್ತಿದೆ. ಇದು ಕೆಲವು ಪ್ರಜ್ಞಾವಂತರ ನಿದ್ದೆಗೆಡಿಸಿದ್ದು, ಅವರೇ ಇದೀಗ ಸಾಮಾಜಿಕ ಜಾಲತಾಣಗಳ ಮೂಲಕ ಸ್ವಯಂ ಲಾಕ್‌ಡೌನ್‌ ಮಂತ್ರ ಜಪಿಸುತ್ತಿದ್ದಾರೆ.

ಕೋವಿಡ್‌ ನಿಯಂತ್ರಣಕ್ಕೆ ಜಿಲ್ಲಾಡಳಿತ ಕ್ರಮ ವಹಿಸುತ್ತಿದೆ. ಶುಭ ಕಾರ್ಯಕ್ರಮ ಮಾಡುವುದು ಕಂಡು ಬಂದರೆ ಕಠಿಣ ಕ್ರಮ ವಹಿಸುತ್ತೇವೆ. ಹಳ್ಳಿಗಳಲ್ಲಿ ಕೋವಿಡ್ ತಡೆ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಲಾಗುವುದು. ನಗರ ಪ್ರದೇಶಗಳಿಗೂ ವಿಶೇಷ ಒತ್ತು ನೀಡುತ್ತೇವೆ. ಕೋವಿಡ್ ತಡೆಗೆ ಸಾರ್ವಜನಿಕರ ಸಹಕಾರವೇ ಮುಖ್ಯ. – ನಿತೇಶ್‌ ಪಾಟೀಲ್‌, ಜಿಲ್ಲಾಧಿಕಾರಿ, ಧಾರವಾಡ

 

-ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next