Advertisement

ಸ್ಮಾರ್ಟ್‌ಕಾರ್ಡ್‌, ಪಾಸ್‌ ಬಗ್ಗೆ ಚಿಂತನೆ

11:30 AM Aug 18, 2017 | Team Udayavani |

ಬೆಂಗಳೂರು: ಇಂದಿರಾ ಕ್ಯಾಂಟೀನ್‌ ಜಾರಿಯಾದ ಒಂದು ದಿನದಲ್ಲಿಯೇ ತಿಂಗಳ ಕಾರ್ಡ್‌ಗೆ ( ಪಾಸ್‌)ಬೇಡಿಕೆ ಬಂದಿದ್ದು, ಈ ಕುರಿತು ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲು ಬಿಬಿಎಂಪಿ ನಿರ್ಧರಿಸಿದೆ. ಇಂದಿರಾ ಕ್ಯಾಂಟೀನ್‌ ಮೊದಲ ದಿನ ಬಹುತೇಕ ಕ್ಯಾಂಟೀನ್‌ಗಳಿಗೆ ಭಾರಿ ಸಂಖ್ಯೆಯಲ್ಲಿ ಜನರು ಭೇಟಿ ನೀಡಿದ್ದರು. ಈ ವೇಳೆ ಆಹಾರ ಕೊರತೆ ಉಂಟಾಗಿ ಹಲವರು ಬೇಸರದಿಂದ ಹಿಂತಿರುಗಿದ ಪ್ರಸಂಗ ನಡೆದಿವೆ. 

Advertisement

ಕ್ಯಾಂಟೀನ್‌ಗಳ ಪರಿಶೀಲನೆಗೆಂದು ಬಂದಿದ್ದ ಬಿಬಿಎಂಪಿ ಆಯುಕ್ತರಿಗೆ ಆಟೋ ಹಾಗೂ ಕಾರು ಚಾಲಕರು ತಿಂಗಳ ಕಾರ್ಡ್‌ ಅಥವಾ ಪಾಸ್‌ ವ್ಯವಸ್ಥೆ ಮಾಡುವಂತೆ ಸಲಹೆ ನೀಡಿದ್ದಾರೆ. “ನಾವು ನಿರಂತರವಾಗಿ ಕ್ಯಾಂಟೀನ್‌ಗಳಿಗೆ ಬರುವವರು. ಹೀಗಾಗಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಪಾಸ್‌ ಅಥವಾ ಸ್ಮಾರ್ಟ್‌ಕಾರ್ಡ್‌ ನೀಡಬೇಕು. ಇದಕ್ಕೆ ನಿಗದಿಪಡಿಸಿದ ಹಣ ಪಾವತಿಸುತ್ತೇವೆ,’ ಎಂದು ಮನವಿ ಮಾಡಿಕೊಂಡಿದ್ದಾರೆ. 

ಈ ಕುರಿತು “ಉದಯವಾಣಿ’ಗೆ ಮಾಹಿತಿ ನೀಡಿದ ಆಯುಕ್ತರು, “ಈ ಬಗ್ಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಮೊದಲು ವ್ಯವಸ್ಥೆ ಸುಗಮವಾಗಿ ಸಾಗಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಆ ನಂತರದಲ್ಲಿ ಇಂತಹ ಪ್ರಯೋಗಗಳಿಗೆ ಮುಂದಾಗುತ್ತೇವೆ. ಇಂತಹದೊಂದು ಪಾಸ್‌ ಅಥವಾ ಸ್ಮಾರ್ಟ್‌ಕಾರ್ಡ್‌  ಪರಿಚಯಿಸುವುದರಿಂದ ಜನರು ಸಾಲಿನಲ್ಲಿ ನಿಂತು ಟೋಕನ್‌ ಪಡೆಯುವುದು ತಪ್ಪುತ್ತದೆ,’ ಎಂದು ಅವರು ತಿಳಿಸಿದರು. 

ಜತೆಗೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ಮೊದಲ ದಿನ ಉಂಟಾಗಿರುವ ಗೊಂದಲ, ಅವ್ಯವಸ್ಥೆಗಳ ಕುರಿತು ಪ್ರತಿಕ್ರಿಯಿಸಿರುವ ಆಯುಕ್ತರು, “ಪಾಲಿಕೆಗೆ ಹೋಟೆಲ್‌ ಸೇವೆ ಮೊದಲನೆಯದಾಗಿದೆ. ಇದರೊಂದಿಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ನಿರ್ಮಾಣವಾಗಬೇಕಿದ್ದ ಅಡುಗೆ ಮನೆಗಳು ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ನಿಗದಿತ ಅವಧಿಯಲ್ಲಿ ಎಲ್ಲ ಕ್ಯಾಂಟೀನ್‌ಗಳಿಗೆ ಆಹಾರ ಸಾಗಿಸಲು ಸಾಧ್ಯವಾಗುತ್ತಿಲ್ಲ,’ ಎಂದರು. 

ಅಡುಗೆ ಮನೆ ನಿರ್ಮಾಣಕ್ಕೆ ಎದುರಾಗಿರುವ ತೊಂದರೆಗಳ ಕುರಿತು ಶುಕ್ರವಾರ ಅಧಿಕಾರಿಗಳ ಸಭೆ ಕರೆಯಲಾಗಿದ್ದು, ಶೀಘ್ರ ಎಲ್ಲ ಗೊಂದಲಗಳನ್ನು ನಿವಾರಿಸಲಾಗುವುದು. ಇದರೊಂದಿಗೆ ಯಾವ ಕ್ಯಾಂಟೀನ್‌ಗಳಿಗೆ ಆಹಾರ ತಲುಪಿಸಲು ಸಾಧ್ಯವಾಗುತ್ತಿಲ್ಲ ಎಂಬ ಬಗ್ಗೆಯೂ ಮಾಹಿತಿ ನೀಡುವಂತೆ ತಿಳಿಸಲಾಗಿದೆ. ಅದೆಲ್ಲದರ ನಡುವೆಯೂ ಗುರುವಾರ ಸುಮಾರು 1 ಲಕ್ಷ ಜನರಿಗೆ ಆಹಾರ ಪೂರೈಸಲಾಗಿದೆ ಎಂದು ತಿಳಿಸಿದರು. 

Advertisement

ಪ್ರತಿ ಕ್ಯಾಂಟೀನ್‌ಗೆ 4 ಸಿಸಿಟಿವಿ ಕ್ಯಾಮೆರಾ
ಇಂದಿರಾ ಕ್ಯಾಂಟೀನ್‌ಗಳಲ್ಲಿ ಸುರಕ್ಷತೆ ಹಾಗೂ ಸ್ವತ್ಛತೆ ಕಾಪಾಡುವ ಉದ್ದೇಶದಿಂದ ಪ್ರತಿ ಕ್ಯಾಂಟೀನ್‌ನಲ್ಲಿ 4 ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಗೆ ಬಿಬಿಎಂಪಿ ನಿರ್ಧರಿಸಿದೆ. ಕ್ಯಾಂಟೀನ್‌ ಒಳಭಾಗದಲ್ಲಿ ಎರಡು ಕ್ಯಾಮೆರಾ ಹಾಗೂ ಹೊರ ಭಾಗದಲ್ಲಿ ಎರಡು ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಇದರೊಂದಿಗೆ ಮುಂದಿನ ದಿನಗಳಲ್ಲಿ ಕ್ಯಾಂಟೀನ್‌ನೊಳಗೆ ಎಲ್‌ಇಡಿ ಟವಿ ಅಳವಡಿಸಲಾಗುವುದು ಎಂದು ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next