Advertisement

ಅಡಿಕೆ ಬೆಳೆಗಾರರ ನಿದ್ದೆ ಕೆಡಿಸಿದ ಕಳ್ಳರು

11:17 PM Apr 23, 2019 | mahesh |

ಬಜಪೆ: ಪಡುಪೆರಾರ ಗ್ರಾ. ಪಂ. ವ್ಯಾಪ್ತಿಯ ಕತ್ತಲ್‌ ಸಾರ್‌ ಪ್ರದೇಶದಲ್ಲಿ ಕಳೆದ ತಿಂಗಳು ಮೂರು ಕಡೆಗಳಲ್ಲಿ ಅಡಿಕೆ ಕಳ್ಳತನವಾಗಿದ್ದು, ಬೆಳೆಗಾರರ ನಿದ್ದೆಗೆಡಿಸುವಂತಾಗಿದೆ. ಈ ಭಾಗದಲ್ಲಿ ಸುಮಾರು 50 ಮಂದಿ ಅಡಿಕೆ, ತೆಂಗು ಬೆಳೆಗಾರರಿದ್ದು, ಆದಾಯಕ್ಕಾಗಿ ಇದನ್ನೇ ಅವಲಂಭಿಸಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶವಾದ್ದರಿಂದ ಬೆಳೆಗಾರರು ಮನೆ ಹಿತ್ತಲಿನಲ್ಲಿ ಅಡಿಕೆಯನ್ನು ಬೆಳೆದು, ಅಂಗಳದಲ್ಲಿ ಒಣಗಿಸಲು ಹಾಕುತ್ತಾರೆ. ಆದರೆ ಮೂರು ಕಳವು ಪ್ರಕರಣಗಳಲ್ಲೂ ದಾಸ್ತುನು ಕೋಣೆಯಿಂದಲೇ ಸುಮಾರು ಮೂರು ಲಕ್ಷ ರೂ. ಮೌಲ್ಯದ ಅಡಿಕೆ ಕಳವಾಗಿರುವು ದಾಗಿ ಇಬ್ಬರು ಬಜಪೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Advertisement

ಗೋಣಿ ಚೀಲದಲ್ಲಿ ತುಂಬಿಸಿಟ್ಟಿದ್ದ 10 ಗೋಣಿ ಸಿಪ್ಪೆಯಿದ್ದ ಅಡಿಕೆಯನ್ನು ತಿಂಗಳ ಹಿಂದೆ ಕಳವು ಮಾಡಲಾಗಿದ್ದು, ಅನಂತರ 9 ಗೋಣಿ ಸಿಪ್ಪೆ ಸುಲಿದ ಪ್ರಥಮ ದರ್ಜೆಯ ಅಡಿಕೆಯನ್ನು ಕಳವು ಮಾಡಲಾಗಿದೆ. ಇತ್ತೀಚೆಗಷ್ಟೇ 26 ಗೋಣಿ ಸಿಪ್ಪೆಯಿದ್ದ ಅಡಿಕೆಯನ್ನು ದಾಸ್ತಾನು ಕೋಣೆ, ಅಂಗಳದಲ್ಲಿ ಕೂಡಿಟ್ಟ ಅಡಿಕೆಯನ್ನು ಕಳವು ಮಾಡಲಾಗಿತ್ತು. ಇತ್ತೀಚೆಗೆ ಸುರಿದ ಮಳೆಯ ಕಾರಣಕ್ಕೆ ಅಂಗಳದ ಮೂಲೆಯಲ್ಲಿ ಗೋಣಿಯಲ್ಲಿ ಹಾಕಿ ಅಡಿಕೆಯನ್ನು ಸಂಗ್ರಹಿಸಡಲಾಗಿತ್ತು. ಈ ಭಾಗದಲ್ಲಿ ಇದುವರೆಗೆ ಸಣ್ಣ ಪುಟ್ಟ ಕಳ್ಳತನವಾಗಿದ್ದು, ಇದೇ ಮೊದಲ ಬಾರಿಗೆ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಕಳವಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ.

ಸ್ಥಳೀಯರ ಕೈವಾಡದ ಶಂಕೆ
ಅಡಿಕೆ ಕೊಡಿಟ್ಟ ದಾಸ್ತಾನು ಕೋಣೆಯ ಬಗ್ಗೆ ತಿಳಿದವರೇ ಈ ಕಳ್ಳತನದಲ್ಲಿ ಭಾಗಿಯಾಗಿದ್ದಾರೆ. ಕೆಲವೆಡೆ ಅಡಿಕೆ ದಾರಿಯಲ್ಲಿ ಬಿದ್ದಿರುವುದರಿಂದ ಗೋಣಿ ಚೀಲವನ್ನು ಕಳ್ಳರು ತಲೆ ಮೇಲೆ ಹೊತ್ತು ಕೊಂಡು ಹೋಗಿದ್ದಾರೆ. ಇದೊಂದು ತಂಡದ ಕೆಲಸವಾಗಿರಬಹುದು ಎಂದು ಶಂಕಿಸಲಾಗಿದೆ. ಹೆಚ್ಚಿನ ಕಳವು ಮಧ್ಯರಾತ್ರಿ ಅನಂತರ ನಡೆದಿದ್ದು, ಮನೆಯವರಿಗೆ ಬೆಳಗ್ಗೆ ಏಳುವಾಗಲೇ ಕಳವಿನ ಬಗ್ಗೆ ತಿಳಿದು ಬಂದಿದೆ. ಒಂದು ಮನೆಯವರು ರಾತ್ರಿ ಎದ್ದು ದೀಪ ಬೆಳಗಿದ ಕಾರಣ ಕಳ್ಳರು ಎರಡು ಗೋಣಿ ಚೀಲ ಬಿಟ್ಟು ಓಡಿದ್ದಾರೆ ಎನ್ನಲಾಗಿದೆ.

ರಾತ್ರಿ ಕಾಯುವ ಕಾರ್ಯ
ನಿರಂತರವಾಗಿ ಅಡಿಕೆ ಕಳವು ಪ್ರಕರಣ ನಡೆಯುತ್ತಿರುವುದರಿಂದ ಬೆಳೆಗಾರರಿಗೆ ರಾತ್ರಿ ಅಡಿಕೆ ಕಾಯುವ ಕಾರ್ಯ ಮಾಡುವಂತಾಗಿದೆ. ಈ ವರೆಗೆ ಬಜಪೆ ವ್ಯಾಪ್ತಿಯ ಪೊಲೀಸರು ಚುನಾವಣೆ ಕಾರ್ಯದಲ್ಲಿ ತೊಡಗಿದ್ದರಿಂದ ಕಳ್ಳರನ್ನು ಹಿಡಿಯುವ ಕಾರ್ಯ ನಡೆಯಲಿಲ್ಲ.

ಸಿಸಿ ಕೆಮರಾ ಅಳವಡಿಕೆಗೆ ಚಿಂತನೆ
ಈ ಪ್ರದೇಶದಲ್ಲಿ ಕೆಲವೆಡೆ ಸಿಸಿ ಕೆಮರಾ ಅಳವಡಿಸಲಾಗಿದೆ. ಇನ್ನೂ ಕೆಲವೆಡೆ ಅಳವಡಿಸಿದರೆ ಏನೇ ಘಟನೆ ಅದರೂ ತಿಳಿಯಬಹುದಾಗಿದೆ. ಇದರಿಂದ ಅಡಿಕೆ ಕಳ್ಳರನ್ನು ಹಿಡಿಯಬಹುದಾಗಿದೆ ಎನ್ನುತ್ತಾರೆ ಅಡಿಕೆ ಬೆಳೆಗಾರರು.

Advertisement

ಅಡಿಕೆ ಬೆಳೆಗಾರರು ಜಾಗೃತರಾಗಿ
ಕತ್ತಲ್‌ಸಾರ್‌ನಲ್ಲಿ ಆಡಿಕೆ ಕಳ್ಳತನದ ದೂರುಗಳು ಬಂದಿದ್ದು, ಚುನಾವಣೆ, ಕಟೀಲು ಜಾತ್ರೆಯ ಕರ್ತವ್ಯದಿಂದಾಗಿ ತನಿಖೆಗೆ ವಿಳಂಬವಾಗಿದೆ. ಇಂದಿನಿಂದ ಈ ಬಗ್ಗೆ ಹೆಚ್ಚು ಗಮನ ನೀಡಲಾಗುತ್ತದೆ. ಮೋಡ ಕವಿದ ವಾತಾವರಣ ಅಂಗಳದಲ್ಲಿ ಒಣಗಲು ಹಾಕಿದ ಅಡಿಕೆಯನ್ನು ಮೂಟೆ ಕಟ್ಟಿ ಡು ತ್ತಾರೆ. ಇದು ಕಳ್ಳರಿಗೆ ಸುಲಭದ ಹಾದಿಯಾಗಿದೆ.ರಾತ್ರಿ ಅಡಿಕೆ ಕಾಯಲು ಯಾರೂ ಇರುವುದಿಲ್ಲ. ಈ ಬಗ್ಗೆ ಅಡಿಕೆ ಬೆಳೆಗಾರರು ಕೂಡ ಜಾಗೃತರಾಗಬೇಕಾಗಿದೆ.
– ಪರಶಿವ ಮೂರ್ತಿ, ಇನ್‌ಸ್ಪೆಕ್ಟರ್‌, ಬಜಪೆ

ಸಿಸಿ ಕೆಮರಾ ಅಳವಡಿಸಲು ಮನವಿ
ಈ ಭಾಗದಲ್ಲಿ ಹೆಚ್ಚಿನ ಮಂದಿ ಅಡಿಕೆ, ತೆಂಗು ಬೆಳೆಯುತ್ತಿದ್ದಾರೆ. ಇದುವೇ ಎಲ್ಲರ ಜೀವನಾಧಾರ. ಗ್ರಾಮೀಣ ಪ್ರದೇಶವಾದ ಕಾರಣ ಜನ ಸಂದಣಿ ಕಡಿಮೆ. ಇಷ್ಟು ಪ್ರಮಾಣದಲ್ಲಿ ಅಡಿಕೆ ಕಳವಾಗಿರುವುದು ಪ್ರಥಮ. ಸಿಸಿ ಕೆಮರಾ ಆಳವಡಿಕೆ ಕುರಿ ತು ಬೆಳೆಗಾರರು ಚಿಂತನೆ ನಡೆಸಬೇಕಿದೆ. ಬಗ್ಗೆ ಪಂಚಾಯತ್‌ನ ಗಮನಕ್ಕೂ ತರಲಾಗಿದೆ.
– ಮುರಳಿ ಭಟ್‌,ಕೃಷಿಕರು

Advertisement

Udayavani is now on Telegram. Click here to join our channel and stay updated with the latest news.

Next