Advertisement

ಸುದ್ದಿಯಾಗಲು ಪರಿತಪಿಸುವವರ ನಡುವೆ ಸದ್ದಿಲ್ಲದೇ ಬಂದು ಹೋದವರು

05:53 PM Mar 23, 2019 | |

ಅಸಹಿಷ್ಣುತೆ, ಸಹಿಷ್ಣುತೆ
ಪತ್ರಕರ್ತರಿಗೆ ಸಮಾಜದಲ್ಲಿ ಆಗುತ್ತಿರುವ ಅನುಭವಗಳು ವಿಚಿತ್ರ ಮತ್ತು ವೈವಿಧ್ಯಗಳಿಂದ ಕೂಡಿರುತ್ತದೆ. ಎಷ್ಟೋ ಕಾರ್ಯಕ್ರಮಗಳಿಗೆ ಪತ್ರಕರ್ತರನ್ನು ಆಹ್ವಾನಿಸುತ್ತಾರೆ ಅಂದರೆ ಎಲ್ಲಿ ಕಾರ್ಯಕ್ರಮ ಎಂಬ ಬಗೆಗೆ ಮಾಹಿತಿ ಸಿಗುತ್ತದೆ. ಹಿಂದೆಲ್ಲ ‘ನಮಗೆ ಇನ್ವಿಟೇಶನ್‌ ಕೊಡಲಿಲ್ಲ’ ಎಂದು ‘ಗುರ್‌’ ಎನ್ನುವುದಿತ್ತು. ಈಗ ‘ಎಲ್ಲಿ ನಾಯಿ ಸತ್ತಿದೆ?’, ‘ಎಲ್ಲಿ ಮಂಗ ಸತ್ತಿದೆ’ ಎಂದು ನೋಡಬೇಕಾದ ಕಾಲಘಟ್ಟದಲ್ಲಿ ಇನ್ವಿಟೇಶನ್‌ ಯಾರು ಯಾರಿಗೆ ಕೊಡುವುದು? ಹೀಗಾಗಿ ‘ಗುರ್‌ಗುಟ್ಟುವಿಕೆ’ ಬೇರೆ ರೂಪದಲ್ಲಿ ಹೊರಹೊಮ್ಮುತ್ತಿರುವುದಿದೆ. ಯಾವುದಕ್ಕೇ ಆದರೂ ಇನ್ವಿಟೇಶನ್‌ ಕೊಡುವುದು ಕೊಡುವವನ ಹಕ್ಕು ಎಂಬುದನ್ನೂ ಮರೆತು ಇತರ ಸಂದರ್ಭಗಳಲ್ಲಿಯೂ ನಾವು ಮಾತನಾಡುತ್ತೇವೆ. ಕೆಲವು ಕಾರ್ಯ ಕ್ರಮಗಳಿ ಗಂತೂ ಗಂಟೆಗ‌ಟ್ಟಲೆ ಕಾದು ಸುದ್ದಿ ಮಾಡಬೇಕು. ಈ ಸಂದರ್ಭ ಪತ್ರಕರ್ತರ ಆಕ್ರೋಶ, ಕೋಪತಾಪಗಳೂ ಹೊರಹೊಮ್ಮುತ್ತಿರುತ್ತದೆ. ಅದರಲ್ಲೂ ಅವರವರ ಸೈದ್ಧಾಂತಿಕ ವಿಚಾರಗಳಿಗೆ ವಿರುದ್ಧವಾದ ಕಾರ್ಯ ಕ್ರಮವಾದರೆ ಸಂಘಟಕರಿಗೆ ಪತ್ರಕರ್ತರ ಅಸಹಿಷ್ಣುತೆ ದರ್ಶನ, ಇಲ್ಲವಾದರೆ ಸಹಿಷ್ಣುತೆ ದರ್ಶನ ಭಾಗ್ಯವೂ ಇರುತ್ತದೆ. ಈಗಂತೂ ಎಲ್ಲ ಸಮಾರಂಭಗಳಲ್ಲಿ ನೂರಾರು ಜನರು ವೀಡಿಯೋ ಚಿತ್ರೀಕರಿಸಿಕೊಳ್ಳುವುದು, ಮೊಬೈಲ್‌ ಮೂಲಕ ಚಿತ್ರ ತೆಗೆಯುವುದು ಸಾಮಾನ್ಯ. ಒಂದು ವೇಳೆ ಪತ್ರಕರ್ತರಿಗೆ ಆ ಚಿತ್ರ ಬೇಕಾದರೆ ಪರದಾಡಬೇಕಾದ ಸ್ಥಿತಿಯೂ ಇದೆ. ಆ ಚಿತ್ರ ಜಗತ್ತಿನಾದ್ಯಂತ ಹೋಗಿರುತ್ತದೆ, ಆದರೆ ಅದೇ ಊರಿನಲ್ಲಿರುವ ಪತ್ರಕರ್ತನಿಗೆ ಮಾತ್ರ ಸಿಕ್ಕಿರುವುದಿಲ್ಲ

Advertisement

‘ಉನ್ಮಾದ’ ಪತ್ರಕರ್ತರು, ಅಕಾಲ ವೃದ್ಧಾಪ್ಯ
ಬುದ್ಧಿವಂತರಲ್ಲದ ಕೆಲವರು ತಮ್ಮ ಸುದ್ದಿ ಬಂದಿಲ್ಲವೆಂದು ವಿಚಾರಿಸುತ್ತಲೇ ಇರುತ್ತಾರೆ. ಪತ್ರಕರ್ತರ ಪಾತ್ರ ವಹಿಸುವ ಕೆಲವರು ಮೇಲ್‌ ಮಾಡಿ ಸುಮ್ಮನೆ ಕುಳಿತಿದ್ದರೆ, ಇನ್ನೊಂದೆಡೆ ಪತ್ರಕರ್ತರು ‘ಉನ್ಮಾದಾವಸ್ಥೆ’ ಅನುಭವಿಸುತ್ತಿರುತ್ತಾರೆ. ಈ ‘ಇ-ಮೇಲ್‌’ ಈಗ ಪತ್ರಕರ್ತರಿಗೆ ‘ಬ್ಲ್ಯಾಕ್‌ ಮೇಲ್‌’ ದರ್ಶನಭಾಗ್ಯವನ್ನೂ ಮಾಡುತ್ತಿದೆ. ಈಗ ವಾಟ್ಸ್‌ಆ್ಯಪ್‌ ಬಂದ ಬಳಿಕ ವಾಟ್ಸ್‌ ಆ್ಯಪ್‌ನಲ್ಲಿ ಕಳಿಸಿದ್ದೇವೆ ಎಂದು ಹೇಳಿ ಫೋನ್‌ ಕಟ್ ಮಾಡುವ ಸ್ಥಿತಿ ಇದೆ. ಈ ವಾಟ್ಸ್‌ಆ್ಯಪ್‌ನ್ನು ನಿರಂತರವಾಗಿ ನೋಡುತ್ತ ಹೋದರೆ ಕಣ್ಣಿಗಂತೂ ಅಕಾಲ ವೃದ್ಧಾಪ್ಯ ಬರುವುದಂತೂ ನಿಶ್ಚಿತ. ಕಣ್ಣಿನ ಜತೆ ಇತರ ಅಂಗಗಳೂ ಅಕಾಲ ವೃದ್ಧಾಪ್ಯವನ್ನು ಅನುಭವಿಸುತ್ತವೆ. ನಿತ್ಯ ಹಲವು ಗಂಟೆ ವಾಟ್ಸ್‌ಆ್ಯಪ್‌ನಲ್ಲಿ ಕಾಲ ಕಳೆಯುವ ಜಗತ್ತಿನಾದ್ಯಂತ ಎಷ್ಟು ಜನರಿಗೆ ದೃಷ್ಟಿ ಸೌಭಾಗ್ಯ ದೃಷ್ಟಿ ದೌರ್ಭಾಗ್ಯವಾಗಿ ಪರಿಣಮಿಸುತ್ತಿದೆಯೋ ಗೊತ್ತಿಲ್ಲ, ಈಗ ಜಗತ್ತೇ ಎಲ್ಲರಿಗೆ ‘ಅಕಾಲ ವೃದ್ಧಾಪ್ಯ’ ತರುವ ತಂತ್ರದಲ್ಲಿ ನಿರತವಾಗಿದೆ. ಎಷ್ಟೇ ಜನರಿಗೆ ಅನಾರೋಗ್ಯವಾದರೂ 24×7 ಸೇವೆ ಸಲ್ಲಿಸುವ ಆಸ್ಪತ್ರೆಗಳು ಇವೆಯಲ್ಲ, ಈ ಶುಲ್ಕ ಭರಿಸಲು ವಿಮಾ ಯೋಜನೆಗಳೂ ಇವೆಯಲ್ಲ, ವಿಮಾ ಕಂತು ಕಟ್ಟುವುದೇ ಮೊದಲಾದ ಸೌಲಭ್ಯಗಳನ್ನು ದಕ್ಕಿಸಿಕೊಳ್ಳಲು ಆದಾಯ ಹೆಚ್ಚಿಸಿಕೊಳ್ಳುವ ತಂತ್ರಗಳೂ ಗೊತ್ತಲ್ಲ? ಇದೆಲ್ಲವನ್ನೂ ಎದುರಿಸಲು ಜನರೂ ಸಿದ್ಧರಿದ್ದಾರಲ್ಲ!

‘ಗ್ರಾಹಕ ದೇವೋಭವ’ದ ಕ್ಲೀಷೆ
ಕೆಲವು ಬುದ್ಧಿವಂತರಂತೂ ನಾವು ಸುದ್ದಿ ಕೊಟ್ಟದ್ದರಿಂದಲೇ ಪತ್ರಿಕೆ ನಡೆಯುತ್ತಿದೆ ಎಂದು ಹೇಳದಿದ್ದರೂ ಹಾಗೆ ನಡೆದುಕೊಳ್ಳುತ್ತಾರೆ. ಹಿಂದೆಲ್ಲ ಜಾಹೀರಾತು ಕೊಟ್ಟವರು ‘ಜಾಹೀರಾತು ಕೊಡುವವರು’ ಎಂಬ ಪೋಸ್‌ ಕೊಡುತ್ತಿದ್ದರು, ಈಗಲೂ ಕೊಡುತ್ತಾರೆನ್ನಿ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ನಾವು ನಿಮ್ಮ ಪತ್ರಿಕೆಯನ್ನು ಓದುವವರು’ ಎಂಬ ಪೋಸ್‌ ಕೊಡುವವರೂ ಇದ್ದಾರೆ. ಇದು ‘ಗ್ರಾಹಕ ದೇವೋ ಭವ’ ಕಾಲವಾದ ಕಾರಣ ಇದನ್ನೂ ತಪ್ಪೆನ್ನುವಂತಿಲ್ಲ. ಜಗತ್ತಿನ ಎಲ್ಲರೂ ಗ್ರಾಹಕರೇ, ಆದರೆ ಬಹುತೇಕ ಎಲ್ಲರೂ ಬಹುತೇಕ ಎಲ್ಲ ಗ್ರಾಹಕರನ್ನೂ ಯಾಮಾರಿಸುವ ಪ್ರವೃತ್ತಿ ತೋರಿಸುತ್ತಾದರೂ ‘ಗ್ರಾಹಕ ದೇವೋಭವ’ ಉಕ್ತಿಯನ್ನು ಬಿಡದೆ ಪಠಿಸುವ ಸ್ಥಿತಿ ಇದೆ, ಯಾಮಾರಿಸಿ ಬಚಾವಾಗಲು ಇದು ಅಸ್ತ್ರ. ಕೆಲವರದು ವಾಟ್ಸ್‌ಆ್ಯಪ್‌ನಲ್ಲಿ ಚಿತ್ರ, ಕಾಗದದಲ್ಲಿ ಸುದ್ದಿ, ಮೇಲ್‌ನಲ್ಲಿ ಸ್ಕ್ಯಾನ್‌ ಕಾಪಿ, ಫೋನ್‌ನಲ್ಲಿ ಕರೆ… ಇಂತಹ ನಾನಾ ಮುಖಗಳಿಗೆ ಹೊರತಾಗಿ ಸಾವಿರಾರು ಜನರು ಸೇರಿದರೂ ಮಾಧ್ಯಮಗಳಿಗೆ ಒಂದೇ ಒಂದು ಮಾಹಿತಿ ಹೋಗದೆ ಸುದ್ದಿಯೂ ಆಗದೆ ನಡೆಯುವ ಘಟನೆಗಳೂ ಇವೆ. ಇದಕ್ಕೊಂದು ಉದಾಹರಣೆ ಜ. 16ರಿಂದ 19ರ ವರೆಗೆ ಉಡುಪಿಯಲ್ಲಿ ನಡೆದ ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘದ (ಇಸ್ಕಾನ್‌) ಸಮಾವೇಶ.

ಪೆಪ್ಸಿಕೋಲಾದಿಂದ ಇಸ್ಕಾನ್‌ಗೆ
ಇಸ್ಕಾನ್‌ ವತಿಯಿಂದ ವೃಂದಾವನ, ಪುರಿ, ದ್ವಾರಕಾ ಹೀಗೆ ವಿವಿಧೆಡೆ ಸತ್ಸಂಗ ಯಾತ್ರೆ ನಡೆಸುವುದಿದೆ. ಇದೊಂದು ತೀರ್ಥಯಾತ್ರೆ ಇದ್ದಂತೆ. ನಾಲ್ಕು ವರ್ಷಗಳ ಹಿಂದೆ ಉಡುಪಿಯಲ್ಲಿ ಇಂತಹುದೇ ಒಂದು ಸಮಾರಂಭ ನಡೆದಿತ್ತು. ಈ ಬಾರಿ ಇಸ್ಕಾನ್‌ ಜಾಗತಿಕ ಸ್ತರದ ಆಡಳಿತ ಮಂಡಳಿ (ಗವರ್ನಿಂಗ್‌ ಬಾಡಿ ಕಮಿಷನ್‌) ಸದಸ್ಯ, ಭಕ್ತಿ ವೇದಾಂತ ಬುಕ್‌ ಟ್ರಸ್ಟ್‌ನ ಟ್ರಸ್ಟಿ, ಇಸ್ಕಾನ್‌ ಭಾರತದ ಅಧ್ಯಕ್ಷ ಶ್ರೀಗೋಪಾಲಕೃಷ್ಣ ಗೋಸ್ವಾಮಿ ಸ್ವಾಮೀಜಿಯವರು ನಾಲ್ಕು ದಿನ ಉಡುಪಿಯಲ್ಲಿ ಮೊಕ್ಕಾಂ ಇದ್ದರು. ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಸಮಾವೇಶ ನಡೆಯಿತು. ಸ್ವಾಮೀಜಿಯವರು ಮೂಲತಃ ದಿಲ್ಲಿಯವರು. ಹಿಂದಿನ ಹೆಸರು ಗೋಪಾಲಕೃಷ್ಣ ಖನ್ನಾ. ಫ್ರಾನ್ಸ್‌ ಮತ್ತು ಕೆನಡ ವಿ.ವಿ.ಗಳಲ್ಲಿ ಎರಡು ಎಂಬಿಎ ಪದವಿ ಗಳಿಸಿ ಅಮೆರಿಕದಲ್ಲಿ ಕೆಲವು ವರ್ಷ ಪೆಪ್ಸಿ ಕೋಲಾ ಕಂಪೆನಿಯ ಮಾರ್ಕೆಟ್ ಅನಾಲಿಸ್ಟ್‌ ಆಗಿದ್ದರು. 1968ರಲ್ಲಿ ಇಸ್ಕಾನ್‌ ಸ್ಥಾಪಕ ಶ್ರೀಪ್ರಭುಪಾದರ ಸಂಪರ್ಕಕ್ಕೆ ಬಂದು ಅವರಿಂದ ದೀಕ್ಷೆಯನ್ನು ಪಡೆದರು. ಇವರ ಪ್ರಸ್ತುತ ಕಾರ್ಯವ್ಯಾಪ್ತಿ ಭಾರತ, ದಕ್ಷಿಣ ಆಫ್ರಿಕಾ, ರಷ್ಯಾ. ನಮ್ಮ ನಮ್ಮ ಕಾರ್ಯವ್ಯಾಪ್ತಿ, ನಾವು ತೋರಿಸುವ ಪೋಸ್‌, ಇವರ ಕಾರ್ಯವ್ಯಾಪ್ತಿ, ಇವರ ಕಾರ್ಯಶೈಲಿಯನ್ನು ತುಲನೆ ಮಾಡಿದರೆ ಅಜಗಜಾಂತರ ಎನಿಸುತ್ತದೆ.

ಸ್ವಾಮೀಜಿ ಕೇಂದ್ರ ಸ್ಥಾನ ದಿಲ್ಲಿ. ಕಾರ್ಯಕ್ರಮವನ್ನು ಆಯೋಜಿಸಿದವರು ದಿಲ್ಲಿಯ ಇಸ್ಕಾನ್‌ನ ರಾಧಾ ಪಾರ್ಥಸಾರಥಿ ದೇವಸ್ಥಾನದವರು. ಗೋಪಾಲಕೃಷ್ಣ ಸ್ವಾಮೀಜಿಯವರಲ್ಲದೆ ಒಡಿಶಾ ಮೂಲದ ಇಬ್ಬರು ಸನ್ಯಾಸಿ ಶಿಷ್ಯರೂ ಆಗಮಿಸಿದ್ದರು.

Advertisement

ಆನೆಗಾತ್ರದ ಗೀತಾ ಪುಸ್ತಕ
ಶ್ರೀಕೃಷ್ಣಭಕ್ತಿಯ ಮಹತ್ವ ತಿಳಿಸಿದ ಗೋಪಾಲಕೃಷ್ಣ ಗೋಸ್ವಾಮಿಯವರು ಸದ್ಯವೇ ವಿಶ್ವದ ಅತಿ ದೊಡ್ಡ ಗಾತ್ರದ ಭಗವದ್ಗೀತಾ ಪುಸ್ತಕ ದಿಲ್ಲಿಯಲ್ಲಿ ಅನಾವರಣಗೊಳ್ಳಲಿದೆ ಎಂದು ಪ್ರಕಟಿಸಿದರು. ಇದರ ತೂಕವೇ 800 ಕೆ.ಜಿ., ಹೀಗೆ ಹೇಳುವುದಕ್ಕಿಂತ ಒಂದು ಆನೆ ಗಾತ್ರದಷ್ಟು, ಒಂದು ಕೊಠಡಿಯಷ್ಟು ದೊಡ್ಡದು ಎಂದರೆ ಅರ್ಥವಾದೀತು. ಇದು ಇಟಲಿಯಲ್ಲಿ ಮುದ್ರಣಗೊಂಡು ಈಗಾಗಲೇ ದಿಲ್ಲಿಗೆ ತಲುಪಿದೆ. ಇದು ಗಿನ್ನೆಸ್‌ ದಾಖಲೆಗೆ ಸೇರುವ ಸಾಧ್ಯತೆಯೂ ಇದೆ. ಕಾರ್ಯಕ್ರಮದಲ್ಲಿ ಒಂದು ದಿನ ಶ್ರೀಅದಮಾರು ಮಠದ ಕಿರಿಯ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿಯವರೂ ಹೋಗಿದ್ದರು. ಇವರು ಎಂಜಿನಿಯರಿಂಗ್‌ ಪದವೀಧರರಾದ ಕಾರಣ ಬಂದ ಪ್ರತಿನಿಧಿಗಳಿಗೆ ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಉಪನ್ಯಾಸ ನೀಡಿದರು. ದಿಲ್ಲಿ ಕಾರ್ಯಕರ್ತ ಸರ್ವಸಾಕ್ಷಿ ಪ್ರಭು ಅವರು ಮಧ್ವಾಚಾರ್ಯರ ಕುರಿತು ಬರೆದ ಪುಸ್ತಕವನ್ನು ಗೋಪಾಲಕೃಷ್ಣ ಸ್ವಾಮೀಜಿ ಬಿಡುಗಡೆಗೊಳಿಸಿದರು.

ಉಡುಪಿಗೆ ಬಂದ ದಿಲ್ಲಿ ಅಡುಗೆ ಭಟರು
ಈ ಕಾರ್ಯಕ್ರಮಕ್ಕೆ ತಿಂಗಳುಗಟ್ಟಲೆ ಸಿದ್ಧತೆ ನಡೆದಿರುತ್ತದೆ. ನಂಬಿದರೆ ನಂಬಿ ಬಿಟ್ಟರೆ ಬಿಡಿ ಈ ನಾಲ್ಕು ದಿನಗಳ ಸಮಾವೇಶಕ್ಕೆ ಅಡುಗೆ ಕಲೆಗೆ ಹೆಸರಾದ ಉಡುಪಿಗೆ ಅಡುಗೆ ತಯಾರಿಸಲು ದಿಲ್ಲಿಯಿಂದ ಸುಮಾರು 30 ಜನರು ಬಂದಿದ್ದರು. ಇಸ್ಕಾನ್‌ನ ಎಲ್ಲಿಯೇ ಆದರೂ ಅದರ ಆಹಾರದ ರುಚಿಯೇ ಬೇರೆ. ಇಸ್ಕಾನ್‌ನ್ನು ಒಪ್ಪದೆ ಇರುವವರಾದರೂ ಇದನ್ನು ಒಮ್ಮೆಯಾದರೂ ಹೋಗಿ ಪರೀಕ್ಷಿಸುವುದು ಉತ್ತಮ. ಅವರೆಂದೂ ಊಟ ಎನ್ನುವುದಿಲ್ಲ, ಬದಲಾಗಿ ‘ಪ್ರಸಾದ’ ಎನ್ನುತ್ತಾರೆ. ಇಸ್ಕಾನ್‌ನಲ್ಲಿ ಅಡುಗೆ ಮಾಡುವವರು ‘ದೇವರಿಗೆ ನೈವೇದ್ಯ’ಕ್ಕೆಂದು ಭಾವಿಸಿ ಮಾಡುವವರಂತೆ. ಉಳಿದ ಕಡೆಯೂ ಹೀಗೆಯೇ ಇತ್ತು ಎನ್ನಿ. ಆದರೆ ಈ ಭಾವನೆ ಕಡಿಮೆಯಾಗಿ, ದೇವರೂ ನೆನಪು ಹೊಗಿ ‘ನಮ್ಮ ಊಟಕ್ಕೆ’ ಅಡುಗೆ ತಯಾರಿಸುವ ಕಲ್ಪನೆ ಬಂದಿದೆ, ಹೀಗಾದಾಗ ದೇವರಿಗೆ ನೈವೇದ್ಯ ಮಾಡುವುದೂ ಯಾಂತ್ರಿಕವಾಗುತ್ತದೆ, ಆಗಿದೆ ಕೂಡ.

ಇವರ ಸಂಚಾರೀ ಪೊಲೀಸಿಂಗ್‌!
ಸಮಾವೇಶಕ್ಕೆ ಬಂದವರಲ್ಲಿ ಸುಮಾರು 2,000 ಭಕ್ತರು ದಿಲ್ಲಿಯವರು, ಸುಮಾರು 3,000 ಜನರು ಕರಾವಳಿ, ಕರ್ನಾಟಕ ಸೇರಿದಂತೆ ದೇಶದ ಇತರೆಡೆ ಮತ್ತು ವಿದೇಶಗಳವರು ಇದ್ದರು. ಇವರೆಲ್ಲರೂ ಉನ್ನತ ಸ್ತರದ ಶಿಕ್ಷಿತರು. ಸುಮಾರು ಮುನ್ನೂರು ಕಾರ್ಯಕರ್ತರು ಇದರಲ್ಲಿ ತೊಡಗಿಕೊಂಡಿದ್ದರು, ಇವರಲ್ಲಿಯೂ ಹೊರಗಿನವರ ಪಾಲು ಬಲು ದೊಡ್ಡದು, ವಿದೇಶದವರೂ ಇದ್ದರು. ಈ ಕಾರ್ಯಕರ್ತರು ಅವರ ಪ್ರತಿನಿಧಿಗಳಾಗಿ ಬರುವವರಿಗೆ ಸಂಚಾರಿ ಪೊಲೀಸರ ಕೆಲಸವನ್ನೂ ಮಾಡುತ್ತಾರೆ, ನಗರದ ವಿವಿಧ ಜಂಕ್ಷನ್‌ಗಳಲ್ಲಿ ನಿಂತು ಯಾವ ಕಡೆಗೆ ಹೋಗಬೇಕೆಂದು ನಿರ್ದೇಶನ ನೀಡುತ್ತಾರೆ.

ವಿಚಿತ್ರವೆಂದರೆ ಸ್ಥಳೀಯ ಸಂಘಟಕರಾಗಲೀ, ಹೊರಗಿನಿಂದ ಬಂದ ಸಂಘಟಕರಾಗಲೀ ಯಾವುದೇ ಮಾಧ್ಯಮಗಳಿಗೆ ಮಾಹಿತಿ ತಿಳಿಸಲಿಲ್ಲ. ಮಾಧ್ಯಮಗಳಿಗೆ ತಿಳಿಸಿದ್ದರೆ 800 ಕೆ.ಜಿ. ತೂಕದ ಗೀತಾ ಪುಸ್ತಕದ ಸುದ್ದಿ ಆಕರ್ಷಕವಾಗಿ ರಾರಾಜಿಸುತ್ತಿತ್ತು. ಆ ಸಂಘಟಕರಿಗೆ ಇದನ್ನು ಸುದ್ದಿ ಮಾಡಬೇಕೆಂಬ ಕಾರ್ಯಕ್ರಮ ಎಂದಾಗಲೀ, ಸುದ್ದಿ ಆಗಿ ಹೀರೋಗಳಾಗಬೇಕೆಂಬ ವಾಂಛೆಯಾಗಲೀ ಮೂಡದೆ ಇದ್ದದ್ದು ಅಚ್ಚರಿ. ಹೀಗೆ ಅನೇಕ ಸಂಘಟನೆಗಳು ದೇಶಾದ್ಯಂತ, ಜಗತ್ತಿನಾದ್ಯಂತ ಇವೆ. ಆದರೆ ಸ್ಥಳೀಯವಾಗಿ ಉದಾಹರಣೆಗಳು ಸಿಕ್ಕಿದರೆ ಅವರಿಗೊಂದು ಸಲಾಮ್‌.

ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next