Advertisement

ಅವರು ನನ್ನ ಪ್ರಜ್ಞೆಯಲ್ಲಿ ಸೇರಿ ಹೋಗಿದ್ದಾರೆ !

06:10 AM Sep 24, 2017 | Team Udayavani |

ಮುಂಗಾರು ಮಳೆ’ ಸಿನೆಮಾ ಬಿಡುಗಡೆಯಾದ ಹೊಸದು. ಅದೇ ಸಂದರ್ಭದಲ್ಲಿ ಜಯಂತ ಕಾಯ್ಕಿಣಿ ಅವರ ಪುಸ್ತಕ ಬಿಡುಗಡೆ  ವರ್ಲ್ಡ್ ಕಲ್ಚರ್‌ ಲೈಬ್ರೆಯಲ್ಲಿ.  ಅಲ್ಲಿಗೆ ತೇಜಸ್ವಿ ಬಂದಿದ್ದರು. ವಿಷಯ ಗೊತ್ತಾಯ್ತು. ನಾನು ಯಾವುದೋ ಶೂಟಿಂಗ್‌ ಮುಗಿಸಿ ಬಂದಿದ್ದರಿಂದ ಬಟ್ಟೆ ಕೊಳೆಯಾಗಿತ್ತು. ಪಂಚೆ ಸುತ್ತಿಕೊಂಡು ಹೋದೆ. ಜನಜಂಗುಳಿ. ಬೀದಿಯಲ್ಲಿ ಹೋಗೋರು, “ಏನ್‌ ಸಾರ್‌, ಪಂಚೆ ಮೇಲೆ ಬಂದಿದ್ದೀರಾ?’ ಅಂದರು.  ಗೇಟ್‌ ಹತ್ತಿರ, “ಸಾರ್‌’ ಅಂತ ಫೋಟೋ ತೆಗೆಸಿಕೊಂಡರು. ಭಯ ಆಯ್ತು.  ತೇಜಸ್ವಿ ವೇದಿಕೆ ಮೇಲೆ ಕೂತಿದ್ದಾರೆ. ನೋಡಿದರೆ ಏನಂದುಕೊಳ್ಳಲ್ಲ ಅಂತ ನನ್ನ ಮನಸ್ಸು ಮಿಡುಕಾಡಿತು. ನಾನು ಯಾರು ಅನ್ನೋದು ಗೊತ್ತಿಲ್ಲ ತೇಜಸ್ವಿ ಅವರಿಗೆ. ಆದರೂ ಮನಸ್ಸು ಇವನ್ನೆಲ್ಲ ಇಷ್ಟಪಡ್ತಿಲ್ಲ. ನಾನು ಅಷ್ಟೆಲ್ಲಾ ಇಷ್ಟ ಪಡೋ ಬರಹಗಾರನ ಮುಂದೆ ಈ ಫೋಟೋ ಸೆಷನ್ನು, ಪ್ರಚಾರವೆಲ್ಲÉ ಸಣ್ಣದು ಅನಿಸಿಬಿಟ್ಟಿತು. ಅವರಿರಬೇಕಾದರೆ ಇದಾಗಬಾರದು ಅಂತ ತಪ್ಪಿಸಿಕೊಂಡು ಬಂದೆ.  
ಕಾಲ ಪ್ರಾಬ್ಲಿಮ್ಮಾಗಿತ್ತೋ ಏನೋ, ಕಾಲು ಕೆರೆದುಕೊಳ್ಳುತ್ತ ವೇದಿಕೆ ಮೇಲೆ ಕೂತಿದ್ದ, ಎಲೆಯಡಿಕೆ ಕೆಂಪು ಬಾಯಿಯ ತೇಜಸ್ವಿ ಪಟ ನನ್ನ ಮನಸ್ಸಿನ ಗೋಡೆಯ ಮೇಲೆ ಈಗಲೂ ನೇತು ಹಾಕಿಕೊಂಡಿದ್ದೀನಿ. 
.
ಈ ತೇಜಸ್ವಿ ಸಿಕ್ಕಿದ್ದು ಪುಸ್ತಕ ರೂಪದಲ್ಲಿ. ಆಗ ಧಾರವಾಡದಲ್ಲಿ 9ನೆಯ ಕ್ಲಾಸ್‌ ಓದುತ್ತಾ ಇದ್ದೆ. ನನ್ನ ಅಕ್ಕನಿಗೆ ಕರ್ವಾಲೋ 65 ಮಾರ್ಕ್ಸ್ ಟೆಕ್ಸ್ಟ್ ಆಗಿತ್ತು. ಒಂಬತ್ತು, ಹತ್ತನೆಯ ಕ್ಲಾಸಿನ ಏಜ್‌ ಗ್ರೂಪ್‌ ಇದೆಯಲ್ಲ ಇದೊಂಥರ ವಿಚಿತ್ರ. ಆಗಿನ ಓದುಗಳು ಜ್ಞಾನದ ಪಿಲ್ಲರ್‌. ಎಲ್ಲವೂ ಮೆದುಳಲ್ಲಿ ಹೆಪ್ಪುಗಟ್ಟುತ್ತೆ. ಆವಾಗೆಲ್ಲ ಯಾರು ಬರೆದಿದ್ದಾರೆ, ಏನು ಬರೆದಿದ್ದಾರೆ ಅನ್ನೋದು ಮುಖ್ಯ ಆಗ್ತಿರಲಿಲ್ಲ. ಒಟ್ಟಾರೆ ಓದುತ್ತ ಇರೋದು. ನಾನು ಸಿಕ್ಕಿದ್ದನ್ನೆಲ್ಲ ಕೆರೆದು, ಕೆರೆದು ಓದೋದನ್ನು ಶುರುಮಾಡಿಕೊಂಡಿದ್ದರಿಂದ, ತುಷಾರದಲ್ಲಿ ಕಾದಂಬರಿಯಾಗಿ ಬಂದ ಕರ್ವಾಲೋನ ಬಿಟ್ಸ್‌ ಅಂಡ್‌ ಪೀಸಸ್‌ನಲ್ಲಿ ಒಂದಷ್ಟು ಓದಿಕೊಂಡಿದ್ದೆ.  ಹಿಡಿ ಹಿಡಿಯಾಗಿ ಸಿಕ್ಕಿದ್ದು ಅಕ್ಕನಿಗೆ ಟೆಕ್ಸ್ಟ್ ಆಗಿದ್ದಾಗ. ಧಾರವಾಡದ ಮನೆಯಲ್ಲಿ ಕೂತು ಮೂರು ನಾಲ್ಕು ಗಂಟೇಲಿ ಮುಗಿಸಿಬಿಟ್ಟೆ. ಅದೊಂಥರ ಡಾಕ್ಯುಮೆಂಟರಿ ಸ್ಟೈಲ್‌ನಲ್ಲಿ, ಕುತೂಹಲವಾಗಿ ಬರೆದ ಬರಹ. ಸಂಬಂಧಗಳ ಮೇಲಿನದ್ದಲ್ಲ. ನೇಚರ್‌ ಮೇಲಿನ ಬರಹ. ಎಮೋಷನ್‌ಗಳು ಇರಲಿಲ್ಲ,  ಹೀಗೂ ಬರೆಯಬಹುದಲ್ಲ ಅನಿಸಿ, ಎರಡು, ಮೂರು ತಿಂಗಳಿಗೊಮ್ಮೆ ಮತ್ತೆ ಮತ್ತೆ ಮರುಓದುಗಳು ಆದವು.  

Advertisement

ಆ ಹೊತ್ತಿಗೆ “ಲಂಕೇಶ್‌ ಪತ್ರಿಕೆ’ ಹುಚ್ಚಿತ್ತು. ಅಲ್ಲಿ ಅನಂತಮೂರ್ತಿ, ತೇಜಸ್ವಿ ಅವರ ಹೆಸರುಗಳು ಆಗಾಗ ಹಾಜರಾಗುತ್ತಿದ್ದವು. ಹದಿನೈದು ದಿನಕ್ಕೆ ಎರಡು ಸಾರಿಯಾದರೂ ಕೋಟ್‌ ಮಾಡೋರು. ಹೆಸರುಗಳನ್ನು ಓದುತ್ತ¤, ಓದುತ್ತ ಮನಸಲ್ಲಿ  ರಿಜಿಸ್ಟ್ರೆ ಆಗಿತ್ತು. ಮನೆಯಲ್ಲಿ  ನಿಗೂಢ ಮನುಷ್ಯರು ಪುಸ್ತಕದ ಬಗ್ಗೆ ಆಗಾಗ ಮಾತನಾಡಿಕೊಳ್ಳುತ್ತಿದ್ದರು.  ಪಿಯುಸಿಗೆ ಬಂದ ಮೇಲೆ ಹೆಸರು  ಹಿಡಿದು ಓದೋಕೆ ಶುರುಮಾಡಿದೆ. ತೇಜಸ್ವಿ ಪುಸ್ತಕಗಳಿಗಾಗಿ ಶಿವಮೊಗ್ಗಕ್ಕೆ ಹೋಗುತ್ತಿದ್ದೆ.    

ಡಿಗ್ರಿಯಲ್ಲಿ ದ. ರಾ. ಬೇಂದ್ರೆ ಅವರ ಸಖೀಗೀತ  ಪಠ್ಯದಲ್ಲಿ ಇತ್ತು. ಬೇಗ ಅರ್ಥವಾಗುತ್ತಿರಲಿಲ್ಲ ಬೇಂದ್ರೆ. ವಕ್ಯಾಬುಲರಿ ಇರ್ತಿರಲಿಲ್ಲ. ಕಷ್ಟ ಪಡಬೇಕಿತ್ತು. ಇಂಥ ಸಂದರ್ಭದಲ್ಲಿ ಗೋಲಿಯಾಡುವ ಸಲೀಸಲ್ಲೇ, ತುಂಬಾ ಸಿಂಪಲ್ಲಾಗಿ ಹೇಳಿಕೊಂಡು ಹೋಗೋ ತೇಜಸ್ವಿ  ಇಷ್ಟವಾಗಿಬಿಟ್ಟಿದ್ದರು. ಓದುವ ರುಚಿ ಅಂತಾರಲ್ಲ ಅದು ಹುಟ್ಟಿದ್ದೇ ಆವಾಗ.  ಯಾವುದೋ ಗೊತ್ತಿಲ್ಲದ ಊರಲ್ಲಿ ಇಡ್ಲಿ ಚಟ್ನಿ ಚೆನ್ನಾಗಿರುತ್ತೆ ಅಂದಾಗ  ಮನಸ್ಸು ಮರೆಯೋದೆ ಇಲ್ವಲ್ಲ . ಹಾಗೇ ತೇಜಸ್ವಿ ಆದರು. ಆ ವಯಸ್ಸಲ್ಲಿ, ತೇಜಸ್ವಿ ಬರೆಯೋದೆಲ್ಲ ನನಗೊಬ್ಬನಿಗೆ, ನನಗಾದಷ್ಟು  ಅಕ್ಕನಿಗೂ ಅರ್ಥವಾಗೋಲ್ಲ ಅಂತೆಲ್ಲ ಅನಿಸಿ ಬಿಡೋದು. ಆಮೇಲಾಮೇಲೆ ತುಂಬಾನೆ ಪುಸ್ತಕಗಳ ಬೆನ್ಹತ್ತಿದೆ.  “ವಿಮರ್ಶೆ ವಿಮರ್ಶೆ’ಯನ್ನ ಹುಡುಕಿ  ಓದಿದೆ. ಡಿಗ್ರಿಯಲ್ಲಿ ತೇಜಸ್ವಿಯಂತೆ ಕಾಡಿದ್ದು ಕುಸುಮಬಾಲೆ. ಅದರ ಸುಮಾರು ಚಾಪ್ಟರ್‌ಗಳು ಬಾಯಲ್ಲೇ ಕೂತವು.  ಹೀಗೆ ಅನಂತಮೂರ್ತಿ, ತೇಜಸ್ವಿ, ದೇವನೂರು ಮೂರು ಜನರ ಹಾವಳಿ ಮತ್ತು ಲಂಕೇಶ್‌ ಪತ್ರಿಕೆ ಕಾಲೇಜಿನ ಬದುಕನ್ನು ಪರಮಾನಂದವಾಗಿಸಿತ್ತು.  

ವಿಚಿತ್ರ ಅಂದರೆ, ನಮ್ಮ ಹಳ್ಳಿàಲಿ. ಜನ, “ಇವನಿಗೆ ಏನೋ ಯಾರಿಗೂ ಇಲ್ಲದ ಕಾಯಿಲೆ ಶುರುವಾಗಿದೆ. ಸುಮ್ಮನೆ ಏನೇನೋ ಓದಿ, ಓದ್ತಾನಲ್ಲ’ ಅಂತ ಅನುಮಾನದಿಂದ ನೋಡೋರು. ನನ್ನ ಓದನ್ನು ಹಂಚಿಕೊಳ್ಳೋಕೆ ಯಾರೂ ಇರ್ತಿರಲಿಲ್ಲ. ಅಂಥ ಸಂದರ್ಭದಲ್ಲಿ ಜೊತೆಯಾದದ್ದು ಈ ತೇಜಸ್ವಿ. 

ಅವರು ಕಥೆಗಳಲ್ಲಿ ನಿಧಾನಕ್ಕೆ ಇಮೋಷನ್‌ಗಳನ್ನು ಹಿಂದೆ ಹಾಕ್ತಾ ಹೋದರು. ಸಂಬಂಧಗಳು, ಪ್ರೀತಿ ಪ್ರೇಮ ಎಲ್ಲವೂ ಗೌಣವಾಗುತ್ತಾ ಹೋಯ್ತು.  ಪ್ರೀತಿ-ಪ್ರೇಮದ ಲೇವಡಿ ಕಾಣೋಕೆ ಶುರುವಾಯ್ತು. ಆಮೇಲೆ ತೇಜಸ್ವಿ ಕಂಪ್ಲೀಟಾಗಿ ಪ್ರಕೃತಿ ಕಡೆ ಶಿಫಾrದರು.  
ಸಡನ್ನಾಗಿ ಮಿಲೇನಿಯಂ ಸೀರಿಸ್‌ ತಂದರು, ಹಕ್ಕಿ ಬಗ್ಗೆ ಬರೆದರು, ಚಿತ್ರ ತೆಗೆಯೋಕೆ ಹೋದರು. ಅಣ್ಣನ ನೆನಪು ಅಂತ ಬರೆದರು. ಅದರಲ್ಲಿ  ಎಲ್ಲೂ ಅನ್‌ನೆಸಸರಿಯಾಗಿ ಇಮೋಷನ್‌ ತಂದು, ಅಪ್ಪನ ಬಗ್ಗೆ ಕಣ್ತುಂಬಿ ಬಂತು. ಅನ್ನೋ ಕ್ಲೀಶೆ ಡಿಟೇಲ್‌ಗ‌ಳು ತರಲೇ ಇಲ್ಲ. ಕಡಿಮೆ ಅಂಕ ಬಂದದ್ದು, ಫೇಲಾಗಿದ್ದರ ಬಗ್ಗೆ ಬರೆದುಕೊಂಡರು. ಅಪ್ಪ ದೊಡ್ಡ ಸಾಹಿತಿ. ಹೀಗಿದ್ದಾಗ ಮಗನ ಮೇಲೆ ಎಂಥ ಒತ್ತಡ ಇರುತ್ತೆ ಹೇಳಿ? ಇದ್ಯಾವುದನ್ನು ಕೇರ್‌ ಮಾಡಲಿಲ್ಲ. ಇಂಥ ಸಂಗತಿಗಳೇ ನಮಗೆ ತುಂಬಾ ಫ್ಯಾಸಿನೇಟಾಗಿ ಕಂಡದ್ದು. 

Advertisement

ಗಂಡ-ಹೆಂಡ್ತಿ ಇದ್ದಾರೆ ಅಂದರೆ ಇದಾರೆ ಅಷ್ಟೇ. ಅವರ ಇಮೋಷನ್‌ ಡಿಟೇಲ್‌ಗ‌ಳನ್ನು  ಬರೆದು ಓದುಗರ ಮೇಲೆ ಹೇರುತ್ತಿರಲಿಲ್ಲ ತೇಜಸ್ವಿ.  ನಿಜಜೀವನದಲ್ಲೂ ನಾವು ಹಾಗೇ ತಾನೆ? ಕರ್ವಾಲೋದಲ್ಲಿ ನೋಡಿ. ನಾರ್ವೆ ರಾಮಯ್ಯನ ಮಗಳಿಗೂ ಮಂದಣ್ಣನಿಗೂ ಮದುವೆ. ಅದರಲ್ಲಿ ಅವರು ಅಷ್ಟೇ ಹೇಳ್ತಾರೆ. ನಾರ್ವೆ ರಾಮಯ್ಯನ ಲೋ ಮಿಡ್ಲಕ್ಲಾಸ್‌ ಮೆಂಟಾಲಿಟಿ ಮತ್ತು ಮಂದಣ್ಣ ರಾಮಿ ಮದುವೆ ಬಗ್ಗೆ ವಿವರಿಸುತ್ತಾರೆ.   ದೊಡ್ಡಮನುಷ್ಯರು ಇಂಥ ಮದುವೆಗೆ ಹೋದರೆ ಏನಾಗುತ್ತೆ ಅನ್ನೋದಕ್ಕೆ ಚಿಲ್ಲರೆ ಜಗಳದ ಬಗ್ಗೆ ಬರೀತಾರೆ. ಅದಾದ ಮೇಲೆ ಸಾರಾಯಿ ಕೇಸಲ್ಲಿ ಕೋರ್ಟಿಗೆ ಹೋಗ್ತಾನೆ. ಇಲ್ಲಿ ಹೆಂಡತಿಗೆ- “ನಾನು ಜೈಲಿಗೆ ಹೋಗಿ ಬರ್ತೀನಿ. ಬರೋವರೆಗೂ ಕಾಯಿ’ ಅಂತ ಎಮೋಷನ್ನಾಗಿ ಹೇಳಿಸಲಿಲ್ಲ ತೇಜಸ್ವಿ. ಅಂತ ಸಿನಿಮ್ಯಾಟಿಕ್‌ ಸೀನೇ ಇಲ್ಲ ಅದರಲ್ಲಿ.  

ಈ ಥರದ ಬದುಕಿನ ನೈಜತೆಯ ಡಿಟೇಲಿಂಗ್‌ ಇದೆಯಲ್ಲ , ಇದು ಎಷ್ಟೋ ದೂರದ ಯೋಚನೆ. 50 ವರ್ಷದ ಹಿಂದೆ 500 ವರ್ಷದ ಮುಂದೆ ಇದನ್ನು ಅಪ್ಲೆ„ ಮಾಡಬಹುದು.

ಹೀಗೆ, ರಿಲೇಶನ್‌ಗಳನ್ನು ಸೈಡಿಗೆ ಹಾಕಿ, ಪ್ರೀತಿ, ಪ್ರೇಮವನ್ನು ಮರೆತು,  ಪ್ರಕೃತಿಯಲ್ಲಿ ಕ್ಯಾರಕ್ಟರ್‌ಗಳನ್ನು ಹುಡುಕುತ್ತ¤ ಹೋದರು ತೇಜಸ್ವಿ.  ಅವರ ಬರಹದಲ್ಲಿ ಒಬ್ಬ ಮಾರಾ, ಪ್ಯಾರ, ವೆಂಕ್ಟ, ಕೋಬ್ರ, ಕಾಳಪ್ಪ ಕಾಣಿಸುತ್ತ ಹೋದ. ಇಮೋಷನ್‌ಗಳ ಬಲೆಯಲ್ಲಿ ಬಿಧ್ದೋರ ಕಣ್ಣಿಗೆ ಇಂಥದೊಂದು ಪ್ರಪಂಚ ಕಾಣೋದಾದರು ಹೇಗೆ?  

ತೇಜಸ್ವಿ ಅವರ ಬರಹದಲ್ಲಿ ನೈಜತೆ ಇದೆ ಅನ್ನೋದು ನನಗೆ ಆಪಾದನೆ ರೀತಿ ಕಾಣುತ್ತೆ. ಏಕೆಂದರೆ,  ತೇಜಸ್ವಿಯೇ ನೈಜತೆಯ ಬ್ರಾಂಡ್‌ ಅಂಬಾಸಿಡರ್‌.  ನೈಜತೆಗೆ ಡೆಫಿನೇಷನ್‌ ಕೊಟ್ಟಿದ್ದು ಇವರೇ.  ಹೀಗೆ ತೇಜಸ್ವಿ ಬರಹದ, ಬದುಕಿನ ಸರಳತೆ ನಮ್ಮನ್ನ ಎತ್ಲೆತ್ಲಗೋ ಎಳ್ಕೊಂಡು ಹೋಯ್ತು.

ಹಾಗೇ ನೋಡಿದರೆ, ತೇಜಸ್ವಿ ಅವರು “ಇವನ್ಯಾವನೋ ಓದ್ಲಿ, ತಯಾರಾಗಲಿ’ ಅಂತೆಲ್ಲ ಬರೆದಿದ್ದಲ್ಲ. ಅವರ ಸುಖಕ್ಕೆ ಬರೆದುಕೊಂಡಿದ್ದು. ಇದು ಅವರ ಇನೋಸೆನ್ಸ್‌.  

ಇವತ್ತಿಗೂ 35ರಿಂದ 70 ವರ್ಷದ ಏಜ್‌ಗೂÅಪ್‌ನವರನ್ನು ಕೇಳಿ ನೋಡಿ, ಒಂದಲ್ಲಾ ಒಂದರ್ಥದಲ್ಲಿ ತೇಜಸ್ವಿಯರನ್ನು ಓದಿಕೊಂಡಿರುತ್ತಾರೆ ಇಲ್ಲವೇ ಪ್ರಭಾವಿತರಾಗಿರುತ್ತಾರೆ. ಇದೆಲ್ಲ ತೇಜಸ್ವಿ ಆಗ ಮಾಡಿದ ಪ್ಲಾನ್‌ ಅಲ್ಲ. ಒಂದು ಕೆರೆ, ಅದರೊಳಗೆ ಇರೋ ಮೀನಿನ ಬಗ್ಗೆ ಕುತೂಹಲವಾಗಿ ಬರೀತಾರೆ ಅಂದರೆ ಪ್ಲಾನ್‌x ಅಲ್ಲ. ಅದು ಅವರ ಖುಷಿಗೆ  ಬರೆದದ್ದು.  
.
ಇಂಥ ತೇಜಸ್ವಿ ಒಂದು ಸಲ ಬೆಂಗಳೂರಿಗೆ ಬಂದಿದ್ದರು. ಯವನಿಕ ಸಭಾಂಗಣದಲ್ಲಿ ಡಿಗ್ರಿಗಳ ಬಗ್ಗೆ ಏನೋ ಮಾತಾಡ್ತಾ ಇದ್ದರು. ಜನವೋ ಜನ. ನಾನು ಹೊರಗೆ ನಿಂತು ಕೇಳಿಸಿಕೊಂಡೆ.  “ನೋಟ್‌ ಬುಕ್‌ ಹಿಡ್ಕೊಂಡು ಸಿಲೆಬಸ್‌ಗಳನ್ನು ಓದಬೇಕು ಅಂತಿಲ್ಲ. ಸರ್ಟಿಫಿಕೇಟ್‌ ಆಸೆಗಳನ್ನು ನಾವು ಬಿಡಬೇಕು’ ಅಂತೆಲ್ಲ ಹೇಳುತ್ತಿದ್ದರು.  ಬದುಕು ಬೇರೆ, ಸರ್ಟಿಫಿಕೇಟ್‌ ಬೇರೆ ಅನ್ನೋದು ಆವತ್ತೇ ಗುರುತು ಮಾಡಿದ್ದರು. ಈ ಮಾತನ್ನು ಕೇಳಿ ಸತ್ಯ ಅನಿಸಿತು. ಆಗ ಎಂ.ಎ. ಓದಬೇಕು ಅಂತ ಫೀಸು ಕಟ್ಟಿದ್ದೆ. ಕೈ ಬಿಟ್ಟೆ.  ನೇರವಾಗಿ ಎಲ್‌ಎಲ್‌ಬಿ ಸೇರಿದೆ. ಅರೇ, ಇದನ್ನು ನಾನೇ ಓದಿಕೊಳ್ಳಬಹುದಲ್ಲ ಅಂತ ಪ್ರಯತ್ನ ಪಟ್ಟೆ. ತೇಜಸ್ವಿ ಹೀಗೆ ಪ್ರಜ್ಞೆಯಲ್ಲಿ ಸೇರಿಹೋಗಿದ್ದರು.  

ಗಾಳಿಪಟ ಚಿತ್ರದಲ್ಲಿ ಹಂದಿ ಸೀನ್‌ಗೆ ತೇಜಸ್ವಿ, ಕೆನೆತ್‌ ಆಂಡ್ರಸನ್‌ ಕಾರಣ. ಬೇಟೆ ಫ್ಯಾಸಿನೇಷನ್‌ ಹುಟ್ಟಿದ್ದೇ ಇವರಿಂದ. ಅವರ ಒಂದು ಕತೆಯಲ್ಲಿ ಬೇಟೆಗಾರ ಸತ್ತು ಹೋಗಿರ್ತಾನೆ. ಆ ಸೀಕ್ರೆಟ್‌ ಮುಚ್ಚಿಹಾಕೋಕೆ ಅನೇಕ ಸರ್ಕಸ್ಸುಗಳನ್ನು ಮಾಡೋದೆಲ್ಲ ಇದೆ. ಬಹಳ ಇಂಟ್ರೆಸ್ಟಿಂಗ್‌. ಹಂದಿ ಹೊಡೆದು ತಿನ್ನೋ ಕಾರ್ಯಾಚರಣೆಯನ್ನು ತೇಜಸ್ವಿಯಷ್ಟು ರಸವತ್ತಾಗಿ ಯಾರೂ ಬರೆದಿಲ್ಲ.  ನನಗೆ ಮಲೆನಾಡಲ್ಲಿ ಗೆಳೆಯ ಇದ್ದಾನೆ. ಅವನ ತಂದೆ ಹಂದಿ ಹೊಡೆಯುವ ಫೈನಲ್‌ ಬಿಲ್ಲುಗಾರ. ಅವರನ್ನು ಹುಡುಕಿ ನೇಲ್‌ವುಟ್ಟಿ ಅಂತ ಊರಿಗೆ ಹೋಗಿದ್ದೆ. ಇವೆಲ್ಲಾ ತೇಜಸ್ವಿ ಪ್ರಜ್ಞೆಯಲ್ಲಿ ಕೂತಿದ್ದರಿಂದ ಆಗಿದ್ದು. 

ತೇಜಸ್ವಿ ಸೆಂಟಿಮೆಂಟಲ್‌ ಅಲ್ಲ. ವೆರಿ ಸೈಂಟಿಫಿಕ್‌. ಸೈನ್ಸ್‌ ಹಿಂದೆ ಹೋಗೋರು. ಸೈನ್ಸ್‌ಗಿಂತ ದೊಡ್ಡ ವೇದಾಂತ ಇಲ್ಲ ಅಂತ ಹೇಳಿದರು. ಕೊನೆಗೆ ಅದೇ ವರ್ಕಾಗುತ್ತೆ ಅನ್ನೋ ಸತ್ಯ ನಮಗೆಲ್ಲ ಗೊತ್ತಾಯ್ತು. ಮಿಲೇನಿಯಂ ಸೀರೀಸ್‌ನಲ್ಲಿ ಅದೇ ಕಾಣುತ್ತೆ ನನಗೆ. ಬಾಕಿಯೆಲ್ಲ ಚರ್ವಿತ ಚರ್ವಣ ಅಂತ ಬಿಟಾØಕಿದ್ದರು. 

ಸುಳ್ಳು ಹೇಳಬಾರದಾಗಿ ವಿನಂತಿ…
ಅವರನ್ನು ಓದದೇ, ಓದಿದ್ದೀನಿ ಅನ್ನೋರ ಸಂಖ್ಯೆ ಅವರು ಹೋದಾಗಿನಿಂದ ಹೆಚ್ಚಾಗಿದೆ. ಇವರನ್ನು ಓದಿಲ್ಲ ಅನ್ನೋದು ಐದೇ ನಿಮಿಷದಲ್ಲಿ ಗೊತ್ತಾಗುತ್ತೆ. ಏಕೆಂದರೆ, ಇವರು ಇಂಪ್ಯಾಕ್ಟ್ ಮಾಡೋದು ಬೇರೆ ರೀತಿ. ಅದೂ, ಅವರನ್ನು ಓದಿಕೊಂಡವರಿಗೆ ತುಂಬಾ ನಗೂ ತರಿಸುತ್ತೆ. ತುಂಬಾ ಇರಿಟೇಟೂ ಆಗುತ್ತೆ. ಅದಕ್ಕೆ ಕಾರಣ, ಅವರು ಗದ್ಯದಲ್ಲಿ ಮೇಜರ್‌ ಆಗಿ ಟ್ರೈ ಮಾಡಿದ್ದು.  ಬೇಂದ್ರೆ, ನರಸಿಂಹಸ್ವಾಮಿ ಅವರದೆಲ್ಲಾ ಜಾನಪದ, ಸಿನೆಮಾ ಹಾಡುಗಳಾಗಿ ಗೊತ್ತಿಧ್ದೋ, ಗೊತ್ತಿಲ್ಲದೆಯೋ ನಾಲ್ಕು ಹಾಡು ತಲೆಗೆ ಹೋಗಿರುತ್ತದೆ. ತೇಜಸ್ವಿ ಅವರದು ಮೇಜರ್‌ ಆಗಿ ಗದ್ಯ. ಅದು ಜಾನಪದ ಫಾರ್ಮೆಟ್‌ಗೆ ಒಳಪಡಲ್ಲ. ಹೀಗಾಗಿ, ಓದಲೇ ಬೇಕು. ಬೇರೆ ದಾರಿ ಇಲ್ಲ. ಸುಳ್ಳು ಹೇಳಿದರೆ ಇಂಥವರು ಎಲ್ಲೋ ಒಂದು ಕಡೆ ಎಲ್ಲೋ ತಗಲಾಕ್ಕೋತ್ತಾರೆ.  ಯಾರ ಬಗ್ಗೆ ಬೇಕಾದರೆ ಬಗ್ಗೆ ಸುಳ್ಳು ಹೇಳಿ. ತೇಜಸ್ವಿ ಅವರ ಬಗ್ಗೆ ಈ ರೀತಿ ಹೇಳಬಾರದಾಗಿ ನನ್ನ ವಿನಂತಿ.

ನಿರೂಪಣೆ : ಕಟ್ಟೆ ಗುರುರಾಜ್‌

Advertisement

Udayavani is now on Telegram. Click here to join our channel and stay updated with the latest news.

Next