Advertisement

Padma Awards: ಪದ್ಮ ಗೌರವ ಪಡೆದ ಕರ್ನಾಟಕದ ಸಾಧಕರು ಇವರು…

12:52 AM Jan 27, 2024 | Team Udayavani |

ಯಶಸ್ವಿ ಉದ್ಯಮಿ ಡಾ| ಸೀತಾರಾಮ್‌ ಜಿಂದಾಲ್‌ (ಪದ್ಮಭೂಷಣ)
ಜಿಂದಾಲ್‌ ಸಮೂಹದ ಡಾ| ಸೀತಾರಾಮ್‌ ಜಿಂದಾಲ್‌ ಅವರು ವ್ಯಾಪಾರ ಮತ್ತು ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಜತೆಗೆ ಪ್ರಕೃತಿ ಚಿಕಿತ್ಸೆಯಲ್ಲಿ ಪದವಿ ಪಡೆದಿದ್ದಾರೆ.ಈಗ ರಾಜಧಾನಿ ಬೆಂಗಳೂರಿನಲ್ಲಿ ಬಡವರ ಮತ್ತು ನಿರ್ಗತಿಕರ ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತಿದ್ದಾರೆ. ಜಿಂದಾಲ್‌ ಗ್ರೂಪ್‌ ಆಫ್‌ ಇಂಡಸ್ಟ್ರೀಸ್‌ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದು ಜಿಂದಾಲ್‌ ಅಲ್ಯೂಮಿನಿಯಂ ಲಿಮಿಟೆಡ್‌ನ‌ ಸಂಸ್ಥಾಪಕರು, ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇ ಶಕರಾಗಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿರುವ ಬೃಹತ್‌ ಮತ್ತು ಪ್ರಾಚೀನ ಕ್ಯಾಂಪಸ್‌ನಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಆಸ್ಪತ್ರೆ ಸ್ಥಾಪಿಸಿದ್ದಾರೆ. ಡಾ| ಜಿಂದಾಲ್‌ ಅವರು ಸಮಾಜದ ಕಲ್ಯಾಣಕ್ಕೆ ಹೆಚ್ಚು ಕಾಳಜಿ ತೋರಿದ್ದಾರೆ. ವಿವಿಧ ಸಾಮಾಜಿಕ ಮತ್ತು ದತ್ತಿ ಚಟುವಟಿಕೆಗಳಿಗಾಗಿ ಅನುದಾನ ವಿನಿಯೋಗ ಮಾಡುತ್ತಿದ್ದಾರೆ. ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ ಇತ್ಯಾದಿ ಕ್ಷೇತ್ರದಲ್ಲಿ ಹಲವಾರು ದತ್ತಿ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ಮತ್ತು ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

Advertisement

ಪದ್ಮ ಪ್ರಶಸ್ತಿ ಪುರಸ್ಕೃತರ ಕಿರು ಪರಿಚಯ

ಶಿಕ್ಷಣ ತಜ್ಞ ಎಂ.ಕೆ. ಶ್ರೀಧರ್‌
ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆ ನೀಡಿರುವ ಬೆಂಗಳೂರು ಮೂಲದ ಮಾಕಂ ಕೃಷ್ಣಮೂರ್ತಿ ಶ್ರೀಧರ್‌ ಅವರು ಭೌತಶಾಸ್ತ್ರ ಮತ್ತು ವಿಜ್ಞಾನದ ಬರಹಗಾರರ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. 1990ರಲ್ಲಿ ಭೌತಶಾಸ್ತ್ರ ವಿಷಯದಲ್ಲಿ ಮುಂಬಯಿ ವಿಶ್ವವಿದ್ಯಾನಿಲಯದಿಂದ ಪಿಎಚ್‌.ಡಿ ಪದವಿ ಪಡೆದರು. ಯೂನಿವರ್ಸಿಟಿ ಆಫ್‌ ಲಂಡನ್‌ ಮತ್ತು ಜಿನೀವಾದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಮುಂಬಯಿಯ ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಫಂಡಮೆಂಟಲ್‌ ರಿಸರ್ಚ್‌ನಲ್ಲಿ ಸೈದ್ಧಾಂತಿಕ ಭೌತಶಾಸ್ತ್ರದ ಪ್ರೊಫೆಸರ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. ಶಿಕ್ಷಣ ತಜ್ಞರಾಗಿ ರಾಷ್ಟ್ರೀಯ ಶಿಕ್ಷಣ ನೀತಿ ರೂಪುರೇಷೆ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಮನೋತಜ್ಞ ಸಿ.ಆರ್‌.ಚಂದ್ರಶೇಖರ್‌
ಮಾನಸಿಕ ವೈದ್ಯಕೀಯ ಕ್ಷೇತ್ರದಲ್ಲಿ ರಾಜ್ಯದ ಮನೆಮಾತಾಗಿರುವ ಡಾ| ಸಿ.ಆರ್‌.ಚಂದ್ರಶೇಖರ್‌ ಅವರು ಮೂಲತಃ ಚನ್ನಪಟ್ಟಣದವರು. ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ದೆವ್ವ, ಭೂತ, ಭಾನಾಮತಿಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಆ ಬಗ್ಗೆ ಸಾಕಷ್ಟು ಅಧ್ಯಯನಗಳನ್ನು ನಡೆಸಿದ್ದಾರೆ. 750ಕ್ಕೂ ಹೆಚ್ಚು ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ. 85ಕ್ಕೂ ಹೆಚ್ಚು ಪುಸ್ತಕ ಗಳನ್ನು ಪ್ರಕಟಿಸಿದ್ದಾರೆ. ಚಂದ್ರಶೇಖರ್‌ ಅವರು ಮಾನಸಿಕ ಆರೋಗ್ಯ, ಸಾಮಾನ್ಯ ಆರೋಗ್ಯ, ಲೈಂಗಿಕ ವಿಜ್ಞಾನ, ವೈಚಾರಿಕ ಸಾಹಿತ್ಯ, ಕಾದಂಬರಿ, ಸಣ್ಣ ಕತೆ, ಅನುವಾದ ಸಾಹಿತ್ಯ ಮುಂತಾದ ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ.

ಬೊಂಬೆಯಾಟದ ಅನುಪಮಾ
ಸೂತ್ರದ ಬೊಂಬೆಯಾಟಕ್ಕೆ ಆಧುನಿಕ ಸ್ಪರ್ಶ ನೀಡಿ, ಜಾನಪದದ ಕಂಪನ್ನು ವಿದೇಶಗಳಲ್ಲಿ ಪಸರಿಸಿದವರು ಧಾತು ಸಂಸ್ಥೆಯ ಅನುಪಮಾ ಹೊಸಕೆರೆ, ಬೊಂಬೆಗಳ ಕುಣಿತಕ್ಕೆ ಹೊಸ ಸೊಬಗು ನೀಡಿದರಲ್ಲಿ ಎತ್ತಿದ ಕೈ . ಬೆಂಗಳೂರಿನ ನಿವಾಸಿ ಆಗಿರುವ ಅವರು 30 ವರ್ಷಗಳಿಂದ ಸೂತ್ರದ ಬೊಂಬೆಯಾಟದಲ್ಲಿ ಅನೇಕ ಹೊಸ ಪ್ರಯೋಗಳನ್ನು ಮಾಡುತ್ತಾ ಬಂದಿದ್ದಾರೆ. ಕಲಾ ಕ್ಷೇತ್ರದ ಸಾಧನೆಗಾಗಿ ಕರ್ನಾಟಕ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ ವನ್ನು ಪಡೆದಿದ್ದಾರೆ. ಭರತನಾಟ್ಯ ಕ್ಷೇತ್ರದಲ್ಲಿ ಪ್ರಾವೀಣ್ಯತೆ ಪಡೆದಿದ್ದಾರೆ. ಬೊಂಬೆಯಾಟದ ಸಂಯೋಜಿತ ಕಲಾ ಪ್ರಕಾರದ ಪ್ರದರ್ಶನ , ಬೊಂಬೆ ತಯಾರಿಕೆ, ಬೊಂಬೆ ಥಿಯೇಟರ್‌ ಪ್ರೊಸೆನಿಯಮ್‌ ವಿನ್ಯಾಸ, ಬೊಂಬೆ ನಾಟಕಗಳಿಗೆ ಸ್ಕ್ರಿಪ್ಟ್ ಬರವಣಿಗೆ, ಬೊಂಬೆ ನಾಟಕಗಳಿಗೆ ಸಂಗೀತ ಮತ್ತು ಹಾಡು ಸಂಯೋಜನೆ, ಬೆಳಕು ಮತ್ತು ಬೊಂಬೆ ರಂಗಭೂಮಿಯಲ್ಲಿ ಧ್ವನಿ ಪರಿಣಾಮಗಳನ್ನು ಒಳಗೊಂಡಂತೆ ಅವರು ವ್ಯಾಪಕ ಅನುಭವವನ್ನು ಹೊಂದಿದ್ದಾರೆ.

Advertisement

ಕೈಗಾರಿಕೋದ್ಯಮಿ ಶಶಿ ಸೋನಿ
ಶಶಿ ಸೋನಿ ಕೈಗಾರಿಕ ಉದ್ಯಮಿಯಾಗಿ ಮಹಿಳಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಜತೆಗೆ ರಾಜ್ಯದ ಉದ್ಯಮ ಕ್ಷೇತ್ರದಲ್ಲೂ ಹೆಸರುವಾಸಿ ಆಗಿದ್ದಾರೆ. ಮೈಸೂರಿನ ಮೊದಲ ಕೈಗಾರಿಕ ಉದ್ಯಮಿಯಾಗಿ ಎಂಬ ಹೆಗ್ಗಳಿಕೆ ಕೂಡ ಇವರದ್ದಾಗಿದೆ. ಗೃಹಿಣಿಯಾಗಿದ್ದ ಇವರು 70 ದಶಕದ ಅನಂತರ ಉದ್ಯಮ ಕ್ಷೇತ್ರದಲ್ಲಿ ಹೆಜ್ಜೆಯಿರಿಸಿದರು. 10 ಸಾವಿರ ರೂ.ಗಳೊಂದಿಗೆ ಸಾರಿಗೆ ಉದ್ಯಮ ಕ್ಷೇತ್ರದಲ್ಲಿ ಬಂಡವಾಳ ಹೂಡಿ ಅನಂತರ ಈಗ 500 ಮಿಲಿಯನ್‌ ಡಾಲರ್‌ ಉದ್ಯಮಿ ಆಗಿ ಬೆಳೆದು ನಿಂತಿದ್ದಾರೆ. ಹಲವು ಸಂಸ್ಥೆಗಳನ್ನು ತೆರದು ಹಲವರಿಗೆ ಉದ್ಯೋಗ ನೀಡಿದ್ದಾರೆ. ವಿಶೇಷವಾಗಿ ಮಹಿಳೆಯರ ಕೌಶಲ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.

ಹೋರಾಟದ ದನಿ ಸೋಮಣ್ಣ
ಮೈಸೂರು: ಎಚ್‌.ಡಿ.ಕೋಟೆ ತಾಲೂಕು ಮೊತ್ತಹಾಡಿ ನಿವಾಸಿ, ಜೇನುಕುರುಬ ಸಮು ದಾಯದ ಸೋಮಣ್ಣ ಅರಣ್ಯ ಸಂರಕ್ಷಣ ಕಾಯಿದೆಯಿಂದ ಆದಿವಾಸಿ ಸಮುದಾಯಗಳ ಮೇಲಾದ ಶೋಷಣೆ ಹಾಗೂ ಬುಡಕಟ್ಟು ಸಮುದಾಯಗಳ ಸ್ಥಳಾಂತರದ ವಿರುದ್ಧ ಧ್ವನಿ ಎತ್ತಿದರು. 1957ರಲ್ಲಿ ಜನಿಸಿದ ಸೋಮಣ್ಣ ತಂದೆ ಕುನ್ನಯ್ಯ ಅವರಿಂದ ಅರಣ್ಯ ಪಾರಂಪರಿಕ ಜ್ಞಾನ ನೋಡಿ ಕಲಿತು ಮುಂದಿನ ಪೀಳಿಗೆಗೆ ದಾಟಿಸುತ್ತಿದ್ದಾರೆ. ಮೈಸೂರು ಜಿಲ್ಲೆಯ ಬುಡಕಟ್ಟು ಜನರನ್ನು ಸಂಘಟಿಸಿ, ಭೂಮಿಯನ್ನು ಪಡೆಯಲು ಹಲವು ಹೋರಾಟ ಮಾಡಿದ್ದಾರೆ. ಇದರ‌ ಫಲವಾಗಿ ಗಿರಿಜನರಿಗೆ ಆರುಸಾವಿರ ಎಕ್ರೆಗಿಂತ ಹೆಚ್ಚಿನ ಭೂಮಿ ದೊರಕಿದೆ.

ಅಗ್ನಿ ರಕ್ಷಕಿ ಪ್ರೇಮಾ
ಬೆಂಗಳೂರು: ದುರಂತವೊಂದರಲ್ಲಿ ಸುಟ್ಟಗಾಯಗಳಿಂದ ಜೀವನ್ಮರಣದ ನಡುವೆ ಹೋರಾಡಿ ಬದುಕುಳಿದ ಪ್ರೇಮಾ ಧನರಾಜ್‌ ಬಳಿಕ ಅಗ್ನಿ ರಕ್ಷಕ ಎನ್‌ಜಿಒ ಮೂಲಕ ಸುಟ್ಟ ಗಾಯಗಳ ಸಂತ್ರಸ್ತರಿಗೆ ಶಸ್ತ್ರಚಿಕಿತ್ಸೆ ನೀಡಲು ಜೀವನ ಮುಡಿಪಾಗಿರಿಸಿದ್ದಾರೆ.

ಪ್ಲಾಸ್ಟಿಕ್‌ ಸರ್ಜನ್‌ ಹಾಗೂ ಸಮಾಜ ಸೇವಕಿಯೂ ಆದ ಪ್ರೇಮಾ ಧನರಾಜ್‌ ಸುಟ್ಟ ಸಂತ್ರಸ್ತರ ಆರೈಕೆ ಮತ್ತು ಪುನರ್ವಸತಿಗೆ ತಮ್ಮ ಜೀವನ ಮುಡಿಪಾ ಗಿಟ್ಟಿದ್ದಾರೆ. ಅಗ್ನಿ ರಕ್ಷಕ್‌ ಎನ್‌ಜಿಒನಿಂದ ಸುಟ್ಟ ಗಾಯಕ್ಕೊಳಗಾಗಿದ್ದ 25 ಸಾವಿರ ಮಂದಿಗೆ ಉಚಿತ ಶಸ್ತ್ರಚಿಕಿತ್ಸೆ ನೀಡಿದ್ದಾರೆ. ಪ್ಲಾಸ್ಟಿಕ್‌ ಸರ್ಜರಿ ಕುರಿತು ಮೂರು ಕೃತಿ ರಚಿಸಿದ್ದಾರೆ. ವಿಶ್ವ ಮಾನವತಾ ಕಾರ್ಯದ ಸಲುವಾಗಿ ಇಥೋಪಿಯಾದಲ್ಲಿ ಮೊಟ್ಟ ಮೊದಲ ಸುಟ್ಟಗಾಯಗಳ ಘಟಕ ಆರಂಭಿಸಿದ್ದಾರೆ. ಕೀನ್ಯಾ, ತಾಂಜೇನಿಯಾ, ನಾರ್ವೆ, ಇಥೋಪಿಯಾದಲ್ಲಿರುವ ವೈದ್ಯರಿಗೂ ಸುಟ್ಟ ಗಾಯಗಳ ಬಗ್ಗೆ ಚಿಕಿತ್ಸೆ ನೀಡುವ ಸಂಬಂಧ ಮಾರ್ಗದರ್ಶನ ನೀಡಿದ್ದಾರೆ. ಪ್ರೇಮಾ ಧನರಾಜ್‌ 8 ವರ್ಷವಿದ್ದಾಗ ಸ್ಟೌ ಸ್ಫೋಟಗೊಂಡು ಶೇ.50ರಷ್ಟು ಸುಟ್ಟ ಗಾಯಗಳಿಂದ ಜೀವನ್ಮರಣದ ನಡುವೆ ಹೋರಾಡುತ್ತಿದ್ದರು. ವೆಲ್ಲೂರಿನ ಕ್ರಿಶ್ಚನ್‌ ಮೆಡಿಕಲ್‌ ಕಾಲೇಜಿನಲ್ಲಿ 14ಕ್ಕೂ ಅಧಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿ ಪ್ರಾಣಾಪಾಯದಿಂದ ಪಾರಾಗಿದ್ದರು. ಸದ್ಯ ಅದೇ ಕಾಲೇಜಿನಲ್ಲಿ ಸುಟ್ಟಗಾಯಗಳ ವಿಭಾಗದ ಮುಖ್ಯಸ್ಥರಾಗಿ (ಎಚ್‌ಓಡಿ) ಸೇವೆ ಸಲ್ಲಿಸುತ್ತಿದ್ದಾರೆ.

ಟೆನಿಸ್‌ ತಾರೆ ರೋಹನ್‌ ಬೋಪಣ್ಣ
2003ರಲ್ಲಿ ತಮ್ಮ ವೃತ್ತಿಪರ ಟೆನಿಸ್‌ ವೃತ್ತಿಜೀವನ ಆರಂಭಿಸಿದ ಕೊಡಗಿನ 43 ವರ್ಷದ ರೋಹನ್‌ ಬೋಪಣ್ಣ ಡಬಲ್ಸ…​ನತ್ತ ಒಲವು ತೋರಿದರು. ಬೋಪಣ್ಣ 2013ರ ಏಷ್ಯನ್‌ ಗೈಮ್ಸ್‌ನಲ್ಲಿ ರುತುಜಾ ಭೋಸ್ಲೆ ಅವರೊಂದಿಗೆ ಮಿಶ್ರ ಡಬಲ್ಸ್‌ನಲ್ಲಿ ಮೊದಲ ಬಾರಿಗೆ ಚಿನ್ನ ಗೆದ್ದಿದ್ದಾರೆ. ಬೋಪಣ್ಣ ಎಟಿಪಿ ಡಬಲ್ಸ… ಶ್ರೇಯಾಂಕದಲ್ಲಿ ವಿಶ್ವದ ನಂ.1 ಸ್ಥಾನವನ್ನು ಗಳಿಸಿ ವಿಶ್ವ ಟೆನಿಸ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ 4ನೇ ಭಾರತದ ಟೆನಿಸ್‌ ಆಟಗಾರ ಎನಿಸಿಕೊಂಡಿದ್ದಾರೆ. 2017ರಲ್ಲಿ ರೋಹನ್‌ ಮಿಶ್ರ ಡಬಲ್ಸ್‌ನಲ್ಲಿ ಗ್ರ್ಯಾಂಡ್‌ ಸ್ಲಾéಮ್‌ ಪ್ರಶಸ್ತಿ ಗೆದ್ದಿದ್ದರು. ಹಾಗೆಯೇ ಯುಎಸ್‌ ಓಪನ್‌ನ ಪುರುಷರ ಡಬಲ್ಸ್‌ನಲ್ಲಿ ಎರಡು ಬಾರಿ ರನ್ನರ್‌ ಅಪ್‌ ಆಗಿದ್ದಾರೆ. ಕಳೆದ 20 ವರ್ಷಗಳಲ್ಲಿ, 1000ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿ ಒಟ್ಟು 25 ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇದೀಗ ಟೆನ್ನಿಸ್‌ ಡಬಲ್ಸ್‌ ಲೋಕದ ನಂಬರ್‌ 1 ರ್‍ಯಾಂಕ್‌ ಪಡೆದಿದ್ದಾರೆ.

ಸದ್ದಿಲ್ಲದ ಸಾಧಕರು

ಪಾರ್ಬತಿ ಬರುಹ
ದೇಶದ ಮೊದಲ ಮಹಿಳಾ ಆನೆ ಮಾವುತೆ ಇವರು. 14ನೇ ವಯಸ್ಸಿನಿಂದ ಈ ಕಾಯಕದಲ್ಲಿ ತೊಡಗಿರುವ ಇವರು ಅಸ್ಸಾಂನಲ್ಲಿ ಆನೆ-ಮಾನವ ಸಂಘರ್ಷ ನಿವಾರಣೆಯಲ್ಲಿ ತೊಡಗಿಸಿಕೊಂಡವರು.

ಚಾಮಿ ಮುರ್ಮು
ಝಾರ್ಖಂಡ್‌ನ‌ ಬುಡಕಟ್ಟು ಸಮಾಜಸೇವಕಿಯಾದ ಇವರು ಸುಮಾರು 30,000 ಮಹಿಳೆಯರನ್ನೊಳಗೊಂಡ ಸಂಘಟನೆ ಕಟ್ಟಿ ಸಾಮಾಜಿಕ ಬದಲಾವಣೆ ತಂದವರು.

ದುಖು ಮಾಝಿ
ಪಶ್ವಿ‌ಮ ಬಂಗಾಲದ ಇವರು ಅಪ್ಪಟ ಪರಿಸರ ಪ್ರೇಮಿ. ಯಾರ ನೆರವೂ ಇಲ್ಲದೆ ತಮ್ಮ ಊರಿನ ಸುತ್ತಮುತ್ತ 5,000 ಆಲದ ಮರ, ಮಾವಿನ ಮರಗಳನ್ನು ನೆಟ್ಟು ಬೆಳೆಸಿದ್ದಾರೆ.

ಕೆ. ಚೆಲ್ಲಮ್ಮ
ಅಂಡಮಾನ್‌ನ ಈ ಮಹಿಳೆ ತಮ್ಮ 10 ಎಕ್ರೆ ಜಾಗದಲ್ಲಿ ಪೂರ್ಣ ಸಾವಯವ ಕೃಷಿಯನ್ನು ನಿರ್ವಹಿಸುತ್ತಿದ್ದಾರೆ. ತೆಂಗು ಮತ್ತು ತಾಳೆ ಕೃಷಿಗೆ ಹೊಸ ಮಾದರಿಯನ್ನು ಆವಿಷ್ಕರಿಸಿದರು.

ದಾಸರಿ ಕೊಂಡಪ್ಪ
ತೆಲಂಗಾಣದ ಬುರ್ರಾ ವೀಣಾ ವಾದಕರಾದ ಇವರು ಕನ್ನಡ, ತೆಲುಗು ಭಾಷೆಯ ಆಧ್ಯಾತ್ಮಿಕ ಧಾರ್ಮಿಕ “ತತ್ತ್ವಪದ’ಗಳನ್ನು ನುಡಿಸುವುದರಲ್ಲಿ ಎತ್ತಿದ ಕೈ.

ಗದ್ದಾಂ ಸಾಮಯ್ಯ
ತೆಲಂಗಾಣದ ಚಿಂದು ಯಕ್ಷಗಾನ ಕಲೆಯನ್ನುಬೆಳೆಸುತ್ತಿರುವ ಇವರು ಕಳೆದ ಐದು ದಶಕಗಳಲ್ಲಿ 19,000 ಪ್ರದರ್ಶನವನ್ನು ನೀಡಿದ್ದಾರೆ.

ಸನಾತನ್‌ ರುದ್ರ ಪಾಲ್‌
ಕಳೆದ ಐದು ದಶಕಗಳಲ್ಲಿ ದುರ್ಗಾ ದೇವಿ ಮೂರ್ತಿಯನ್ನು ಕಡೆಯುತ್ತಿರುವ ಇವರು ಪಶ್ಚಿಮ ಬಂಗಾಲದ ನುರಿತ ಶಿಲ್ಪಿ. ಇವರ ಸಾಧನೆಗೆ ಯುನೆಸ್ಕೊ ಮೆಚ್ಚುಗೆ ವ್ಯಕ್ತಪಡಿಸಿದೆ.

ನಾರಾಯಣನ್‌ ಇ.ಪಿ.
ಕೇರಳ ಜನಪದ ನೃತ್ಯ ತೆಯ್ಯಮ್‌ನಲ್ಲಿ ಪರಿಣಿತರಾದ ಇವರು ಆರು ದಶಕದಲ್ಲಿ 300ಕ್ಕೂ ಹೆಚ್ಚು ಪ್ರದರ್ಶನವನ್ನು ನೀಡಿದ್ದಾರೆ.

ಉಮಾ ಮಹೇಶ್ವರಿ
ಆಂಧ್ರ ಪ್ರದೇಶದ ಮೊದಲ ಹರಿಕಥಾ ಪರಿಣಿತೆಯಾದ ಇವರು ಹಲವು ರಾಗಗಳಲ್ಲಿ ಕತೆ ಹೇಳಬಲ್ಲ ಚಾಕಚಕ್ಯತೆ ಹೊಂದಿದ್ದಾರೆ.

ಉದಯ ವಿ. ದೇಶಪಾಂಡೆ
ಅಂತಾರಾಷ್ಟ್ರೀಯ ಮಲ್ಲಕಂಬ ತರಬೇತುದಾರರಾದ ಇವರು ಈವರೆಗೆ 5,000ಕ್ಕೂ ಹೆಚ್ಚು ಮಂದಿಗೆ ತರಬೇತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next