Advertisement

ಕೊಳವೆ ಬಾವಿ ಬಳಸಲು ‘ಯೋಗ’ವೇ ಇಲ್ಲ!

01:10 AM May 13, 2019 | Team Udayavani |

ಪುತ್ತೂರು: ಈ ಭಾಗದಲ್ಲಿ ಇರುವ ಒಂದೆರಡು ಬಾವಿಗಳು ಫೆಬ್ರವರಿ ತಿಂಗಳಲ್ಲೇ ಬತ್ತಿ ಹೋಗುತ್ತವೆ. ಗ್ರಾ.ಪಂ.ನ ನಳ್ಳಿ ನೀರಿನ ಸಂಪರ್ಕವೇ ಇಲ್ಲ. ಮೂರು ದಶಕಗಳ ಹಿಂದಿನಿಂದಲೂ ಈ ಜನರು ಎದುರಿಸುತ್ತಿರುವ ನೀರಿನ ಸಮಸ್ಯೆಗೆ ಪರಿಹಾರವಾಗಿ ಕೊಳವೆ ಬಾವಿ ಕೊರೆಸಿ ಭರಪೂರ ನೀರು ಸಿಕ್ಕಿ 4 ವರ್ಷವಾದರೂ ಅದರ ಫಲ ಪಡೆಯುವ ದಿನ ಬಂದಿಲ್ಲ.

Advertisement

ಇದು ಬಡಗನ್ನೂರು ಗ್ರಾ.ಪಂ. ವ್ಯಾಪ್ತಿಯ ನೆಕ್ರಾಜೆ, ಬಾಣಪದವು ಪರಿಸರದ ಜನತೆ ಹಲವು ದಶಕಗಳಿಂದ ಎದುರಿಸುತ್ತಿರುವ ಸಮಸ್ಯೆ. ಈ ಪರಿಸರದಲ್ಲಿ 25ಕ್ಕೂ ಹೆಚ್ಚು ಮನೆಗಳಲ್ಲಿ 80ಕ್ಕೂ ಮಿಕ್ಕಿ ಜನರಿದ್ದಾರೆ. ಕೂಲಿ ಮಾಡಿ ಬದುಕು ಸಾಗಿಸುವ ಇವರಿಗೆ ಸ್ವಂತ ಬಾವಿ ಅಥವಾ ಕೊಳವೆ ಬಾವಿ ಕೊರೆಸುವ ಶಕ್ತಿ ಇಲ್ಲ. ಪರಿ ಣಾಮವಾಗಿ ಬೇಸಗೆಯಲ್ಲಿ ಇವರ ನೀರಿನ ಬವಣೆ ನಿತ್ಯ ನಿರಂತರ ಎನ್ನುವಂತಾಗಿದೆ.

ಬಾಡಿಗೆ ನೀರು
ಒಂದಷ್ಟು ಎತ್ತರ ಪ್ರದೇಶದಲ್ಲಿರುವ ಬಾಣಪದವು ಜನತೆ ಸದ್ಯಕ್ಕೆ ಬಾಡಿಗೆ ನೀರನ್ನು ಆಶ್ರಯಿಸಿ ದ್ದಾರೆ. ಸ್ಥಳೀಯರೊಬ್ಬರ ನೀರಿನ ಆಶ್ರಯದಿಂದ ಸಣ್ಣ ಗಾತ್ರದ ಪೈಪ್‌ಗ್ಳನ್ನು ಕಿಲೋಮೀಟರ್‌ ದೂರದ ಮನೆಯವರೆಗೆ ಅಳವಡಿಸಿ ಅಲ್ಲಿಂದ ನೀರು ಪಡೆಯುತ್ತಿದ್ದಾರೆ.

ಫೆ. 10ರಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ. ಜತೆಗೆ ವಿದ್ಯುತ್‌ ಇದ್ದರೂ ಲೋ ವೋಲ್ಟೇಜ್ ಸಮಸ್ಯೆ ಇದೆ. ಫ್ಯಾನ್‌ ಕೂಡ ತಿರುಗುವುದಿಲ್ಲ ಎನ್ನುತ್ತಾರೆ ಬಾಣಪದವು ನಿವಾಸಿ ರವಿಶಂಕರ್‌.

ನೀರು ಸಿಕ್ಕಿದರೂ ಸಿಗದ ಫ‌ಲ!
ಈ ಪರಿಸರದಲ್ಲಿ ಬೇಸಗೆಗೆ ಕುಡಿಯುವ ನೀರಿಗೆ ಉಂಟಾಗುವ ತತ್ವಾರ ಮತ್ತು ಜನರ ಬೇಡಿಕೆಯನ್ನು ಈಡೇರಿಸುವ ಸಲುವಾಗಿ ತಾ.ಪಂ. ಸದಸ್ಯರ ಅನುದಾನದಿಂದ 4 ವರ್ಷದ ಹಿಂದೆ ಕೊಳವೆ ಬಾವಿ ಕೊರೆಸಲಾಯಿತು. ನೀರು ಉಕ್ಕಿ ಹರಿಯಿತು. 4.5 ಇಂಚಿನಷ್ಟು ಭರಪೂರ ನೀರು ಸಿಕ್ಕಿತು. ಇನ್ನೇನು ಕುಡಿಯುವ ನೀರಿನ ಸಮಸ್ಯೆ ನೀಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದ ಜನರಿಗೆ ಇದುವರೆಗೂ ನೀರಿನ ಫಲ ಪಡೆಯಲು ಸಾಧ್ಯವಾಗಿಲ್ಲ. ಗುಡ್ಡದ ಮೇಲೆ ದೊಡ್ಡ ಟ್ಯಾಂಕ್‌ ನಿರ್ಮಿಸಿ ಅದಕ್ಕೆ ನೀರು ಹರಿಸಿ ಪೈಪ್‌ ಮೂಲಕ ಹರಿಸುವುದಾಗಿ ನೀಡಿದ ಭರವಸೆ ಆಗಿಲ್ಲ.

Advertisement

ಪಂಪ್‌ ಅಳವಡಿಕೆ, ಟ್ಯಾಂಕ್‌ ನಿರ್ಮಾಣ, ವಿದ್ಯುತ್‌ ಪರಿವರ್ತಕ, ಮನೆಗಳಿಗೆ ಪೈಪ್‌ಲೈನ್‌ ಹಾಕಲು ಸೇರಿದಂತೆ 7-8 ಲಕ್ಷ ರೂ. ಹಣ ಬೇಕು. ಸ್ಥಳೀಯಾಡಳಿತದಲ್ಲಿ ಇಷ್ಟೊಂದು ಹಣ ಭರಿಸಲು ಸಾಧ್ಯವಾಗದೇ ಇರುವುದರಿಂದ ಜಿ.ಪಂ., ಶಾಸಕರ ಅನುದಾನ ಬೇಕಾಗುತ್ತದೆ ಎನ್ನುವುದು ಗ್ರಾ.ಪಂ. ಆಡಳಿತದ ಅಭಿಪ್ರಾಯ.

ಚುನಾವಣ ಭರವಸೆ ಮಾತ್ರ
ಗ್ರಾ.ಪಂ.ನ ಪೈಪ್‌ಲೈನ್‌ ವ್ಯವಸ್ಥೆ ಇಲ್ಲಿಗೆ ತಲುಪಿಲ್ಲ. ಪ್ರತಿ ಬಾರಿ ಸ್ಥಳೀಯಾಡಳಿತ, ಜನಪ್ರತಿನಿಧಿಗಳಿಗೆ ತಿಳಿಸಿದರೂ ಸಮಸ್ಯೆ ಬಗೆಹರಿದಿಲ್ಲ. ನಮ್ಮ ಸಮಸ್ಯೆ ಚುನಾವಣ ಸಂದರ್ಭದ ಭರವಸೆಗೆ ಮಾತ್ರ ಸೀಮಿತವಾಗಿದೆ ಎಂದು ನೆಕ್ರಾಜೆಯ ರಘುನಾಥ ಹೇಳುತ್ತಾರೆ.

ನೆನೆದರೆ ಸಂಕಟವಾಗುತ್ತದೆ
ಕುಗ್ರಾಮಕ್ಕಿಂತಲೂ ಕಡೆಯ ಪರಿಸ್ಥಿತಿಯನ್ನು ನಾವು ಎದುರಿಸುತ್ತಿದ್ದೇವೆ. ಬೇಸಗೆ ಆರಂಭವಾಯಿತೆನ್ನುವುದನ್ನು ನೆನೆದರೆ ಸಂಕಟವಾಗುತ್ತದೆ. ದಿನ ಬೆಳಗಾದರೆ ನೀರಿಗಾಗಿ ಪರಿತಪಿಸಬೇಕಾಗುತ್ತದೆ ಎಂದು ಬಾಣಪದವು ನಿವಾಸಿ ಮಹೇಶ್‌ ನಾಯಕ್‌ ಹೇಳುತ್ತಾರೆ.

ವ್ಯವಸ್ಥೆಗೆ ಸಮಸ್ಯೆ
ತಾ.ಪಂ. ಅನುದಾನದಿಂದ ಕೊಳವೆ ಬಾವಿ ಕೊರೆಸಲಾಗಿದೆ. ಪೈಪ್‌ ಅಳವಡಿಸಲು ಜಿ.ಪಂ.ನಿಂದ ಸದಸ್ಯೆ 1.60 ಲಕ್ಷ ರೂ. ಅನುದಾನ ನೀಡಿದ್ದಾರೆ.

ನಿವಾಸಿಗಳ ಬೇಡಿಕೆ
– ಕೊರೆಸಿದ ಕೊಳವೆ ಬಾವಿಗೆ ಶೀಘ್ರ ಪಂಪ್‌ ಅಳವಡಿಸಿ ನೀರು ಸರಬರಾಜಿಗೆ ವ್ಯವಸ್ಥೆ ಮಾಡಿ.
-ಲೋ ವೋಲ್ಟೇಜ್ ವಿದ್ಯುತ್‌ ಸಮಸ್ಯೆ ಸರಿಪಡಿಸಿ.
– ಮೂಲ ಆವಶ್ಯಕತೆಯಾದ ಸಮರ್ಪಕ ರಸ್ತೆ ವ್ಯವಸ್ಥೆ ಕಲ್ಪಿಸಿ.

ಸಮಸ್ಯೆಗೆ ಶೀಘ್ರ ಪರಿಹಾರ
ಈ ಭಾಗದ ಜನರ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ತಾ.ಪಂ.ನಿಂದ ಕೊಳವೆಬಾವಿ ಕೊರೆಸಿ ನೀರೂ ಸಿಕ್ಕಿದೆ. ಆದರೆ ಜನರಿಗೆ ತಲುಪಿಸಲು ಆಗಿಲ್ಲ. ಎಲ್ಲ ವ್ಯವಸ್ಥೆಗೆ 7-8 ಲಕ್ಷ ರೂ. ಬೇಕಿದ್ದು, ಶಾಸಕರಲ್ಲಿ ವಿನಂತಿಸಿದ್ದೇವೆ. ಶೀಘ್ರ ಪರಿಹಾರ ಆಗಲಿದೆ.
– ರಾಧಾಕೃಷ್ಣ ಬೋರ್ಕರ್‌ ತಾ.ಪಂ. ಅಧ್ಯಕ್ಷರು, ಪುತ್ತೂರು

ಭರವಸೆ ಸಿಕ್ಕಿದೆ
ಕೊಳವೆಬಾವಿ ಕೊರೆಸಿ ನೀರು ಸಿಕ್ಕಿದರೂ ಉಳಿದ ವ್ಯವಸ್ಥೆಗಳಿಗೆ 6-7 ಲಕ್ಷ ರೂ. ಬೇಕು. ಗ್ರಾ.ಪಂ.ನಿಂದ ಇಷ್ಟೊಂದು ಹಣ ನೀಡಲು ಆಗದು. ಶಾಸಕರು, ಜಿ.ಪಂ. ಸದಸ್ಯರಿಗೆ ಮನವಿ ಮಾಡಿದ್ದು, ಭರವಸೆ ನೀಡಿದ್ದಾರೆ. ನೀತಿ ಸಂಹಿತೆ ಮುಗಿದ ತತ್‌ಕ್ಷಣ ಸ್ಪಂದಿಸುವುದಾಗಿ ತಿಳಿಸಿದ್ದಾರೆ.
– ಕೇಶವ ಗೌಡ ಕನ್ನಾಯ ಅಧ್ಯಕ್ಷರು, ಬಡಗನ್ನೂರು ಗ್ರಾ.ಪಂ.

-ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next