Advertisement

ಅರ್ಕಾವತಿ ನದಿ ಸೇತುವೆಗೆ ರಸ್ತೆಯೇ ಇಲ್ಲ

04:16 PM Jul 30, 2019 | Suhan S |

ರಾಮನಗರ: ನಗರದ ಮೂಲಕ ಹಾದು ಹೋಗಿರುವ ಅರ್ಕಾವತಿ ನದಿಗೆ ನಿರ್ಮಿಸಿರುವ 2 ಕಿರು ಸೇತುವೆಗಳಿಗೆ ಅಪ್ರೋಚ್ ರಸ್ತೆಗಳು ನಿರ್ಮಾಣವಾಗದೆ, ಶಾಪಗ್ರಸ್ತವಾಗಿ ಮುಂದುವರಿದಿದೆ! ರಾಜಕೀಯ ಇಚ್ಚಾಶಕ್ತಿ ಕೊರತೆ ಕಾರಣ ಎರಡೂ ಸೇತುವೆಗಳು ಪೂರ್ಣಗೊಂಡಿಲ್ಲ ಎಂಬ ದೂರು ನಾಗರಿಕರಿಂದ ಕೇಳಿ ಬರುತ್ತಿದೆ.

Advertisement

ನಗರದ ಛತ್ರದ ಬೀದಿಯಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಪಕ್ಕದ ರಸ್ತೆಯಲ್ಲಿ ಬೆಂಗಳೂರು- ಮೈಸೂರು ಹೆದ್ದಾರಿ ರಸ್ತೆಗೆ ಸಂಪರ್ಕ ಕಲ್ಪಿಸಲು ಅರ್ಕಾವತಿ ನದಿಗೆ ಸೇತುವೆ ಕಾಮಗಾರಿ ಪೂರ್ಣಗೊಳ್ಳಲು ಬರೋಬ್ಬರಿ 8 ವರ್ಷ ಬೇಕಾಯಿತು. ಆದರೆ, ಸೇತುವೆಗೆ ಅಪ್ರೋಚ್ ರಸ್ತೆ ನಿರ್ಮಾಣವಾಗದೇ ಸೇತುವೆ ಬಳಕೆಗೆ ಯೋಗವಾಗಿಲ್ಲ. ಆದರೆ, ಇತ್ತೀಚೆಗೆ ನಗರಸಭೆಯ ಕೆಲವು ಅಧಿಕಾರಿಗಳು ಕಟ್ಟಡ ತ್ಯಾಜ್ಯವನ್ನು ಸುರಿದು ದ್ವಿಚಕ್ರ ವಾಹನಗಳು ಮತ್ತು ಪಾದಚಾರಿಗಳು ಓಡಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ. ಆದರೆ, ಇದು ಅವೈಜ್ಞಾನಿಕವಾಗಿ ನಿರ್ಮಾಣವಾಗಿದ್ದು, ವಾಹನ ಚಾಲಕರು ಎಚ್ಚರ ತಪ್ಪಿದರೆ ಅನಾಹುತ ತಪ್ಪಿದ್ದಲ್ಲ.

ಯೋಜನೆ ಜಾರಿಗೆ ಇಚ್ಛಾಶಕ್ತಿ ಕೊರತೆ: ಹಾಲಿ ರಸ್ತೆ ಒತ್ತುವರಿ ಬಗ್ಗೆ ಕೆಲ ವರ್ಷಗಳು ತಗಾದೆ ಇತ್ತು. ಸದ್ಯ ಇದು ನಿವಾರಣೆ ಆಗಿದೆ. 73 ಲಕ್ಷ ರೂ. ವೆಚ್ಚದಲ್ಲಿ ಅಪ್ರೋಚ್ ರಸ್ತೆ ನಿರ್ಮಿಸಲು ನಗರಸಭೆಯ ಅಧಿಕಾರಿಗಳು ಯೋಜನೆ ಸಿದ್ಧಪಡಿಸಿದ್ದರು. ಇದಕ್ಕೆ ಬೇಕಾದ ಡಿಪಿಆರ್‌ಗೆ ತಾಂತ್ರಿಕ ಒಪ್ಪಿಗೆ ಸಿಕ್ಕಿದೆ. ಇನ್ನೇನಿದ್ದರು ಚುನಾಯಿತ ಪ್ರತಿನಿಧಿಗಳ ಒಪ್ಪಿಗೆ ಮಾತ್ರ. ನಗರಸಭೆಯಲ್ಲಿ ಚುನಾಯಿತ ಪುರಪಿತೃಗಳು ಚುನಾವಣೆಯಲ್ಲಿ ಆಯ್ಕೆಯಾಗಿ ಬರಬೇಕಾಗಿದೆ.

ಜಿಲ್ಲಾಧಿಕಾರಿಗಳು ಸದ್ಯ ನಗರಸಭೆಯ ಆಡಳಿತಾಧಿಕಾರಿಗಳು ಆಗಿದ್ದಾರೆ. ಹೀಗಾಗಿ ಸದರಿ ಯೋಜನೆಗೆ ಸ್ಥಳೀಯ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಹಸಿರು ನಿಶಾನೆ ತೋರಿಸಬೇಕಾಗಿದೆ. ನಗರಸಭೆಯ ಅಧಿಕಾರಿಗಳು ಅನುಮೋದನೆ ಪಡೆಯಲು ಪ್ರಯತ್ನ ನಡೆಸಿರುವುದಾಗಿ ಗೊತ್ತಾಗಿದೆ. ರಾಜ್ಯ ರಾಜಕಾರಣದಲ್ಲಾಗುತ್ತಿರುವ ಬೆಳವಣಿಗೆಗಳಿಂದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂಬ ಆರೋಪಗಳಿಗೆ ಸದರಿ ಸೇತುವೆಯ ಕಾಮಗಾರಿಯೂ ಒಂದು ಉದಾಹರಣೆ ಎಂದು ನಾಗರಿಕರು ಹರಿಹಾಯುತ್ತಿದ್ದಾರೆ.

ರಸ್ತೆ ನಿರ್ಮಿಸಲು ಸ್ಥಳದ ಕೊರತೆ: ನಗರದ ನಾಲಬಂದವಾಡಿಯಿಂದ ನ್ಯಾಯಾಲಯ ರಸ್ತೆಗೆ ಸಂಪರ್ಕ ಕಲ್ಪಿಸುವ ಸೇತುವೆಗೂ ಅಪ್ರೋಚ್ ರಸ್ತೆ ನಿರ್ಮಾಣವಾಗಿಲ್ಲ. ಇಲ್ಲಿ ಸ್ಥಳದ ಕೊರತೆ ಕಾರಣ ಅಪ್ರೋಚ್ ರಸ್ತೆ ನಿರ್ಮಾಣವಾಗಿಲ್ಲ ಎಂದು ಗೊತ್ತಾಗಿದೆ. 1994ರಲ್ಲಿ ಬೇಡಿಕೆ ಉದ್ಬವವಾಗಿ ಕೆಲ ವರ್ಷಗಳ ನಂತರ ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಯಿತಾದರು, ಪಿಲ್ಲರಗಳ ನಿರ್ಮಾಣ ನಂತರ ಕಾಮಗಾರಿ ಸ್ಥಗಿತವಾಯಿತು.

Advertisement

2011ರಲ್ಲಿ 8ನೇ ವಾರ್ಡ್‌ನ ನಗರಸಭಾ ಸದಸ್ಯರಾಗಿದ್ದ ಜೆ.ಮುಕುಂದರಾಜ್‌ ಕಾಳಜಿವಹಿಸಿ, ಸೇತುವೆ ಕಾಮಗಾರಿ ಪೂರ್ಣಗೊಳಿಸಿದರು. ಆದರೆ, ನಾಲಬಂದವಾಡಿ ಕಡೆಯ ಸೇತುವೆ ಬಳಿ ಇರುವುದೆಲ್ಲ ಖಾಸಗಿ ಸ್ಥಳ, ಅಪ್ರೋಚ್ ರಸ್ತೆಗೆ ಮೊದಲು ಸ್ಥಳ ಮಾಡಿಕೊಂಡು ನಂತರ ಸೇತುವೆ ನಿರ್ಮಿಸಬೇಕಿತ್ತು. ಇದು ಅಧಿಕಾರಿಗಳು ಮಾಡಿದ ಎಡವಟ್ಟು ಎಂಬುದು ಈ ಭಾಗದ ನಾಗರಿಕರ ದೂರು.

ನಾಲಬಂದವಾಡಿ ಸೇತುವೆಗೂ ಅಪ್ರೋಚ್ ರಸ್ತೆ ತತ್ಕಾಲಿಕವಾಗಿದ್ದು, ಹಲವಾರು ವರ್ಷಗಳಿಂದ ಈ ಸೇತುವೆಯನ್ನು ಜನರು ಬಳಸುತ್ತಿದ್ದಾರೆ. ಪಾದಚಾರಿಗಳ ಓಡಾಟಕ್ಕೆಂದು ನಿರ್ಮಾಣವಾಗಿರುವ ಈ ಸೇತುವೆಯ ಮೇಲೆ ದ್ವಿಚಕ್ರ ವಾಹನಗಳು ನಿರಂತರವಾಗಿ ಸಂಚರಿಸುತ್ತಿವೆ.

ಸ್ಥಳೀಯ ಶಾಸಕರು ಕಾಳಜಿವಹಿಸಿ ಈ ಎರಡೂ ಸೇತುವೆಗಳ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ, ಪಾದಚಾರಿಗಳು ಮತ್ತು ವಾಹನ ಸವಾರರು ಸುರಕ್ಷಿತವಾಗಿ ಈ ಸೇತುವೆಯನ್ನು ಬಳಕೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

 

● ಬಿ.ವಿ.ಸೂರ್ಯ ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next