Advertisement

ಅಮೂಲ್ಯ ಪರ ನಿಲ್ಲುವ ಪ್ರಶ್ನೆ ಇಲ್ಲವೇ ಇಲ್ಲ

11:26 PM Feb 23, 2020 | Team Udayavani |

ಬೆಂಗಳೂರು: ಅಮೂಲ್ಯ ಲಿಯೋನಾ ಪ್ರಕರಣದಲ್ಲಿ ಆಕೆಯ ಪರವಾಗಿ ನಿಲ್ಲುವ ಪ್ರಶ್ನೆಯೇ ಇಲ್ಲ. ರಾಜಕಾರಣವನ್ನು ಇತಿಮಿತಿಯಲ್ಲಿ ಮಾಡಬೇಕು. ದೇಶದ ವಿಚಾರ ಬಂದಾಗ ನಾವು ದೇಶಕ್ಕೆ ಆದ್ಯತೆ ನೀಡಬೇಕು. ನಮ್ಮ ದೇಶಕ್ಕೆ ಅಪಮಾನ ಮಾಡಿ ಬೇರೆ ದೇಶಕ್ಕೆ ಜೈಕಾರ ಹಾಕುವುದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

Advertisement

ಭಾನುವಾರ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ಕೂಡ ಅಂತಹ ವಿಷಯಗಳಿಗೆ ಪ್ರೋತ್ಸಾಹ ನೀಡುವುದಿಲ್ಲ. ಆದರೆ ಆ ಹೆಣ್ಣು ಮಗಳು ಏನು ಹೇಳಲು ಹೊರಟಿದ್ದಳು ಎಂಬುದನ್ನೂ ತಿಳಿದುಕೊಳ್ಳಬೇಕು. ಆಕೆ ಈ ಹಿಂದೆ ಒಂದು ಸಿದ್ಧಾಂತದ ವಿಚಾರವಾಗಿ ಮಾತನಾಡಿರುವುದನ್ನು ನೋಡಿದ್ದೇನೆ.

ಹೀಗಾಗಿ ಆಕೆ ಏನು ಹೇಳಲು ಹೋರಟಿದ್ದಳು ಎಂಬುದು ನಮಗೆ ಗೊತ್ತಿಲ್ಲ. ಈ ವಿಚಾರದಲ್ಲಿ ಆತುರಪಡುವುದು ಬೇಡ ಎಂದರು. ಸಿಎಎ ವಿರೋಧಿ ಪ್ರತಿಭಟನೆಗಳಿಗೆ ಕಾಂಗ್ರೆಸ್‌ ಕುಮ್ಮಕ್ಕು ಕಾರಣ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಸಿಎಎ ಕುರಿತ ವಿಚಾರವನ್ನು ಕಾಂಗ್ರೆಸ್‌ ಜನರಿಗೆ ಬಿಟ್ಟಿದೆ.

ಇದನ್ನು ವಿರೋಧಿಸುತ್ತಿರುವವರು ತಮ್ಮದೇ ಆದ ರೀತಿಯಲ್ಲಿ ವಿರೋಧ ಮಾಡುತ್ತಿದ್ದಾರೆ. ಈ ವಿಚಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಬೇರೆ ಬೇರೆ ರಾಷ್ಟ್ರಗಳೂ ಇದನ್ನು ಗಮನಿಸುತ್ತಿವೆ. ಈ ಕಾಯ್ದೆ ಜಾರಿ ನಂತರ ಆರ್ಥಿಕ ಕಡಿತಕ್ಕೆ ಅನೇಕ ರಾಷ್ಟ್ರಗಳಲ್ಲಿ ಚಿಂತನೆ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರಕ್ಕೆ ಗೊತ್ತಾಗಿದೆ ಎಂದರು.

ರಾಜಕೀಯದಲ್ಲಿ ಹಸ್ತಕ್ಷೇಪ ಸರಿಯಲ್ಲ: ಹೌಡಿ ಮೋದಿ ಕಾರ್ಯಕ್ರಮದ ಮೂಲಕ ಅಮೆರಿಕದಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮದೇ ಆದ ಪ್ರಚಾರ ಮಾಡಿದರು. ಆದರೆ ನಮ್ಮ ದೇಶದ ಪ್ರಧಾನಿಯಾಗಿ ಹೋಗಿದ್ದ ನರೇಂದ್ರ ಮೋದಿಯವರು ತಮ್ಮ ಭಾಷಣದ ಅಂತ್ಯದಲ್ಲಿ ಮುಂದಿನ ಬಾರಿ ಟ್ರಂಪ್‌ ಸರ್ಕಾರ ಎಂದು ಹೇಳಿದ್ದು ಸರಿಯಲ್ಲ.

Advertisement

ಅಲ್ಲಿ ಯಾವುದೇ ಪಕ್ಷದ ನಾಯಕರು ಅಧ್ಯಕ್ಷರಾದರೆ ನಾವು ಅವರನ್ನು ಅಮೆರಿಕ ಅಧ್ಯಕ್ಷರನ್ನಾಗಿ ನೋಡುತ್ತೇವೆ. ನಮ್ಮಲ್ಲಿ ಯಾವುದೇ ಪಕ್ಷದ ನಾಯಕರು ಪ್ರಧಾನಿಯಾದರೆ ಅವರು ಭಾರತದ ಪ್ರಧಾನಿಯಾಗಿ ನೋಡುತ್ತಾರೆ. ಹೀಗಾಗಿ ಒಂದು ದೇಶದ ಪ್ರಧಾನಿಯಾಗಿ ಮತ್ತೂಂದು ದೇಶದ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವುದು ನಮ್ಮ ಕರ್ತವ್ಯವಲ್ಲ. ಇದು ನಮ್ಮ ದೇಶದ ಚರಿತ್ರೆಯಲ್ಲೇ ದೊಡ್ಡ ಪೆಟ್ಟಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next