Advertisement

Cauvery ವಿಚಾರದಲ್ಲಿ ಕೇಂದ್ರ ಮಧ್ಯಸ್ಥಿಕೆ ವಹಿಸೋ ಪ್ರಶ್ನೆ ಬರುವುದಿಲ್ಲ: ಜೋಶಿ

05:34 PM Sep 22, 2023 | Team Udayavani |

ಹುಬ್ಬಳ್ಳಿ: ಕಾವೇರಿ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸೋ ಪ್ರಶ್ನೆ ಬರುವುದಿಲ್ಲ. ಕಾವೇರಿ ನೀರು ಹಂಚಿಕೆ ವಿಷಯ ವಿಚಾರದಲ್ಲಿ ರಾಜ್ಯ ಸರ್ಕಾರದಿಂದ ಆರಂಭದಿಂದಲೇ ತಪ್ಪು ಹೆಜ್ಜೆ ಇಟ್ಟಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.

Advertisement

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ಪ್ರಧಾನಿ ಮತ್ತು ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯ ಪ್ರಶ್ನೆ ಬರುವುದಿಲ್ಲ. ಇಷ್ಟರ ನಡುವೆಯೂ ನಾವು ಸಾಧ್ಯವಾದಷ್ಟು ಸಹಕಾರವನ್ನು ರಾಜ್ಯ ಸರ್ಕಾರಕ್ಕೆ ಕೊಡುತ್ತಿದ್ದೇವೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ 2500 ಕ್ಯೂಸೆಕ್ಸ್ ನೀರು ಬಿಡುವುದಾಗಿ ಹೇಳುವ ಅವಶ್ಯಕತೆ ಇದ್ದಿಲ್ಲ. ತಮಿಳುನಾಡು ಮತ್ತು ಕರ್ನಾಟಕದ ಮುಖ್ಯಮಂತ್ರಿಗಳು ಒಂದೆಡೆ ಕುಳಿತು ಚರ್ಚೆ ಮಾಡಬೇಕು. ರಾಜ್ಯದ ಎಲ್ಲಾ ಸಂಸದರು ಮತ್ತು ರಾಜ್ಯಸಭಾ ಸದಸ್ಯರು ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಿದ್ದೇವೆ. ಮುಂದೆಯೂ ರಾಜ್ಯ ಸರ್ಕಾರದ ಜೊತೆಗೆ ಇರಲಿದ್ದೇವೆ. ಸದ್ಯದ ನೀರಿನ ಪರಿಸ್ಥಿತಿಯ ಕುರಿತು ಸಮಗ್ರ ಅಧ್ಯಯನಕ್ಕಾಗಿ ಅಧಿಕಾರಿಗಳ ತಂಡ ಕಳುಹಿಸಿ ಕೊಡುವಂತೆ ಕೇಳಿದ್ದಾರೆ. ಅದನ್ನು ಕೇಂದ್ರ ಜಲಶಕ್ತಿ ಸಚಿವರಿಗೆ ಮನವರಿಕೆ ಮಾಡಿದ್ದೇವೆ. ಮತ್ತೊಮ್ಮೆ ಸದ್ಯದ ನೀರಿನ ಸಂಗ್ರಹದ ಅಧ್ಯಯನ ಮಾಡಲು ಹೇಳಿದ್ದೇವೆ. ಅದಕ್ಕೆ ಕೇಂದ್ರ ಸಚಿವರು ಸಹ ಒಪ್ಪಿಕೊಂಡಿದ್ದಾರೆ ಎಂದರು.

ಕಾವೇರಿ ಸೇರಿದಂತೆ ಯಾವುದೇ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಆಗಬಾರದು. ಈ ನಿಟ್ಟಿನಲ್ಲಿ ಸರ್ವ ರೀತಿಯ ಸಹಕಾರವನ್ನು ರಾಜ್ಯ ಸರ್ಕಾರಕ್ಕೆ ಕೊಟ್ಟಿದ್ದೇವೆ. ಆದರೆ ರಾಜ್ಯ ಸರ್ಕಾರ ಆರಂಭದಿಂದಲೂ ಎಡವುತ್ತ ಬಂದಿದೆ. ಆದಷ್ಟು ಬೇಗ ನಮ್ಮ ನೀರನ್ನು ನಾವು ಉಳಿಸಿಕೊಳ್ಳಬೇಕು ಎಂದರು.

ಕಾವೇರಿ ನೀರು ಹಂಚಿಕೆ ವಿಚಾರಕ್ಕೆ ಕೇಂದ್ರ ಸಚಿವ ಜೋಶಿ ರಾಜೀನಾಮೆ ನೀಡಬೇಕೆಂಬ ಸಚಿವ ಎಚ್. ಸಿ. ಮಹದೇವಪ್ಪ ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮಹದೇವಪ್ಪರು ಹಿಂದೊಂದು, ಮುಂದೊಂದು ಮಾತನಾಡುತ್ತಾರೆ. ನಾವೇನು ಸಹಕಾರ ಕೊಟ್ಟಿದ್ದೇವೆ ಅನ್ನುವುದನ್ನ ಡಿಸಿಎಂ ಡಿಕೆಶಿ ಅವರಿಗೆ ಕೇಳಲಿ. ತಮ್ಮ ಘಟಬಂಧನ್ ಉಳಿಸಿಕೊಳ್ಳುವುದಕ್ಕೆ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ. ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರವಿದೆ. ಆ ಸರ್ಕಾರ ಜೊತೆ ರಾಜ್ಯ ಕಾಂಗ್ರೆಸ್ ಸರ್ಕಾರದ ಒಳ್ಳೆಯ ನಂಟಿದೆ. ಐಎನ್ ಡಿಐಎ ಒಕ್ಕೂಟಕ್ಕಾಗಿ ಪರಸ್ಪರರು ಆಲಂಗಿಸಿಕೊಂಡಿದ್ದರು. ಅವರಿಬ್ಬರೂ ಪರಸ್ಪರ ಕುಳಿತು ಕಾವೇರಿ ಸಮಸ್ಯೆ ಸೌಹಾರ್ದತೆಯಿಂದ ಬಗೆಹರಿಸಿಕೊಳ್ಳಬಹುದು. ಆದರೆ ಅದನ್ನು ಇಬ್ಬರು ಮಾಡುತ್ತಿಲ್ಲ. ಸನಾತನ ಧರ್ಮದ ವಿಚಾರದಲ್ಲಿ ಅಸಭ್ಯವಾಗಿ ಮಾತನಾಡಿದಾಗಲು ಕಾಂಗ್ರೆಸ್ ಅದನ್ನು ಖಂಡಿಸುವ ಪ್ರಯತ್ನ ಮಾಡಲಿಲ್ಲ. ಎಲ್ಲ ರೀತಿಯ ಸಹಕಾರವನ್ನು ನಾವು ಕೊಡಲು ಬದ್ಧ ಎಂದರು.

ಚೈತ್ರಾಗೆ ಗರಿಷ್ಠ ಶಿಕ್ಷೆಯಾಗಲಿ
ಚೈತ್ರಾ ಕುಂದಾಪುರ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾರ್ಯಾರೋ ಯಾರದೋ ದೊಡ್ಡವರ ಹೆಸರು ಹೇಳಿ ಟೋಪಿ ಹಾಕಿರುತ್ತಾರೆ. ಅದನ್ನು ಒಂದು ಪಕ್ಷಕ್ಕೆ ಜೋಡಿಸುವುದು ಸರಿಯಲ್ಲ. ಅವರು ಪಕ್ಷದ ಸ್ಟಾರ್ ಪ್ರಚಾರಕಿ ಅಲ್ಲಾ. ಪ್ರಚಾರಕರು ಆಗುವುದಕ್ಕೆ ಪಕ್ಷದ ಪದಾಧಿಕಾರಿಗಳು ಆಗಿರಾಬೇಕು. ನಮ್ಮ ಪಕ್ಷಕ್ಕೂ ಅವರಿಗೂ ಸಂಬಂಧ ಇಲ್ಲಾ. ಅದರ ಬಗ್ಗೆ ತನಿಖೆ ಆಗುತ್ತಾ ಇದೆ. ಕಾಂಗ್ರೆಸ್ ಪಕ್ಷ ಈ ಬಗ್ಗೆ ತುಂಬಾ ಮಾತನಾಡುತ್ತಾ ಇದೆ. 2-3 ವರ್ಷಗಳ ಹಿಂದೆ ಆ ಪಕ್ಷದ ಮಾರ್ಗರೆಟ್ ಆಳ್ವಾ ಅವರು ಟಿಕೆಟ್ ಮಾರಲಾಗಿದೆ ಎಂದಿದ್ದರು. ಕಾರಣ ಕಾಂಗ್ರೆಸ್ ಪಕ್ಷವು ತನ್ನ ನಡವಳಿಕೆ ನೋಡಿಕೊಳ್ಳಲಿ. ಚೈತ್ರಾ ಕುಂದಾಪುರ ಬಗ್ಗೆ ಸಮಗ್ರ ತನಿಖೆ ಆಗಲಿ, ಗರಿಷ್ಠ ಶಿಕ್ಷೆ ಆಗಲಿ. ಕಾಂಗ್ರೆಸ್ ಪಕ್ಷದವರು ತಲೆತಲಾಂತರದಿಂದ ಟಿಕೆಟ್ ಮಾರಾಟ ಮಾಡುತ್ತಾ ಇದ್ದೀರಿ. 20,000ರೂ.ಕ್ಕಿಂತ ಹೆಚ್ಚು ಹಣ ವರ್ಗಾವಣೆ ಮಾಡಬಾರದು ಎಂಬ ಸರ್ಕಾರದ ಕಟ್ಟುನಿಟ್ಟಿನ ಕಾನೂನು ಇದೆ. ದುಡ್ಡು ಕೊಟ್ಟ ಉದ್ಯಮಿಗೆ ಬುದ್ದಿ ಬೇಡವಾ. ಚೈತ್ರಾ ಕುಂದಾಪುರಬಗ್ಗೆ ಯಾರಿಗೂ ಅನುಕಂಪ ಬರುವಂತಹ ಪ್ರಶ್ನೆನೇ ಬರುವುದಿಲ್ಲ. ಇಷ್ಟು ದುಡ್ಡು ಎಲ್ಲಿಂದ ಬಂತು. ಇದು ಗಂಭೀರ ವಿಷಯ. ರಾಜಕಾರಣದಲ್ಲೂ ಇದು ನಡೆದಿದೆ ಅಂತ ದೊಡ್ಡ ಸುದ್ದಿಯಾಗಿದೆ. ತನಿಖೆ ಮಾಡುವಂತಹ ವಿಶೇಷ ತಂಡ ಈ ಬಗ್ಗೆ ಸಮಗ್ರ ತನಿಖೆ ಮಾಡಬೇಕು ಎಂದರು.

Advertisement

ರಾಹುಲ್ ನಾಯಕನಲ್ಲ
ಮಹೀಳಾ ಮೀಸಲಾತಿ ಮಸೂದೆಯಲ್ಲಿ ಸ್ಪಷ್ಟತೆ ಇಲ್ಲ ಎಂಬ ರಾಹುಲ್ ಗಾಂಧಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿ ಏನನ್ನು ಓದುವುದಿಲ್ಲ. ಯಾರೋ ರಾಜಕೀಯ ಹೇಳಿಕೆ ಕೊಡಬೇಕು ಅಂದರೆ ಟ್ವಿಟರ್ ನೋಡಿ ಹೇಳಿಕೆ ಕೊಡುತ್ತಾರೆ. ಇದು ದೌರ್ಭಾಗ್ಯದ ಸಂಗತಿ. ಬಿಲ್ ನಲ್ಲಿ ಸಂಪೂರ್ಣವಾದ ಸ್ಪಷ್ಟತೆ ಇದೆ. ಮುಂದಿನ ದಿನಗಳಲ್ಲಿ ಇದು ವಾಸ್ತವ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಮಸೂದೆ ಬಗ್ಗೆ ವಿದೇಶಿ ನಿಯೋಗವು ಪ್ರಧಾನಿ ಮೋದಿಯಿಂದ ಮಾತ್ರ ಇಂತಹ ಕೆಲಸ ಸಾಧ್ಯ ಎಂದಿದೆ. ಕಾನೂನು ತಜ್ಞರು ಸಹ ಒಪ್ಪಿದ್ದಾರೆ. ರಾಹುಲ್ ಗಾಂಧಿಗೆ ಇದು ಅರ್ಥವಾಗಿಲ್ಲ ಅನಿಸುತ್ತದೆ ಎಂದರು.

ಮುತಾಲಿಕ್ ಗಡಿಪಾರು ಸರಿಯಲ್ಲ
ಶ್ರೀರಾಮ ಸೇನಾ ರಾಷ್ಟ್ರಾಧ್ಯಕ್ಷ ಪ್ರಮೋದ ಮುತಾಲಿಕ್ ಏನು ಭಾಷಣ ಮಾಡಿದ್ದಾರೋ ಗೊತ್ತಿಲ್ಲ. ಅವರ ವಿರುದ್ಧ ಏಕೆ ಪ್ರಕರಣ ದಾಖಲಿಸಿದ್ದಾರಂತೆ ಗೊತ್ತಿಲ್ಲ. ಆದರೆ ಒಮ್ಮೆಲೇ ಅವರನ್ನು ಗಡಿಪಾರು ಮಾಡಬೇಕೆಂಬುದು ಸರಿಯಲ್ಲ. ಮುತಾಲಿಕ್ ಗಿಂತ ಪ್ರಚೋದನಕಾರಿಯಾಗಿ ಬೇರೆ ಬೇರೆ ಸಮುದಾಯದವರು ಹೇಳಿಕೆ ನೀಡಿದ್ದಾರೆ. ಅಂಥವರ ಮೇಲೆ ಕೈಗೊಳ್ಳಲಾಗದ ಕ್ರಮ ಅವರ ವಿರುದ್ಧ ಯಾಕೆ? ಅವರ ವಿರುದ್ಧದ ಪ್ರಕರಣವನ್ನು ನಾವು ಒಪ್ಪುವುದಿಲ್ಲ ಎಂದರು.

ಡಿಜೆ ಹಾಕುತ್ತೇವೆ
ಬಿಜೆಪಿ ನ್ಯಾಯಯುತ ಹೋರಾಟ ಮಾಡಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಮಾಡಿದೆ. ಬಿಜೆಪಿ ಶಾಸಕರು ಪಾಲಿಕೆಯಲ್ಲಿ ಹೋರಾಟಕ್ಕೆ ಇಳಿಯದಿದ್ದರೆ ಅನುಮತಿ ಸಿಗುತ್ತಿರಲಿಲ್ಲ. ಈದ್ಗಾ ಮೈದಾನ ಯಾರದೋ ಆಸ್ತಿಯಲ್ಲ. ಈ ಮೈದಾನವನ್ನು ಯಾರು ಕೇಳುತ್ತಾರೋ ಅವರಿಗೆ ಕೊಡಲಿ. ಯಾರನ್ನು ತುಷ್ಟೀಕರಣ ಮಾಡೋಕೆ ನಿರ್ಬಂಧ ಹೇರುವುದು ಸರಿಯಲ್ಲ. ಅಂಜುಮನ್ ಸಂಸ್ಥೆಯವರು ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡಬಾರದು. ಅವರು ಏನು ಬೇಕಾದರೂ ಹೋರಾಟ ಮಾಡಲಿ, ಕಾನೂನು ನಮ್ಮ ಪರವಾಗಿದೆ. ಮುಂದೆಯೂ ನಾವು ಗಣೇಶನನ್ನು ಮೈದಾನದಲ್ಲಿ ಕುಳ್ಳರಿಸುತ್ತೇವೆ. ಇದನ್ನು ಕೇಳೋಕೆ ಯಾರಿಗೂ ಅಧಿಕಾರವಿಲ್ಲ. ಸರ್ಕಾರ ಎಚ್ಚರದಿಂದರಬೇಕು. ಗಣೇಶ ವಿಸರ್ಜನೆ ವೇಳೆ ಹಲವಾರು ನಿಬಂಧನೆಗಳ ವಿಚಾರವಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅನಗತ್ಯ ನಿಯಮಗಳನ್ನು ಹೇರುತ್ತಿದೆ. ಸೌಂಡ್ ಸಿಸ್ಟಮ್, ಡಿಜೆಗೆ ಅವಕಾಶ ನೀಡಲ್ಲ, ಇಂತಿಷ್ಟು ಸಮಯದಲ್ಲಿ ವಿಸರ್ಜನೆ ಮಾಡಬೇಕು ಅಂದರೆ ನಡೆಯುವುದಿಲ್ಲ. ಅಧಿಕಾರಿಗಳು ಈ ರೀತಿ ಮಾಡಿದರೆ ನಾವು ಹೋರಾಟಕ್ಕೆ ಇಳಿಯಬೇಕಾಗುತ್ತದೆ. ಡಿಜೆ ಹಾಕಿದವರ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಲಿ ಹಾಗೂ ಸೀಜ್ ಮಾಡಲಿ ಆಗ ನಾವು ನೋಡಿಕೊಳ್ಳುತ್ತೇವೆ. ಶಾಂತಿಯುತವಾಗಿ ಆಚರಿಸುವಂತೆ ಅಧಿಕಾರಗಳ ಪರವಾಗಿ ಮನವಿ ಮಾಡಿದ್ದೇನೆ. ಆದರೆ ಅನಗತ್ಯ ನಿರ್ಬಂಧಗಳನ್ನು ಹಾಕುವುದಕ್ಕೆ ಹೋಗಬೇಡಿ. ಕ್ರಮ ಕೈಗೊಳ್ಳುತ್ತೇವೆ ಎನ್ನುವ ಧಮ್ಕಿ ನಡೆಯುವುದಿಲ್ಲ ಎಂದು ಕೇಂದ್ರ ಸಚಿವ ಜೋಶಿ ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next