Advertisement

ಭಯೋತ್ಪಾದನೆಯಲ್ಲಿ ರಾಜಕೀಯದ ಬೇಳೆ ಬೇಯಿಸುವುದು ಬೇಡ

02:02 AM Jan 16, 2020 | Sriram |

ದೇವಿಂದರ್‌ ಸಿಂಗ್‌ ಪ್ರಕರಣಕ್ಕೂ ಇದೀಗ ಕಾಂಗ್ರೆಸ್‌, ಧರ್ಮದ ಬಣ್ಣ ಬಳಿಯುವ ಮೂಲಕ ರಾಜಕೀಯ ಪಕ್ಷಗಳ ನಡುವೆ ವಾಕ್ಸಮರಕ್ಕೆ ನಾಂದಿ ಹಾಡಿದೆ.

Advertisement

ಜಮ್ಮು – ಕಾಶ್ಮೀರದ ಪೊಲೀಸ್‌ ಅಧಿಕಾರಿ ದೇವಿಂದರ್‌ ಸಿಂಗ್‌ ಉಗ್ರರಿಗೆ ಆಶ್ರಯ ನೀಡಿ ಬಂಧಿಲ್ಪಟ್ಟ ಪ್ರಕರಣಕ್ಕೂ ಇದೀಗ ಕಾಂಗ್ರೆಸ್‌ ಜಾತಿ, ಧರ್ಮದ ಬಣ್ಣ ಬಳಿಯುವ ಮೂಲಕ ರಾಜಕೀಯ ಪಕ್ಷಗಳ ನಡುವೆ ವಾಕ್ಸಮರಕ್ಕೆ ನಾಂದಿ ಹಾಡಿದೆ. ಭಯೋತ್ಪಾದನೆ, ಉಗ್ರರ ದಾಳಿ ವಿಚಾರದಲ್ಲಿ ರಾಜಕೀಯ ಪಕ್ಷಗಳು ಇಂತಹ ವರಸೆಯನ್ನು ಮುಂದುವರಿಸಿಕೊಂಡು ಬಂದಿವೆ. ಅದು ಇತ್ತೀಚೆಗೆ ನಡೆದ ಪುಲ್ವಾಮಾ ದಾಳಿಯಾಗಲಿ, ಉರಿ, ಪಠಾಣ್‌ಕೋಟ್‌ ಸೆಕ್ಟರ್‌ ಮೇಲೆ ದಾಳಿ ವಿಚಾರದಲ್ಲಿ ಪರ, ವಿರೋಧ ವ್ಯಕ್ತವಾಗಿದ್ದವು. ಆದರೆ ದೇಶದ ಭದ್ರತೆ, ಗುಪ್ತಚರ ಇಲಾಖೆ, ಸೇನೆ ವಿಚಾರದಲ್ಲಿ ರಾಜಕೀಯ ಪಕ್ಷಗಳು ಜವಾಬ್ದಾರಿಯುತ ವಾಗಿ ನಡೆದುಕೊಳ್ಳಬೇಕಾದ ಅಗತ್ಯವಿದೆ.

ದೇವಿಂದರ್‌ ಸಿಂಗ್‌ ಬಂಧನದ ವಿಚಾರದಲ್ಲಿ ಪುಲ್ವಾಮಾ ದಾಳಿ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಬೇಕೆಂದು ಕಾಂಗ್ರೆಸ್‌ ಹೇಳಿದೆ. ಆದರೆ ಸಿಂಗ್‌ನ್ನು ಜಮ್ಮು-ಕಾಶ್ಮೀರ ಪೊಲೀಸರು ಬಂಧಿಸುವ ಮೂಲಕ ಸಂಭಾವ್ಯ ಅನಾಹುತ ವನ್ನು ತಪ್ಪಿಸಿದ್ದಾರೆ. ಇದು ಮಾತ್ರವಲ್ಲ ಉದ್ಯಾನನಗರಿ ಬೆಂಗಳೂರಿನಲ್ಲಿ ನಾಲ್ಕು ಉಗ್ರಗಾಮಿ ಸಂಘಟನೆಗಳು ಆತ್ಮಾಹುತಿ ದಾಳಿಗೆ ನಡೆಸಿರುವ ಸಂಚನ್ನು ಚೆನ್ನೈಯ ಕ್ಯು ಬ್ರಾಂಚ್‌, ದಿಲ್ಲಿ ಪೊಲೀಸರು ಹಾಗೂ ಬೆಂಗಳೂರಿನ ಸಿಸಿಬಿ ಪೊಲೀಸರ ಜಂಟಿ ಕಾರ್ಯಾಚರಣೆ ಮೂಲಕ ವಿಫ‌ಲಗೊಳಿಸಿದ್ದಾರೆ.

ಚಾಮರಾಜನಗರದ ಗುಂಡ್ಲುಪೇಟೆಯಲ್ಲಿಯೂ ಕಾರ್ಯಾಚರಣೆ ನಡೆಸುವ ಮೂಲಕ ಶಂಕಿತ ಇಬ್ಬರು ಉಗ್ರರನ್ನು ಬಂಧಿಸಿದ್ದಾರೆ. ಇಂತಹ ವಿಚಾರದಲ್ಲಿ ಧರ್ಮವನ್ನು ತೂರಿಸುವ ಮುಖೇನ ಸಾರ್ವಜನಿಕವಾಗಿ ದಿಕ್ಕುತಪ್ಪಿಸುವ ಹೇಳಿಕೆ ಅಕ್ಷಮ್ಯವಾದದ್ದು. ಅಷ್ಟೇ ಅಲ್ಲ ದೇಶದ ಪ್ರತಿಷ್ಠಿತ ಗುಪ್ತಚರ ಪಡೆರಾ ಸೇರಿದಂತೆ ರಾಜ್ಯದ ಗುಪ್ತಚರ ಇಲಾಖೆ ತಮ್ಮದೇ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುತ್ತದೆ. ಭದ್ರತಾ ವೈಫ‌ಲ್ಯ, ಉಗ್ರರಿಗೆ ನೆರವು, ಆಶ್ರಯ ನೀಡುವುದು ಅಕ್ಷಮ್ಯ ಅಪರಾಧ. ಇವೆಲ್ಲದರ ನಡುವೆ ಪ್ರತಿಯೊಂದು ವಿಚಾರದಲ್ಲಿಯೂ ತಗಾದೆ ತೆಗೆಯುವುದು ಎಷ್ಟು ಸಮಂಜಸ ಎಂಬ ಬಗ್ಗೆ ವಿಪಕ್ಷಗಳು ವಿಮರ್ಶೆ ಮಾಡಿಕೊಳ್ಳಬೇಕಾಗಿದೆ.

2018ರಲ್ಲಿ 748 ಭಯೋತ್ಪಾದಕ ಸಂಬಂಧಿ ಘಟನೆಗಳು ನಡೆದಿದ್ದು, 350 ಭಾರತೀಯರು ಪ್ರಾಣ ತೆತ್ತಿದ್ದಾರೆ, 540 ಜನರು ಗಾಯಗೊಂಡಿದ್ದಾರೆ. ಜಾಗತಿಕ ಚಿಂತಕರ ಚಾವಡಿಯ ಪ್ರಕಾರ ಭಾರತ ಭಯೋತ್ಪಾದನೆ ಆತಂಕ ಎದುರಿಸುವ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿದೆ. ಉಗ್ರರ ವಿಧ್ವಂಸಕ ಸಂಚಿನ ದಾಳಿಯಿಂದ 2001ರಿಂದ ಈವರೆಗೆ 8 ಸಾವಿರಕ್ಕೂ ಅಧಿಕ ಭಾರತೀಯರು ಸಾವನ್ನಪ್ಪಿದ್ದಾರೆ.
ದೇಶದ ಮುಕುಟ ಮಣಿಯಂತಿರುವ ಜಮ್ಮು-ಕಾಶ್ಮೀರ ಸತತವಾಗಿ ಭಯೋತ್ಪಾದನೆಯ ಅಟ್ಟಹಾಸಕ್ಕೆ ನಲುಗಿ ಹೋಗಿದೆ. ಹಿಜ್ಬುಲ್‌ ಮುಜಾಹಿದೀನ್‌, ಜೈಶ್‌ – ಎ – ಮೊಹಮ್ಮದ್‌ ಹಾಗೂ ಲಷ್ಕರ್‌ – ಎ – ತೊಯ್ಬಾದಂತಹ ಉಗ್ರಗಾಮಿ ಸಂಘಟನೆಗಳು 2018ರಲ್ಲಿ ನಡೆಸಿದ 321 ದಾಳಿಗೆ 123 ಜನರು ಬಲಿಯಾಗಿದ್ದಾರೆ. 2014ರಲ್ಲಿ ಭಯೋತ್ಪಾದಕ ದಾಳಿ ಮಿತಿ ಮೀರಿತ್ತು. 2019ರ ಜಾಗತಿಕ ಭಯೋತ್ಪಾದಕ ಸೂಚಿ ಪ್ರಕಾರ ವಿಶ್ವಾದ್ಯಂತ ನಡೆದ ಉಗ್ರರ ದಾಳಿಗೆ 33,555 ಮಂದಿ ಸಾವನ್ನಪ್ಪಿದ್ದರು.

Advertisement

ಇಂತಹ ವಿಧ್ವಂಸಕ, ಉಗ್ರರ ಕೃತ್ಯಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ದೇಶದ ಗುಪ್ತಚರ ಇಲಾಖೆ ಮಾಹಿತಿ ಕಲೆ ಹಾಕಿ ಶಂಕಿತರನ್ನು ಬಂಧಿಸುವ ಕಾರ್ಯಾಚರಣೆಗೆ ಮುಂದಾಗಿ ರುವುದರಿಂದಲೇ ಸಾಕಷ್ಟು ದಾಳಿ, ಸಾವು-ನೋವು ತಪ್ಪಿದೆ. ಅದರ ಪರಿಣಾಮ ಎಂಬಂತೆ 2019ರಲ್ಲಿ ಉಗ್ರರ ದಾಳಿ ಪ್ರಕರಣ ಇಳಿಕೆ ಕಂಡಿದ್ದಲ್ಲದೇ ಸಾವಿನ ಪ್ರಮಾಣ 15,952ಕ್ಕೆ ಕುಸಿತವಾಗಿದೆ. ಛತ್ತೀಸ್‌ಗಢದಲ್ಲಿ ಮಾವೋವಾದಿಗಳ ಅಟ್ಟಹಾಸದ ಪರಿಣಾಮ 2018ರಲ್ಲಿ 123 ಅಮಾಯಕರು ಸಾವನ್ನಪ್ಪಿದ್ದಾರೆ. ಒಂದೆಡೆ ಉಗ್ರರ ದಾಳಿ, ಮತ್ತೂಂದೆಡೆ ನಕ್ಸಲೀಯರ ದಾಳಿಯನ್ನು ತಡೆಗಟ್ಟಬೇಕಾಗಿರುವುದು ತೀರಾ ಅಗತ್ಯ. ಇದರ ಜತೆಗೆ ಉಗ್ರಗಾಮಿ ಸಂಘಟನೆ, ಮಾವೋ ವಾದಿ ಸಂಘಟನೆಯತ್ತ ಯುವ ಸಮೂಹ ಆಕರ್ಷಿತರಾಗ ದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿಯೂ ಇದೆ.

ಮಾವೋವಾದಿ, ಉಗ್ರಗಾಮಿ ಸಂಘಟನೆಯಂತಹ ವಿಧ್ವಂಸಕ ಕೃತ್ಯಗಳಲ್ಲಿ ತೊಡಗುವವರನ್ನು ಬಹಿರಂಗವಾಗಿ, ಪರೋಕ್ಷವಾಗಿ ಸಮರ್ಥಿಸಿಕೊಳ್ಳುತ್ತಿರುವುದು ದುರಂತವಾ ಗಿದೆ. ಇಂತಹ ಸಮಾಜಘಾತುಕ, ದೇಶದ್ರೋಹಿ ಕೃತ್ಯದಲ್ಲಿ ತೊಡಗಿದ್ದವರ ಬಂಧನದ ವಿಚಾರದಲ್ಲಿ ರಾಜಕೀಯ ಕೆಸರೆರಚಾಟ ನಡೆಸುವ ಮುನ್ನ ಉಗ್ರರನ್ನು ಹೆಡೆಮುರಿ ಕಟ್ಟುವಲ್ಲಿ ಶ್ರಮಿಸುತ್ತಿರುವ ಪೊಲೀಸ್‌ ಮತ್ತು ಗುಪ್ತಚರ ಇಲಾಖೆಗೆ ನೈತಿಕ ಸ್ಥೈರ್ಯ ತುಂಬಲು ಮುಂದಾಗಬೇಕಾಗಿದೆ ಎಂಬುದನ್ನು ಮನಗಾಣಲಿ.

Advertisement

Udayavani is now on Telegram. Click here to join our channel and stay updated with the latest news.

Next