Advertisement

ಕಾಶ್ಮೀರ ನಿರ್ಧಾರಗಳ ಬಗ್ಗೆ ರಾಜಕೀಯ ಬೇಡ

10:00 AM Jul 31, 2019 | Team Udayavani |

ಜಮ್ಮು ಮತ್ತು ಕಾಶ್ಮೀರಕ್ಕೆ ಹತ್ತು ಸಾವಿರ ಹೆಚ್ಚುವರಿಯಾಗಿ ಸೇನಾ ಸಿಬ್ಬಂದಿ ನಿಯೋಜನೆ ಮಾಡುವ ಕೇಂದ್ರ ಸರ್ಕಾರದ ನಿರ್ಧಾರ ಅಲ್ಲಿನ ಪ್ರತ್ಯೇಕತಾವಾದಿ ನಾಯಕರಿಗೆ ಕಣ್ಣು ಕೆಂಪು ಮಾಡಿದೆ. ಇನ್ನೇನು ಹದಿನೈದು ದಿನಗಳಲ್ಲಿ ಅಮರನಾಥ ಯಾತ್ರೆ ಮುಕ್ತಾಯವಾಗಲಿರುವಂತೆಯೇ ವಿಧಾನಸಭೆ ಚುನಾವಣೆಗೆ ಸಿದ್ಧತೆ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಪ್ರಕಟವಾಗಿರುವ ವರದಿಗಳ ಪ್ರಕಾರ ಈ ವರ್ಷದ ಅಂತ್ಯಕ್ಕೆ ಅಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಹೀಗಾಗಿ, ಅಲ್ಲಿಗೆ ಮುಂಚಿತವಾಗಿಯೇ ಹೆಚ್ಚುವರಿ ಪಡೆಗಳ ರವಾನೆ ಆಗಲೇಬೇಕಾಗಿದೆ. ಇದರ ಜತೆಗೆ ಸೋಮವಾರ ಕಾಶ್ಮೀರ ಕಣಿವೆ ವ್ಯಾಪ್ತಿಯಲ್ಲಿರುವ ಎಲ್ಲಾ ಆಯ್ದ ಧಾರ್ಮಿಕ ಕೇಂದ್ರಗಳ ಮೇಲೆ ನಿಗಾ ಇರಿಸುವಂತೆ ಮತ್ತು ಮಾಹಿತಿ ಸಂಗ್ರಹಿಸುವಂತೆ ಪೊಲೀಸರಿಗೆ ಆದೇಶ ನೀಡಿರುವುದು ಮಹತ್ವ ಪಡೆದಿದೆ. ಈ ಬೆಳವಣಿಗೆ ಬಗ್ಗೆ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ನಿರೀಕ್ಷೆಯಂತೆಯೇ ಪ್ರಬಲ ಆಕ್ಷೇಪ ಮಾಡಿದ್ದಾರೆ. ಜು.25ರಂದು ಹೆಚ್ಚುವರಿ ಭದ್ರತಾಪಡೆಗಳನ್ನು ರವಾನೆ ಮಾಡಿರುವುದಕ್ಕೇ ಅವರು ಆಕ್ಷೇಪಿಸಿದ್ದಾಗ ಇನ್ನು ಧಾರ್ಮಿಕ ಕೇಂದ್ರಗಳ ಬಗ್ಗೆ ಮಾಹಿತಿ ನೀಡುವ ಆದೇಶಕ್ಕೆ ನಿರೀಕ್ಷೆಯಂತೆಯೇ ಟೀಕೆಯ ಮಾತುಗಳು ಸಹಜ. ಇಲ್ಲಿ ಟೀಕೆ-ಟಿಪ್ಪಣಿಗಳಿಗಿಂತ ಹೆಚ್ಚಾಗಿ ಬೇಕಾಗಿರುವುದು ಸಹಕಾರದ ಹಸ್ತ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ

Advertisement

ಸರ್ಕಾರವೇ ಇರಬಹುದು. ಆದರೆ ದಶಕಗಳಿಂದ ಕಗ್ಗಂಟಾಗಿಯೇ ಇರುವ ಕಾಶ್ಮೀರ ವಿಚಾರ ಹಾಗೆಯೇ ಉಳಿಯದಂತೆ ಇರಲು ಎಲ್ಲ ರಾಜಕೀಯ ಪಕ್ಷಗಳು ನೆರವಾಗಬೇಕಾಗಿದೆ. ಸಂವಿಧಾನದಲ್ಲಿ ಉಲ್ಲೇಖೀತವಾಗಿರುವ 35 ಎ, 370 ವಿಧಿ ರದ್ದು ಮಾಡುವುದರ ಬಗ್ಗೆ ಸಹಮತದ ಮಾತುಗಳು ಬೇಕಾಗಿವೆ. ಏಕೆಂದರೆ ಆ ಎರಡು ವಿಚಾರಗಳು ಜಾರಿಯಲ್ಲಿದ್ದರೂ ಕೂಡ ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ನಿರೀಕ್ಷಿತ ಪ್ರಗತಿ ಇದುವರೆಗೆ ಏನೂ ಆಗಿಲ್ಲವೆನ್ನುವುದು ಹಗಲಿನಷ್ಟೇ ಸತ್ಯ.

ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರಕ್ಕೆ ಎರಡನೇ ಅವಧಿ ಶುರುವಾಗಿ ಅರವತ್ತು ದಿನಗಳು ಕಳೆದಿವೆಯಷ್ಟೇ. ಈ ಅವಧಿಯಲ್ಲಿ ದೇಶದ ಮುಕುಟ ಪ್ರಾಯವಾಗಿರುವ ರಾಜ್ಯದ ಪರಿಸ್ಥಿತಿ ಸುಧಾರಣೆಗೆ ಏನೋ ಮಹತ್ವದ ಹೆಜ್ಜೆಗಳನ್ನು ಆರಂಭಿಸಿದೆ.ಲೋಕಸಭೆ ಚುನಾವಣೆ ಪ್ರಚಾರದ ವೇಳೆ 35ಎ, 370ನೇ ವಿಧಿ ರದ್ದು ಮಾಡುವ ಬಗ್ಗೆ ಬಿಜೆಪಿ ವಾಗ್ಧಾನ ನೀಡಿದೆಯಾದರೂ,ಏಕಾಏಕಿ ಅದನ್ನು ಕೈಗೊಳ್ಳುವುದು ಸಾಧ್ಯವಿಲ್ಲ ಎನ್ನುವುದು ಆ ಪಕ್ಷಕ್ಕೂ ಅರಿವು ಇದೆ. ಹೆಚ್ಚುವರಿ ಭದ್ರತಾಪಡೆಗಳನ್ನು ರವಾನೆ ಮಾಡಿರುವುದು ಮತ್ತು ಧಾರ್ಮಿಕ ಕೇಂದ್ರಗಳ ಮೇಲೆ ನಿಗಾ ಮತ್ತು ಮಾಹಿತಿ ಸಂಗ್ರಹಣೆಗೆ ಆದೇಶ ನೀಡಿರುವುದರಿಂದ ಸಹಜವಾಗಿಯೇ ಆಕ್ರೋಶ ವ್ಯಕ್ತವಾಗಿದೆ. ನ್ಯಾಷನಲ್‌ ಕಾನ್ಫರೆನ್ಸ್‌ನ ನಾಯಕ ಡಾ.ಫಾರೂಕ್‌ ಅಬ್ದುಲ್ಲಾ ಕೂಡ ಈ ಬೆಳವಣಿಗೆ ಬಗ್ಗೆ ಆಕ್ಷೇಪ ಮಾಡಿದ್ದಾರೆ. ಇತ್ತೀಚೆಗಷ್ಟೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೊವಾಲ್‌ ಕಣಿವೆ ರಾಜ್ಯಕ್ಕೆ ಭೇಟಿ ನೀಡಿ ಅಲ್ಲಿ ತಾಜಾ ಪರಿಸ್ಥಿತಿ ಬಗ್ಗೆ ಖುದ್ದು ಮಾಹಿತಿ ಪಡೆದುಕೊಂಡಿದ್ದರು.

ಈ ಬೆಳವಣಿಗೆಗೆ ಪೂರಕವಾಗಿ ಮಂಗಳವಾರ ಸಂವಿಧಾನದ 370ನೇ ವಿಧಿ ರದ್ದಾಗಿದೆ ಎಂಬ ವದಂತಿ ಈ ರಾಜ್ಯದಲ್ಲಿ ಹರಡಿದೆ. ಅದಕ್ಕೆ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಸ್ಪಷ್ಟನೆಯನ್ನೂ ನೀಡಿ ಜಮ್ಮು ಮತ್ತು ಕಾಶ್ಮೀರ ನಿಟ್ಟಿನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅದಕ್ಕೆ ಅವರು ನೀಡಿದ ಉತ್ತರ ಗಮನಾರ್ಹವಾಗಿದೆ. “ಶ್ರೀನಗರದ ಲಾಲ್‌ಚೌಕದಲ್ಲಿ ಯಾರೋ ಸೀನುತ್ತಾರೆ. ರಾಜಭವನಕ್ಕೆ ಮಾಹಿತಿ ಅದು ಅಲ್ಲಿ ಬಾಂಬ್‌ ಸ್ಫೋಟವಾಗಿದೆ ಎಂಬಂತೆ ಇರುತ್ತದೆ’ ಎಂದು ಅವರು ಹೇಳಿದ್ದು ಕಾಶ್ಮೀರದಲ್ಲಿ ವದಂತಿ ಯಾವ ರೀತಿಯಲ್ಲಿ ಪ್ರಬಲವಾಗಿ ಬೇರೂರಿದೆ ಎನ್ನುವದನ್ನು ತೋರಿಸುತ್ತದೆ. ಇದೇ ಕಾರಣಕ್ಕಾಗಿಯೇ ಅಲ್ಲಿ ಯಾವುದೇ ಎನ್‌ಕೌಂಟರ್‌ ನಡೆದು ಗಲಾಟೆ ನಡೆದಾಗ ಮೊಬೈಲ್‌ ಇಂಟರ್‌ನೆಟ್‌ ಸೇವೆ ರದ್ದು ಮಾಡುತ್ತಾರೆ. ಆಡಳಿತ ನಡೆಸುವ ವಿಭಾಗಕ್ಕೆ ಜನರ ಗುಂಪನ್ನು ನಿಯಂತ್ರಿಸಲು ಸಾಧ್ಯವಾದರೂ, ವದಂತಿಗಳಿಗೆ ಕಡಿವಾಣ ಹಾಕಲು ಅಸಾಧ್ಯವೇ. ಹೀಗಾಗಿ ಜಮ್ಮು ಮತ್ತು ಕಾಶ್ಮೀರ ವಿಚಾರ ನಿಟ್ಟಿನಲ್ಲಿ ಕೇಂದ್ರ ನಿರ್ಣಯಗಳಿಗೆ ಬೆಂಬಲ ನೀಡುವುದು ಎಲ್ಲಾ ರಾಜಕೀಯ ಪಕ್ಷಗಳ ಆದ್ಯ ಕರ್ತವ್ಯ.

Advertisement

Udayavani is now on Telegram. Click here to join our channel and stay updated with the latest news.

Next