Advertisement

ಹೆಲ್ಮೆಟ್-ಸೀಟ್ಬೆಲ್ಟ್ ಹಾಕದಿದ್ದರೆ ಇಂಧನ ಸಿಗಲ್ಲ

10:51 AM Sep 24, 2019 | Suhan S |

ಬಾಗಲಕೋಟೆ: ಬೈಕ್‌ ಸವಾರರು ಹೆಲ್ಮೆಟ್‌ ಹಾಕದಿದ್ದರೆ ವಿವಿಧ ನಾಲ್ಕು ಚಕ್ರದ ವಾಹನ ಸವಾರರು ಸೀಟ್‌ ಬೆಲ್ಟ್ ಹಾಕದಿದ್ದರೆ ಇನ್ನು ಮುಂದೆ ಪೆಟ್ರೋಲ್‌, ಡಿಸೇಲ್‌ ಸಿಗುವುದಿಲ್ಲ. ಹೌದು, ಇಂತಹ ನಿರ್ಧಾರವನ್ನು ಜಿಲ್ಲಾ ಪೊಲೀಸ್‌ ಇಲಾಖೆ ಹಾಗೂ ಜಿಲ್ಲೆಯ ಪೆಟ್ರೋಲ್‌ ಬಂಕ್‌ ಮಾಲೀಕರು ಜಂಟಿಯಾಗಿ ನಿರ್ಧಾರ ಕೈಗೊಂಡಿದ್ದಾರೆ.

Advertisement

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ ಸೋಮವಾರ ನಡೆದ ಪೆಟ್ರೋಲ್‌ ಪಂಪ್‌ ಮಾಲಿಕರು, ಪೊಲೀಸ್‌ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ಒಮ್ಮತದ ನಿರ್ಧಾರ ಕೈಗೊಂಡಿದ್ದು, ಇದು ಸೆ. 27ರಿಂದ ಜಿಲ್ಲೆಯಾದ್ಯಂತ ಜಾರಿಗೊಳ್ಳಲಿದೆ. ಸಭೆಯಲ್ಲಿ ಎಸ್ಪಿ ಲೋಕೇಶ ಜಗಲಾಸರ ಮಾತನಾಡಿ, ಬೈಕ್‌ ಸವಾರರು ಹೈಲ್ಮೆಟ್‌ ಧರಿಸುವುದು, ಕಾರು ಚಾಲಕರು ಸೀಟ್‌ ಬೆಲ್ಟ್ ಹಾಕುವುದು ಧರಿಸುವುದು ಕಡ್ಡಾಯಗೊಳಿಸಲಾಗಿದೆ.

ಹೆಲ್ಮೆಟ್‌ ಹಾಗೂ ಸೀಟ್‌ ಬೆಲ್ಟ್ ಧರಿಸಿದೇ ಬರುವ ವಾಹನಗಳಿಗೆ ಇಂಧನ ಹಾಕಬಾರದು. ಅಲ್ಲದೇ ಎಲ್ಲ ಪೆಟ್ರೋಲ್‌ ಪಂಪ್‌ಗ್ಳಲ್ಲಿ ಪೊಲೀಸರನ್ನು ನೇಮಿಸಿ, ಪೆಟ್ರೋಲ್‌ ಪಂಪ್‌ನಲ್ಲಿಯೇ ದಂಡ ವಿಧಿಸಲಾಗುವುದು. ಇದಕ್ಕೆ ಎಲ್ಲ ಪಂಪ್‌ಗ್ಳ ಮಾಲಿಕರು ಸಹಕಾರ ಕೊಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪೆಟ್ರೋಲ್‌ ಬಂಕ್‌ ಗಳ ಮಾಲೀಕರು ಒಪ್ಪಿಗೆ ನೀಡಿದರು.

ಸಂಚಾಯ ನಿಯಮ ಕಡ್ಡಾಯ ಪಾಲನೆ: ಬಾಗಲಕೋಟೆ ನಗರ ಪೊಲೀಸ್‌ ಠಾಣೆಯಲ್ಲಿ ಆಟೋ ಮತ್ತು ಟಂಟಂ ಚಾಲಕರ ಸಭೆ ನಡೆಸಿ ಎಸ್ಪಿ ಲೋಕೇಶ, ಸಂಚಾರ ನಿಯಮ ಕಡ್ಡಾಯ ಪಾಲನೆ ಕುರಿತು ಸೂಚಿಸಿದರು. ಸಭೆಯಲ್ಲಿ ಸುಮಾರು 500ಕ್ಕೂ ಹೆಚ್ಚು ಟಂಟಂ, ಆಟೋ ಚಾಲಕರು ಪಾಲ್ಗೊಂಡಿದ್ದರು. ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಬಸವಣೆಪ್ಪ ಹರತಿ, ಡಿವೈಎಸ್ಪಿ ಎಸ್‌.ಬಿ. ಗಿರೀಶ, ಸಿಪಿಐ ಶ್ರೀಶೈಲ ಗಾಬಿ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next