Advertisement

ಸಾರ್ವಜನಿಕ ಆಸ್ಪತ್ರೆಯಲ್ಲಿ ಸೌಲಭ್ಯ ಮರೀಚಿಕೆ: ಪರದಾಟ

09:38 PM Aug 04, 2019 | Lakshmi GovindaRaj |

ಶಿಡ್ಲಘಟ್ಟ: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರೇಷ್ಮೆ ನಗರವೆಂದು ಖ್ಯಾತಿ ಹೊಂದಿರುವ ಶಿಡ್ಲಘಟ್ಟ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳು ಮತ್ತು ವೈದ್ಯರ ಕೊರತೆಯಿಂದ ಬಡ ರೋಗಿಗಳು ಪರದಾಡುವಂತಾಗಿದೆ.

Advertisement

ಏಷ್ಯಾದಲ್ಲಿ ಅತಿ ದೊಡ್ಡ ರೇಷ್ಮೆಗೂಡಿನ ಮಾರುಕಟ್ಟೆ ಮತ್ತು ಇಲ್ಲಿ ಉತ್ಪಾದನೆಯಾಗುವ ನೂಲು ದೇಶ ವಿದೇಶಗಳಲ್ಲಿ ಮಾರಾಟವಾಗುತ್ತದೆ. ಆದರೆ ಇಂತಹ ಖ್ಯಾತಿ ಹೊಂದಿರುವ ರೇಷ್ಮೆ ನಗರಿ ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಲ್ಲದೇ, ಕುಡಿಯುವ ನೀರಿಗಾಗಿ ರೋಗಿಗಳು ಮಿನರಲ್‌ ನೀರು ಆಶ್ರಯಿಸಿಕೊಳ್ಳುವಂತಹ ಶೋಚನೀಯ ಪರಿಸ್ಥಿತಿ ನಿರ್ಮಾಣವಾಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಸಾರ್ವಜನಿಕ ಆಸ್ಪತ್ರೆಯನ್ನು ಕಡೆಗಣಿಸಿದ್ದಾರೆಯೇ? ಎಂಬ ಅನುಮಾನ ಮೂಡುವಂತಾಗಿದೆ.

ಸಿಬ್ಬಂದಿ, ವೈದ್ಯರ ಕೊರತೆ: ರೇಷ್ಮೆ ನಗರದಲ್ಲಿ ಅನೇಕ ರೇಷ್ಮೆ ಕಾರ್ಖಾನೆಗಳಿವೆ. ಬಹುತೇಕ ರೇಷ್ಮೆ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಮೂರಕ್ಕೂ ಅಧಿಕ ಕಾರ್ಮಿಕರ ನಗರಗಳಿರುವ ಈ ನಗರದಲ್ಲಿ ಬಹುತೇಕ ಬಡವರು ಹೆಚ್ಚಾಗಿ ವಾಸವಾಗಿದ್ದಾರೆ. ಕೂಲಿ ಕಾರ್ಮಿಕರು ಮತ್ತು ಬಡಜನರಿಗಾಗಿ ಸರ್ಕಾರ 50 ಹಾಸಿಗೆಯುಳ್ಳ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ 100 ಹಾಸಿಗೆಯುಳ್ಳ ಆಸ್ಪತ್ರೆಯಾಗಿ ಪರಿವರ್ತಿಸಿದೆ. ಆದರೂ ಆಸ್ಪತ್ರೆಗೆ ಬೇಕಾಗಿರುವ ಸಿಬ್ಬಂದಿ ಮತ್ತು ವೈದ್ಯರ ಹುದ್ದೆಗಳನ್ನು ಭರ್ತಿ ಮಾಡುವುದರಲ್ಲಿ ಸರ್ಕಾರ ವಿಫ‌ಲವಾಗಿದೆ ಎಂಬ ದೂರು ಸಾಮಾನ್ಯವಾಗಿದೆ.

ಪ್ರಸ್ತುತ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಫಿಸೀಷಿಯನ್‌ ಡಾ.ತಿಮ್ಮೇಗೌಡ ಹಾಗೂ ರೇಡಿಯಾಲಿಜಿಸ್ಟ್‌ ವರ್ಗಾವಣೆಯಾಗಿದ್ದಾರೆ. ಅವರ ಸ್ಥಾನಗಳಿಗೆ ಯಾರೊಬ್ಬರೂ ಬಂದಿಲ್ಲ. ಇದರಿಂದ ರೋಗಿಗಳು ಪರದಾಡುವಂತಾಗಿದೆ. ಈ ಹಿಂದೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಡಳಿತ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸರ್ಜನ್‌ ಡಾ.ಸುನೀತಾ ಮತ್ತು ಕಣ್ಣಿನ ತಜ್ಞೆ ಡಾ.ಅನುಷಾ ವರ್ಗಾವಣೆಯಾದ ಸುಮಾರು ತಿಂಗಳ ಬಳಿಕ ಹೊಸದಾಗಿ ಸರ್ಜನ್‌ ಮತ್ತು ಕಣ್ಣಿನ ತಜ್ಞರ ಹುದ್ದೆ ಭರ್ತಿಯಾಗಿದೆ. ಆದರೆ ಫಿಸೀಷಿಯನ್‌ ಮತ್ತು ರೇಡಿಯಾಲಿಜಿಸ್ಟ್‌ ಹುದ್ದೆಗಳು ಮಾತ್ರ ಖಾಲಿಯಾಗಿದ್ದು, ಇದರಿಂದ ರೋಗಿಗಳು ವಿಶೇಷವಾಗಿ ಗರ್ಭಿಣಿಯರು ಸ್ಕ್ಯಾನಿಂಗ್‌ಗೆ ನೆರೆಯ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ ಅಥವಾ ಶಿಡ್ಲಘಟ್ಟ ನಗರದಲ್ಲಿ ದುಬಾರಿ ಬೆಲೆ ನೀಡಿ ಸ್ಕ್ಯಾನಿಂಗ್‌ ಮಾಡಿಕೊಳ್ಳಬೇಕಿದೆ.

ಸಂಕಷ್ಟ: ಸಾಮಾನ್ಯವಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವಾರದಲ್ಲಿ ಮೂರು ದಿನಗಳು ರೇಡಿಯಾಲಿಜಿಸ್ಟ್‌ ಸೇವೆ ದೊರೆಯುತ್ತಿತ್ತು. ಆದರೆ ಕಳೆದ ನಾಲ್ಕು ದಿನಗಳಿಂದ ಅವರು ವರ್ಗಾವಣೆಯಾಗಿದ್ದರಿಂದ ಗರ್ಭಿಣಿಯರು ಸಹಿತ ಹೊಟ್ಟೆ ನೋವಿನಿಂದ ಬಳಲುವ ವ್ಯಕ್ತಿಗಳು ಸಂಕಷ್ಟ ಎದುರಿಸುವಂತಾಗಿದೆ. ಮಧುಮೇಹ ಮತ್ತು ರಕ್ತದೊತ್ತಡ ಮತ್ತಿತರರ ರೋಗಿಗಳು ಫಿಸೀಷಿಯನ್‌ ಬಳಿ ತಪಾಸಣೆಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯನ್ನು ಆಶ್ರಯಿಸುವಂತಾಗಿದೆ.

Advertisement

ಕುಡಿಯುವ ನೀರಿಲ್ಲದೇ ಪರದಾಟ: ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಕೊರೆದಿರುವ ಕೊಳವೆಬಾವಿಗಳು ಬತ್ತಿ ಹೋಗಿದ್ದು, ಇದೀಗ ನಗರಸಭೆಯಿಂದ ಅಲ್ಪ ನೀರು ಪೂರೈಕೆಯಾಗುತ್ತಿದ್ದು ಇದರಿಂದ ರೋಗಿಗಳು ಕುಡಿಯುವ ನೀರಿಗೂ ಸಹ ಪರದಾಡುವಂತಾಗಿದೆ. ಕೆಲವರು ಆಸ್ಪತ್ರೆಯ ಹೊರಭಾಗದಲ್ಲಿ ನೀರಿನ ಬಾಟಲುಗಳು ಖರೀದಿ ಮಾಡಿದರೆ ಇನ್ನೂ ಕೆಲವರು ತಮ್ಮ ಮನೆಯಿಂದ ನೀರು ತಂದುಕೊಳ್ಳುವ ಪರಿಸ್ಥಿತಿ ಇಲ್ಲಿ ಕಾಣಬಹುದಾಗಿದೆ. ಒಟ್ಟಾರೆ ವೈದ್ಯರು ಮತ್ತು ನೀರಿಲ್ಲದೇ ರೋಗಿಗಳು ಮಾತ್ರ ನಿತ್ಯ ಪರದಾಡುವಂತಾಗಿದೆ.

ಡಯಾಲಿಸಿಸ್‌ ರೋಗಿಗಳಿಗೆ ನೀರಿಲ್ಲ: ಬಡ ರೋಗಿಗಳು ಕುಡಿಯುವ ನೀರು ಮತ್ತು ವೈದ್ಯರಿಲ್ಲದೇ ಪರದಾಡಿದರೆ ಇನ್ನೂ ಡಯಾಲಿಸಿಸ್‌ ರೋಗಿಗಳ ಸ್ಥಿತಿ ಇನ್ನೂ ಗಂಭೀರವಾಗಿದೆ. ಇಲ್ಲಿಯೂ ಸಹ ನೀರಿನ ಅಭಾವದಿಂದ ಕೆಲವೊಮ್ಮೆ ಡಯಾಲಿಸಿಸ್‌ ನಿಲ್ಲಿಸಿರುವ ಪ್ರಕರಣಗಳು ಸಹ ನಡೆದಿದೆ. ಆಸ್ಪತ್ರೆಯಲ್ಲಿ ಕುಡಿಯುವ ನೀರಿಗೆ ಶಾಶ್ವತ ವ್ಯವಸ್ಥೆ ಇಲ್ಲದೇ ಆರೋಗ್ಯ ರಕ್ಷಾ ಸಮಿತಿಯಿಂದ ಟ್ಯಾಂಕರ್‌ ಮೂಲಕ ನೀರು ಹರಿಸಿ ರೋಗಿಗಳಿಗೆ ಡಯಾಲಿಸಿಸ್‌ ಮಾಡುವಂತಹ ದೌರ್ಭಾಗ್ಯ ಕಾಣುವಂತಾಗಿದೆ. ಕೆಲವೊಮ್ಮ ಇದೇ ವಿಚಾರದಲ್ಲಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳ ಬಳಿ ರೋಗಿಗಳ ಸಂಬಂಧಿಕರು ಅಳಲು ತೋಡಿಕೊಂಡಿದ್ದಾರೆ. ಆದರೂ ನೀರಿನ ಸಮಸ್ಯೆಗೆ ಮುಕ್ತಿ ಇಲ್ಲದಂತಾಗಿದೆ.

ಡೆಂಘೀ ಭೀತಿ: ಜಿಲ್ಲೆಯ ವಿವಿಧೆಡೆ ಸೊಳ್ಳೆಗಳ ಹಾವಳಿಯಿಂದ ಜ್ವರ ಮತ್ತು ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಕಾಣಿಸಿಕೊಂಡಿದೆ. ವಿಶೇಷವಾಗಿ ಶಿಡ್ಲಘಟ್ಟ ನಗರ ಸಹಿತ ತಾಲೂಕಿನಲ್ಲಿ ಜ್ವರದಿಂದ ಹಲವರು ಬಳಲುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಜನ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ನಗರ ಪ್ರದೇಶದ ಜನ ಸಾರ್ವಜನಿಕ ಅಸ್ಪತ್ರೆಯನ್ನು ಆಶ್ರಯಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆಯಿಂದ ಸಕಾಲದಲ್ಲಿ ಚಿಕಿತ್ಸೆ ಲಭಿಸದೇ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿಗೆ ತೆರಳುವಂತಾಗಿದೆ. ಜೊತೆಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು ದಲಿತ ಮುಖಂಡರೊಬ್ಬರು ಎಸ್‌.ಸಿ/ಎಸ್‌.ಟಿ ಸಮಾಜದ ಕುಂದುಕೊರತೆಗಳ ಸಭೆಯಲ್ಲಿ ವಿಡಿಯೋ ಚಿತ್ರೀಕರಣ ಮಾಡಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ತೋರಿಸಿದ್ದಾರೆ.

ಶಿಡ್ಲಘಟ್ಟದ ಸಾರ್ವಜನಿಕ ಆಸ್ಪತ್ರೆಯಲ್ಲಿ ಫಿಸೀಷಿಯನ್‌ ಮತ್ತು ರೇಡಿಯಾಲಿಜಿಸ್ಟ್‌ ಹುದ್ದೆಗಳನ್ನು ಭರ್ತಿ ಮಾಡಲು ಈಗಾಗಲೇ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಆಸ್ಪತ್ರೆಯಲ್ಲಿ ಕೊರೆದಿರುವ ಕೊಳವೆಬಾವಿಗಳು ಬತ್ತಿಹೋಗಿದ್ದು, ನಗರಸಭೆಯಿಂದ ನೀರು ಸರಬರಾಜು ಆಗುತ್ತದೆ. ಖಾಲಿಯಾಗಿದ್ದ ಸರ್ಜನ್‌ ಮತ್ತು ಕಣ್ಣಿನ ತಜ್ಞರ ಹುದ್ದೆಗಳು ಭರ್ತಿಯಾಗಿದ್ದು, ಇನ್ನುಳಿದ ಹುದ್ದೆಗಳು ಭರ್ತಿಯಾಗಬೇಕಿದೆ.
-ಡಾ.ವಾಣಿ, ಆಡಳಿತ ವೈದ್ಯಾಧಿಕಾರಿ ಸಾರ್ವಜನಿಕ ಆಸ್ಪತ್ರೆ

ಸಾರ್ವಜನಿಕ ಆಸ್ಪತ್ರೆಯ ಸಮಸ್ಯೆಗಳನ್ನು ಬಗೆಹರಿಸಲು ಆಡಳಿತ ವೈದ್ಯಾಧಿಕಾರಿಗಳು ಗಮನಹರಿಸುತ್ತಿದ್ದಾರೆ. ಚಿಕಿತ್ಸೆಗೆ ಬರುವ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಿ ಆರೋಗ್ಯ ರಕ್ಷಾ ಸಮಿತಿಯಲ್ಲಿ ಹಣ ಬಳಸಿಕೊಳ್ಳಲು ಶಾಸಕರು ಸೂಚನೆ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಖಾಲಿಯಾಗಿರುವ ಫಿಸೀಷಿಯನ್‌ ಮತ್ತು ರೇಡಿಯಾಲಿಜಿಸ್ಟ್‌ ಹುದ್ದೆಗಳನ್ನು ಭರ್ತಿ ಮಾಡಲು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಪತ್ರ ಬರೆದಿದ್ದೇವೆ.
-ಡಾ.ವೆಂಕಟೇಶ್‌ಮೂರ್ತಿ ತಾಲೂಕು ಆರೋಗ್ಯಾಧಿಕಾರಿ ಶಿಡ್ಲಘಟ್ಟ

Advertisement

Udayavani is now on Telegram. Click here to join our channel and stay updated with the latest news.

Next