Advertisement

ಬಿಎಸ್‌ವೈ ಬಿಟ್ಟು ಚುನಾವಣೆ ಇಲ್ಲವೇ ಇಲ್ಲ

12:33 AM Feb 28, 2023 | Team Udayavani |

ಬೆಂಗಳೂರು: “ಯಡಿಯೂರಪ್ಪ ಚುನಾವಣ ರಾಜಕಾರಣ ಬಿಟ್ಟರೂ, ಚುನಾವಣ ರಾಜಕಾರಣ ಯಡಿಯೂರಪ್ಪನ ವರನ್ನು ಬಿಡದು’ ಎಂಬ ಮಾತಿಗೆ ಪುಷ್ಠಿ ನೀಡುವ ವಿದ್ಯಮಾನ ಬಿಜೆಪಿಯಲ್ಲಿ ಮತ್ತೆ ಮರುಕಳಿಸಿದೆ. ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಯಡಿಯೂರಪ್ಪ ಅವರನ್ನು ಶ್ಲಾ ಸಿರುವುದು ಬಿಜೆಪಿಯಲ್ಲಿ ಈ ಚರ್ಚೆ ಹುಟ್ಟು ಹಾಕಿದೆ.

Advertisement

ಯಡಿಯೂರಪ್ಪ ಚುನಾವಣ ರಾಜಕಾರಣದಿಂದ ನಿವೃತ್ತಿ ಘೋಷಿಸಿ ಇನ್ನೂ ವಾರ ಕಳೆದಿಲ್ಲ. ಸಕ್ರಿಯ ರಾಜಕಾರಣದಲ್ಲೇ ಇರುತ್ತೇನೆ ಎಂದು ಹೇಳಿದ್ದರೂ ಅದರ ಸ್ವರೂಪ ಗೊತ್ತಿಲ್ಲ. ಹೀಗಿರುವಾಗಲೇ ಶಿವಮೊಗ್ಗಕ್ಕೆ ಆಗಮಿಸಿರುವ ಮೋದಿ, ಯಡಿಯೂರಪ್ಪ ಗುಣಗಾನ ಮಾಡಿರು ವುದರಿಂದ “ಯಡಿಯೂರಪ್ಪ ಅವರನ್ನು ಬಿಟ್ಟು ಈ ಚುನಾವಣೆ ನಡೆಸಲು ಸಾಧ್ಯವಿಲ್ಲ. ಬಿಜೆಪಿ ವರಿಷ್ಠರು ಅವರನ್ನು ಅವಗಣಿಸುತ್ತಿಲ್ಲ’ ಎಂಬ ಸಂದೇಶ ರವಾನಿಸುವ ಪ್ರಯತ್ನ ಎಂದು ವ್ಯಾಖ್ಯಾ ನಿಸಲಾಗುತ್ತಿದೆ. ಪಂಚಮಸಾಲಿ ಮೀಸಲು ಹೋರಾಟವೂ ಸಹಿತ ಬಿಜೆಪಿಯ ಪ್ರಬಲ ಮತಬ್ಯಾಂಕ್‌ ಎಂದೇ ಪರಿಗಣಿಸಲ್ಪಟ್ಟ ವೀರಶೈವ – ಲಿಂಗಾಯತ ಸಮುದಾಯ ಈ ಚುನಾವಣೆಯಲ್ಲಿ ಕದಡಿದ ಮನಃಸ್ಥಿತಿಯಲ್ಲಿದೆ.

ಒಂದೆಡೆ ವಯೋಸಹಜ ಕಾರಣಕ್ಕೆ ಸಮುದಾಯದ ಪ್ರಶ್ನಾತೀತ ನಾಯಕ ಯಡಿಯೂರಪ್ಪ ನಿವೃತ್ತಿ ಘೋಷಿಸಿದ್ದಾರೆ. ಅದೇ ಕಾಲಕ್ಕೆ ಲಿಂಗಾಯತ ಸಮುದಾಯದ ಭವಿಷ್ಯದ ನಾಯಕ ಇವರೇ ಎಂದು ಯಾರನ್ನೂ ಇದುವರೆಗೆ ಬಿಜೆಪಿ ಪೋಷಿಸಿಲ್ಲ. ಇದರ ಜತೆಗೆ ಕಾಂಗ್ರೆಸ್‌ನಲ್ಲೂ ಲಿಂಗಾಯತರನ್ನು ಮುಖ್ಯ ಮಂತ್ರಿ ಅಭ್ಯರ್ಥಿ ಯಾಗಿ ಘೋಷಣೆ ಮಾಡುವ ವಾತಾವ ರಣ ಇಲ್ಲ.

ಹೀಗಾಗಿ ಕವಲುದಾರಿಯಲ್ಲಿರುವ ಲಿಂಗಾಯತ ಮತಬ್ಯಾಂಕ್‌ನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಯಡಿಯೂರಪ್ಪ ಅನಿವಾರ್ಯವಾಗಿ ಪರಿಣಮಿಸಿದ್ದಾರೆ.

ಇದನ್ನು ಅರಿತಿರುವ ಯಡಿಯೂರಪ್ಪ ವಿದಾಯ ಮಂತ್ರ ಪಠಿಸುತ್ತಲೇ ಬಿಜೆಪಿಯಲ್ಲಿ ತಮ್ಮ ಹಿಡಿತವನ್ನು ಇನ್ನಷ್ಟು ಬಿಗಿಯಾಗಿಸುತ್ತಿದ್ದಾರೆ. ಪ್ರಚಾರ ಸೇರಿದಂತೆ ಸಂಘಟನಾ ವ್ಯವಸ್ಥೆಯಲ್ಲೂ ಅವರನ್ನು ಪಕ್ಕಕ್ಕಿಟ್ಟು ಮುಂದುವರಿಯುವ ಸ್ಥಿತಿಯಲ್ಲಿ ಸದ್ಯಕ್ಕೆ ಬಿಜೆಪಿ ನಾಯಕತ್ವ ಇಲ್ಲ. ಟಿಕೆಟ್‌ ಹಂಚಿಕೆ ಸಂದರ್ಭದಲ್ಲೂ ಯಡಿಯೂರಪ್ಪ ಇದೇ ರೀತಿ ಮೇಲುಗೈ ಸಾಧಿಸಬಹುದು ಎಂದು ಹೇಳಲಾಗುತ್ತಿದೆ. ಯಡಿಯೂರಪ್ಪ ಅವರು ಸಮಾಧಾನ ಪಡಿಸುವ ಸಲುವಾಗಿಯೇ ಪುತ್ರ ವಿಜಯೇಂದ್ರ ಅವರಿಗೆ ಪಕ್ಷದ ಮೋರ್ಚಾಗಳ ಸಮಾವೇಶದ ಉಸ್ತುವಾರಿ ನೀಡಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನಗಳು ನಡೆದಿವೆ.

Advertisement

ಚುನಾವಣೆತನಕವಾದರೂ ಯಡಿಯೂರಪ್ಪ ಅವರು ಇದೇ ರೀತಿ ಉತ್ಸಾಹ, ಹುಮ್ಮಸ್ಸಿನಿಂದ ಇರುವಂತೆ ನೋಡಿಕೊಳ್ಳಲು ಹೈಕಮಾಂಡ್‌ ಎಲ್ಲಾ ಬಗೆಯ ಅಸ್ತ್ರಗಳನ್ನು ಪ್ರಯೋಗಿಸುತ್ತಿದೆ. ಇದು ಬಿಜೆಪಿ ಹಾಗೂ ಯಡಿಯೂರಪ್ಪ ಅವರ ದೃಷ್ಟಿಯಿಂದ ಒಳ್ಳೆಯದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ದಾರಿ ಸುಗಮ: ಇದೆಲ್ಲಕ್ಕಿಂತ ಮುಖ್ಯವಾಗಿ ತಮ್ಮ ಪುತ್ರ ವಿಜಯೇಂದ್ರ ಅವರನ್ನು ರಾಜಕೀಯವಾಗಿ ಮುನ್ನೆಲೆಗೆ ತರುವುದಕ್ಕೂ ಯಡಿಯೂರಪ್ಪನವರಿಗೆ ಈ ವೇದಿಕೆ ಅವಕಾಶ ನೀಡಿದ್ದು, ಶಿಕಾರಿಪುರದಲ್ಲಿ ತಮ್ಮ ಉತ್ತರಾಧಿಕಾರಿ ವಿಜಯೇಂದ್ರ ಎಂದು ಈಗಾಗಲೇ ಮಾಡಿರುವ ಘೋಷಣೆಗೆ ವರಿ ಷ್ಠರ ಸಮ್ಮತಿ ಮುದ್ರೆ ಗಿಟ್ಟಿಸಲು ಯಡಿಯೂರಪ್ಪ ಬಹುತೇಕ ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ.

ಸಿದ್ದರಾಮಯ್ಯ ವಿರುದ್ಧ
ವಿಜಯೇಂದ್ರ ಕಾಯ್ದಿಟ್ಟ ಅಸ್ತ್ರ?
ಇದೆಲ್ಲದರ ಮಧ್ಯೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕ್ಷೇತ್ರ ಆಯ್ಕೆಯ ಬಗ್ಗೆ ಬಿಜೆಪಿ ಇನ್ನೂ ನಿಗಾ ಇಟ್ಟು ಕಾಯುತ್ತಿದೆ. ಸಿದ್ದರಾಮಯ್ಯಗೆ ಕೋಲಾರ ಕ್ಷೇತ್ರ ಸುರಕ್ಷಿತವಲ್ಲ ಎಂದು ಅವರ ಆಪ್ತ ವರ್ಗ ಪದೇ ಪದೆ ಎಚ್ಚರಿಕೆ ನೀಡುತ್ತಲೇ ಇದೆ. ಕೊನೆ ಕ್ಷಣದಲ್ಲಿ ಅವರು ವರುಣಾ ಕ್ಷೇತ್ರದಿಂದ ಸ್ಫರ್ಧೆ ನಡೆಸುತ್ತಾರೆ ಎಂದು ಬಿಜೆಪಿ ಬಲವಾಗಿ ನಂಬಿದೆ. ಒಂದೊಮ್ಮೆ ಸಿದ್ದರಾಮಯ್ಯ ವರುಣಾಕ್ಕೆ ವಾಪಾಸ್‌ ಬಂದರೆ ಅವರ ವಿರುದ್ಧ ಕಾಯ್ದಿಟ್ಟ ಅಸ್ತ್ರದ ರೂಪದಲ್ಲಿ ವಿಜಯೇಂದ್ರ ಅವರನ್ನು ಬಳಕೆ ಮಾಡುವುದಕ್ಕೆ ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

-ರಾಘವೇಂದ್ರ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next