Advertisement

ಆರ್ಥಿಕ ಹಿಂಜರಿತದ ಪರಿಯಿಂದ ಹೊರಬರುವ ಬಗೆ ಬೇಕು

01:15 PM Sep 12, 2019 | Nagendra Trasi |

ರಾಜತಾಂತ್ರಿಕವಾಗಿ ಹಾಗೂ ಆಂತರಿಕ ಭದ್ರತೆ ಸಂಬಂಧ ನೂರು ದಿನಗಳಲ್ಲಿ ಅತ್ಯಂತ ಮಹತ್ವವೆನಿಸಬಹುದಾದ ತೀರ್ಮಾನಗಳನ್ನು ಜಾರಿಗೊಳಿಸಿದ್ದರೂ ಹಿನ್ನಡೆ ಅನುಭವಿಸಿರುವುದು ಆರ್ಥಿಕ ಬೆಳವಣಿಗೆಯನ್ನು ಕಾಯ್ದುಕೊಳ್ಳುವಲ್ಲಿ. ನಿರಂತರ ಜಿಡಿಪಿ ಕುಸಿತ, ವಾಹನೋದ್ಯಮವೂ ಸೇರಿದಂತೆ ಉತ್ಪಾದನಾ ಕ್ಷೇತ್ರಗಳಲ್ಲಿನ ಕುಸಿತ ಹಾಗೂ ಉದ್ಯೋಗ ಕಡಿತ, ಗ್ರಾಮೀಣ ಆರ್ಥಿಕತೆಯ ಕುಸಿತ ಎಲ್ಲವೂ ಭವಿಷ್ಯದ ದೃಷ್ಟಿಯಲ್ಲಿ ಕೊಂಚ ಆತಂಕವನ್ನು ಹುಟ್ಟಿಸಿರುವುದು ನಿಜ. ಈ ಬೆಳವಣಿಗೆಗಳ ಮಧ್ಯೆಯೇ ಕೇಂದ್ರ ಸರಕಾರ ಕೆಲವು ಚೇತರಿಕೆ ಕ್ರಮಗಳನ್ನು ಪ್ರಕಟಿಸಿದರೂ ಅವು ಫ‌ಲ ಕೊಡಲು ಇನ್ನೂ ಸ್ವಲ್ಪ ಸಮಯ  ತಗುಲಬಹುದು. ಆದ ಕಾರಣ, ಈ ಹೊತ್ತಿನ (ನೂರು ದಿನ) ಸಂಭ್ರಮದ ಪುಗ್ಗೆಗೆ ಸಣ್ಣದೊಂದು ರಂಧ್ರ ಮಾಡಿರುವುದು ಈ ಆರ್ಥಿಕ ಕುಸಿತವೇ.

Advertisement

*ಅನಂತ ಹುದೆಂಗಜೆ

ನರೇಂದ್ರ ಮೋದಿ ನೇತೃತ್ವದ ಸರಕಾರ ಕೇಂದ್ರದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಬೆನ್ನಿಗೇ ಜಗತ್ತಿನಾದ್ಯಂತ ಆರ್ಥಿಕ ಹಿಂಜರಿತ ಕಾಡತೊಡಗಿತು. 2010ನೇ ಇಸವಿ ಡಿಸೆಂಬರ್‌ ಬಳಿಕ ಮತ್ತೂಮ್ಮೆ ಆರ್ಥಿಕ, ಔದ್ಯಮಿಕ ಹಾಗೂ ಔದ್ಯೋಗಿಕ ಹಿನ್ನಡೆಗೆ ಅದು ಕಾರಣವಾಗಿದೆ.

ಬಜೆಟ್‌ನಲ್ಲಿ ಭಾರತವನ್ನು 5 ಟ್ರಿಲಿಯನ್‌ ಆರ್ಥಿಕ ಶಕ್ತಿಯಾಗಿ ರೂಪಿಸುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸಾಕಷ್ಟು ವಿಶ್ವಾಸದಿಂದಲೇ ಪ್ರಕಟಿಸಿದ್ದಾರೆ. ಅಭಿವೃದ್ಧಿಯ ವೇಗಕ್ಕೆ ಸ್ಥಿರತೆ ಒದಗಿಸಲು ಜಿಡಿಪಿ ದರವನ್ನು ಇಳಿಸಿದರೂ ನಿರೀಕ್ಷಿತ ಫ‌ಲಿತಾಂಶ ಸಿಗಲಿಲ್ಲ. ಬ್ಯಾಂಕ್‌ಗಳ ವಿಲೀನದಂತಹ ಮಹತ್ವದ ಉಪಕ್ರಮಗಳ ಪರಿಣಾಮ ತತ್‌ಕ್ಷಣಕ್ಕೆ ಗೋಚರವಾಗದ ಕಾರಣ ಅದೂ ನಿರೀಕ್ಷಿತ ಮಟ್ಟದಲ್ಲಿ ಕೈಹಿಡಿಯಲಿಲ್ಲ. ರೂಪಾಯಿ ಅಪಮೌಲ್ಯ, ಜಾಗತಿಕವಾಗಿ ತೈಲ ಬೆಲೆಯಲ್ಲಿ ಏರಿಳಿತ ಹಾಗೂ ಷೇರು ಮಾರುಕಟ್ಟೆಯ ತಲ್ಲಣಗಳಿಂದಾಗಿ ಕೈಗಾರಿಕೆಗಳ ಅಭಿವೃದ್ಧಿ ಕುಂಠಿತಗೊಂಡಿತು. ನೋಡ ನೋಡುತ್ತಿದ್ದಂತೆಯೇ ಹೂಡಿಕೆದಾರರ ಸಾವಿರಾರು ಕೋಟಿ ಹಣ ಮಂಗಮಾಯವಾಗಿದ್ದು ಬೇಗನೆ ಚೇತರಿಸಿಕೊಳ್ಳಲಾರದಷ್ಟು ಹೊಡೆತ ನೀಡಿದೆ.

ಅಭಿವೃದ್ಧಿಗೆ ಬ್ರೇಕ್‌

Advertisement

ಈ ಹಾವು ಏಣಿ ಆಟದಲ್ಲಿ ಜಾಸ್ತಿ ಹೊಡೆತ ತಿಂದಿದ್ದು ಆಟೋಮೊಬೈಲ್‌ ಹಾಗೂ ಜವುಳಿ ಉದ್ಯಮಗಳು. ಇಲೆಕ್ಟ್ರಿಕ್‌ ಹಾಗೂ ಸೋಲಾರ್‌ ಶಕ್ತಿ ಚಾಲಿತ ಕಾರುಗಳಿಗೆ ಉತ್ತೇಜನ ನೀಡಲು ಅಂಥ ವಾಹನಗಳು ಹಾಗೂ ಬಿಡಿಭಾಗಗಳ ಮೇಲಿನ ಜಿಎಸ್ಟಿಯನ್ನು ಶೇ. 5ಕ್ಕೆ ಇಳಿಸಲಾಯಿತು. ಪರಿಣಾಮ, ಡೀಸೆಲ್‌ ವಾಹನಗಳ ಮಾರಾಟ ಕುಸಿಯಿತು. ಡೀಸೆಲ್‌ ಎಂಜಿನ್‌ಗಳಿಗೆ ಭವಿಷ್ಯವೇ ಇಲ್ಲ ಎಂಬ ಸ್ಥಿತಿ ಜಾಗತಿಕವಾಗಿಯೂ ನಿರ್ಮಾಣವಾಗಿದೆ. 2022ರ ಸುಮಾರಿಗೆ ಬ್ಯಾಟರಿ ಚಾಲಿತ ವಾಹನಗಳು ಕಡ್ಡಾಯವಾಗುತ್ತವೆ ಎಂಬ ಸುದ್ದಿ ಹರಡಿತು. ಹೀಗಾಗಿ, ಇಲೆಕ್ಟ್ರಿಕ್‌ ಕಾರುಗಳ ದುಬಾರಿ ಬ್ಯಾಟರಿಗಳ ದೀರ್ಘ‌ ಬಾಳಿಕೆ ಕುರಿತಾಗಿ ಖಾತ್ರಿ ಇಲ್ಲದಿದ್ದರೂ ಹೊಸ ಡೀಸೆಲ್‌, ಪೆಟ್ರೋಲ್‌ ವಾಹನಗಳ ಖರೀದಿಗೆ ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ.

ಅಶೋಕ್‌ ಲೈಲ್ಯಾಂಡ್‌ ತನ್ನ ಐದು ಘಟಕಗಳಲ್ಲಿ ಉತ್ಪಾದನೆ ಸ್ಥಗಿತಗೊಳಿಸಿದೆ. ಮಾರುತಿ ಉದ್ಯೋಗ್‌ ಸುಮಾರು 3,000 ಗುತ್ತಿಗೆ ನೌಕರರನ್ನು ತೆಗೆದು ಹಾಕಿದೆ. ಮೂರು ತಿಂಗಳಿಂದ ಟಾಟಾ ನ್ಯಾನೋ ಒಂದು ಕಾರೂ ಮಾರಾಟವಾಗಿಲ್ಲ. ಟೊಯೋಟಾ ಸಂಸ್ಥೆ ತನ್ನ ಬಿಡದಿ ಘಟಕದಲ್ಲಿ ಉತ್ಪಾದನೆಯನ್ನು ಕಡಿಮೆ ಮಾಡಿದೆ. ಟಾಟಾ ಮೊಟರ್ಸ್‌, ಹುಂಡೈ, ಮಾರುತಿ ಸುಜುಕಿ, ಐಶರ್‌ ಇತ್ಯಾದಿ ಸಂಸ್ಥೆಗಳು ಈ ಹಿಂಜರಿತದಿಂದ ಹೊಡೆತ ತಿಂದಿವೆ. ಕಂಪನಿಗಳ ಗೋದಾಮಿನಲ್ಲಿ ಸಾವಿರಾರು ವಾಹನಗಳು ಸಿದ್ಧವಾಗಿ ನಿಂತಿವೆ. ಮುಡಿಯುವವರಿಲ್ಲದೆ ಮಾಲೆ ಬಾಡಿ ಹೋಗುತ್ತಿರುವಾಗ ಹೊಸ ಉತ್ಪಾದನೆ ಎಲ್ಲಿಂದ ಯಾಕಾಗಿ ಎಂಬುದೀಗ ವಾಹನೋದ್ಯಮವನ್ನು ಕಾಡುತ್ತಿರುವ ಪ್ರಶ್ನೆ.

ಪ್ರಯಾಣಿಕ ಕಾರುಗಳ ಮಾರಾಟ ಕಳೆದ ವರ್ಷದ ಜುಲೈ ತಿಂಗಳಿಗೆ ಹೋಲಿಸಿದರೆ ಶೇ 35ರಷ್ಟು ಕುಸಿದಿದೆ. ಆಟೋ ಉದ್ಯಮದ ಸುಮಾರು 2.30 ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಭಾರತೀಯ ಆಟೊಮೊಬೈಲ್‌ ಉತ್ಪಾದಕರ ಸಮಾಜ (ಎಸ್‌ಐಎಎಂ) ಬಿಡುಗಡೆ ಮಾಡಿರುವ ಮಾಹಿತಿ ತಿಳಿಸಿದೆ. ವಾಣಿಜ್ಯ ವಾಹನಗಳ ಮಾರಾಟವೂ ಶೇ. 25ರಷ್ಟು ಇಳಿಕೆಯಾಗಿದೆ. ದ್ವಿಚಕ್ರ ವಾಹನಗಳ ಮಾರಾಟ ಶೇ. 16ರಷ್ಟು ಕಮ್ಮಿಯಾಗಿದೆ. ವಾಹನೋದ್ಯಮಕ್ಕೆ ಸಂಬಂಧಿಸಿ ಸುಮಾರು 300 ಡೀಲರ್‌ಶಿಪ್‌ಗ್ಳು ಬಾಗಿಲು ಹಾಕಿವೆ. ಆಟೋ ಬಿಡಿಭಾಗಗಳ ಉತ್ಪಾದನ ಘಟಕಗಳಲ್ಲಿ 10 ಲಕ್ಷದಷ್ಟು ಉದ್ಯೋಗ ನಷ್ಟವಾಗಿದೆ ಎಂದು ಎಸ್‌ಐಎಎಂ ಡೇಟಾ ತಿಳಿಸಿದೆ.

ಆ್ಯಪ್‌ ಆಧಾರಿತ ಸೇವೆಯೂ ಕಾರಣ?

ಆಟೊಮೊಬೈಲ್‌ ಉದ್ಯಮದ ಹಿನ್ನಡೆಗೆ ಓಲಾ, ಉಬರ್‌ನಂತಹ ಆ್ಯಪ್‌ ಆಧಾರಿತ ಸೇವೆಯೂ ಕಾರಣ ಎಂಬ ಹಣಕಾಸು ಸಚಿವೆಯ ಹೇಳಿಕೆ ಮಹತ್ವ ಪಡೆದಿದೆ. ಇಂತಹ ಒಂದು ಆತಂಕವನ್ನು ಓಲಾ ಆರಂಭವಾದ ಸಂದರ್ಭದಲ್ಲೇ ಆನಂದ್‌ ಮಹೀಂದ್ರಾ ವ್ಯಕ್ತಪಡಿಸಿದ್ದರು. ದುಬಾರಿ ಇಂಧನ ಬೆಲೆ, ನಿರ್ವಹಣೆ ವೆಚ್ಚ, ವಿಮೆ, ಹಲವು ಪಟ್ಟು ಹೆಚ್ಚಿರುವ ದಂಡದ ಮೊತ್ತ, ಚಾಲಕನ ವೇತನ ಹಾಗೂ ತೀವ್ರಗೊಂಡಿರುವ ಟ್ರಾಫಿಕ್‌ ಹಾಗೂ ಪಾರ್ಕಿಂಗ್‌ ಸಮಸ್ಯೆ ಇತ್ಯಾದಿಗಳನ್ನು ಲೆಕ್ಕ ಹಾಕಿದರೆ ಓಲಾ, ಉಬರ್‌ ಬುಕ್‌ ಮಾಡಿ ಸಂಚರಿಸುವುದೇ ನಗರವಾಸಿಗಳಿಗೆ ಮಿತವ್ಯಯಕಾರಿಯೂ, ಅನುಕೂಲಕರವಾಗಿಯೂ ಪರಿಣಮಿಸಿದೆ.

ಪೆಟ್ರೋಲ್‌, ಡೀಸೆಲ್‌ ಕಾರುಗಳನ್ನು ನಿಷೇಧಿಸುವ ಪ್ರಸ್ತಾವ ಸರಕಾರದ ಮುಂದಿಲ್ಲ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ಹೇಳಿದ್ದರೂ ಡೀಸೆಲ್‌ ಕಾರುಗಳಿಗಂತೂ ಭವಿಷ್ಯವಿಲ್ಲ ಎಂಬುದು ಸ್ಪಷ್ಟ. ಕಾರುಗಳು ಹಾಗೂ ಬಿಡಿಭಾಗಗಳ ಮೇಲೆ ಈಗ ವಿಧಿಸಲಾಗುತ್ತಿರುವ ಜಿಎಸ್ಟಿ ದರದಲ್ಲಿ ಗಣನೀಯವಾಗಿ ಕಡಿತವಾದರೆ ಮಾತ್ರ ಆಟೋ ಉದ್ಯಮ ಉಸಿರಾಡೀತು ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಮುಂದೆ ನವರಾತ್ರಿ ಹಾಗೂ ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಜನ ಹೊಸ ಕಾರು, ಬೈಕುಗಳ ಖರೀದಿಗೆ ಮುಂದಾದರೆ ಚೇತರಿಕೆ ಇನ್ನಷ್ಟು ವೇಗ ಪಡೆದೀತು.

ಜವಳಿ ಉದ್ಯಮವೂ ಇನ್ನಿಲ್ಲದಷ್ಟು ಸಂಕಷ್ಟದಲ್ಲಿದೆ. ತಮಿಳುನಾಡಿನಲ್ಲಿ 200 ಉದ್ಯಮಗಳು ಮುಚ್ಚಿವೆ. ನಮ್ಮ ರಾಜ್ಯದಲ್ಲೂ ಸಣ್ಣ ಕೈಗಾರಿಕೆಗಳು ಸುಮಾರು 60 ಲಕ್ಷ ಉದ್ಯೋಗ ಸೃಷ್ಟಿಸಿದ್ದು, ಈ ಪೈಕಿ 10 ಲಕ್ಷ ಉದ್ಯೋಗಿಗಳು ಸದ್ಯ ಕೆಲಸ ಕಳೆದುಕೊಂಡಿದ್ದಾರೆ ಎನ್ನುತ್ತದೆ ಮಾಹಿತಿ. ಸರಕಾರದ ತೆರಿಗೆ ನೀತಿ, ನಿರ್ವಹಣ ವೆಚ್ಚದಲ್ಲಿ ಏರಿಕೆ ಹಾಗೂ ಕನಿಷ್ಠ ವೇತನ ಪದ್ಧತಿಯೂ ಉದ್ಯಮಗಳಿಗೆ ಹೊರೆಯಾಗುತ್ತಿದೆ. ಉತ್ತರ ಕರ್ನಾಟಕ ಹಾಗೂ ಉತ್ತರ ಭಾರತದ ಪ್ರವಾಹ ಸ್ಥಿತಿಯೂ ಗಾಯದ ಮೇಲೆ ಬರೆ ಎಳೆದಿದೆ.

ಚಿನ್ನದ ಬೆಲೆ ಗಗನಕ್ಕೇರಿದ್ದರಿಂದ ಆಭರಣ ತಯಾರಿಕೆ, ಮಾರಾಟ ಕ್ಷೇತ್ರದಲ್ಲೂ ತಲ್ಲಣವುಂಟಾಗಿದೆ. ಆರೋಗ್ಯ ಸೇವೆಗೂ ಹಿನ್ನಡೆಯಾಗಿದೆ. ರಿಯಲ್‌ ಎಸ್ಟೇಟ್‌, ಅದರೊಂದಿಗೆ ಸಿಮೆಂಟ್‌, ಪೀಠೊಪಕರಣ ಉದ್ಯಮಗಳು ಮತ್ತೂಮ್ಮೆ ಮಣ್ಣು ಮುಕ್ಕುತ್ತಿವೆ, ಹೊಟೇಲ್‌ ಉದ್ಯಮವೂ ಸುಖದಲ್ಲಿಲ್ಲ. ನವರಾತ್ರಿ – ದೀಪಾವಳಿ ಸಂದರ್ಭಕ್ಕಾದರೂ ಉದ್ಯಮ ಚೇತರಿಸಿಕೊಂಡು ದೇಶವನ್ನು ಸುಭದ್ರ ಆರ್ಥಿಕ ಶಕ್ತಿಯಾಗಿ ರೂಪಿಸಲಿ ಎಂದು ಆಶಿಸೋಣ.

Advertisement

Udayavani is now on Telegram. Click here to join our channel and stay updated with the latest news.

Next