Advertisement

ಕದನದಲ್ಲಿ ಚುನಾವಣಾ ಅಕ್ರಮಗಳದ್ದೇ ಸದ್ದು

09:43 AM Dec 04, 2019 | mahesh |

ಬೆಂಗಳೂರು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಭರಾಟೆ ಅಂತಿಮ ಘಟ್ಟದಲ್ಲಿದೆ. ಇದೇ ವೇಳೆ, ಚುನಾವಣಾ ಅಕ್ರಮ ಸಹ ಸಾಕಷ್ಟು ಸದ್ದು ಮಾಡಿದೆ. ಹಣ-ಹೆಂಡದ ಹಂಚಿಕೆ, ಮತದಾರರಿಗೆ ಆಮಿಷವೊಡ್ಡುವಲ್ಲಿ ಕ್ಷೇತ್ರಗಳು ಪೈಪೋಟಿಗಿಳಿದಂತಿವೆ.

Advertisement

ಈ 15 ಕ್ಷೇತ್ರಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ದಿನದಿಂದ ಡಿ.1ರವರೆಗೆ 4.16 ಕೋಟಿ ರೂ.ನಗದು, 4.58 ಕೋಟಿ ಮೊತ್ತದ ಅಕ್ರಮ ಮದ್ಯ, 4 ಸಾವಿರ ರೂ. ಮೌಲ್ಯದ ಮಾದಕವಸ್ತು ಹಾಗೂ 1.95 ಕೋಟಿ ರೂ.ಗಳ ಉಡುಗೊರೆ ವಸ್ತುಗಳು ಸೇರಿದಂತೆ ಒಟ್ಟು 10.70 ಕೋಟಿ ಅಕ್ರಮ ಹಣ ವಶಪಡಿಸಿಕೊಳ್ಳಲಾಗಿದೆ. ಅದೇ ರೀತಿ, ನೀತಿ ಸಂಹಿತೆ ಉಲ್ಲಂಘನೆ ಹಾಗೂ  ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ಒಟ್ಟು 197 ಎಫ್ಐಆರ್‌ ದಾಖಲಾಗಿದ್ದು, 30 ದೂರುಗಳು ಪರಿಶೀಲನೆಯ ಹಂತದಲ್ಲಿವೆ. ಈ ಎಫ್ಐಆರ್‌ಗಳ ಪೈಕಿ “ವೀರಶೈವ ಮತಗಳನ್ನು ಸೆಳೆಯುವ ಸಂಬಂಧ’ ಹೇಳಿಕೆ
ನೀಡಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ದಾಖಲಿಸಲಾಗಿರುವ ಎಫ್ಐಆರ್‌ ಪ್ರಮುಖವಾಗಿದೆ.

ಹುಣಸೂರಲ್ಲಿ ಹೆಚ್ಚು ಹಣ ಜಪ್ತಿ: ಹುಣಸೂರು ಕ್ಷೇತ್ರದಲ್ಲಿ ಅತಿ ಹೆಚ್ಚು 3.80 ಕೋಟಿ ಅಕ್ರಮ ಹಣ ಜಪ್ತಿ ಮಾಡಿಕೊಳ್ಳಲಾಗಿದೆ. ಇದರಲ್ಲಿ 2.07 ಕೋಟಿ ನಗದು, 74.44 ಲಕ್ಷ ಮೊತ್ತದ ಅಕ್ರಮ ಮದ್ಯ, 98.82ಲಕ್ಷ ರೂ.ಗಳ ಉಡುಗೊರೆ ವಸ್ತುಗಳು ಸೇರಿವೆ. ಮಹಾಲಕ್ಷ್ಮೀಲೇಔಟ್‌ ಕ್ಷೇತ್ರದಲ್ಲಿ ಅತಿ ಕಡಿಮೆ 1.85 ಲಕ್ಷ ರೂ.ನಗದು ವಶಪಡಿಸಿಕೊಳ್ಳಲಾಗಿದೆ. ಕೆ.ಆರ್‌.ಪುರದಲ್ಲಿ ಅತಿ ಹೆಚ್ಚು 1.37 ಕೋಟಿ ಮೌಲ್ಯದ
ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ.

197 ಎಫ್ಐಆರ್‌ಗಳು: ವೀರಶೈವ ಮತಗಳನ್ನು ಸೆಳೆಯುವ ವಿಚಾರವಾಗಿ ಹೇಳಿಕ್ಕೆ ನೀಡಿದ್ದ ಯಡಿಯೂರಪ್ಪ ವಿರುದಟಛಿದ ದೂರು ಸೇರಿದಂತೆ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಚುನಾವಣಾ ಅಕ್ರಮಗಳ ಕುರಿತು ಈವರೆಗೆ 197 ಎಫ್ಐಆರ್‌ಗಳನ್ನು ದಾಖಲಿಸಿಕೊಳ್ಳಲಾಗಿದೆ. ಇದರಲ್ಲಿ ನಗದು ಹಾಗೂ ಇತರ ಉಡುಗೊರೆ ವಸ್ತುಗಳನ್ನು ವಶಪಡಿಸಿಕೊಂಡ ಸಂಬಂಧ 143, ಚುನಾವಣಾ ನೀತಿ
ಸಂಹಿತೆ ಉಲ್ಲಂಘನೆ ದೂರುಗಳಿಗೆ ಸಂಬಂಧಿಸಿದಂತೆ 48 ಹಾಗೂ ಇತರ 6 ಎಫ್ಐಆರ್‌ಗಳು ಸೇರಿಕೊಂಡಿವೆ. 30 ದೂರುಗಳು ಆಯೋಗದ ಪರಿಶೀಲನೆಯಲ್ಲಿವೆ.

ಚಿಕ್ಕಬಳ್ಳಾಪುರದಲ್ಲಿ ಹೆಚ್ಚು: ಚಿಕ್ಕಬಳ್ಳಾಪುರದಲ್ಲಿ ಅತಿ ಹೆಚ್ಚು 67 ಎಫ್ಐಆರ್‌ಗಳು ದಾಖಲಾಗಿವೆ. ಉಳಿದಂತೆ ಹೊಸ ಕೋಟೆಯಲ್ಲಿ 32, ಯಲ್ಲಾಪುರದಲ್ಲಿ 15, ಕೆ.ಆರ್‌. ಪೇಟೆಯಲ್ಲಿ 13, ಹಿರೆಕೇರೂರಿನಲ್ಲಿ 12, ವಿಜಯನಗರದಲ್ಲಿ 10, ಹುಣಸೂರಿನಲ್ಲಿ 9, ರಾಣಿಬೆನ್ನೂರು, ಮಹಾಲಕ್ಷ್ಮೀಲೇಔಟ್‌
ನಲ್ಲಿ ತಲಾ 8, ಅಥಣಿಯಲ್ಲಿ 7, ಕಾಗವಾಡ, ಯಶವಂತಪುರ ದಲ್ಲಿ ತಲಾ 5, ಶಿವಾಜಿನಗರ, ಗೋಕಾಕ್‌, ಕೆ.ಆರ್‌.ಪುರದಲ್ಲಿ ತಲಾ 2 ಎಫ್ಐಆರ್‌ಗಳು ದಾಖಲಾಗಿವೆ.

Advertisement

ಪ್ರಮುಖರ ವಿರುದ್ಧ ಎಫ್ಐಆರ್‌: ಸಿಎಂ ಯಡಿಯೂರಪ್ಪ, ಡಿಸಿ ಎಂ ಗೋವಿಂದ ಕಾರಜೋಳ, ಪ್ರತಿಪಕ್ಷ
ನಾಯಕ ಸಿದ್ದರಾಮಯ್ಯ, ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌, ಸಚಿವ ಬಿ.ಶ್ರೀರಾಮುಲು, ಮಾಜಿ ಸಚಿವ
ಶಿವರಾಜ್‌ ತಂಗಡಗಿ ವಿರುದ್ಧ ಎಫ್ಐಆರ್‌ ದಾಖಲಾಗಿದೆ.

165 ಅಭ್ಯರ್ಥಿಗಳ ಕಣದಲ್ಲಿ: ಉಪ ಚುನಾವಣೆ ನಡೆಯಲಿರುವ 15 ಕ್ಷೇತ್ರಗಳಲ್ಲಿ ಕಾಂಗ್ರೆಸ್‌, ಬಿಜೆಪಿ,
ಜೆಡಿಎಸ್‌ ಅಭ್ಯರ್ಥಿಗಳು ಸೇರಿದಂತೆ ಒಟ್ಟು 165 ಮಂದಿ ಕಣದಲ್ಲಿದ್ದಾರೆ. ಈ ಕ್ಷೇತ್ರಗಳಲ್ಲಿ ಡಿ. 5ರಂದು ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. 37.82 ಲಕ್ಷ ಮತದಾರರು 4,185 ಮತಗಟ್ಟೆಗಳಲ್ಲಿ ಮತ ಚಲಾಯಿಸಲಿದ್ದಾರೆ. ಇದರಲ್ಲಿ 884 ಸೂಕ್ಷ್ಮಮತಗಟ್ಟೆಗಳನ್ನು ಗುರುತಿಸಲಾಗಿದೆ. 42,509 ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಇಂದು ಸಂಜೆ
6ರಿಂದ ಮೌನ ಅವಧಿ ಚುನಾವಣೆ ನಡೆಯಲಿರುವ 15 ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾನಕ್ಕೆ 48 ಗಂಟೆ ಮೊದಲು ಅಂದರೆ, ಡಿ.3ರ ಸಂಜೆ 6ರಿಂದ “ಮೌನ ಅವಧಿ’ (ಸೈಲೆಂಟ್‌ ಪಿರಿಯಡ್‌) ಜಾರಿಗೆ ಬರಲಿದೆ. ಈ ಅವಧಿಯಲ್ಲಿ ಬಹಿರಂಗ ಪ್ರಚಾರ, ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳಿಗೆ ಪ್ರತ್ಯೇಕ್ಷ ಆಥವಾ ಪರೋಕ್ಷವಾಗಿ ನೆರವು ಆಗಬಲ್ಲಂತಹ ಯಾವುದೇ ಸಮೀಕ್ಷೆ, ವಿಶ್ಲೇಷಣೆಗಳಿಗೆ ಅವಕಾಶ ಇರುವುದಿಲ್ಲ. ಕ್ಷೇತ್ರದ ವರು ಅಲ್ಲದ ಸ್ಟಾರ್‌ ಪ್ರಚಾರಕರು, ಪಕ್ಷದ ಮುಖಂಡರು ಕ್ಷೇತ್ರ ಬಿಟ್ಟು ತೆರಳಬೇಕು ಮತ್ತು ಈ ಅವಧಿಯಲ್ಲಿ ಚುನಾವಣೆಗೆ ಸಂಬಂಧಿಸಿದ ಪತ್ರಿಕಾ ಹೇಳಿಕೆ, ಸಂದರ್ಶನ ನೀಡುವಂತಿಲ್ಲ. ಪತ್ರಿಕಾಗೋಷ್ಠಿ ನಡೆಸುವಂತಿಲ್ಲ.

ವೀರಶೈವ ಮತಗಳ ವಿಚಾರವಾಗಿ
ಯಡಿಯೂರಪ್ಪ ನೀಡಿದ ಹೇಳಿಕೆ ವಿರುದ್ಧ ಈಗಾಗಲೇ ಎಫ್ಐಆರ್‌ ದಾಖಲಾಗಿದೆ. 15 ಜನ ಗೆಲ್ಲುತ್ತಾರೆ, ಎಲ್ಲರನ್ನೂ ಮಂತ್ರಿ ಮಾಡುತ್ತೇವೆ ಎಂಬ ಯಡಿಯೂರಪ್ಪ ಹೇಳಿಕೆ ಚುನಾವಣಾ ನೀತಿ ಸಂಹಿತೆಗೆ ವಿರುದಟಛಿವಾಗಿದೆ. ಚುನಾವಣೆ ಸಂದರ್ಭದಲ್ಲಿ ಇಂತಹ ಹೇಳಿಕೆ ನೀಡುವುದು ರಾಜಕೀಯ ಪಕ್ಷಗಳಲ್ಲಿ
ಸಂಪ್ರದಾಯವಾಗಿ ಬೆಳೆದಿದೆ. ಈ ಬಗ್ಗೆ ಸಮಾಜದಲ್ಲಿ ಚರ್ಚೆ ಆಗಬೇಕು, ಜನರೂ ಇದನ್ನು ಗಮನಿಸಬೇಕು.
● ಸಂಜೀವ್‌ ಕುಮಾರ್‌, ರಾಜ್ಯ ಮುಖ್ಯ ಚುನಾವಣಾಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next