Advertisement

ಬೆಳಗಾವಿ ಗಲಾಟೆ ಮಾಡಿದವರು ಅಸಲಿ ರೈತರೇ ಅಲ್ಲ: ರಂಗಸ್ವಾಮಿ

03:31 PM Nov 23, 2018 | Team Udayavani |

ಚಿತ್ರದುರ್ಗ: ಕಬ್ಬಿನ ಬಾಕಿ ಹಣ ಪಾವತಿಗಾಗಿ ಬೆಳಗಾವಿಯಲ್ಲಿ ನಡೆದ ಗಲಾಟೆಯಲ್ಲಿ ಭಾಗವಹಿಸಿದ್ದ ಒಂಭತ್ತು ಮಂದಿ ಅಸಲಿ ರೈತರೇ ಅಲ್ಲ. ಹೋರಾಟಗಾರರ ಸೋಗಿನಲ್ಲಿದ್ದ ಅವರೆಲ್ಲರೂ ರೈತ ಸಂಘಕ್ಕೆ ಕೆಟ್ಟ ಹೆಸರು ತರಲು ಹುನ್ನಾರ ನಡೆಸಿದ್ದಾರೆ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಆರೋಪಿಸಿದರು.

Advertisement

ಇಲ್ಲಿನ ಪ್ರವಾಸಿಮಂದಿರದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪದಾಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿ ಅವರು ಮಾತನಾಡಿದರು.  ಅಂದು ಗಲಾಟೆ ಮಾಡಿದ ಮುಖಂಡರೆಲ್ಲರೂ ವಿವಿಧ ಪಕ್ಷಗಳಲ್ಲಿ ಗುರುತಿಸಿಕೊಂಡು ರಾಜಕೀಯವಾಗಿ ಬೆಳೆದವರು. ರೈತ ಸಂಘಟನೆಗೆ ಕೆಟ್ಟ ಹೆಸರು ಬರಲಿ ಎನ್ನುವ ದುರುದ್ದೇಶದಿಂದ ಗಲಾಟೆ ಮಾಡಿದ್ದಾರೆ. ಅಂದು ನಡೆದ ಗಲಾಟೆಗೆ ನಮ್ಮ ಬೆಂಬಲ ಇಲ್ಲ ಎಂದು ಸ್ಪಷ್ಟಪಡಿಸಿದರು.

ನೀನು ಇಲ್ಲಿಯವರೆಗೆ ಎಲ್ಲಿ ಮಲಗಿದ್ದೆ ಎನ್ನುವ ಮೂಲಕ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರು ರೈತ ಮಹಿಳೆಯೊಬ್ಬಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಸರಿಯಲ್ಲ. ಮುಖ್ಯಮಂತ್ರಿ ಸೇರಿದಂತೆ ಯಾವುದೇ ಪಕ್ಷದ ನಾಯಕರಾದವರು ಬೇರೆಯವರ ಕುರಿತು ಮಾತನಾಡುವಾಗ ನಾಲಿಗೆ ಹಿಡಿತದಲ್ಲಿರಬೇಕು. ಕೀಳುಮಟ್ಟದ ಭಾಷೆ ಬಳಸಬಾರದು ಎಂದು ತಾಕೀತು ಮಾಡಿದರು.

ಸಾಲ ಮನ್ನಾ ವಿಚಾರದಲ್ಲಿ ದ್ವಂದ್ವ ನಿಲುವು ಬೇಡ: ಮುಖ್ಯಮಂತ್ರಿಗಳಿಗೆ ರೈತರ ಮೇಲೆ ಕಾಳಜಿ ಇದ್ದರೆ ಸಾಲ ಮನ್ನಾ ವಿಚಾರದಲ್ಲಿ ದ್ವಂದ್ವ ನಿಲುವು ಅನುಸರಿಸಬಾರದು. ಏಕೆಂದರೆ ಇದು ರೈತರು ಹಾಗೂ ಬ್ಯಾಂಕ್‌ ಅಧಿಕಾರಿಗಳ ಮಧ್ಯೆ ಸಂಘರ್ಷಕ್ಕೆಎಡೆ ಮಾಡಿಕೊಡಲಿದೆ. ಬೀಸುವ ದೊಣ್ಣೆ ತಪ್ಪಿಸಿಕೊಳ್ಳುವುದಕ್ಕಾಗಿ ಭರವಸೆ ನೀಡುವ ಬದಲು ಸಾಲ ಮನ್ನಾ ಮಾಡುವುದಿಲ್ಲ ಎಂದು ಮುಖ್ಯಮಂತ್ರಿಗಳು ನೇರವಾಗಿ ಹೇಳಿಬಿಡಲಿ ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ಧೋರಣೆ ಅನುಸರಿಸುತ್ತಿವೆ. ಅವರಿಗೆ ರೈತರ ಸಮಸ್ಯೆ ನಿವಾರಣೆ ಮಾಡಲು ಇಷ್ಟವಿಲ್ಲ. ಬ್ಯಾಂಕ್‌ನವರು ರೈತರಿಗೆ ಸಾಲದ ನೋಟಿಸ್‌ ಕೊಟ್ಟರೆ ರೈತರು ಮತ್ತಷ್ಟು ಆಕ್ರೋಶಗೊಳ್ಳುತ್ತಾರೆ. ಅದಕ್ಕಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಾಲಮನ್ನಾ ವಿಚಾರದಲ್ಲಿ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

Advertisement

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಕುಟುಂಬದವರು ಮುಖ್ಯಮಂತ್ರಿಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು. ಮಗನೆಂಬ ಮಮಕಾರವಿದ್ದರೆ ಮನೆಯಲ್ಲಿಟ್ಟುಕೊಳ್ಳಲಿ. ಎಚ್‌.ಡಿ. ಕುಮಾರಸ್ವಾಮಿ ಇಡೀ ರಾಜ್ಯಕ್ಕೆ ಮುಖ್ಯಮಂತ್ರಿ ಎಂಬುದನ್ನು ಅವರ ಕುಟುಂಬದವರು ಮರೆಯಬಾರದು ಎಂದು ಕುಟುಕಿದರು. 

ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ್‌ ಅವರನ್ನು ಅಖಂಡ ಕರ್ನಾಟಕ ರೈತ ಸಂಘದ ನಾಯಕರೆಂದು ಗುರುತಿಸಿಕೊಂಡಿದ್ದೇವೆ. ಆದರೆ ಅವರು ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದಾರೆ. ಹಾಗಾಗಿ ಬಾಬಾಗೌಡ ಪಾಟೀಲರು ರೈತ ಸಂಘದಲ್ಲಿರಬೇಕೇ, ಬೇಡವೇ ಎನ್ನುವ ವಿಚಾರದ ಕುರಿತು ಡಿಸೆಂಬರ್‌ 9 ರಂದು ಬೆಳಗಾವಿಯಲ್ಲಿ ಎಲ್ಲ ಜಿಲ್ಲೆಗಳ ರೈತರು ಸಭೆ ಸೇರಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದರು. 

ಚಿತ್ರದುರ್ಗ ಜಿಲ್ಲೆಯಲ್ಲಿ ಶೇಂಗಾ, ಈರುಳ್ಳಿ, ತೊಗರಿ, ಮೆಕ್ಕೆಜೋಳ ಹಾಗೂ ತೋಟಗಾರಿಕೆ ಬೆಳೆಗಳಾದ ತೆಂಗು, ಅಡಿಕೆ ಮತ್ತಿತರ ಫಸಲುಗಳು ಸತತ ಬರದಿಂದಾಗಿ ಸಂಪೂರ್ಣ ಒಣಗಿ ಹೋಗಿವೆ. ಫಸಲ್‌ ಬಿಮಾ ಯೋಜನೆಯಡಿ ರೈತರಿಗೆ ಶೀಘ್ರ ಪರಿಹಾರ ವಿತರಿಸಬೇಕು. ಧರ್ಮಪುರ ಕೆರೆಗೆ ಫೀಡರ್‌ ಚಾನಲ್‌ ಆಗಬೇಕೆಂದು ದೇವೇಗೌಡರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಮನವಿ ನೀಡಿದ್ದೆವು. ಇದುವರೆಗೂ ಆ ಕಾರ್ಯ ಆಗಿಲ್ಲ. ಆದ್ದರಿಂದ ಕೂಡಲೇ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದರು. 

ಸಭೆಯಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಣ್ಣ ಕುರುಬರಹಳ್ಳಿ, ತಾಲೂಕು ಅಧ್ಯಕ್ಷ ಎಂ. ಸಿದ್ದಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್‌ ರೆಡ್ಡಿ, ನಾರಪ್ಪ ಬಸ್ತಿಹಳ್ಳಿ, ತಿಪ್ಪೇಸ್ವಾಮಿ, ಷಣ್ಮುಖಪ್ಪ, ಎಲ್‌. ಬಸವರಾಜಪ್ಪ ಅಳಗವಾಡಿ, ಶಿವಕುಮಾರ್‌ ಹಳಿಯೂರು, ಶಾಂತಕುಮಾರ್‌, ಪರಮೇಶ್ವರಪ್ಪ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next