Advertisement

3 ಡ್ಯಾಂಗಳಿದ್ದರೂ ಕೋಟೆ ಜನರಿಗಿಲ್ಲ ನೀರು

09:23 PM Apr 26, 2019 | Team Udayavani |

ಎಚ್‌.ಡಿ.ಕೋಟೆ: ಬೇಸಿಗೆ ಪ್ರಾರಂಭವಾಗುತ್ತಿದಂತೆ ಗ್ರಾಮೀಣ ಪ್ರದೇಶದ ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮವಹಿಸಿ ಎಂದು ಸರ್ಕಾರ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಕ್ಕೆ ಸೂಚಿಸಿ ಸಾಕಷ್ಟು ಅನುದಾನ ನೀಡಿದ್ದರೂ ನೀರಿನ ಹಾಹಾಕಾರ ಮಾತ್ರ ತಪ್ಪುತ್ತಿಲ್ಲ.

Advertisement

ಸಭೆ ಕರೆದು ಎಚ್ಚರಿಸುತ್ತಿದ್ದರೂ ಸ್ಥಳೀಯ ಅಧಿಕಾರಿಗಳು ಮಾತ್ರ ತಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿರುವ ಕಾರಣ ತಾಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ತಲೆದೋರಿದ್ದು, ಕುಡಿಯುವ ನೀರಿಗಾಗಿ ಕಷ್ಟ ಪಡುವಂತ ದುಸ್ಥಿತಿ ಎದುರಾಗಿದೆ. ತಾಲೂಕಿನಲ್ಲಿ ಕಬಿನಿ, ನುಗು, ತಾರಕ ಜಲಾಶಯಗಳಿದ್ದರೂ ಬೇಸಿಗೆಯಲ್ಲಿ ನೀರಿಗಾಗಿ ಅಲೆದಾಡುವುದು ಮಾತ್ರ ತಪ್ಪುವುದಿಲ್ಲ.

ಅಂತರ್ಜಲ ಕುಸಿತ: ಒಂದು ಕಡೆ ಸುಡು ಬಿಸಿಲಿನ ತಾಪಮಾನ ದಿನೇ ದಿನೆ ಹೆಚ್ಚಾಗುತ್ತಿದ್ದು, ಅಂತರ್ಜಲದ ಮಟ್ಟ ಕುಸಿಯುತ್ತಿದೆ. ಗ್ರಾಮಕ್ಕೆ ಸರಬರಾಜು ಮಾಡುವ ಕೊಳವೆ ಬಾವಿಗಳಲ್ಲಿ ಅಂತರ್ಜಲ ಗಣನೀಯವಾಗಿ ಇಳಿಮುಖವಾಗುತ್ತಿದ್ದು, ಜೊತೆಗೆ ಅವೈಜ್ಞಾನಿಕ ಪೈಪ್‌ಲೈನ್‌ ಕೆಟ್ಟ ಮೋಟಾರುಗಳು ಸೇರಿದಂತೆ ಅನಿಯಮಿತ ಲೋಡ್‌ ಶೆಡ್ಡಿಂಗ್‌ನಿಂದಾಗಿ ಗ್ರಾಮಗಳಲ್ಲಿನ ಜನರು ಹನಿ ಹನಿ ನೀರನ್ನು ಸಂಗ್ರಹಿಸಲು ತಮ್ಮ ದಿನ ನಿತ್ಯದ ಕೆಲಸಕ್ಕೆ ಹೋಗದೇ ದಿನಗಟ್ಟಲೇ ಕಾಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಕಾಡಂಚಿನಲ್ಲೂ ನೀರಿಲ್ಲ: ತಾಲೂಕಿನ ಹಿರೇಹಳ್ಳಿ ಹಾಗೂ ಕೊತ್ತನಹಳ್ಳಿ ಗ್ರಾಮ ಕಾಡಂಚಿನ ಗ್ರಾಮವಾಗಿದ್ದು, ತಾಲೂಕಿನ ಜೀವನಾಡಿ ಎನಿಸಿರುವ ತಾರಕಾ ಜಲಾಶಯ ಮಡಿಲಿನಲ್ಲಿದ್ದರೂ ಇಲ್ಲಿನ ಜನರು ಕುಡಿಯಲು ನೀರು ಸಿಗದೇ ನಿತ್ಯ ಪರದಾಡುತ್ತಿರುವ ಸ್ಥಿತಿ ಇದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಸಮಸ್ಯೆ ದೂರಾಗಿಸುವ ಪ್ರಯತ್ನ ಮಾಡದೇ ಕೈಕಟ್ಟಿ ಕುಳಿತಿದ್ದಾರೆ.

ರೀಡ್ರಿಲ್ಲಿಂಗ್‌: ತಾಲೂಕು ಈ ಬಾರಿ ಬರಪೀಡಿತ ಪ್ರದೇಶವಾಗದೇ ಇದ್ದರೂ ಜನರು ಮತ್ತು ಜಾನುವಾರುಗಳು ಜೀವಿಸಲು ಅತ್ಯಮೂಲ್ಯವಾದ ಕುಡಿಯುವ ನೀರು ಸಮರ್ಪಕವಾಗಿ ಒದಗಿಸಲು ಸರ್ಕಾರ ಪಂಚಾಯತ್‌ ರಾಜ್‌ ಇಲಾಖೆ ಮೂಲಕ ಟಾಸ್ಕ್ಪೋರ್ಸ್‌ ಯೋಜನೆ ಅಗತ್ಯ ಇರುವ ಕಡೆ ಹೊಸದಾಗಿ ಕೊಳವೆ ಬಾವಿ ಕೊರೆಸಲು ಮತ್ತು ಅಂತರ್ಜಲ ಮಟ್ಟ ಕುಸಿದಿರುವ ಕೊಳವೆ ಬಾವಿಗಳಿಗೆ ರೀಡ್ರಿಲ್ಲಿಂಗ್‌ ಮಾಡಲು 25 ಲಕ್ಷ ರೂ. ಅನುದಾನ ನೀಡಿದೆ.

Advertisement

ನೀರಿಗಾಗಿ ಕಿ.ಮೀ. ನಡಿಗೆ: ಅದರೆ, ಇಲ್ಲಿನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಅನೇಕ ಗ್ರಾಮಗಳ ಜನರು ಹನಿ ಹನಿ ನೀರು ಸಂಗ್ರಹಿಸಲು ಕೂಲಿ ಕೆಲಸಕ್ಕೂ ಹೊಗದೆ ದಿನಗಟ್ಟಲೇ ಕಾದು ಕೂರಬೇಕಾದ ದುಸ್ಥಿತಿ ಉದ್ಭವಿಸಿದೆ. ಇನ್ನು ಕೆಲವರು ಮಕ್ಕಳು, ವಯಸ್ಸಾದವರು ಎನ್ನದೇ ಬಿಂದಿಗೆ ಹಿಡಿದು ಅಕ್ಕಪಕ್ಕದ ಜಮೀನಿನಲ್ಲಿರುವ ಕೊಳವೆ ಬಾವಿಗಳಿಂದ ಕಿ.ಮೀ.ಗಟ್ಟಲೆ ನಡೆದು ಕುಡಿಯುವ ನೀರನ್ನು ತರುತ್ತಿರುವ ದೃಶ್ಯ ಮನಕಲಕುತ್ತದೆ.

ಗ್ರಾಮದ ಜನರಿಗೆ ಕನಿಷ್ಠ ಕುಡಿಯುವ ನೀರು ಒದಗಿಸಲು ಉದಾಸೀನ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಜಿಲ್ಲಾ ಮತ್ತು ತಾಲೂಕು ಆಡಳಿತ ಸೂಕ್ತ ಕ್ರಮ ಕೈಗೊಂಡು ನಮ್ಮ ಸಂಕಷ್ಟಕ್ಕೆ ನೀಗಿಸಿ ಎಂದು ಹಿರೇಹಳ್ಳಿಯ ವೃದ್ಧೆ ಚಿನ್ನಮ್ಮ ಅವಲತ್ತುಕೊಳ್ಳುತ್ತಾರೆ. ಇನ್ನಾದರೂ ತಾಲೂಕು ಆಡಳಿತ ಹಾಗೂ ಕ್ಷೇತ್ರದ ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳು ಜನರು ಜೀವಿಸಲು ಅತ್ಯಮೂಲ್ಯವಾದ ಕುಡಿಯುವ ನೀರನ್ನು ಸಮರ್ಪಕವಾಗಿ ಒದಗಿಸಲು ಮುಂದಾಗಬೇಕಿದೆ.

ಹಣ ಬಂದಿದೆ, ಕ್ರಿಯಾಯೋಜನೆ ತಯಾರು: ಕುಡಿಯುವ ನೀರು ಸಂಬಂಧ ತೊಂದರೆ ಏರ್ಪಟ್ಟಾಗ ಹಿಂದೆ ಸುಮಾರು 5 ಲಕ್ಷ ರೂ. ವರೆಗೂ ತುರ್ತು ಕ್ರಮವಹಿಸಲು ಅವಕಾಶ ಇತ್ತು. ಈಗ ಸರ್ಕಾರದ ಹಂತದಲ್ಲೇ ಟೆಂಡರ್‌ ಪ್ರಕ್ರಿಯೆ ಆಗಬೇಕು. ಹೀಗಾಗಿ ಕೆಲವು ಕಡೆ ನೀರಿನ ಸಮಸ್ಯೆ ದೂರಾಗಿಸುವುದು ತಡವಾಗಿರಬಹುದು. ಅಯಾ ಗ್ರಾಮ ಪಂಚಾಯ್ತಿಯವರೇ ಕುಡಿಯುವ ನೀರಿಗೆ ಅನುದಾನ ಸದ್ಬಳಕೆ ಮಾಡಿಕೊಳ್ಳಲು ಸರ್ಕಾರ ಅವಕಾಶ ನೀಡಿದೆ. ಸರ್ಕಾರದಿಂದ ಕುಡಿಯುವ ನೀರು ಸಂಬಂಧ 25 ಲಕ್ಷ ರೂ. ಅನುದಾನ ಸದ್ಬಳಕೆ ಮಾಡಲಾಗಿದೆ. ಮತ್ತೆ 10 ಲಕ್ಷ ರೂ. ಅನುದಾನ ಬಂದಿದೆ. ಶೀಘ್ರ ಕ್ರಿಯಾಯೋಜನೆ ತಯಾರು ಮಾಡಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪಂಚಾಯತ್‌ ರಾಜ್‌ ಎಇಇ ಮಹೇಶ್‌ ತಿಳಿಸಿದ್ದಾರೆ.

* ಬಿ.ನಿಂಗಣ್ಣಕೋಟೆ

Advertisement

Udayavani is now on Telegram. Click here to join our channel and stay updated with the latest news.

Next