Advertisement

ವ್ಯಕ್ತಿತ್ವ ವಿಕಸನಕ್ಕೆ ರಂಗ ಚಟುವಟಿಕೆ ಸಹಕಾರಿ

01:35 PM Nov 23, 2022 | Team Udayavani |

ಮೈಸೂರು: ರಂಗ ಚಟುವಟಿಕೆಗಳು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತವೆ ಎಂದು ಕಿರುತೆರೆ ಹಾಗೂ ಚಲನಚಿತ್ರ ನಟ ಕಾರ್ತಿಕ್‌ ಮಹೇಶ್‌ ತಿಳಿಸಿದರು.

Advertisement

ಜೆಎಸ್‌ಎಸ್‌ ಕಲಾಮಂಟಪದಿಂದ ಜೆಎಸ್‌ ಎಸ್‌ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿರುವ “ಜೆಎಸ್‌ ಎಸ್‌ ರಂಗೋತ್ಸವ’ವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಸುಪ್ತ ಪ್ರತಿಭೆ ಹೊರತರಲು ರಂಗೋತ್ಸವಗಳು ಅಗತ್ಯ. ರಂಗಚಟುವಟಿಕೆಗಳಲ್ಲಿ ಪಾಲ್ಗೊಳ್ಳುವದರಿಂದ ಮಕ್ಕಳಲ್ಲಿ ನಾಯಕತ್ವ ಮತ್ತು ಸಂಘಟನಾ ಗುಣಗಳು ಬೆಳೆಯುತ್ತವೆ. ಇಂತಹ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಬೇಕು ಎಂದು ಸಲಹೆ ನೀಡಿದರು.

ಮೊಬೈಲ್‌ ಗೀಳಿನಿಂದ ಹೊರಬರಲಿ: ಇಂದಿನ ಮಕ್ಕಳು ಮೊಬೈಲ್‌ ಗೀಳಿಗೆ ಸಿಕ್ಕು ಅದರಿಂದ ಹೊರಬರಲಾಗದೆ ಪರದಾಡುತ್ತಿದ್ದಾರೆ. ಡೊಳ್ಳುಕುಣಿತ, ಕಂಸಾಳೆಯಂತಹ ನೃತ್ಯಗಳು, ನಾಟಕಗಳು, ಜನಪದ ಕಲೆಗಳು ಜೀವನದ ಭಾಗವಾಗಬೇಕು. ಜೆಎಸ್‌ಎಸ್‌ ಸಂಸ್ಥೆ ಈ ನಿಟ್ಟಿನಲ್ಲಿ ಒಂದು ವೇದಿಕೆಯನ್ನು ಕಲ್ಪಿಸಿ ಉತ್ತಮ ಕಾರ್ಯವನ್ನು ಮಾಡಿದೆ. ಪಠ್ಯೇತರ ಚಟುವಟಿಕೆಗಳು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತವೆ. ಆಲೋಚನಾ ಶಕ್ತಿಯನ್ನು ಬೆಳೆಸುತ್ತವೆ ಎಂದು ಹೇಳಿದರು.

ರಂಗೋತ್ಸವ ನಿರಂತರ: ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್‌ .ಪಿ.ಮಂಜುನಾಥ್‌ ಮಾತನಾಡಿ, ಜೆಎಸ್‌ಎಸ್‌ಕಲಾಮಂಟಪಕ್ಕೆ 50 ವರ್ಷ ಇತಿಹಾಸವಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹಿಂದೆ ರಾತ್ರಿಯಿಂದ ಬೆಳಗಿನ ಜಾವದವರೆಗೂ ನಾಟಕಗಳು ಜರುಗುತ್ತಿದ್ದವು.

ಜನರು ಅದೇ ರೀತಿಯಲ್ಲಿ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದರು. ನಶಿಸುತ್ತಿರುವ ಕಲೆಗಳ ಜೀವಂತಿಕೆಗಾಗಿ ಕಲಾಮಂಟಪದಿಂದ ನಿರಂತರ ವಿದ್ಯಾರ್ಥಿಗಳ ಮೂಲಕ ರಂಗೋತ್ಸವದಂತಹ ಕಾರ್ಯಕ್ರಮ ಗಳನ್ನು ಏರ್ಪಡಿಸಲಾಗುತ್ತಿದೆ ಎಂದು ತಿಳಿಸಿದರು.

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್‌.ಮಲ್ಲಿಕಾರ್ಜುನಸ್ವಾಮಿ ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next