Advertisement

ಮರ ಬಿದ್ದು ಗಾಯಗೊಂಡ ಮಹಿಳೆ ಇನ್ನೂ ಚಿಕಿತ್ಸೆಯಲ್ಲಿ

12:39 PM Jul 24, 2018 | Harsha Rao |

ಮಂಗಳೂರು: ಮಂಗಳಾ ದೇವಿಯಲ್ಲಿ ಗೊಂಡಿದ್ದ ಮಾರ್ನಮಿಕಟ್ಟೆಯ ಮಹಿಳೆ ಸುರೇಖಾ ಕೋಟ್ಯಾನ್‌ (53) ಇನ್ನೂ ಚೇತರಿಸಿಕೊಂಡಿಲ್ಲ. ಅವರು ಒಂದೂವರೆ ತಿಂಗಳಿನಿಂದ ಆಸ್ಪತ್ರೆಯಲ್ಲಿದ್ದಾರೆ. 

Advertisement

ಜೂ. 8ರಂದು ಶ್ರೀ ಮಂಗಳಾದೇವಿ ದೇವಸ್ಥಾನದ ಎದುರಿನ ನಾಗನಕಟ್ಟೆಯ ಬೃಹತ್‌ ಅಶ್ವತ್ಥ  ಮರದ ದೊಡ್ಡ ಗಾತ್ರದ ಗೆಲ್ಲೊಂದು ಬಿರುಗಾಳಿ ಮಳೆಗೆ ದಿಢೀರನೆ ಮುರಿದು ಬಿದ್ದು ನಂದಿಗುಡ್ಡೆಯ ಪ್ರವೀಣ್‌ ಸುವರ್ಣ(49), ಮಾರ್ನಮಿಕಟ್ಟೆಯ ಸುರೇಖಾ ಕೋಟ್ಯಾನ್‌ (53) ಮತ್ತು ತೇಜಸ್ವಿನಿ (20) ಹಾಗೂ ಜಪ್ಪು ಕುಡುಪಾಡಿಯ ರಿಕ್ಷಾ ಚಾಲಕ ನವೀನ್‌ ಮಡಿವಾಳ (45) ಗಾಯಗೊಂಡಿದ್ದರು. ದೇಗುಲದ ಎದುರಿನ ಛಾವಣಿ ಶೀಟ್‌ ಮತ್ತು ಎರಡು ದ್ವಿಚಕ್ರ ವಾಹನಗಳು ಹಾನಿಗೀಡಾಗಿದ್ದವು.

ಸುರೇಖಾ ಹೊರತುಪಡಿಸಿ ಉಳಿದವರು ಕೆಲವೇ ದಿನಗಳಲ್ಲಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದರು.
ಸುರೇಖಾ ಅವರ ತಲೆ, ಕುತ್ತಿಗೆ ಮತ್ತು ಕಾಲುಗಳಿಗೆ ಗಾಯಗಳಾಗಿದ್ದು, ಅತ್ತಾವರ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಿದ್ದು, ಅದು ಗುಣವಾಗಿದೆ. ತಲೆಯ ಗಾಯದಿಂದಲೂ ಗುಣಮುಖರಾಗಿದ್ದಾರೆ. ಆದರೆ ಕುತ್ತಿಗೆಗೆ ಆಗಿರುವ ಪೆಟ್ಟಿನಿಂದಾಗಿ ಇನ್ನೂ ಆಸ್ಪತ್ರೆಯಲ್ಲಿ ಉಳಿಯಬೇಕಾಗಿದೆ. ಕುತ್ತಿಗೆಯ ಹಾನಿಯನ್ನು ಸರಿಪಡಿಸಲು ಟ್ರಾಕ್ಷನ್‌ ಅಳವಡಿಸಲಾಗಿದೆ. 

ಟ್ರಾಕ್ಷನ್‌ ಹಾಕಿ ಮೂರು ವಾರ ಕಳೆದಿದ್ದು, ಅದನ್ನು ಇನ್ನೂ 3ವಾರಗಳಿಗೆ ವಿಸ್ತರಿಸಲಾಗಿದೆ. ಅಷ್ಟು ಸಮಯ ಆಸ್ಪತ್ರೆಯಲ್ಲಿರುವುದು ಅನಿವಾರ್ಯ.

ಕುತ್ತಿಗೆ ಸೂಕ್ಷ್ಮವಾದ ಅಂಗವಾಗಿದ್ದು, ಬೇಗ ಗುಣಮುಖರಾಗಲು ಆ ಭಾಗಕ್ಕೆ ಶಸ್ತ್ರಚಿಕಿತ್ಸೆ ಮಾಡುವಂತಿಲ್ಲ. ಅವರಿಗೆ ವಯಸ್ಸೂ ಹೆಚ್ಚಾಗಿದೆ. ವೈದ್ಯರು ಕೂಡ ಔಷಧಧ ಮೂಲಕವೇ ಗುಣಪಡಿಸುವ ಇರಾದೆ ಹೊಂದಿದ್ದಾರೆ. ಕುತ್ತಿಗೆಗೆ ಅಳವಡಿಸಿರುವ ಟ್ರಾಕ್ಷನ್‌ ಅತ್ಯಾಧುನಿಕವಾಗಿದ್ದು, ಅದನ್ನು ಉತ್ತರ ಭಾರತದಿಂದ ತರಿಸಲಾಗಿದೆ. ಕಳೆದ ಮೂರು ವಾರಗಳಿಂದ ಚೇತರಿಕೆ ಕಂಡಿದ್ದು, ಮುಂದಿನ ಮೂರು ವಾರಗಳಲ್ಲಿ  ಬಹುತೇಕ ಚೇತರಿಕೆ ಆಗ ಬಲ್ಲರು ಎಂದು ವೈದ್ಯರು ಹೇಳಿದ್ದಾರೆ. 

Advertisement

ಸುರೇಖಾ ಅವರ ಪತಿ ರತ್ನಾಕರ ಕೋಟ್ಯಾನ್‌ ಮಾಜಿ ಸೈನಿಕರಾಗಿದ್ದು, ಅವರು ಮತ್ತು ಇಬ್ಬರು ಪುತ್ರರು ಸೇರಿ ಆರೈಕೆ ಮಾಡುತ್ತಿದ್ದಾರೆ. ಹಿರಿಯ ಪುತ್ರ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಉದ್ಯೋಗವನ್ನು ಬಿಟ್ಟು ಮಂಗಳೂರಿಗೆ ಬಂದು ತಾಯಿಯ ಆರೋಗ್ಯ ನೋಡಿ ಕೊಳ್ಳುತ್ತಿದ್ದಾರೆ. 

ಚಿಕಿತ್ಸೆಯ ವೆಚ್ಚಕ್ಕಾಗಿ ರತ್ನಾಕರ ಕೋಟ್ಯಾನ್‌ ತಮ್ಮ ವಿಮಾ ಸೌಲಭ್ಯ ವನ್ನು ಬಳಸಿಕೊಂಡಿದ್ದರೂ ಅದು ಸಾಕಾಗದ ಕಾರಣ ಸರಕಾರದ ನೆರವು  ಯಾಚಿಸಿದ್ದಾರೆ. ಶಾಸಕ ವೇದವ್ಯಾಸ ಕಾಮತ್‌ ಆಸ್ಪತ್ರೆಗೆ ಭೇಟಿ ನೀಡಿ ತನ್ನಿಂದಾಗುವ ಸಹಾಯ ಒದಗಿಸುವ ಭರವಸೆ ನೀಡಿದ್ದಾರೆ. ಜಿಲ್ಲಾ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ರಾಮಕೃಷ್ಣ ರಾವ್‌ ಅವರೂ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next