Advertisement

ಗೆಲುವು ನನ್ನದಲ್ಲ, ಭ್ರಷ್ಟ ಮುಕ್ತ ಆಡಳಿತದ್ದು

12:44 PM May 25, 2019 | Team Udayavani |

ಬ್ಯಾಡಗಿ: ಹಾವೇರಿ ಲೋಕಸಭೆ ಕ್ಷೇತ್ರದಲ್ಲಿ ಮೂರನೇ ಬಾರಿ ಗೆದ್ದಿರುವುದು ಶಿವಕುಮಾರ ಉದಾಸಿಯಲ್ಲ, ಭ್ರಷ್ಟಾಚಾರ ಮುಕ್ತ ನರೇಂದ್ರ ಮೋದಿಯವರ ಆಡಳಿತಕ್ಕೆ ಸಿಕ್ಕ ಅಭೂತಪೂರ್ವ ಜಯ. ಇಲ್ಲಿ ಸೋತಿರುವುದು ಕಾಂಗ್ರೆಸ್‌ನ ನಡೆಸಿದ ದುರಾಡಳಿತವೇ ಹೊರತು ಡಿ.ಆರ್‌.ಪಾಟೀಲ ಅವರಲ್ಲ. ನನಗೆ ಆಶೀರ್ವದಿಸಿ ಮತ ನೀಡಿದ ಎಲ್ಲರಿಗೂ ಚಿರಋಣಿ ಎಂದು ಹ್ಯಾಟ್ರಿಕ್‌ ಗೆಲುವು ಸಾಧಿಸಿದ ಸಂಸದ ಶಿವಕುಮಾರ ಉದಾಸಿ ಹೇಳಿದರು.

Advertisement

ಬಿಜೆಪಿ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದ ಅವರು, ನರೇಂದ್ರ ಮೋದಿ ಅವರಲ್ಲೊಂದು ಅಗಾಧ ಶಕ್ತಿ ಇದೆ. ಈ ಐದು ವರ್ಷಗಳಲ್ಲಿನ ‘ನಾ ಖಾವುಂಗಾ.. ನಾ ಖಾನೆ ದೂಂಗಾ’ ಎಂಬ ಘೋಷ ವಾಕ್ಯದೊಂದಿಗೆ ಭ್ರಷ್ಟಾಚಾರ ರಹಿತ ಆಡಳಿತ ನಡೆಸಿದ್ದನ್ನು ದೇಶದ ಎಲ್ಲ ವರ್ಗದ ಜನ ಒಪ್ಪಿಕೊಂಡಿದ್ದಾರೆ. ತ್ರಿವಳಿ ತಲಾಖ್‌ ನಂತಹ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಮೂಲಕ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳು ಕೂಡ ಬಿಜೆಪಿಯನ್ನು ಬೆಂಬಲಿಸಿದ್ದು ಇಷ್ಟೊಂದು ಅಭೂತಪೂರ್ವ ಗೆಲುವಿಗೆ ಕಾರಣವಾಗಿದೆ ಎಂದರು.

ಬಿಜೆಪಿ ಅಸ್ತಿತ್ವವೇ ಇಲ್ಲದಂತಹ ಪಶ್ಚಿಮ ಬಂಗಾಳದಲ್ಲಿಯೂ ಶೇ. 40.2ರಷ್ಟು ಮತಗಳನ್ನು ಪಡೆಯುವ ಮೂಲಕ 18 ಸ್ಥಾನ ಬಿಜೆಪಿ ಪಡೆದುಕೊಂಡಿದೆ. ಇದಕ್ಕೆ ಪ್ರಮುಖ ಕಾರಣ ನರೇಂದ್ರ ಮೋದಿಯವರ ಜನಪರ ಆಡಳಿತ ಮತ್ತು ಬಿಜೆಪಿಯ ದೇಶ ಮೊದಲು ಎಂಬ ಸಿದ್ಧಾಂತಗಳು. ಇದರಿಂದ ದೇಶದಲ್ಲಿ ಮತ್ತು ರಾಜ್ಯದಲ್ಲಿ ನೆಲೆಯಿಲ್ಲ ಎಂಬುದನ್ನು ಕಾಂಗ್ರೆಸ್‌ ಇನ್ನಾದರೂ ಅರ್ಥೈಸಿಕೊಳ್ಳಲಿ ಎಂದರು.

ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ನೀರಾವರಿ (ಆಣೂರು ಕೆರೆ ತುಂಬಿಸುವ) ಯೋಜನೆಗೆ, ಹಣ ಕೇಳಿದರೆ ತಿರಸ್ಕರಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಮಗ ನಿಖೀಲ್ನನ್ನು ಸಂಸದನನ್ನಾಗಿ ಮಾಡಲು ಮಂಡ್ಯ ಜಿಲ್ಲೆಗೆ 8 ಸಾವಿರ ಕೋಟಿ ಅನುದಾನ ನೀಡಿದ್ದಲ್ಲದೇ, ಶತಾಯಗತಾಯ ಗೆಲ್ಲಿಸಲೇಬೇಕೆಂಬ ಉದ್ದೇಶದಿಂದ 100 ಕೋಟಿ ರೂ.ಹಣ ವ್ಯಯಿಸಿದ್ದಾರೆ. ಆದರೂ, ಜನಾದೇಶ ಅವರ ಪರವಾಗಿ ಬರಲಿಲ್ಲ. ಇಡೀ ಉತ್ತರ ಕರ್ನಾಟಕದ ಜನತೆಯ ಶಾಪವೇ ಇದಕ್ಕೆ ಕಾರಣವಾಗಿದೆ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಜ್ಜನ ಮಾತನಾಡಿ, ಕೇವಲ ಬ್ಯಾಡಗಿ ಮತಕ್ಷೇತ್ರದಲ್ಲಿ ಸುಮಾರು 25 ಸಾವಿರಕ್ಕೂ ಅಧಿಕ ಮತಗಳ ಅಂತರ ನೀಡಿದ್ದೀರಿ. ಕ್ಷೇತ್ರದ ಜನರು ಸಂಸದ ಶಿವಕುಮಾರ ಉದಾಸಿ ಸೇರಿದಂತೆ ಭಾರತೀಯ ಜನತಾ ಪಕ್ಷದ ಮೇಲಿಟ್ಟಿರುವ ಆ ನಂಬಿಕೆ ಎಂದಿಗೂ ದ್ರೋಹವೆಸಗದಂತೆ ನೋಡಿಕೊಳ್ಳುತ್ತೇವೆ. ಇಷ್ಟಕ್ಕೆಲ್ಲ ಕಾರಣೀಭೂತರಾದ ಕ್ಷೇತ್ರದ ಮತದಾರರಿಗೂ, ಕಾರ್ಯಕರ್ತರಿಗೂ ಹಾಗೂ ಬಿಜೆಪಿಯ ಎಲ್ಲ ಚುನಾಯಿತ ಪ್ರತಿನಿಧಿಗಳಿಗೂ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

Advertisement

ತಾಲೂಕಾಧ್ಯಕ್ಷ ಶಂಕ್ರಣ್ಣ ಮಾತನವರ, ಕಾರ್ಯದರ್ಶಿ ವೀರೇಂದ್ರ ಶೆಟ್ಟರ, ಮುಖಂಡರಾದ ಮುರಿಗೆಪ್ಪ ಶೆಟ್ಟರ, ಚನ್ನವೀರಗೌಡ ಬುಡ್ಡನ ಗೌಡ್ರ, ಬಿ.ಎಂ.ಛತ್ರದ, ಬಾಲಚಂದ್ರಗೌಡ ಪಾಟೀಲ, ಜಯಣ್ಣ ಮಲ್ಲಿಗಾರ, ಶಿವಬಸಪ್ಪ ಕುಳೇನೂರ, ಜಗದೀಶ ಕಣಗಲಭಾವಿ, ಉಮೇಶ ರಟ್ಟಿಹಳ್ಳಿ, ಸುರೇಶ ಯತ್ನಳ್ಳಿ, ಸುರೇಶ ಅಸಾದಿ, ನಂದೀಶ ವೀರನಗೌಡ್ರ, ಸುಮಂಗಲಾ ಪಟ್ಟಣಶೆಟ್ಟಿ, ಬಸವರಾಜ ಹಲಗೇರಿ, ಹನುಮಂತಪ್ಪ ನಾಯ್ಕರ್‌, ವನಿತ ಗುತ್ತಲ, ಶಿವನಗೌಡ ಬಸನಗೌಡ್ರ, ವಿಜಯ ಮಾಳಗಿ, ಪುರಸಭೆ ಅಭ್ಯರ್ಥಿ ಜ್ಯೋತಿ ಆಲದಗೇರಿ ಸೇರಿದಂತೆ ಇನ್ನಿತರರಿದ್ದರು.

ಬೃಹತ್‌ ರೋಡ್‌ ಶೋ
ಬಳಿಕ ಬಿಜೆಪಿ ಕಾರ್ಯಾಲಯದಿಂದ ಸಂಸದ ಶಿವಕುಮಾರ ಉದಾಸಿಯವರ ಮೆರವಣಿಗೆ ನಡೆಸಿದ ಕಾರ್ಯಕರ್ತರು, ರಟ್ಟಿಹಳ್ಳಿ ರಸ್ತೆ, ಹಳೇ ಪುರಸಭೆ, ಮುಖ್ಯರಸ್ತೆ, ಸುಭಾಸ್‌ ಸರ್ಕಲ್, ಸ್ಟೇಶನ್‌ ರಸ್ತೆಗಳಲ್ಲಿ ಸಂಚರಿಸಿ ಪಟ್ಟಣದ ಮತದಾರರಿಗೆ ಅಭಿನಂದನೆ ಸಲ್ಲಿಸಿದರು.
ಕೆರೆಗೆ ನೀರು ತುಂಬಿಸಲು ಬದ್ಧ

ಚುನಾವಣಾ ಪೂರ್ವದಲ್ಲಿ ಆಣೂರು ಕೆರೆಗೆ ನೀರು ತುಂಬಿಸುವ ವಿಚಾರದಲ್ಲಿ ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ್ದ ಕೆಲ ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೊಟ್ಟಂತಹ ಭರವಸೆಗಳಿಗೆ ಬಿಜೆಪಿ ಬದ್ಧವಾಗಿದೆ. ಆಣೂರು ಕೆರೆಗೆ ನೀರು ತುಂಬಿಸುವುದಕ್ಕಾಗಿ ಸ್ಥಳೀಯ ಶಾಸಕರೊಂದಿಗೆ ಕೈಜೋಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಅಗತ್ಯ ಅನುದಾನ ನೀಡಲಿದ್ದೇವೆ.
•ಶಿವಕುಮಾರ ಉದಾಸಿ, ಸಂಸದ
Advertisement

Udayavani is now on Telegram. Click here to join our channel and stay updated with the latest news.

Next