Advertisement

ವೀಕೆಂಡ್‌ ನಲ್ಲಿ ಬೆಂಗಳೂರಿನಲ್ಲಿ ಏನೇನು ಕಾರ್ಯಕ್ರಮಗಳಿವೆ?

09:44 AM May 06, 2019 | Hari Prasad |

ಡ್ಯಾನ್ಸ್‌ ಮೈಕೆಲ್‌ ಡ್ಯಾನ್ಸ್ : ಪಾಪ್‌ ಕಿಂಗ್‌ ಮ್ಯೂಸಿಕಲ್‌ ನೈಟ್‌
ಪ್ರಪಂಚದ ಅಸಂಖ್ಯ ಹೃದಯಗಳನ್ನು ತನ್ನ ನೃತ್ಯದ ಮೂಲಕ ಗೆದ್ದವನು ಮೈಕೆಲ್‌ ಜಾಕ್ಸನ್‌. ಜಾಗತಿಕ ಮಟ್ಟದಲ್ಲಿ ಅಸಲಿ ಸೂಪರ್‌ ಸ್ಟಾರ್‌ ಎಂದೇ ಬಿಂಬಿಸಲ್ಪಡುವ ಮೈಕೆಲ್‌ ಜಾಕ್ಸನ್‌, ದೇಶ, ಭಾಷೆ, ವರ್ಣ ಎಲ್ಲವನ್ನೂ ಮೀರಿದ್ದು ನೃತ್ಯ ಎಂಬುದನ್ನು ಪ್ರಪಂಚಕ್ಕೇ ಸಾರಿದನು. ಈ ವರ್ಷ ಆತನ ಜನ್ಮದಿನದ 60ನೇ ವರ್ಷಾಚರಣೆಯ ಪ್ರಯುಕ್ತ ಫೀನಿಕ್ಸ್‌ ಮಾಲ್‌ನಲ್ಲಿ ನಮನ ಸಲ್ಲಿಸುವ ಉದ್ದೇಶದಿಂದ ಅಭೂತಪೂರ್ವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

Advertisement

75 ಮಂದಿ ನೃತ್ಯ ಕಲಾವಿದರು ಮೈಕೆಲ್‌ ಜಾಕ್ಸನ್‌ ಮ್ಯೂಸಿಕಲ್‌ ನೈಟ್‌ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರಂಗಭೂಮಿ ಮತ್ತು ನೃತ್ಯ ಎರಡು ಪ್ರಕಾರಗಳನ್ನು ಮಿಳಿತಗೊಳಿಸಿರುವುದು ಈ ಕಾರ್ಯಕ್ರಮದ ವಿಶೇಷತೆ. ಪ್ರೇಕ್ಷಕರ ಕಾಲುಗಳನ್ನು ಕುಣಿಸುವಂತೆ ಮಾಡಬಲ್ಲ ಸಂಗೀತ, ನೃತ್ಯ ಸಂಯೋಜನೆ ಮತ್ತು ವೈಭವೋಪೇತ ಕಾಸ್ಟ್ಯೂಮ್‌ಗಳು ಈ ನೃತ್ಯ ಕಾರ್ಯಕ್ರಮದ ವೈಶಿಷ್ಟ್ಯ.


ಮೈಕೆಲ್‌ ಜಾಕ್ಸನ್‌ನ ಎಲ್ಲಾ ಲೈವ್‌ ಕಾರ್ಯಕ್ರಮಗಳಲ್ಲೂ ಅವರು ತೊಡುತ್ತಿದ್ದ ದಿರಿಸು ಆಕರ್ಷಣೆಯಾಗಿದ್ದಿತು. ಅದನ್ನೇ ನೆನಪಿಸುವ ಉದ್ದೇಶ ಕಾರ್ಯಕ್ರಮದ್ದು. ನೃತ್ಯ ಪ್ರದರ್ಶನ, ಕೇವಲ ಮನರಂಜನೆ ಮಾತ್ರವಲ್ಲದೆ ಸಂದೇಶವನ್ನೂ ನೀಡಲಿದೆ. ಟಿಕೆಟ್‌ಗಳನ್ನು ಬುಕ್‌ ಮೈ ಶೋ ಜಾಲತಾಣದಿಂದ ಪಡೆದುಕೊಳ್ಳಬಹುದಾಗಿದೆ.

ಎಲ್ಲಿ?: ಫೀನಿಕ್ಸ್‌ ಮಾರ್ಕೆಟ್‌ ಸಿಟಿ ಮಾಲ್‌, ವೈಟ್‌ಫೀಲ್ಡ್‌
ಯಾವಾಗ?: ಮೇ 4, ಸಂಜೆ 7

ಮೂರು ಪುಸ್ತಕಗಳ ಲೋಕಾರ್ಪಣೆ
ತೇಜು ಪಬ್ಲಿಕೇಷನ್ಸ್‌, ಶ್ರೀನಿವಾಸ ಪುಸ್ತಕ ಪ್ರಕಾಶನ ಮತ್ತು ನ್ಯೂ ವೇವ್‌ ಬುಕ್ಸ್‌ ವತಿಯಿಂದ ಮೂರು ಪುಸ್ತಕಗಳು ಬಿಡುಗಡೆಯಾಗುತ್ತಿವೆ. ಪ್ರೇಮಶೇಖರ ಅವರ “ಬೆಂಗಳೂರು ಮಾಫಿಯಾ’ ಕಥಾಸಂಕಲನ, ಶಾಂತಾ ನಾಗರಾಜ್‌ ಬರೆದ ವೈಚಾರಿಕ ಕಥನ “ಅಗ್ನಿಪುತ್ರಿ’ ಹಾಗೂ ಪಾರ್ವತಿ ಇಟಗಿಯವರ ಕಾದಂಬರಿ “ಹೀಗೊಂದು ಗ್ರಾಮಾಯಣ’, ಇವು ಬಿಡುಗಡೆಯಾಗುತ್ತಿರುವ ಪುಸ್ತಕಗಳು. ವಿದ್ವಾಂಸರಾದ ಡಾ. ಅನಂತಪದ್ಮನಾಭ ರಾವ್‌ ಹಾಗೂ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‌, ಸಾಹಿತಿ ಕೆ. ಸತ್ಯನಾರಾಯಣ, ಪ್ರಕಾಶನ ಸಲಹೆಗಾರ ಎನ್‌. ರಾಮನಾಥ್‌, ಭಾಗವಹಿಸಲಿದ್ದಾರೆ.

ಎಲ್ಲಿ?: ಅಕ್ಕಮಹಾದೇವಿ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ
ಯಾವಾಗ?: ಮೇ 5, ಭಾನುವಾರ ಬೆಳಗ್ಗೆ 10.30

Advertisement

ಬೆಳಕಿನ ಅಂಗಡಿಗೆ ಬನ್ನಿ
ಮಧ್ಯವಯಸ್ಸಿನ ಕಲಾವಿದೆಯೊಬ್ಬಳ ಅಂತರಂಗ, ಆಕೆಯ ದಿನನಿತ್ಯದ ಆಗುಹೋಗುಗಳು, ತಾಯ್ತನ ಮತ್ತಿತರ ಸಂಗತಿಗಳತ್ತ ಬೆಳಕು ಚೆಲ್ಲುವ “ಬೆಳಕಿನ ಅಂಗಡಿ’ ನಾಟಕ ಪ್ರದರ್ಶನ ನಗರದಲ್ಲಿ ಏರ್ಪಾಡಾಗಿದೆ. ಬೇಲೂರು ರಘುನಂದನ್‌ ರಚಿಸಿರುವ ಈ ನಾಟಕವನ್ನು ಎಸ್‌.ವಿ. ಸುಷ್ಮಾ ಅವರು ನಿರ್ದೇಶಿಸಿದ್ದಾರೆ.


ಬಣ್ಣಗಳು ಮತ್ತು ಚಿತ್ರಗಳ ಮೂಲಕ ಕಥಾನಾಯಕಿಯ ಮಾನಸಿಕ ಒಳ ತುಮುಲವನ್ನು ಪ್ರಕಟಿಸಿರುವುದು ಈ ನಾಟಕದ ವಿಶೇಷತೆ. ನಾಟಕದ ಪಾತ್ರಗಳು ಪ್ರೀತಿಗೋಸ್ಕರ ಹಂಬಲಿಸುತ್ತಾ ಬದುಕಿನರ್ಥವನ್ನು ಹುಡುಕುತ್ತಾ ಸಾಗುತ್ತವೆ. ಈ ಪಯಣದಲ್ಲಿ ಬದುಕಿಗೆ ಹೊಸ ಅರ್ಥವನ್ನು ಕಲ್ಪಿಸುವ ಪ್ರಯತ್ನವೂ ಅಡಗಿದೆ. ಥೇಮಾ ರಂಗಸಂಸ್ಥೆ ನಾಟಕವನ್ನು ಪ್ರಸ್ತುತ ಪಡಿಸುತ್ತಿದೆ.
ಎಲ್ಲಿ?: ರಂಗಶಂಕರ, ಜೆ.ಪಿ. ನಗರ
ಯಾವಾಗ?: ಮೇ 7, ಸಂಜೆ 7.30

ಮಕ್ಕಳು ಏನನ್ನು ತಿನ್ನಬೇಕು?
ದೊಡ್ಡವರು ತಿನ್ನುವ ಎಲ್ಲ ರೆಸಿಪಿಗಳು, ಮಕ್ಕಳಿಗೆ ಮ್ಯಾಚ್‌ ಆಗೋಲ್ಲ. ಹೆಚ್ಚು ಖಾರವಿಲ್ಲದ, ಆರೋಗ್ಯಕರ ಮತ್ತು ರುಚಿಕರವಾದ, ಸಲೀಸಾಗಿ ಸವಿಯ ಬಹುದಾದ ತಿನಿಸುಗಳು ಮಾತ್ರವೇ ಮಕ್ಕಳನ್ನು ಆಕರ್ಷಿಸುತ್ತವೆ. ಈ ಕಾರಣ, ಮಕ್ಕಳಿಗೆ ಅಡುಗೆ ಮಾಡೋದು ತಾಯಂದಿರಿಗೂ ಸವಾಲು. ಮಕ್ಕಳು ಏನನ್ನು ತಿನ್ನಬೇಕು? ಇಷ್ಟಪಟ್ಟು ತಿನ್ನಲು ಪ್ರೇರೇಪಿಸುವ ತಿನಿಸುಗಳು ಯಾವುವು? ಅವುಗಳ ತಯಾರಿಕೆ ಹೇಗೆ?- ಇವುಗಳನ್ನು ಹೇಳಿಕೊಡುವ ಕಾರ್ಯಾಗಾರ ನಡೆಯುತ್ತಿದೆ.


ಟಿಫಿನ್‌ ಬಾಕ್ಸ್‌ ಐಡಿಯಾಗಳೂ ಇಲ್ಲಿ ಸಿಗುತ್ತವೆ. ಹ್ಯಾಪಿ ಹೆಲ್ತಿ ಮಿ ಸಂಸ್ಥೆ ಆಯೋಜಿಸಿರುವ ಈ ಕಾರ್ಯಾಗಾರವನ್ನು ನಾಮು ಕಿಣಿ ಅವರು ನಡೆಸಿಕೊಡುತ್ತಿದ್ದಾರೆ.
ಯಾವಾಗ?: ಮೇ 4, ಶನಿವಾರ, ಬೆ.10.30- ಮ.1
ಎಲ್ಲಿ?: ಹ್ಯಾಪಿ ಹೆಲ್ತಿ ಮಿ ಆರ್ಗ್ಯಾನಿಕ್ಸ್‌, 12ನೇ ಮೇನ್‌, ಎಚ್‌ಎಎಲ್‌ 2ನೇ ಸ್ಟೇಜ್‌
ಪ್ರವೇಶ: 500 ರೂ.

ಮುಖವಾಡ ಲೋಕ
ಟಿಶ್ಯೂ ಪೇಪರನ್ನು ಜಗತ್ತು ನೋಡುವ ಬಗೆಯೇ ಬೇರೆ. ಬಳಸಿ, ಎಸೆದು ಬಿಡೋದು ಅದರ ಪಾಲಿಸಿ. ಆದರೆ, ಕಲಾವಿದ ಹಾಗೆ ನೋಡುವುದಿಲ್ಲ. ಟಿಶ್ಶೂ ಪೇಪರಿನಲ್ಲೂ ಆತ ಕಲಾಕೃತಿಯನ್ನು ಕಾಣುತ್ತಾನೆ ಅನ್ನೋದಕ್ಕೆ ಸಿಕೆಪಿಯ ಈ ಕಲಾವಿದರ ಕೈಚಳಕ ಸಾಕ್ಷಿ. ಕರ್ನಾಟಕ ಚಿತ್ರಕಲಾ ಪರಿಷತ್ತಿನ ಬಿವಿಎ ಫೌಂಡೇಶನ್‌ ಕಲಾ ತರಗತಿಯ ವಿದ್ಯಾರ್ಥಿಗಳು ತಯಾರಿಸಿರುವ ಮುಖವಾಡಗಳು, ಕಲಾಪ್ರಿಯರನ್ನು ಬೇರೆಯದ್ದೇ ಲೋಕಕ್ಕೆ ಕೊಂಡೊಯ್ಯುತ್ತವೆ.


130 ಕಲಾವಿದರ ಈ ಮುಖವಾಡ ಸೃಷ್ಟಿ, ಸಿಕೆಪಿಯ ವಾತಾವರಣಕ್ಕೆ ಭಿನ್ನ ಕಳೆ ತಂದುಕೊಟ್ಟಿದೆ. ಫೌಂಡೇಶನ್‌ ವಿಭಾಗದ ಮುಖ್ಯಸ್ಥ ಸೆಂಥಿಲ್‌ ಕುಮಾರ್‌ರ ಮಾರ್ಗದರ್ಶನ, ವಿಶಾಲ ಕಾವಟೇಕರ್‌ರ ನಿರ್ದೇಶನದಲ್ಲಿ ಒಟ್ಟು 130 ಮುಖವಾಡಗಳನ್ನು ರಚಿಸಲಾಗಿದೆ. ಯಕ್ಷಗಾನದ ಕಲಾವಿದ, ಆಫ್ರಿಕದ ಬುಡಕಟ್ಟು ಜನಾಂಗದ ಮನುಷ್ಯ, ಟಿಬೆಟ್‌ನ ಬೌದ್ಧ, ಹೆಣ್ಣು, ಜೋಕರ್‌, ರಾಕ್ಷಸ ಅಲ್ಲದೇ ಪ್ರಾಣಿಗಳ ಮುಖವಾಡಗಳನ್ನು ತಯಾರಿಸಲಾಗಿತ್ತು.

ಎಲ್ಲಿ?: ಚಿತ್ರಕಲಾ ಪರಿಷತ್‌, ಕುಮಾರಕೃಪಾ ರಸ್ತೆ


ಪಂಚಕನ್ಯೆಯರ ರಂಗಾಭಿವಂದನೆ
ರಂಗಪ್ರವೇಶ ಎಂಬುದು ವಿದ್ಯಾರ್ಥಿಗಷ್ಟೇ ಅಲ್ಲ, ಗುರುವಿಗೂ ಸಂಭ್ರಮದ, ಸಾರ್ಥಕದ ಘಳಿಗೆ. ವರ್ಷಗಳ ಕಾಲ ಕಲಿತ ವಿದ್ಯೆಯನ್ನು ಕಲಾರಸಿಕರ ಮುಂದಿಡುವ ಕಾತರ ವಿದ್ಯಾರ್ಥಿಯದ್ದಾದರೆ, ತನಗೊಲಿದ ಕಲೆಯನ್ನು ಶಿಷ್ಯನ ಮೂಲಕ ಮುಂದಿನ ಪೀಳಿಗೆಗೆ ದಾಟಿಸಿದ ಹೆಮ್ಮೆ ಗುರುವಿಗೆ.


ಈಗ “ಶಿವಪ್ರಿಯ’ ನಾಟ್ಯಶಾಲೆಯ ನೃತ್ಯಗುರು ಡಾ. ಸಂಜಯ್ ಶಾಂತಾರಾಂ ಪಾಲಿಗೆ ಆ ಹೆಮ್ಮೆ ಒದಗಿದೆ. ಅವರ ಐವರು ವಿದ್ಯಾರ್ಥಿನಿಯರು ಒಂದೇ ವೇದಿಕೆಯಲ್ಲಿ ಗೆಜ್ಜೆಪೂಜೆಗೆ ಸಜ್ಜಾಗಿದ್ದಾರೆ. ಕು. ರಕ್ಷಾ, ಧೃತಿ, ಶ್ರೇಯಾ, ನವ್ಯ ಮತ್ತು ಮೌಲ್ಯ ರೈ ಅವರ “ರಂಗಾಭಿವಂದನೆ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅರಂಗಂ ನೃತ್ಯಸಂಸ್ಥೆಯ ಕಲಾನಿರ್ದೇಶಕ ಕೆ.ಸಿ. ರೂಪೇಶ್‌ ಮತ್ತು ನೃತ್ಯಕಲಾವಿದೆ ಪ್ರಥಮಾ ಪ್ರಸಾದ್‌ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಎಲ್ಲಿ?: ಎಡಿಎ ರಂಗಮಂದಿರ, ಜೆ.ಸಿ.ರಸ್ತೆ
ಯಾವಾಗ?: ಮೇ 5, ಭಾನುವಾರ ಬೆಳಗ್ಗೆ 10.15

ನಗಿಸಲು ಬಂದ ಮಾನಸಪುತ್ರ


ಬೀChi ಅವರ ಬದುಕು- ಬರಹ ನಗೆಯನ್ನೇ ಉಸಿರಾಗಿಸಿಕೊಂಡಂಥವು. ಅವರೇ ಹೇಳುವಂತೆ, ಅವರ ಪ್ರತಿ ರಚನೆಗಳಲ್ಲೂ ಒಬ್ಬೊಬ್ಬ ಬೀChi ಇರುತ್ತಿದ್ದನಂತೆ. ಕಲಾವಿಲಾಸಿ ತಂಡವು ಈಗ ಪ್ರದರ್ಶನಕ್ಕೆ ಸಿದ್ಧಗೊಳಿಸಿರುವ “ಮಾನಸಪುತ್ರ’ ಕೂಡ ಈ ಮಾತಿಗೆ ಹೊರತಲ್ಲ. ಇದು ಬೀChi ಅವರ ಬದುಕಿನ ವಿಡಂಬನಾ ರೂಪಕ. ಅವರ ಒಳನೋಟಗಳನ್ನೂ ಕಟ್ಟಿಕೊಟ್ಟು ಮೆಚ್ಚುಗೆ ಪಡೆದ ರಂಗಪ್ರಯೋಗ. ಈಗ ಮತ್ತೆ ಬೀಇಜಜಿ ಮಾನಸಪುತ್ರನಾಗಿ ಬಂದು, ತಮ್ಮದೇ ಪಂಚಿಂಗ್‌ ಡೈಲಾಗ್‌ಗಳಿಂದ ರಂಗಪ್ರಿಯರನ್ನು ನಗಿಸಲಿದ್ದಾರೆ.

ಎಲ್ಲಿ?: ಮೇ 4, ಶನಿವಾರ, ಸಂ.7.30
ಯಾವಾಗ?: ಕೆ.ಎಚ್‌. ಕಲಾಸೌಧ, ಹನುಮಂತ ನಗರ
ಪ್ರವೇಶ: 100 ರೂ.

ಚಿಣ್ಣರಿಗೆ ಚೆಂದದ ರಾಮಾಯಣ


ಪುರಾಣ ಕತೆಗಳ ಪ್ರಚಂಡ ದರ್ಶನ ಮಕ್ಕಳಿಗೆ ಆಗಿಬಿಟ್ಟರೆ, ಬದುಕಿನುದ್ದಕ್ಕೂ ಅವರು ಕತೆಗಳನ್ನು ಆಸ್ವಾದಿಸುತ್ತಲೇ ಇರುತ್ತಾರೆ. ರಾಮಾಯಾಣ ಕೂಡ ಮಕ್ಕಳ ಪಾಲಿಗೆ ಒಂದು ರೋಮಾಂಚನ. ಅಲ್ಲಿನ ಸಾಹಸಗಳು, ಮಾಯಾದೃಶ್ಯಗಳು ಮಕ್ಕಳಲ್ಲಿ ಕೌತುಕ ಜತೆಗೆ ಅವರ ಕಲ್ಪನಾ ಪ್ರಪಂಚನವನ್ನೂ ವಿಸ್ತರಿಸುವಂಥವು.

ಮಕ್ಕಳ ದೃಷ್ಟಿಕೋನದಲ್ಲಿ ರಾಮಾಯಣವನ್ನು ದರ್ಶಿಸುವ ಪ್ರಯೋಗಕ್ಕೆ “ಹಾದಿಬದಿ’ ಮತ್ತು “ಮಂತ್ರ’ ಸಂಸ್ಥೆಯು ಕೈಹಾಕಿದೆ. ಇಲ್ಲಿ ಹನುಮಂತನ ಕತೆಗಳು ಮಕ್ಕಳನ್ನು ರಂಜಿಸಲಿವೆ. “ಅಳಿಲಾಯಣ’, ಲವಕುಶ ಲೀಲೆ ಮತ್ತು 301 ರಾಮಾಯಣದ ಕತೆಗಳು ಚಿಣ್ಣರಿಗೆ ಇಷ್ಟವಾಗಲಿದೆ. ಪೂರಕ ಸೆಟ್‌ನಲ್ಲಿ, ರವಿಕಿರಣ್‌ ರಾಜೇಂದ್ರನ್‌ರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಕತೆಗಳನ್ನು ಚಪ್ಪರಿಸಬಹುದು.

ಎಲ್ಲಿ?: ಮೇ 4, ಶನಿವಾರ, ಬೆ.10
ಯಾವಾಗ?: ರವೀಂದ್ರ ಕಲಾಕ್ಷೇತ್ರ
ಪ್ರವೇಶ: 150 ರೂ.

ದುಬೈನಿಂದ ಬಂದ ಕಾರ್ಟೂನು…


ನಾಳೆ (ಮೇ 5) ಅಂತಾರಾಷ್ಟ್ರೀಯ ವ್ಯಂಗ್ಯಚಿತ್ರಕಾರರ ದಿನಾಚರಣೆ. ಆ ಪ್ರಯುಕ್ತ, ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯು ಖ್ಯಾತ ವ್ಯಂಗ್ಯಚಿತ್ರಕಾರ ಪರೇಶ್‌ ನಾಥ್‌ ಅವರ ಕಾರ್ಟೂನ್‌ ಪ್ರದರ್ಶನವನ್ನು ಹಮ್ಮಿಕೊಂಡಿದೆ. ದುಬೈನ “ಖಲೀಜ್‌ ಟೈಮ್ಸ್‌’ನಲ್ಲಿ ಕಾರ್ಟೂನಿಸ್ಟ್‌ ಆಗಿರುವ ಪರೇಶ್‌, ಒಡಿಸಾದ “ಸಮಾಜ’ ದಿನಪತ್ರಿಕೆ, “ಇಂಡಿಯನ್‌ ಎಕ್ಸ್‌ಪ್ರೆಸ್‌’, “ನ್ಯಾಷನಲ್‌ ಹೆರಾಲ್ಡ್‌’ನಲ್ಲೂ ಕೆಲಸ ಮಾಡಿದ್ದಾರೆ.

ವಿಶ್ವಸಂಸ್ಥೆಯು ನೀಡುವ “ರಾನನ್‌ ಲೂರೀ ವ್ಯಂಗ್ಯಚಿತ್ರ ಪ್ರಶಸ್ತಿ’ಯನ್ನು ಸತತ ಎರಡು ಬಾರಿ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಪರೇಶ್‌ರದ್ದು.
ವಿಶ್ವಾದ್ಯಂತ ಹೆಸರು ಮಾಡಿರುವ ಅವರ ವ್ಯಂಗ್ಯಚಿತ್ರಗಳು ಈಗ ವ್ಯಂಗ್ಯಚಿತ್ರ ಗ್ಯಾಲರಿಯಲ್ಲಿ ನೋಡಲು ಸಿಗುತ್ತವೆ. ಹಿರಿಯ ಪತ್ರಕರ್ತ ರಾಮಕೃಷ್ಣ ಉಪಾಧ್ಯರು ಪ್ರದರ್ಶನವನ್ನು ಉದ್ಘಾಟಿಸಲಿದ್ದು, ಪ್ರದರ್ಶನವು ಮೇ 18ರವರೆಗೂ ನಡೆಯಲಿದೆ.

ಎಲ್ಲಿ?: ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿ, ನಂ.1 ಮಿಡ್‌ ಫೋರ್ಡ್‌ ಹೌಸ್‌, ಮಿಡ್‌ ಫೋರ್ಡ್‌ ಗಾರ್ಡನ್‌, ಟ್ರಿನಿಟಿ ವೃತ್ತ, ಎಂ.ಜಿ. ರಸ್ತೆ
ಯಾವಾಗ?: ಮೇ 4, ಶನಿವಾರ ಬೆಳಗ್ಗೆ 10.30
ಪ್ರದರ್ಶನದ ಸಮಯ: ಬೆಳಗ್ಗೆ 10-6

ಕನ್ನಡ ಕಾವ್ಯ ಮಾಣಿಕ್ಯ


ವೀರಲೋಕ ಪ್ರತಿಷ್ಠಾನದ ವತಿಯಿಂದ “ಕನ್ನಡ ಕಾವ್ಯ ಮಾಣಿಕ್ಯ’ ಕಾರ್ಯಕ್ರಮ ನಡೆಯುತ್ತಿದೆ. ಅಮ್ಮಂದಿರ ದಿನಾಚರಣೆ ಅಂಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅಮ್ಮಂದಿರ ಬಗ್ಗೆ ಕವನ ಸ್ಪರ್ಧೆಯೂ ನಡೆಯಲಿದೆ. ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯಕ್‌ ಸಮಾರಂಭ ಉದ್ಘಾಟಿಸಲಿದ್ದು, ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ, ಸಂಸ್ಕೃತಿ ವಿ.ವಿ. ಉಪ ನಿರ್ದೇಶಕ ಡಾ. ಸಂತೋಷ್‌ ಹಾನಗಲ್‌ ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ. ತೀರ್ಪುಗಾರರಾಗಿ ಕವಿ ಚಕ್ರವರ್ತಿ ಚಂದ್ರಚೂಡ್‌, ಸಾಹಿತಿ ಕೆ.ಎಲ್‌. ಕೃಷ್ಣಮೂರ್ತಿ, ಕನ್ನಡ ಮಾಣಿಕ್ಯ ಮಾಸಪತ್ರಿಕೆ ಸಂಪಾದಕ ನವೀನ್‌ ಸಾಗರ್‌ ಭಾಗವಹಿಸಲಿದ್ದು, ಕ.ಸಾ.ಪ. ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡರು ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ.

ಎಲ್ಲಿ?: ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್‌, ಚಾಮರಾಜಪೇಟೆ
ಯಾವಾಗ?: ಮೇ 4, ಶನಿವಾರ ಸಂಜೆ 5

 

Advertisement

Udayavani is now on Telegram. Click here to join our channel and stay updated with the latest news.

Next