Advertisement

ಮದ್ವೆ ಹಾಡು ಹೊರಬಂತು

10:09 AM Jan 28, 2020 | Lakshmi GovindaRaj |

ಇತ್ತೀಚೆಗೆ ಬಿಡುಗಡೆಯಾಗಿರುವ ತನ್ನ ಪೋಸ್ಟರ್‌, ಟೀಸರ್‌ ಮೂಲಕ ಒಂದಷ್ಟು ಮಂದಿಯ ಗಮನ ಸೆಳೆಯಲು ಯಶಸ್ವಿಯಾಗಿರುವ “ಮದುವೆ ಮಾಡ್ರೀ ಸರಿ ಹೋಗ್ತಾನೆ’ ಚಿತ್ರದ ಹಾಡುಗಳು ಇತ್ತೀಚೆಗೆ ಹೊರಬಂದಿವೆ. ಬಹುತೇಕ ಉತ್ತರ ಕರ್ನಾಟಕದ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಈ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ಉತ್ತರ ಕರ್ನಾಟಕದವರೇ ಆಗಿರುವ ಗುರುರಾಜ ಹೊಸಕೋಟೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

Advertisement

ಈ ವೇಳೆ ಚಿತ್ರರಂಗದ ಹಲವು ಗಣ್ಯರು, ಚಿತ್ರದ ಕಲಾವಿದರು, ತಂತ್ರಜ್ಞರು ಮೊದಲಾದವರು ಹಾಜರಿದ್ದರು. ಇನ್ನು ಬಿಡುಗಡೆಯಾಗಿರುವ “ಮದುವೆ ಮಾಡ್ರೀ ಸರಿ ಹೋಗ್ತಾನೆ’ ಚಿತ್ರದಲ್ಲಿ ಬರೋಬ್ಬರಿ ಹನ್ನೊಂದು ಹಾಡುಗಳಿವೆ. ಚಿತ್ರದ ಹಾಡುಗಳಿಗೆ ಅವಿನಾಶ್‌ ಬಾಸೂತ್ಕರ್‌ ಸಂಗೀತ ಸಂಯೋಜಿಸಿದ್ದಾರೆ. ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಗೋಪಿ ಕೆರೂರು, “ಇಡೀ ಚಿತ್ರ ಉತ್ತರ ಕರ್ನಾಟಕ ಭಾಷೆಯಲ್ಲಿದೆ. ಪಕ್ಕಾ ಕಮರ್ಷಿಯಲ್‌ ಸಿನಿಮಾ ಇದಾಗಿದ್ದು, ಉತ್ತರ ಕರ್ನಾಟಕ ಭಾಗದಲ್ಲೇ ಚಿತ್ರೀಕರಿಸಲಾಗಿದೆ.

ಊರಲ್ಲಿ ಸೋಮಾರಿ ಹುಡುಗನೊಬ್ಬನ ಮದುವೆ ಪುರಾಣ ಇಲ್ಲಿದೆ. ಸದಾ ಊರ ಜನರಿಂದ ಬೈಯಿಸಿಕೊಳ್ಳುವ ಹುಡುಗ ಕೊನೆಗೆ ಹೇಗೆ ಅದೇ ಊರ ಜನರಿಗೆ ಇಷ್ಟವಾಗುತ್ತಾನೆ ಎಂಬುದು ಕಥೆ. ಶೀಘ್ರದಲ್ಲಿಯೇ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ’ ಎಂದು ವಿವರಣೆ ನೀಡಿದರು. “ಎಸ್‌.ಎಲ್.ಡಿ. ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ಉದ್ಯಮಿ ಶಿವರಾಜ್‌ ಲಕ್ಷಣರಾವ್‌ ದೇಸಾಯಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

“ಮದುವೆ ಮಾಡ್ರೀ ಸರಿ ಹೋಗ್ತಾನೆ’ ಚಿತ್ರದಲ್ಲಿ ನಾಯಕನಾಗಿ ಶಿವ ಚಂದ್ರಕುಮಾರ್‌, ನಾಯಕಿಯಾಗಿ ಆರಾದ್ಯ, ಉಳಿದಂತೆ ರಮೇಶ್‌ ಭಟ್‌, ಅರುಣಾ ಬಾಲರಾಜ್‌, ಕಮಲ ದೇವಾಂಗ, ಚಿತ್ಕಲಾ ಬಿರಾದಾರ್‌, ಕೃಷ್ಣಮೂರ್ತಿ ಕವತ್ತಾರ್‌, ಸದಾನಂದ ಕಾಳಿ, ಚಕ್ರವರ್ತಿ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ನಾಯಕ ಶಿವ ಚಂದ್ರಕುಮಾರ್‌ “ನನ್ನ ಭವಿಷ್ಯ ರೂಪಿಸುವ ಸಿನಿಮಾ ಇದಾಗುತ್ತೆ ಎಂಬ ನಂಬಿಕೆ ಇದೆ.

ಚಿತ್ರದಲ್ಲಿ ನಾನೊಬ್ಬ ಪಡ್ಡೆ ಹುಡುಗ. ಸದಾ ಎಲ್ಲರಿಂದಲೂ ಬೈಯಿಸಿಕೊಳ್ಳುವ ಪಾತ್ರವಾಗಿದ್ದು, ಮದುವೆ ನಂತರ ಸರಿಹೋಗ್ತಾನಾ ಇಲ್ಲವಾ ಅನ್ನೋದೇ ಕಥೆ’ ಎಂದರು. “ಮದುವೆ ಮಾಡ್ರೀ ಸರಿ ಹೋಗ್ತಾನೆ’ ಚಿತ್ರಕ್ಕೆ ಸುರೇಶ್‌ ಬಾಬು ಛಾಯಾಗ್ರಹಣ, ವೆಂಕಿ ಸಂಕಲನ ಕಾರ್ಯವಿದೆ. ಸದ್ಯ ಆಡಿಯೋ ಬಿಡುಗಡೆಯ ಮೂಲಕ ಚಿತ್ರದ ಪ್ರಮೋಶನ್‌ ಕೆಲಸಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಫೆಬ್ರವರಿ ಅಥವಾ ಮಾರ್ಚ್‌ ವೇಳೆಗೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next