Advertisement

ನಾಲ್ಕು ವಿಧಾನಸಭಾ ಮತಕ್ಷೇತ್ರಗಳ ಮತ ಎಣಿಕೆ ನಾಳೆ

05:05 PM May 14, 2018 | Team Udayavani |

ಯಾದಗಿರಿ: ನಗರದ ಸರಕಾರಿ ಪದವಿ ಪೂರ್ವ ವಿದ್ಯಾಲಯದಲ್ಲಿ ವಿಧಾನಸಭೆ ಚುನಾವಣೆಯ ಮತದಾನಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಪಕ್ಷೇತರ ಅಭ್ಯರ್ಥಿಗಳು/ ಏಜೆಂಟರೊಂದಿಗೆ
ಚುನಾವಣಾ ಸಾಮಾನ್ಯ ವೀಕ್ಷಕರು ರವಿವಾರ ಸಭೆ ನಡೆಸಿದರು.

Advertisement

ಚುನಾವಣೆ ವೀಕ್ಷಕರು ವಿಧಾನಸಭೆವಾರು ಪ್ರತಿಶತ ಮತದಾನ, ಅತೀ ಹೆಚ್ಚು ಮತ್ತು ಕಡಿಮೆ ಮತದಾನ, ಮತದಾರರ ರಿಜಿಸ್ಟರ್‌ ಸೇರಿದಂತೆ ಮತದಾನದ ಸಮಗ್ರ ಮಾಹಿತಿಯನ್ನು ರಾಜಕೀಯ ಪಕ್ಷಗಳು, ಪಕ್ಷೇತರ ಅಭ್ಯರ್ಥಿಗಳು, ಏಜೆಂಟರಿಗೆ ನೀಡಿದರು. ಅಲ್ಲದೇ ಜಿಲ್ಲೆಯ 1,129 ಮತಗಟ್ಟೆಗಳಲ್ಲಿ ಚುನಾವಣೆ ಸುಸೂತ್ರವಾಗಿ ನಡೆದಿದ್ದು, ಯಾವುದೇ ಮತಗಟ್ಟೆಯಲ್ಲಿ ಮರುಮತದಾನದ ಅವಶ್ಯಕತೆ ಇಲ್ಲ ಎಂದು ತಿಳಿಸಿದರು. ಮೇ 15ರಂದು ನಗರದ
ಸರಕಾರಿ ಪದವಿ ಪೂರ್ವ ವಿದ್ಯಾಲಯದಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. ಒಂದು ವಿಧಾನಸಭಾ ಕ್ಷೇತ್ರಕ್ಕೆ 2 ಕೊಠಡಿಗಳಿದ್ದು, ಒಟ್ಟು 14 ಮೇಜುಗಳು ಮತ್ತು ಮತದಾನ ಖಾತ್ರಿ ಯಂತ್ರದ ಮತ ಚೀಟಿಗಳನ್ನು ಎಣಿಸಲು ಹಾಗೂ ಪೋಸ್ಟಲ್‌ ಬ್ಯಾಲೆಟ್‌ಗಳನ್ನು ಎಣಿಕೆ ಮಾಡುವ ಸಲುವಾಗಿ ಒಂದು ಕೌಂಟರ್‌ ಇರುತ್ತದೆ. ಒಂದು ಮೇಜು ಚುನಾವಣಾ ಅಧಿಕಾರಿ/ ಸಹಾಯಕ ಚುನಾವಣಾ ಅಧಿಕಾರಿಗೆ ಮೀಸಲಾಗಿರುತ್ತದೆ ಎಂದು ಚುನಾವಣಾ ವೀಕ್ಷಕರು ಮಾಹಿತಿ ನೀಡಿದರು.

ಭಾರತ ಚುನಾವಣಾ ಆಯೋಗವು ಜಿಲ್ಲೆಯಲ್ಲಿ ಮುಕ್ತ ಮತದಾನಕ್ಕಾಗಿ ಕೈಗೊಂಡ ಕ್ರಮಗಳ ಬಗ್ಗೆ ಅಭ್ಯರ್ಥಿಗಳು, ಏಜೆಂಟರು ಮೆಚ್ಚುಗೆ ವ್ಯಕ್ತಪಡಿಸಿದರು. ಸುರಪುರ ಮತ್ತು ಶಹಾಪುರ ವಿಧಾನಸಭಾ ಮತ ಕ್ಷೇತ್ರಗಳ ಸಾಮಾನ್ಯ ವೀಕ್ಷಕ
ಬೀರೇಂದ್ರ ಭೂಷಣ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸುರಪುರ ಚುನಾವಣಾಧಿಕಾರಿ ಪ್ರವೀಣಾ ಪ್ರಿಯಾ ಎನ್‌. ಡೇವಿಡ್‌, ಶಹಾಪುರ ಚುನಾವಣಾಧಿ ಕಾರಿ ನವೀನ್‌ ಜೋಸೆಫ್‌, ಸಹಾಯಕ ಚುನಾವಣಾಧಿಕಾರಿ ಹಾಗೂ
ಅಭ್ಯರ್ಥಿಗಳು, ಏಜೆಂಟರು ಉಪಸ್ಥಿತರಿದ್ದರು.

ಯಾದಗಿರಿ ಕ್ಷೇತ್ರದ ಸಾಮಾನ್ಯ ವೀಕ್ಷಕ ಡಾ| ಶಕೀಲ್‌ ಪಿ. ಅಹ್ಮದ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚುನಾವಣಾ ಧಿಕಾರಿ ಮಂಜುನಾಥ ಜಿ. ಎನ್‌., ಸಹಾಯಕ ಚುನಾವಣಾಧಿ ಕಾರಿ ಹಾಗೂ ಅಭ್ಯರ್ಥಿಗಳು/ ಏಜೆಂಟರು ಇದ್ದರು.

ಗುರುಮಠಕಲ್‌ ಕ್ಷೇತ್ರದ ಸಾಮಾನ್ಯ ವೀಕ್ಷಕ ಕೆ. ಶಾರದಾ ದೇವಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳ ನೋಡಲ್‌ ಅಧಿಕಾರಿ ಡಾ| ಬಿ.ಎಸ್‌. ಮಂಜುನಾಥ ಸ್ವಾಮಿ, ಚುನಾವಣಾಧಿಕಾರಿ ಪರಮೇಶ್ವರ ನಾಯ್ಕ, ಸಹಾಯಕ ಚುನಾವಣಾಧಿಕಾರಿ ಹಾಗೂ ಅಭ್ಯರ್ಥಿಗಳು, ಏಜೆಂಟರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next