Advertisement

ಧ್ವನಿಯ ಬಳಕೆ ಬೇರೆ ಧ್ವನಿವರ್ಧಕದ ಬಳಕೆ ಬೇರೆ

03:35 AM Jun 30, 2017 | |

ನೀವು ಒಂದು ಹಾಡನ್ನು ಆಲಿಸುತ್ತಿರುವಿರಿ ಎಂದು ಭಾವಿಸಿ. ಅದರ ಭಾವ ಮತ್ತು ಸಾಹಿತ್ಯ ನಿಮ್ಮ ಕಿವಿಯೊಳಗೆ ಇಳಿಯುತ್ತಿರುತ್ತದೆ. ಆ ಹಾಡು ನಿಮಗೆ ಇಷ್ಟವಾಗಿರಬಹುದು, ಇಲ್ಲವಾಗಿರಬಹುದು. ಆದರೆ, ಇಷ್ಟ-ಅನಿಷ್ಟಗಳು ನಿರ್ಧಾರವಾಗುವುದು ಕೇವಲ ಹಾಡುವವರಿಂದ ಅಲ್ಲ ಮತ್ತು ಹಾಡಿನ ಭಾವ- ಸಾಹಿತ್ಯದಿಂದಲೂ ಅಲ್ಲ. ಎಲ್ಲವೂ ಚೆನ್ನಾಗಿದ್ದರೂ, ಮೈಕ್‌ ಚೆನ್ನಾಗಿಲ್ಲದಿದ್ದರೆ ಏನೂ ಪ್ರಯೋಜನವಾಗಲಾರದು. ಒಬ್ಬ ಎಷ್ಟು ಚೆನ್ನಾಗಿ ಹಾಡಿದರೂ, ಮೈಕ್‌ ಸಿಸ್ಟಮ್‌ ಚೆನ್ನಾಗಿಲ್ಲದಿದ್ದರೆ ಅವನ ಹಾಡು ಪರಿಣಾಮಕಾರಿಯಾಗಿಲ್ಲವೆನ್ನಿಸಿ, “ಅಡ್ಡಿಯಿಲ್ಲ’ ಎಂಬ ಉದ್ಗಾರವಷ್ಟೇ ಕೇಳುಗರ ಬಾಯಿಯಿಂದ ಹೊರಬೀಳುತ್ತದೆ.

Advertisement

ಬಹುಶಃ ಬಡಗುತಿಟ್ಟಿನ ಅಗ್ರಗಣ್ಯ ಭಾಗವತ ಕುಂಜಾಲು ಶೇಷಗಿರಿ ಕಿಣಿಯವರಾಗಲಿ, ಹಿರಿಯ ಬಲಿಪ ನಾರಾಯಣ ಭಾಗವತರಾಗಲಿ ತೀರಿಕೊಳ್ಳುವವರೆಗೂ ಮೈಕ್‌ನ ಮುಂದೆ ಹಾಡಿದ್ದಾರೋ ಕಾಣೆ. ಅವರು ಹಾಡಿದ್ದರೂ ಅವರ ಧ್ವನಿ ಮೈಕ್‌ನಲ್ಲಿ ಜೋರಾಗಿ ಕೇಳಿಸಿ ಆ ಕಾಲದ ಕೇಳುಗರಿಗೆ ಕಿರಿಕಿರಿಯಾಗಿರಬಹುದು. ನೆನಪಾಗಿ ಉಳಿದಿರುವ ಗೋಪಾಡಿ ವಿಠಲ ಪಾಟೀಲರಾಗಲಿ, ಈಗ ನಮ್ಮೊಡನಿರುವ ಅಗರಿ ರಘುರಾಮ ಭಾಗವತರಾಗಲಿ ಮೈಕ್‌ ಸರಿ ಮಾಡಿಕೊಂಡು ಪದ ಹೇಳುವ ಕ್ರಮವಿರಲಿಲ್ಲ. ಮೈಕ್‌ ಆನ್‌ ಇದೆಯೋ ಇಲ್ಲವೊ, ಅದು ನಮ್ಮ ಬಾಯಿಯ ಸಮೀಪ ಇದೆಯೋ ಇಲ್ಲವೊ- ಯಾವುದೂ ಅವರಿಗೆ ಲಕ್ಷವಾಗುತ್ತಿರಲಿಲ್ಲ. ಅವರಿಗೆ ರಂಗ ಪ್ರಕ್ರಿಯೆಯ ಮೇಲೆಯೇ ಗಮನ.

ಆರೇಳು ದಶಕದ ಹಿಂದಿನವರು ಭಾಗ್ಯವಂತರು! 
ಯಾಕೆಂದು ಕೇಳುತ್ತೀರಾ? ಹಾಡುವವರ ಮತ್ತು ಕೇಳುವವರ ಮಧ್ಯೆ ಹೀಗೊಂದು ಉಪಕರಣವೇ ಇರಲಿಲ್ಲ. ಸಹಜ ಸ್ವರವನ್ನು ಶ್ರುತಿಗೆ ಹೊಂದಿಸಿ ಹೇಳುವುದೇ ಹಾಡುಗಾರನ ಕೌಶಲ; ಅದನ್ನು ಆಲಿಸುವುದು ಕೇಳುಗನ ಸಹೃದಯತೆ. 

ಬಹುಶಃ ಜೈಪುರದ ಅಥವಾ ಗ್ವಾಲಿಯರ್‌ನ ಯಾವುದೋ ಮಹಲ್‌ನ ಜಗಲಿಯ ಮೇಲೆ ಹೀಗೆ ಬಾಯಿದೆರೆದು ಹಾಡಿದವರಿರಬಹುದು, ಹಾಡುತ್ತಲೇ ಹೊಸ ಘರಾನಾಗಳು ಸೃಷ್ಟಿಯಾಗಿರಬಹುದು. ಕುಂಜಾಲು ಶೈಲಿ, ಬಲಿಪ ಶೈಲಿಗಳಿಂದ ತೊಡಗಿ ಹಿಂದೂಸ್ತಾನಿಯ ಘರಾನಾಗಳವರೆಗೆ ಎಲ್ಲವೂ ಹುಟ್ಟಿಕೊಂಡದ್ದು ಮೈಕ್‌ ವ್ಯವಸ್ಥೆ ಇಲ್ಲದ ಕಾಲದಲ್ಲಿಯೇ. ಧ್ವನಿ ಬಳಕೆಯ ಕ್ರಮಗಳನ್ನು ಪ್ರತ್ಯೇಕವಾಗಿ ಗುರುತಿಸಬಹುದಾಗಿದ್ದ ಕಾಲದಲ್ಲಿಯೇ ಇಂಥ ಬಹುಶೈಲಿಗಳು ಹುಟ್ಟಿಕೊಂಡದ್ದು ಎಂಬುದು ಗಮನಾರ್ಹ. ಮತ್ತೆ ಇದು ಯಾಕೆ ಸಾಧ್ಯವಾಗಲಿಲ್ಲ? ನಮ್ಮ ಧ್ವನಿವರ್ಧಕ ವ್ಯವಸ್ಥೆ ಧ್ವನಿವೈವಿಧ್ಯವನ್ನು, ಶೈಲಿ ಬಹುತ್ವವನ್ನು ಸಪಾಟುಗೊಳಿಸಿತೆ? 
ಗೊತ್ತಿಲ್ಲ. ಯೋಚಿಸಬೇಕಾಗಿದೆ. 

ಇತ್ತೀಚೆಗಂತೂ ಈ ಮೈಕ್‌ ಪ್ರಭಾವ ಎಲ್ಲ ಕಲೆಗಳಲ್ಲೂ ತುಂಬ ತೀವ್ರವಾಗಿರುವಂತಿದೆ.  ಕುನ್ನಕುಡಿ ವೈದ್ಯನಾಥನ್‌ ವಯಲಿನ್‌ ಕಛೇರಿಯನ್ನು ನಿಲ್ಲಿಸಿ, ಮೈಕ್‌ನವನಿಗೆ ಸೂಚನೆ ಕೊಟ್ಟದ್ದಿದೆ. ಕುನ್ನಕ್ಕುಡಿಯವರು ವಯಲಿನ್‌ನಲ್ಲಿ ಅದ್ಭುತವಾದ ಚಮತ್ಕಾರ ತೋರುತ್ತಿದ್ದರು. ಜಯಲಲಿತಾರ ಬಗ್ಗೆ “ಜಯಾ’ ಎಂಬ ರಾಗವನ್ನೂ ರೂಪಿಸಿದ ಈ ಪುಣ್ಯಾತ್ಮ ವಯಲಿನ್‌ನಲ್ಲಿ ಮಾಡಿದ ಸರ್ಕಸ್‌ನ್ನು ಯಾರೂ ಮರೆಯಲಿಕ್ಕಿಲ್ಲ. ಅವರ, ಕರ ಕೌಶಲಕ್ಕೆ ಸಾವಿರಾರು ಮಂದಿ ಸೇರಿರುವ ಸಭೆ ಕರತಾಡನ ಮಾಡುತ್ತಿತ್ತು. ಧ್ವನಿವರ್ಧಕದ ಸಹಾಯವಿಲ್ಲದಿರುತ್ತಿದ್ದರೆ ಅಷ್ಟು ದೊಡ್ಡ ಸಭೆಗೆ ಪಿಟೀಲು ಧ್ವನಿಯನ್ನು ತಲುಪಿಸಲು ಅವರಿಂದ ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ, ಅವರ ಕಲಾತ್ಮಕತೆ ಹಿಂದುಳಿದು, ಚಮತ್ಕಾರವೇ ಮುಂದೆ ನಿಲ್ಲಲು ಈ ಧ್ವನಿವರ್ಧಕವೇ ಕಾರಣವಾಯಿತು. ಮೈಕ್‌ ವ್ಯವಸ್ಥೆಯ ಬಳಕೆಯ ಬಗ್ಗೆ ಕಲಾವಿದ ಮತ್ತು ಕೇಳುಗರು ಮೈಮರೆತುಬಿಟ್ಟರೆ, ಅರಿವಿಗೆ ಬರದಂತೆಯೇ ಕಲೆ ಕೃಶವಾಗತೊಡಗುತ್ತದೆ, ಗಿಮಿಕ್‌ ಮುನ್ನೆಲೆಗೆ ಬರುತ್ತದೆ. 

Advertisement

ತಬಲಾದಲ್ಲಿ ರೈಲು ಓಡುವ ಶಬ್ದವನ್ನು ಬರಿಸಬಹುದು; ಆದರೆ, ಅದಕ್ಕೆ ಮೈಕ್‌ ಬೇಕೇ ಬೇಕು! ಕೆಲವರು ಮಿಮಿಕ್ರಿ ಮಾಡುತ್ತಾರೆ; ಕೋಗಿಲೆ ಕೂಗುವುದು, ನಾಯಿ ಬೊಗಳುವುದು ಹೀಗೆ. ಸಾಮಾನ್ಯವಾಗಿ ಮೈಕ್‌ನ ಸಹಾಯವಿಲ್ಲದೆ ಇಂಥ ಯಾವುದೇ ಧ್ವನಿ ಅನುಕರಣೆಯೂ ಸಾಧ್ಯವಾಗುವು ದಿಲ್ಲ. ಅನುಸರಣೆಯನ್ನು ಹಿಂದೆ ಉಳಿಸಿ, ಅನುಕರಣೆಯನ್ನು ಸಾಧ್ಯವಾಗಿಸಿದ್ದು ಧ್ವನಿವರ್ಧಕವೇ !

ಬಾಂಬೆ ಜಯಶ್ರೀಯವರು ವೇದಿಕೆಯ ಮೇಲೆ ಹೆಚ್ಚು ಕಾಲ ವಿಳಂಬಿಸದೆ ಆಲಾಪನೆ ಶುರು ಮಾಡುತ್ತಾರೆ; ಹಾಡನ್ನು ಎತ್ತಿಕೊಳ್ಳುತ್ತಾರೆ. ಆಗ ಮೃದಂಗದ ನುಡಿತವೂ ಆರಂಭವಾಗಿ, ಅದರ ಎಡ ಭಾಗದ ನುಡಿತಗಳು, ಬಡಿತವಾಗಿ ಕೇಳುಗರ ಎದೆಯ ಮೇಲೆ ಹೊಡೆದಂತಾಗುತ್ತದೆ. ಸಾಮಾನ್ಯವಾಗಿ ಈ ದಿನಗಳಲ್ಲಿ ಹೆಚ್ಚಿನ ಕೇಳುಗರು ಮದುವೆ, ಜಾತ್ರೆಗಳಲ್ಲಿ ಡೀಜೆಗಳನ್ನು ಕೇಳಿ ಬಂದವರಾದುದರಿಂದ, ಅವರ ಕಿವಿಗಳು ಬಡಬಡ ಶಬ್ದಕ್ಕೆ ದಿಕೊಂಡಿವೆಯಾದ್ದರಿಂದ ಅವರಿಗೆ ಈ ಸದ್ದು ಇಷ್ಟವಾಗಬಹುದು. ಎದೆಯ ಮೇಲೆ ಗೀರಿದಂತೆ ವಯಲಿನ್‌ ನುಡಿತ ಅನುಭವ ನೀಡದಿದ್ದರೆ ಅವರಿಗೆ ಸಮಾಧಾನವಾಗಲಿಕ್ಕಿಲ್ಲ. ಕೆಲವೊಮ್ಮೆ ಪ್ರಸಿದ್ಧ ಸಂಗೀತಗಾರರಿಗೆ, ಪಕ್ಕವಾದ್ಯದವರಿಗೆ ಮೈಕ್‌ ಸಿಸ್ಟಮ್‌ನ ಅಧ್ವಾನದ ಅರಿವು ಇರುತ್ತದೆ. ಆದರೆ, ಮೈಕ್‌ ವ್ಯವಸ್ಥೆಯನ್ನು ನಿಯಂತ್ರಿಸುವವನಿಗೆ ಹೇಳಿ ಪ್ರಯೋಜನವಿಲ್ಲ ಎಂದು ಅವರಿಗೆ ಗೊತ್ತಿರುತ್ತದೆ. ಅವನು ಮದುವೆ-ಜಾತ್ರೆಗಳಲ್ಲಿ ಮಾತ್ರ ವ್ಯವಸ್ಥೆ ಮಾಡಿ ಅನುಭವವಿರುವವನಾದ್ದರಿಂದ ಅವನು ಪವರ್‌, ಮಿಕ್ಸರ್‌ ಎಲ್ಲವನ್ನೂ ಕೊಟ್ಟು ಸಿಕ್ಕಿRಸಿಕ್ಕಿದ್ದನ್ನು ತಿರುಗಿಸಿ, ಯಾವುದೋ ಮೈಕ್ರೋಫೋನ್‌ನ ವಾಲ್ಯೂಮನ್ನು ಇನ್ನಾವುದಕ್ಕೋ ಕೊಟ್ಟು ಏನೇನೋ ಮಾಡಿಬಿಡುತ್ತಾನೆ. ಇದರ ವಹಿವಾಟೇ ಬೇಡವೆಂದು  ಬಾಂಬೆ ಜಯಶ್ರೀಯಂಥವರು ತಮ್ಮಷ್ಟಕ್ಕೆ ತಾವು ಹಾಡು ಶುರು ಮಾಡಿಯೇ ಬಿಡುತ್ತಾರೆ, ಒಂದೆರಡು ರಾಗಗಳ ಎತ್ತುಗಡೆಯಲ್ಲಿ ಕಛೇರಿಯನ್ನು ಮುಗಿಸಿಯೂ ಬಿಡುತ್ತಾರೆ.

ಬಹುಶಃ ನೂರು-ನೂರೈವತ್ತು- ನೂರರ್ವತ್ತು ವರ್ಷಗಳ ಹಿಂದೆ ಎಂದಿಟ್ಟುಕೊಳ್ಳೋಣ : ಯುರೋಪಿನ ಯಾವುದೋ ದೇಶದಲ್ಲಿ ವೈಜ್ಞಾನಿಕ ಕ್ರಾಂತಿಯ ಫ‌ಲವಾಗಿ ಹುಟ್ಟಿಕೊಂಡಿರಬಹುದು-ಲೌಡ್‌ ಸ್ಪೀಕರ್‌ ಸಿಸ್ಟಮ್‌. ಮುಖ್ಯವಾಗಿ, ದೊಡ್ಡ ಸಭೆಗಳ ಮುಂದೆ ಭಾಷಣ ಮಾಡಲು, ಎಲ್ಲರಿಗೂ ಮಾತು ಕೇಳಿಸುವಂತೆ ಮಾಡಲು ಈ ಉಪಕರಣವನ್ನು ಬಳಸಲಾಗುತ್ತಿತ್ತು¤. ಇದು ಲೌಡ್‌ ಸ್ಪೀಕರ್‌ ; ಲೌಡ್‌ ಸಿಂಗರ್‌ ಅಲ್ಲ ! ಆದರೂ, ಅಲ್ಲಿನ ರಂಗಪ್ರದರ್ಶನಗಳಿಗೂ ಇದನ್ನು ಕ್ರಮೇಣ ಬಳಸಿದರು. ಅದು ಹಡಗಿನಲ್ಲಿ ಭಾರತಕ್ಕೂ ತೇಲಿ ಬಂತು ಅನ್ನಿ. 

1905ರಲ್ಲಿ ಧ್ವನಿದಾಖಲೆಯಾದ ಗೌಹಾರ್‌ ಜಾನ್‌ ಅವರ ತುಮ್ರಿಯೊಂದು ಯೂಟ್ಯೂಬ್‌ನಲ್ಲಿ ಲಭ್ಯ ಇದೆ. ಸಾಧ್ಯವಾದರೆ ಕೇಳಿ. ಗೌಹಾರ್‌ ಜಾನ್‌ 1873ರಲ್ಲಿ ಹುಟ್ಟಿ 1930ರವರೆಗೆ ಬಾಳಿದವರು. ಇಂಡಿಯನ್‌ ಗ್ರಾಮೋಫೋನ್‌ ಕಂಪೆನಿ ಅವರ ಧ್ವನಿಯನ್ನು ದಾಖಲಿಸಿತ್ತು. ಭಾರತೀಯ ಸಂಗೀತದಲ್ಲಿ ಇದು ಮೊತ್ತಮೊದಲ ರೆಕಾರ್ಡಿಂಗ್‌! ಆ ಧ್ವನಿಯನ್ನು ಈಗ ಕೇಳಿದರೆ; ನಮ್ಮ ಕಿವಿಯಿನ್ನೂ ಮೈಕ್‌ನ ಹಾವಳಿಗೆ ಹಾಳಾಗಿರದಿದ್ದರೆ ; ನಮ್ಮನ್ನು ಆ ಕಾಲಕ್ಕೆ ಒಯ್ದು ನಿಲ್ಲಿಸಿದ ಹಾಗಾಗುತ್ತದೆ. ಅಂಥ ಸಹಜ ಸ್ವರವದು. ಈಗ ಸ್ಟುಡಿಯೋಗಳಲ್ಲಿ ಕಿವಿಗೆ, ಬಾಯಿಗೆ ಎಲ್ಲ ಇಡುತ್ತಾರೆ ನೋಡಿ, ಅಂಥ ಉಪಕರಣಗಳು ಆವತ್ತು ಇರಲೇ ಇಲ್ಲ. 

ಯಕ್ಷಗಾನ ಕ್ಷೇತ್ರಕ್ಕೆ ಮೈಕ್‌ ಪ್ರವೇಶವಾಗುವ ಕಾಲವನ್ನು ಊಹಿಸಿಕೊಳ್ಳೋಣ. ಯಕ್ಷಗಾನದ ರಂಗಸ್ಥಳದ ಮುಂದೆ ಮತ್ತು ಭಾಗವತರ ಮುಂದೆ ಎರಡು ಗುಂಡಿನಂಥ ಮೈಕ್ರೋಪೋನ್‌ಗಳು ತೂಗಿಸುತ್ತಿದ್ದರು. ಕಲಾವಿದರಿಗಾಗಲಿ, ನೋಡುಗರಿಗಾಗಲಿ ಅದರ ಲಕ್ಷ್ಯವಿರಲಿಲ್ಲ. ಕೆಲವೊಮ್ಮೆ ಅದು ಅದರಷ್ಟಕ್ಕೇ ತಿರುಗಿ ಯಾವುದೋ ಕಡೆ ಮುಖ ಮಾಡಿ ನಿಲ್ಲುತ್ತಿತ್ತು. ಹೊರಗೆ ಕಟ್ಟಿರುವ ಕಬ್ಬಿಣದ ಮೈಕ್‌ (ಹಾರ್ನ್) ರಂಗಸ್ಥಳದೊಳಗಿನ ಸಕಲ ಕಲಾಪಗಳನ್ನು ಹೊರಜಗತ್ತಿಗೆ ಸಾಗಿಸುತ್ತಿತ್ತು. ಯಕ್ಷಗಾನದ ಚೆಂಡೆಯ ಮಾಧುರ್ಯವನ್ನು ಆ ಹಾರ್ನ್ ಕೆಡಿಸಲಿಲ್ಲ. ಕಾಳಿಂಗ ನಾವಡರ ಪ್ರಸಿದ್ಧಿಗೆ ಮೈಕ್‌ ಪೂರಕವಾಯಿತು. ದಾಮೋದರ ಮಂಡೆಚ್ಚರು ಮೈಕ್‌ನಿಂದಾಗಿ ಇಳಿಸ್ವರದಲ್ಲಿ ಹಾಡಿ ಜನರಂಜನೆಗೊಳಿಸಿದರು. ಪುಣ್ಯವಶಾತ್‌ ಅವರಿಬ್ಬರ ಕಾಲದಲ್ಲಿಯೂ ಮದ್ದಲೆಗೆ ಮೈಕ್‌ ಇಡುತ್ತಿರ‌ಲಿಲ್ಲ ; ಹಾಡಿನ ಧ್ವನಿ ಮುಕ್ಕಾಗುತ್ತಿರಲಿಲ್ಲ. ಇವತ್ತು ಹೊಸ ನಮೂನೆಯ ಸೌಂಡ್‌ಬಾಕ್ಸ್‌ಗಳು ಬಂದು, ಧ್ವನಿವರ್ಧನೆಯ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳಾಗಿವೆ. ಇಳಿಸ್ವರದವರು ಏರುಧ್ವನಿಯಲ್ಲಿ ಹಾಡಬಹುದಾದ ಅನುಕೂಲತೆಯಿದೆ. ಬದಲಾವಣೆಯ ಗಾಳಿಗೆ ಕಲೆಯೂ ಸಿಕ್ಕಿಕೊಂಡಿದೆ.

ಪಾಶ್ಚಾತ್ಯ ಶೈಲಿಯ ಆರ್ಕೆಸ್ಟ್ರಾದ ಮನೋಧರ್ಮ ಎಲ್ಲ ಕಲೆಗಳ ಮೇಲೂ ಪ್ರಭಾವ ಬೀರಿದಂತಿದೆ. ಕೆಲವೊಮ್ಮೆ ಸಂಗೀತ ಕಛೇರಿಯಲ್ಲಿ ಮೃದಂಗವೂ ಘಟವೂ ಒಟ್ಟೊಟ್ಟಿಗೆ ನುಡಿಸಲ್ಪಡುತ್ತವೆ, ಮೋರ್ಸಿಂಗ್‌ ಮತ್ತು ವಯಲಿನ್‌ ಎರಡೂ ಸದ್ದು ಮಾಡುತ್ತವೆ. ಸಂಗೀತದ ಪರಂಪರೆಯಲ್ಲಿ ಇನ್ನಷ್ಟು ವಾದ್ಯಗಳನ್ನು ಉಲ್ಲೇಖೀಸಿರುವ ಕಾರಣ ಅವುಗಳನ್ನೆಲ್ಲ ಒಂದು ಕಛೇರಿಯಲ್ಲಿ ಬಳಸಬಹುದು. ಆದರೆ, ಈ ಧ್ವನಿವರ್ಧಕದ ಹಾವಳಿಯಲ್ಲಿ ಇವೆಲ್ಲವೂ ಒಟ್ಟೂ ಗದ್ದಲದ ಹಾಗೆ ಕೇಳಿಸುತ್ತವೆಯೇ ಹೊರತು, ಗಾಯನಕ್ಕೆ ಪ್ರಾಶಸ್ತ್ಯವಿರುವುದಿಲ್ಲ. ಈಗಂತೂ ಬಹುವಾದ್ಯ ಗೋಷ್ಠಿಗಳೇ ಶುರುವಾಗಿ ಬಿಟ್ಟಿವೆ. ಒಂದೊಂದು ವಾದ್ಯ ನುಡಿಸುವಾಗ ಹಿತವಾಗಿರುತ್ತದೆ. ಆದರೆ, ಎಲ್ಲವನ್ನೂ ಒಮ್ಮೆಲೇ ನುಡಿಸುವಾಗ, ವರ್ಧಕದ ಮೂಲಕ ಧ್ವನಿಯೂ ಅಧಿಕವಾಗಿ, ಒಟ್ಟೂ ದೈವಾವೇಶದ ಅನುಭವವಾದರೆ ಅಚ್ಚರಿಯಿಲ್ಲ. ಇತ್ತೀಚೆಗೆ ಯಕ್ಷಗಾನದ ಕಲಾವಿದರಲ್ಲಿ ಮತ್ತು ಪ್ರೇಕ್ಷಕ‌ರಲ್ಲಿ ಇದೇ ಪ್ರವೃತ್ತಿ ಆರಂಭವಾಗಿದೆ. ಮೈಕ್‌ ಇಲ್ಲದ ಕಾಲದಲ್ಲಿ ಯಕ್ಷಗಾನದ ಜೋಡಾಟದಲ್ಲಿಯೂ ಸೊಗಸಿತ್ತು. ಈಗ? ಬರೀ ಗುಲ್ಲು ! 

ಏನು ಮಾಡಲೂ ಸಾಧ್ಯವಿಲ್ಲ. ಕಾಲಧರ್ಮ. “ನನಗೆ ಮೈಕೇ ಬೇಡ, ಯಾರು ಕೇಳಲಿ ನಾನು ಹಾಡುವುದಿಲ್ಲ’ ಎಂದು ಹೇಳುವವನು ಮನೆಯಲ್ಲಿಯೇ ಕುಳಿತು ಹಾಡಬೇಕಾದೀತು. ಧ್ವನಿ ತಂತ್ರಜ್ಞಾನವನ್ನು ನಿರಾಕರಿಸುವ ಬದಲು ಮೈಕ್‌ ನಿಯಂತ್ರಣ ಮತ್ತು ಬಳಕೆ ಕೂಡ ಒಂದು ಕೌಶಲದ ಸಂಗತಿ ಎಂದು ಪರಿಗಣಿಸಬೇಕಾಗಿದೆ. ಹೆಜ್ಜೆಗಾರಿಕೆ, ನಾಟ್ಯಾಭಿನಯ, ವೇಷಭೂಷಣ- ಇವುಗಳನ್ನೆಲ್ಲ ಒಟ್ಟರೊಟ್ಟಾರೆ ಬಳಸಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಧ್ವನಿವರ್ಧಕದ ವಿನಿಯೋಗದಲ್ಲಿಯೂ ಕಲಾತ್ಮಕ ಸ್ಪರ್ಶದ ಅಗತ್ಯವನ್ನು ಮನಗಾಣಬೇಕಾಗಿದೆ. ವಿದೇಶಗಳಲ್ಲಿ ಆಡಿಟೋರಿಯಂ, ಮೈಕ್‌ ಸಿಸ್ಟಮ್‌ ಎಲ್ಲವೂ ಸಾಕಷ್ಟು ಆಧುನಿಕಗೊಂಡಿವೆ. ಹಾಡಿನ ಧ್ವನಿ ಸಹಜವಾಗಿರುವಂತೆಯೇ ಕೇಳುಗರಿಗೆ ಕೇಳಿಸಬೇಕು ಎಂಬ ಧೋರಣೆಗೆ ಬಲ ಬರುತ್ತಿದೆ. ಭಾರತೀಯರೇ ಆಗಿದ್ದು ಕೆನಡಾದಲ್ಲಿರುವ ಮಧುಮೋಹನ್‌ ಕೊಮರಗಿರಿ ಎಂಬವರು ಬರೆದ Sound System Basics for Live Indian Classical Music ಎಂಬ ಲೇಖನವೊಂದರಲ್ಲಿರುವ ತಾಂತ್ರಿಕ ಅಂಶಗಳನ್ನು ಗಮನಿಸಿದರೆ ಇವತ್ತು ಧ್ವನಿವರ್ಧಕದ ಬಳಕೆ, ಧ್ವನಿಯ ಬಳಕೆಯಷ್ಟೇ ಮುಖ್ಯವಾಗಿದೆ ಎಂಬ ಅರಿವಾಗುತ್ತದೆ. 

ಒಟ್ಟಿನಲ್ಲಿ ಧ್ವನಿವರ್ಧಕವು ಧ್ವನಿಗಳ-ಶೈಲಿಗಳ ಬಹುತ್ವವನ್ನು ಹಾಗೂ ಕೇಳುಗರ ಸಂವೇದನೆಯನ್ನು ನಿಧಾನವಾಗಿ ಏಕರೂಪಗೊಳಿಸುತ್ತ,  ಅನುಕರಣೆಯನ್ನು ಪ್ರೋತ್ಸಾಹಿಸಿ, ವೈವಿಧ್ಯಗಳನ್ನು ಒರೆಸಿ ಹಾಕುವ ಸಾಧ್ಯತೆಯನ್ನು ನಿಯಂತ್ರಿಸಬೇಕಾದುದು ಸದ್ಯದ ಅಗತ್ಯ. ಇದು ಸಂಗೀತ, ನಾಟಕ, ಯಕ್ಷಗಾನ- ಎಲ್ಲ ಕಲೆಗಳಿಗೂ ಅನ್ವಯವಾಗುವ ಮಾತು.

ನಚಿಕೇತ್‌
 

Advertisement

Udayavani is now on Telegram. Click here to join our channel and stay updated with the latest news.

Next