ಬೆಂಗಳೂರು: ನಗರದ ಪ್ರಮುಖ ರಸ್ತೆ ಹಾಗೂ ಮೇಲ್ಸೇತುವೆಯೊಂದಕ್ಕೆ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹೆಸರಿಡುವ ಅವರಿಗೆ ಗೌರವ ಸೂಚಿಸಿದೆ.
ಯಶವಂತಪುರ ವೃತ್ತ (ಸಂವಿಧಾನ ವೃತ್ತ) ದಿಂದ ಕೆನ್ನಮೆಟಲ್ ಕಾರ್ಖಾನೆಯವರೆಗಿನ ರಸ್ತೆ ಹಾಗೂ ಗೊರಗುಂಟೆ ಪಾಳ್ಯದಿಂದ ಆರಂಭವಾಗುವ ಕೆನ್ನಮೆಟಲ್ ಕಾರ್ಖಾನೆಯ ಬಳಿ ಕೊನೆಗೊಳ್ಳುವ ಸುಮಾರು 4 ಕಿ.ಮೀ. ಉದ್ದದ ಮೇಲ್ಸೇತುವೆಗೆ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹೆಸರಿಲು ಗುರುವಾರ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ರಸ್ತೆ ಹಾಗೂ ಮೇಲ್ಸೇತುವೆಗೆ ಅವರ ಹೆಸರಿಡುವ ವಿಷಯಕ್ಕೆ ಕೌನ್ಸಿಲ್ ಸಭೆ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಮುಂದ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಕರೆಯಲಾಗುತ್ತದೆ. ಸಾರ್ವಜನಿಕರಿಂದ ವ್ಯಕ್ತವಾದ ಅಭಿಪ್ರಾಯಗಳನ್ನು ಮತ್ತೂಮ್ಮೆ ಪಾಲಿಕೆಯ ಮುಂದಿಟ್ಟು ಅನುಮೋದನೆ ಪಡೆದು, ಬಳಿಕ ಸರ್ಕಾರಕ್ಕೆ ಕಳುಹಿಸಲಾಗುತ್ತದೆ.
ಪಾಲಿಕೆಯ ಪ್ರಸ್ತಾವನೆಯನ್ನು ಒಪ್ಪಿ ಸರ್ಕಾರ ಆದೇಶ ಹೊರಡಿಸಿದ ನಂತರದಲ್ಲಿ ರಸ್ತೆ ಹಾಗೂ ಮೇಲ್ಸೇತುವೆ ಅಧಿಕೃತವಾಗಿ ಸ್ವಾಮೀಜಿಯವರ ಹೆಸರಿಡಲು ಅವಕಾಶವಿದ್ದು, ಸಂಪೂರ್ಣ ಪ್ರಕ್ರಿಯೆ ನಡೆಯಲು ಕನಿಷ್ಠ ನಾಲ್ಕೈದು ತಿಂಗಳಾಗಲಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಆಡಳಿತ ಪಕ್ಷ ನಾಯಕ ಎಂ.ಶಿವರಾಜು ಅವರು, ಶತಾಯುಷಿಗಳಾದ ಶಿವಕುಮಾರ ಸ್ವಾಮೀಜಿ ಅವರ ಹೆಸರಿಡಲು ಪಾಲಿಕೆಯ ಎಲ್ಲ ಸದಸ್ಯರು ಸಂತೋಷದಿಂದ ಅನುಮೋದನೆ ನೀಡಿದ್ದಾರೆ. ಆ ಮೂಲಕ ಸ್ವಾಮೀಜಿಯವರಿಗೆ ಪಾಲಿಕೆಯಿಂದ ಗೌರವ ಸೂಚಿಸಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.