ಚಿಕ್ಕಮಗಳೂರು: ಸಂಕ್ರಾತಿ ಹಬ್ಬದ ಹಿನ್ನೆಲೆಯಲ್ಲಿ ಕಾಫಿನಾಡಿನಲ್ಲಿ ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿ ಜೋರಾಗಿತ್ತು. ಹಬ್ಬಕ್ಕೆ ಬೇಕಾಗುವ ಪೂಜಾ ಸಾಮಗ್ರಿಗಳು, ಎಳ್ಳುಬೆಲ್ಲ ಸೇರಿದಂತೆ ಇತರೆ ವಸ್ತುಗಳನ್ನು ಜನ ಖರೀದಿಸಿದರು. ಹಬ್ಬವನ್ನು ಸಡಗರದಿಂದ ಆಚರಿಸಲು ಜನತೆ ಸಕಲ ಸಿದ್ಧತೆಯಲ್ಲಿ ತೊಡಗಿದ್ದು, ಮಹಿಳೆಯರು ಎಳ್ಳುಬೆಲ್ಲ ತಯಾರಿಸುವುದರಲ್ಲಿ ಮಗ್ನರಾಗಿದ್ದರು.
ಶುಕ್ರವಾರ ಪಟ್ಟಣದತ್ತ ಮುಖ ಮಾಡಿದ್ದ ಜನರು ಪೂಜಾ ಸಾಮಗ್ರಿಗಳು, ಹೂವು, ಹಣ್ಣು, ಎಳ್ಳುಬೆಲ್ಲ, ಕಬ್ಬು ಸೇರಿದಂತೆ ಇತರೆ ಸಾಮಗ್ರಿಗಳನ್ನು ಖರೀದಿಸಿ ಮನೆಗೆ ಕೊಂಡೊಯ್ಯುತ್ತಿದ್ದ ದೃಶ್ಯಗಳು ಕಂಡು ಬಂದವು. ದಿನಸಿ ಅಂಗಡಿಗಳಲ್ಲಿ ಎಳ್ಳುಬೆಲ್ಲ ಅರ್ಧ ಕೆ.ಜಿ.ಯಿಂದ 1ಕೆ.ಜಿ.ವರೆಗಿನ ಪ್ಯಾಕೆಟ್ ಮಾರಾಟ ಮಾಡಲಾಗುತ್ತಿತ್ತು. ಪ್ರತೀ ಕೆ.ಜಿ. ಎಳ್ಳುಬೆಲ್ಲಕ್ಕೆ 200 ರೂ. ನಿಗದಿಪಡಿಸಲಾಗಿತ್ತು.
ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರು, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಿಂದ ಬಗೆ- ಬಗೆಯ ಹೂವುಗಳು ಮಾರುಕಟ್ಟೆ ಬಂದಿದ್ದು, ನಗರದ ವಿವಿಧೆಡೆ ನಿಗದಿತ ಸ್ಥಳಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ರಸ್ತೆಯ ಇಕ್ಕೆಲ ಮತ್ತು ತಳ್ಳುಗಾಡಿಗಳಲ್ಲಿ ಹೂವುಗಳನ್ನು ಮಾರಾಟ ಮಾಡಲಾಗುತ್ತಿತ್ತು. ಕಬ್ಬಿನ ಗಣೆಗಳ ಖರೀದಿಯೂ ಜೋರಾಗಿತ್ತು. ನಗರದ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಕಬ್ಬಿನ ಜಲ್ಲೆಯನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ದೃಶ್ಯಗಳು ಕಂಡು ಬಂದವು. ಹನುಮಂತಪ್ಪ ವೃತ್ತ, ಎಂ.ಜಿ. ರಸ್ತೆ ಮತ್ತು ಸಂತೆ ಮಾರುಕಟ್ಟೆಯಲ್ಲಿ ಹೂವು ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ಸೇವಂತಿಗೆ ಮಾರಿಗೆ 80 ರೂ.ಗಳಿಂದ ಹಿಡಿದು 150-160 ರೂ., ಗುಲಾಬಿ ಹಾರ 120, ಕನಕಾಂಬರ 40, ಕಾಕಡ 80, ತುಳಸಿಹಾರ 50, ಚೆಂಡುಹೂವು 30, ಕಣಗಲ ಹೂ 100, ಮಲ್ಲಿಗೆ 150ರೂ. ಸುಗಂಧರಾಜ ಹಾರ 30 ರೂ. ಗಳಿಂದ 250-160 ರೂ. ದರದಲ್ಲಿ ಮಾರಾಟ ಮಾಡಲಾಗುತಿತ್ತು.
ಕಬ್ಬು ಗಣೆಗೆ 40 ರೂ. ಬಿಳಿಬೆಲ್ಲ 50 ರೂ. ಸೇಬು ಕೆ.ಜಿ.ಗೆ 120, ದ್ರಾಕ್ಷಿ 100 ರೂ. ಕಿತ್ತಳೆ 100, ಬಾಳೆಹಣ್ಣಿ ಕೆ.ಜಿ.ಗೆ 40 ರೂ. ಸಪೋಟ 60 ರೂ. ಮೂಸುಂಬೆ 100 ರೂ. ದಾಳಿಂಬೆ 160 ರೂ. ದರ ನಿಗದಿಯಾಗಿತ್ತು. ಹಬ್ಬಕ್ಕೆ ಬೇಕಾದ ತರಕಾರಿ ಸೇರಿದಂತೆ ಇತರೆ ವಸ್ತುಗಳನ್ನು ಸಾರ್ವಜನಿಕರು ಖರೀದಿಸಿದರು.