Advertisement

ನಿಜವಾದ ಹೀರೋ ನಿಮ್ಮೊಳಗಿದ್ದಾನೆ

03:26 AM Sep 11, 2017 | Team Udayavani |

ನಾನೊಬ್ಬ ವ್ಯಕ್ತಿಯನ್ನು ಭೇಟಿಯಾದೆ. ಅವರ 12 ವರ್ಷದ ಮಗ ನವೀನನ ಮೇಲೆ ಸಂಬಂಧಿಕರೊಬ್ಬರು ಹಲವಾರು ತಿಂಗಳಿಂದ ಲೈಂಗಿಕ ದೌರ್ಜನ್ಯ ಎಸಗಿದ್ದರಂತೆ. ಬಹಳ ಅವಮಾನ ಎದುರಿಸಿದ್ದ ನವೀನ, ಯಾರಿಗೂ ಹೇಳಿಕೊಳ್ಳಲಾಗದೆ ಆತ್ಮಹತ್ಯೆ ಮಾಡಿಕೊಂಡುಬಿಟ್ಟ. ಈಗ ನವೀನನ ತಂದೆ ಕೇಳುತ್ತಿದ್ದಾರೆ-“ಕುಟುಂಬದ ಮರ್ಯಾದೆ ಮತ್ತು ಸಾಮಾಜಿಕ ಕಳಂಕದ ಹೆಸರಲ್ಲಿ ಇನ್ನೆಷ್ಟು ದಿನ ನಾವು ಮಕ್ಕಳನ್ನು ಬಲಿ ಕೊಡುತ್ತಾ ಸಾಗಬೇಕು?’·

Advertisement

ಆತ್ಮೀಯ ಯುವ ಸ್ನೇಹಿತರೇ. ನಾನಿಂದು ನಿಮ್ಮ ತಾರುಣ್ಯ, ನಿಮ್ಮ ಆಕ್ರೋಶ, ನಿಮ್ಮ ಪ್ರಾಮಾಣಿಕತೆ ಮತ್ತು ನಿಮ್ಮ ಆತ್ಮಸಾಕ್ಷಿಗೆ ಮೊರೆಯಿಡುತ್ತಿದ್ದೇನೆ.  ನೀವು ತುಟಿ ಕಚ್ಚಿ ಅನುಭವಿಸುತ್ತಿದ್ದೀರಲ್ಲ, ಆ ಭಯ, ಆ ಅಪಮಾನ, ಆ ಮೌನದ ಧ್ವನಿ ನನ್ನದು. ಈ ಅಸಹಾಯಕತೆ ಯನ್ನು ನೀವಷ್ಟೇ ಎದುರಿಸುತ್ತಿಲ್ಲ. ದೇಶದ ಅಸಂಖ್ಯ ಸಹೋದರ, ಸಹೋದರಿಯರ ಕಥೆಯೂ ಇದೇ ಆಗಿದೆ. ಈ ನಮ್ಮ ಮಹೋನ್ನತ ಭೂಮಿಯಲ್ಲಿ ಪ್ರತಿ ದಿನ ಎರಡು ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತವೆ. ಪ್ರತಿ ಎಂಟು ನಿಮಿಷಕ್ಕೆ ಒಂದು ಮಗುವಿನ ಅಪಹರಣವಾಗುತ್ತದೆ. ಕೆಲವೊಮ್ಮೆ ಈ ಮಕ್ಕಳನ್ನು ಒಂದು ಪ್ರಾಣಿಯ ಮೌಲ್ಯಕ್ಕಿಂತಲೂ ಕಡಿಮೆ ಹಣದಲ್ಲಿ ಮಾರಾಟ ಮಾಡಲಾಗುತ್ತದೆ. ನಾನು ನಿಮಗೆ ಕೇಳುವುದಿಷ್ಟೆ-ಒಂದು ಎಳೆಯ ಜೀವದ ಮುಗ್ಧತೆ, ಅದರ ನಗು, ಅದರ ಸೌಂದರ್ಯ ಮತ್ತು ಅದರ ದೇಹ ಯಾರಧ್ದೋ ಲೈಂಗಿಕ ವಾಂಛೆ ತೀರಿಸಿಕೊಳ್ಳುವ ವಸ್ತುಗಳಾ?

ನಾನು ಮಕ್ಕಳ ವಿರುದ್ಧದ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಅಪಹರಣ ಮತ್ತು ಹಿಂಸಾಚಾರದ ವಿರುದ್ಧ ಸಮರ ಘೋಷಿಸಿ ದ್ದೇನೆ. ಯುವ ತಲೆಮಾರಿನ ಚೇತನವನ್ನೇ ನಷ್ಟಮಾಡುತ್ತಿರುವ ಈ ಅನೈತಿಕ ಸಾಂಕ್ರಾಮಿಕವನ್ನು ಕೊನೆಗೊಳಿಸಲು ನಾನು ಯಾತ್ರೆ ಆರಂಭಿಸಲಿದ್ದೇನೆ. ಸೆಪ್ಟೆಂಬರ್‌ 11ರಂದು ಕನ್ಯಾಕುಮಾರಿಯಿಂದ ಶುರುವಾಗಿ ಅಕ್ಟೋಬರ್‌ 16ರಂದು ದೆಹಲಿಯಲ್ಲಿ ಅಂತ್ಯ

ಗೊಳ್ಳಲಿದೆ “ಭಾರತ ಯಾತ್ರೆ’. ಆದರೆ ನಾವು ಯುದ್ಧದಲ್ಲಿ ಗೆಲ್ಲುವವರೆಗೂ ಈ ಪೈಶಾಚಿಕತೆಯ ವಿರುದ್ಧದ ಸಮರ ನಡೆಯುತ್ತಲೇ ಇರುತ್ತದೆ. 
ಗೆಳೆಯರೇ, ಈ ಬೃಹತ್‌ ಯುದ್ಧದಲ್ಲಿ ನಾನು ಸರ್ಕಾರಗಳ, ಧಾರ್ಮಿಕ ನಾಯಕರ, ಕಾರ್ಪೊರೇಟ್‌ಗಳ ಮತ್ತು ಎನ್‌ಜಿಒಗಳ ಕದ ತಟ್ಟಲಿದ್ದೇನೆ. ಆದರೆ ನನಗೆ ಎಲ್ಲದಕ್ಕಿಂತ ಹೆಚ್ಚು ನಂಬಿಕೆಯಿರುವುದು ನಿಮ್ಮ ಮೇಲೆ. ಏಕೆಂದರೆ ನಿಮ್ಮ ಪ್ರಾಮಾಣಿಕತೆಯನ್ನು ಮತ್ತು ನಿಮ್ಮೊಳಗಿನ ರೋಷಾಗ್ನಿಯನ್ನು ನಾನು ನಂಬುತ್ತೇನೆ. 

ದೆಹಲಿಯಲ್ಲಿ 12 ವರ್ಷದ ಹುಡುಗಿಯೊಬ್ಬಳು ಒಂದು ರಾತ್ರಿ ತನ್ನ ತಂದೆಯನ್ನು ಅಂಗಲಾಚಿದಳು- “”ಅಪ್ಪ, ಪ್ಲೀಸ್‌ ಇವತ್ತು ನನ್ನ ಬಿಟ್ಟುಬಿಡು. ನನ್ನ ಇಡೀ ದೇಹ ನೋವಾಗ್ತಾ ಇದೆ.”! ಆಕಾಶ ಭೂಮಿ ಒಂದಾಗಲು ಆ ಪುಟ್ಟ ಮಗುವಿನ ಅಸಹಾಯಕ ಆಕ್ರಂದನ ಸಾಲದೇನು? ಇತ್ತೀಚೆಗೆ ಶಿಮ್ಲಾದಲ್ಲಿ ಶಾಲೆಗೆ ಹೊರಟಿದ್ದ ಹೆಣ್ಣು ಮಗಳನ್ನು ಗ್ಯಾಂಗ್‌ರೇಪ್‌ ಮಾಡಿ ಕೊಲ್ಲಲಾಗಿದೆ. ಆ ಬಾಲಕಿಯ ತಂದೆ ದುಃಖತಪ್ತನಾಗಿ ನನಗೆ ಹೇಳಿದ, “ನನ್ನ ಮಗಳಿಗೆ ಆದ ಗತಿ ಯಾರಿಗೂ ಆಗದಿರಲಿ. ನಾನು ಎದುರಿಸಿದಂಥ ಪರಿಸ್ಥಿತಿಯನ್ನು ಯಾವ ತಂದೆಯೂ ಎದುರಿಸದಿರಲಿ. ನನ್ನ ಮಗಳ ನಗ್ನ ದೇಹದ ತುಂಬೆಲ್ಲ ಆ ಕ್ರೂರ ಪ್ರಾಣಿಗಳ ಹಲ್ಲಿನ ಗುರುತಿತ್ತು. ಸಿಗರೇಟಿ ನಿಂದ ಆಕೆಯ ಮೈಯನ್ನು ಸುಡಲಾಗಿತ್ತು. ಹಸಿದ ತೋಳಗಳು ಹರಿದು ಮುಕ್ಕಿವೆಯೇನೋ ಅನ್ನಿಸುವಂತೆ ಛಿದ್ರವಾಗಿತ್ತು ಮಗಳ ದೇಹ. ನನಗೆ ನನ್ನ ಮಗಳನ್ನು ಉಳಿಸಿಕೊಳ್ಳಲಾಗಲಿಲ್ಲ. ಆದರೆ ಇತರೆ ಮಕ್ಕಳನ್ನು ಉಳಿಸಲು ನಾನು ಏನು ಮಾಡುವುದಕ್ಕೂ ಸಿದ್ಧ’. ಯಾವುದೇ ನಾಗರಿಕತೆ ಅಥವಾ ಸಂಸ್ಕೃತಿಯನ್ನು ನಾಚಿಕೆಗೆ ದೂಡಲು ಈ ಪದಗಳು ಸಾಕಾಗುವುದಿಲ್ಲವೇನು?

Advertisement

ಮುಂಬೈಯಲ್ಲಿ ಶ್ರೀಮಂತ ಕುಟುಂಬದ ಬಾಲಕನೊಬ್ಬ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ. ಅವನ ತಾಯಿ ಕಣ್ಣೀರು ಸುರಿಸುತ್ತಾ ಅಂದಳು, “ನನ್ನ ಮಗ ತಿಂಗಳುಗಳಿಂದ ಲೈಂಗಿಕ ದೌರ್ಜನ್ಯ ಎದುರಿಸುತ್ತಿದ್ದಾನೆ ಅಂತ ನನಗೇಕೆ ತಿಳಿಯಲಿಲ್ಲ?’ ಆಧುನಿಕವಾಗುವ ಸ್ಪರ್ಧೆಯಲ್ಲಿ ಓಡುತ್ತಿರುವ ಸಮಾಜವೊಂದಕ್ಕೆ ಈ ತಾಯಿಯ ಮಾತುಗಳು ಕಪಾಳಮೋಕ್ಷವಲ್ಲವೇನು?

ಕೆಲವೇ ದಿನಗಳ ಹಿಂದೆ ನಾನು ಮತ್ತು ನನ್ನ ಮಡದಿ ಸುಮೇಧಾ, ಐದು ವರ್ಷದ ಸಲ್ಮಾಳನ್ನು(ಹೆಸರು ಬದಲಿಸಲಾಗಿದೆ)ಆಸ್ಪತ್ರೆ ಯೊಂದರಲ್ಲಿ ಭೇಟಿಯಾದೆವು. ಶಾಲೆಯಿಂದ ಹಿಂದಿರುಗು ವಾಗ ವ್ಯಾನ್‌ನ ಡ್ರೈವರ್‌ ಆ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರವೆಸ ಗಿದ್ದ. ಈಗ ಶಾಲೆಯ ಹೆಸರು ಕೇಳಿದರೂ ಸಾಕು ಭಯದಿಂದ ನಡುಗುತ್ತಾಳೆ ಸಲ್ಮಾ. ಬಹಳ ಹೊತ್ತ ಮಾತನಾಡಿದ ಮೇಲೆ ಸಲ್ಮಾ ಲೇಡಿ ಡಾಕ್ಟರ್‌ ಕಡೆ ಕೈ ತೋರಿಸಿ ಅಂದಳು-“ನಾನೂ ಅವರಂತೆ ಆಗಬೇಕು. ಅವರು ನನ್ನ ಜೀವ ಉಳಿಸಿದರು’

ಚಂಡೀಗಢದಲ್ಲಿ 13 ವರ್ಷದ ರಚನಾ ಸ್ವಾತಂತ್ರ್ಯ ದಿನವನ್ನು ಆಚರಿಸಲು ತನ್ನ ಶಾಲೆಯತ್ತ ಹೊರಟಿದ್ದಳು. ಆದರೆ ಆಕೆ ಯನ್ನು ಹಿಂಬಾಲಿಸಿದ ದುರುಳರು, ಎತ್ತಿಕೊಂಡು ಹೋಗಿ ಅತ್ಯಾಚಾರವೆಸಗಿಬಿಟ್ಟರು. ತನ್ನ ಮಗಳಿಗೆ ಎದುರಾದ ಸ್ಥಿತಿಯನ್ನು ನೋಡಿ ರಚನಾಳ ತಂದೆ ಪ್ರಶ್ನಿಸುತ್ತಾರೆ -“”ನನ್ನ ಮಗಳು ಮತ್ತು ನನ್ನ ಕುಟುಂಬ ಸ್ವಾತಂತ್ರ್ಯ ದಿನಾಚರಣೆಯನ್ನು ಹೀಗಾ ನೆನಪಿಡಬೇಕು?”

ಇದೇ ವೇಳೆಯಲ್ಲೇ ನಾನೊಬ್ಬ ವ್ಯಕ್ತಿಯನ್ನು ಭೇಟಿಯಾದೆ. ಅವರ 12 ವರ್ಷದ ಮಗ ನವೀನನ ಮೇಲೆ ಸಂಬಂಧಿಕರೊಬ್ಬರು ಹಲವಾರು ತಿಂಗಳಿಂದ ಲೈಂಗಿಕ ದೌರ್ಜನ್ಯ ಎಸಗಿದ್ದ ರಂತೆ. ಬಹಳ ಅವಮಾನ ಎದುರಿಸಿದ್ದ ನವೀನ, ಯಾರಿಗೂ ಹೇಳಿ ಕೊಳ್ಳಲಾಗದೆ ಆತ್ಮಹತ್ಯೆ ಮಾಡಿಕೊಂಡುಬಿಟ್ಟ. ಈಗ ನವೀನನ ತಂದೆ ಕೇಳುತ್ತಿದ್ದಾರೆ- “ಕುಟುಂಬದ ಮರ್ಯಾದೆ ಮತ್ತು ಸಾಮಾಜಿಕ ಕಳಂಕದ ಹೆಸರಲ್ಲಿ ಇನ್ನೆಷ್ಟು ದಿನ ನಾವು ಮಕ್ಕಳನ್ನು ಬಲಿ ಕೊಡುತ್ತಾ ಸಾಗಬೇಕು?’

ನಮ್ಮ ಮಕ್ಕಳು ಎಲ್ಲಿಯೂ ಸುರಕ್ಷಿತವಾಗಿಲ್ಲ. ಸ್ವಂತ ಮನೆಗಳಲ್ಲೂ ಅವರಿಗೆ ಸುರಕ್ಷತೆಯಿಲ್ಲ, ಓಣಿಯಲ್ಲಿ, ಶಾಲೆಗಳಲ್ಲಿ..ಊಹೂಂ. ಅಪಾಯದ ತೂಗುಗತ್ತಿ ಅವರ ನೆತ್ತಿಯ ಮೇಲೆ ಸುತ್ತುತ್ತಲೇ ಇದೆ. ಒಬ್ಬ ಸ್ನೇಹಿತ, ಸಂಬಂಧಿ, ಶಿಕ್ಷಕ, ಡ್ರೈವರ್‌, ಡಾಕ್ಟರ್‌, ಕೊನೆಗೆ ಒಬ್ಬ ಪೊಲೀಸ್‌ ಕೂಡ ಮಕ್ಕಳ ಪಾಲಿಗೆ ಮೃಗವಾಗಿ ಬದಲಾಗಬಹುದು. ಆದರೆ ಕುಟುಂಬದ ಮರ್ಯಾದೆಯ ಹೆಸ ರಲ್ಲಿ ಸಂತ್ರಸ್ತರ ಧ್ವನಿಯನ್ನು ಅಡಗಿಸಲಾಗುತ್ತದೆ. ನಾವು ಯಾವ ಮಟ್ಟಕ್ಕೆ ರೋಗಗ್ರಸ್ತರಾಗಿದ್ದೇವೆಂದರೆ ಲೈಂಗಿಕ ದೌರ್ಜನ್ಯಕ್ಕೊಳ ಗಾದ ಹುಡುಗಿಯೊಬ್ಬಳು “ಶಾಶ್ವತವಾಗಿ ತನ್ನ ಮರ್ಯಾದೆ ಕಳೆದುಕೊಳ್ಳುತ್ತಾಳೆ’ “ಅಗೌರವ‌’ವಾಗಿ ಬದಲಾಗುತ್ತಾಳೆ ಎಂದು ಭಾವಿಸುತ್ತೇವೆ. ಆದರೆ ಅತ್ಯಾಚಾರ/ಲೈಂಗಿಕ ದೌರ್ಜನ್ಯಕ್ಕೊಳ ಗಾದವರು ಮರ್ಯಾದೆ ಕಳೆದುಕೊಳ್ಳುತ್ತಾರೆ ಎನ್ನುವುದನ್ನು ನಾನು ಒಪ್ಪುವುದಿಲ್ಲ. ನಿಜವಾಗಲೂ ಮರ್ಯಾದೆ ಕಳೆದು ಕೊಳ್ಳುವುದು ಅತ್ಯಾಚಾರಿ. 

ಇಂಥ ದುಷ್ಕರ್ಮಿಗಳಿಗೆ ಕಾನೂನು ರೀತ್ಯಾ ತಕ್ಕ ಶಾಸ್ತಿಯಾಗ ಬೇಕು ಮತ್ತು ಅವರನ್ನು ಸಾಮಾಜಿಕವಾಗಿ ಬಹಿಷ್ಕರಿಸಬೇಕು.  ಸ್ನೇಹಿತರೆ, ಇದನ್ನು ಓದಿದ ಮೇಲೆ ನಿಮ್ಮ ರಕ್ತವೂ ಕುದಿಯುತ್ತಿದೆ ಎನ್ನುವುದನ್ನು ನಾನು ಬಲ್ಲೆ. ಅಲ್ಲದೇ, ನಿಮ್ಮ ವೃತ್ತಿ ಮತ್ತು ಶಿಕ್ಷಣ ಏನೇ ಇರಲಿ, ನಿಮ್ಮೊಳಗಿನ ಸಹಾನುಭೂತಿ ಮತ್ತು ಆದರ್ಶವು ಈ ಪಿಡುಗಿನ ವಿರುದ್ಧ ಪುಟಿದೇಳಲು, ಭಾರತ ಮಾತೆಯ ಬಗ್ಗೆ ಯೋಚಿಸಲು ಪ್ರೇರೇಪಿಸುತ್ತವೆ ಎನ್ನುವುದನ್ನೂ ನಾನು ಬಲ್ಲೆ. ನಾವು ನಮ್ಮ ಆಕ್ರೋಶವನ್ನು ಧನಾತ್ಮಕ ವಿಚಾರಗಳು ಮತ್ತು ರಚನಾತ್ಮಕ ಕ್ರಮಗಳತ್ತ ಹರಿಸಬೇಕಿದೆ. 

ನಿಮಗೆ ನೆನಪಿದೆಯೇ- ಹೃದಯವಿದ್ರಾವಕ ನಿರ್ಭಯಾ ಘಟನೆ ನಡೆದಾಗ, ನೀವೆಲ್ಲ ದೇಶದ ರಸ್ತೆಗಳಿಗೆ ಇಳಿದು ಅವುಗಳನ್ನು ಅಹಿಂಸಾತ್ಮಕ ಯುದ್ಧ ಭೂಮಿಗಳನ್ನಾಗಿ ಬದಲಿಸಿದ್ದಿರಿ. ಈ ಹೋರಾಟದ ಫ‌ಲವಾಗಿ ದೇಶದಲ್ಲಿ ಬಲಿಷ್ಠ ಕಾನೂನುಗಳು ಹುಟ್ಟಿಕೊಂಡವು. ಇತ್ತೀಚೆಗೆ ಹಿಮಾಚಲ ಪ್ರದೇಶದಲ್ಲಿ ಗುಡಿಯಾ ಎನ್ನುವ ಹೆಣ್ಣುಮಗುವಿನ ಅತ್ಯಾಚಾರ ಮತ್ತು ಹತ್ಯೆಯ ವಿರುದ್ಧ ಆ ರಾಜ್ಯದ ಯುವಕರೆಲ್ಲ ಧ್ವನಿಯೆತ್ತಿದರು. ಸಿಬಿಐ ತನಿಖೆಯಾಗಬೇಕೆಂದು ಬೇಡಿಕೆಯಿಟ್ಟರು. ತತ#ಲವಾಗಿ ಆ ಮಗುವಿಗೆ ಮತ್ತು ಆಕೆಯ ಕುಟುಂಬಕ್ಕೆ ನ್ಯಾಯದ ಬಾಗಿಲು ಗಳು ತೆರೆದುಕೊಂಡಿವೆ.

ನೆನಪಿಡಿ, ಯುವಕರ ಹಸ್ತಾಕ್ಷರವಿಲ್ಲದೇ ಇತಿಹಾಸದಲ್ಲಿ ಯಾವುದೇ ಸ್ವರ್ಣ ಪುಟಗಳೂ ರಚಿತವಾಗಿಲ್ಲ. ಯುವ ಜನಾಂಗದ ತ್ಯಾಗವಿಲ್ಲದೇ ಯಾವುದೇ ಸ್ವಾತಂತ್ರÂ, ನ್ಯಾಯ ಮತ್ತು ಅಭಿವೃದ್ಧಿ ಸಾಧ್ಯವಾಗಿಲ್ಲ. ಹೀಗಿರುವಾಗ, ಈಗಲೂ ಏಕೆ ನೀವು ಸಿನೆಮಾ ತಾರೆಗಳನ್ನು, ದೇವಮಾನವರನ್ನು, ಕ್ರೀಡಾಪಟುಗಳನ್ನು, ಸೆಲೆಬ್ರಿಟಿಗಳನ್ನು ಪೂಜಿಸುತ್ತಾ ಕುಳಿತಿದ್ದೀರಿ? ನಿಜ ಇವರಲ್ಲಿ ಕೆಲವರು ಪ್ರೇರಣಾದಾಯಕರು ಎನ್ನುವುದನ್ನು ಒಪ್ಪೋಣ. ಆದರೆ ನಿಜವಾದ ಹೀರೋ ಇರುವುದು ನಿಮ್ಮೊಳಗೆ. ಇಂದು ನಿಮ್ಮ ಎಲ್ಲಾ ಧೈರ್ಯವನ್ನೂ ಒಗ್ಗೂಡಿಸಿಕೊಂಡು, ನಿಷ್ಕ್ರಿಯತೆಯನ್ನು, ನಿರಾಶಾಭಾವನೆಯನ್ನು ಕಿತ್ತೆಸೆಯಿರಿ. ಬೇರೆಯವರತ್ತ ನೋಡುತ್ತಾ ನಿಲ್ಲಬೇಡಿ. ಏಕೆಂದರೆ ಬದಲಾವಣೆಯಾಗಬೇಕಿರುವುದು ನಿಮ್ಮಿಂದಲೇ. ಬದಲಾಗಬೇಕಿರುವುದು ನೀವೇ. ಇಂದು ನಿಮ್ಮ ಮನೆಯ ಬಾಗಿಲನ್ನು ಬಡಿಯುತ್ತಿದೆ ಬದಲಾವಣೆ. ತೆರೆಯಿರಿ ಬಾಗಿಲು. 

ಮೂವತ್ತೇಳು ವರ್ಷದ ಹಿಂದೆ ನಾನು ನನ್ನ ಇಂಜಿನಿಯರಿಂಗ್‌ ಕೆಲಸ ಬಿಟ್ಟು ಬಾಲಕಾರ್ಮಿಕತೆ ಮತ್ತು ಗುಲಾಮ ಪದ್ಧತಿಯ ವಿರುದ್ಧ ಚಳವಳಿ ಆರಂಭಿಸಲು ಮುಂದಾದಾಗ, ನನ್ನ ಅಮ್ಮ ವರ್ಷಗಳವರೆಗೆ ಕಣ್ಣೀರಿಟ್ಟಳು. (ಏಕೆಂದರೆ ನಾನು ಹೋರಾಟ ಆರಂಭಿಸಿದಾಗ ನನ್ನ ಬಳಿ ಹಣವಿರಲಿಲ್ಲ, ಭದ್ರತೆಯಿರಲಿಲ್ಲ ಮತ್ತು ಯಾವುದೇ ಬೆಂಬಲವೂ ಇರಲಿಲ್ಲ. ನನ್ನಮ್ಮ ಸಾಮಾನ್ಯ ಪೊಲೀಸೊಬ್ಬನ ಮಡದಿಯಾಗಿದ್ದಳು. ನನ್ನ ಇಂಜಿನಿಯರಿಂಗ್‌ ಕಾಲೇಜಿನ ಫೀಸ್‌ ಕಟ್ಟಲು ಆಕೆ ತನ್ನೆಲ್ಲ ಆಭರಣಗಳನ್ನೂ ಮಾರಿದ್ದಳು.) ಆಗ ನಾನು ಒಬ್ಬಂಟಿಯಾಗಿದ್ದೆ. ಆದರೆ ಮಕ್ಕಳ ಮೇಲಿನ ದೌರ್ಜನ್ಯದ ವಿರುದ್ಧದ ಸಮರವನ್ನು ನಿಲ್ಲಿಸಲು ಒಪ್ಪಲಿಲ್ಲ. ಇಂದು ನಾನು ಅದೃಷ್ಟವಂತ. ಏಕೆಂದರೆ ಈ ಹೋರಾಟದಲ್ಲಿ ನೀವೆಲ್ಲಾ ನನ್ನ ಜೊತೆಗಿದ್ದೀರಿ. 

ನಿಮ್ಮ ಶಕ್ತಿಯ ಮೇಲಿರುವ ನಂಬಿಕೆಯೇ ನನ್ನನ್ನು ಇಂದು ಭಾರತವನ್ನು ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಕಳ್ಳಸಾಗಾಣಿಕೆ ಮತ್ತು ಹಿಂಸಾಚಾರದಿಂದ ಮುಕ್ತಗೊಳಿಸುವ ಹೋರಾಟದಲ್ಲಿ ಹುರುಪಿನಿಂದ ಹೆಜ್ಜೆಯಿಡಲು ಪ್ರೇರೇಪಿಸುತ್ತಿದೆ. 

ಬನ್ನಿ ಸ್ನೇಹಿತರೆ, ಇತಿಹಾಸದ ಪಥವನ್ನು ಬದಲಿಸಲು ನಾವೆಲ್ಲ ಒಟ್ಟಾಗಿ ಹೆಜ್ಜೆಯಿಡೋಣ. ಭಾರತವನ್ನು ಸುರಕ್ಷಿತವಾಗಿಸಲು “ಭಾರತ ಯಾತ್ರೆ’ ನಡೆಸೋಣ.

(ಲೇಖಕರು ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತ 
ಸಾಮಾಜಿಕ ಹೋರಾಟಗಾರರು. ಬಚ್‌ಪನ್‌ ಬಚಾವೋ ಆಂದೋಲನದ ಸ್ಥಾಪಕರು)

 ಕೈಲಾಶ್‌ ಸತ್ಯಾರ್ಥಿ

Advertisement

Udayavani is now on Telegram. Click here to join our channel and stay updated with the latest news.

Next