Advertisement

ಬ್ಯಾಂಕ್‌ ವಿಲೀನದ ಮೂರನೇ ಸುತ್ತು ಸನ್ನಿಹಿತ?

11:31 PM Jun 12, 2019 | Sriram |

ಸ್ಟೇಟ್‌ ಬ್ಯಾಂಕ್‌ನ ಸಹವರ್ತಿ ಬ್ಯಾಂಕುಗಳು ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದಲ್ಲಿ ವಿಲೀನವಾಗುವ ತನಕ, ಯಾವುದೇ ಭಾರತೀಯ ಬ್ಯಾಂಕ್‌, ಜಗತ್ತಿನ 100 ಅತಿ ದೊಡ್ಡ ಬ್ಯಾಂಕುಗಳ ಪಟ್ಟಿಯಲ್ಲಿ ಇರಲಿಲ್ಲ. ಬ್ಯಾಂಕುಗಳ ವಿಲೀನದಿಂದ ಬ್ಯಾಂಕುಗಳ ಗಾತ್ರ ದೊಡ್ಡದಾಗುತ್ತಿದ್ದು, ಅಂತಾರಾಷ್ಟ್ರೀಯವಾಗಿ ಸ್ಪರ್ಧಾತ್ಮಕ ವಾಗುತ್ತವೆ ಮತ್ತು ಕ್ಯಾಪಿಟಲ್‌ ಬೇಸ್‌ ಹೆಚ್ಚುವುದರಿಂದ ರಿಸರ್ವ್‌ ಬ್ಯಾಂಕ್‌ ಬಂಡವಾಳ ಮರುಪೂರಣ ಮಾಡುವ ಅವಶ್ಯಕತೆ ಕಡಿಮೆಯಾಗುತ್ತದೆ.

Advertisement

ಯಾವುದೇ ಒಂದು ಯೋಜನೆ ರೂಪುಗೊಂಡು ಅನುಷ್ಠಾನ ಗೊಳ್ಳಬೇಕಾದರೆ, ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಅದರಲ್ಲೂ ರಾಷ್ಟ್ರವ್ಯಾಪಿ ದೊಡ್ಡ ಯೋಜನೆಗಳು, ದೂರಗಾಮಿ ಪರಿಣಾಮಗಳನ್ನು ಬೀರುವ, ಕೆಲವು ಮೂಲಭೂತ ಚೌಕಟ್ಟನ್ನು ಬದಲಿಸುವ, ಲಕ್ಷಾಂತರ ಜನರ ಬದುಕನ್ನು ಬದಲಿಸುವ ಯೋಜನೆಗಳು ಸುದೀರ್ಘ‌ ಚಿಂತನ ಮಂಥನಗಳಿಗೆ ಒಳಪಡು ವುದರಿಂದ ಮತ್ತು ಅವುಗಳ ಸಾಧಕ ಬಾಧಕಗಳನ್ನು ಮತ್ತು ಅನುಷ್ಠಾನದ ಅಡಚಣೆಗಳನ್ನು ವಿಸ್ತೃತವಾಗಿ ಅಭ್ಯಸಿಸಬೇಕಾ ಗಿರುವುದರಿಂದ ಅವುಗಳ ಪರಿಕಲ್ಪನೆ ತಾರ್ಕಿಕ ಅಂತ್ಯ ಕಾಣುವುದು ಮ್ಯಾರಥಾನ್‌ ಪ್ರಕ್ರಿಯೆಯಾಗಿರುತ್ತದೆ.

ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಕೂಡಾ ಈ ಕೆಟಗರಿಗೆ ಸೇರಿದೆ. ಬ್ಯಾಂಕುಗಳ ಮತ್ತು ಹಣಕಾಸು ಸಂಸ್ಥೆಗಳ ಸಬಲೀಕರಣ, ಬ್ಯಾಂಕುಗಳ ಬಂಡವಾಳ ಹೆಚ್ಚಿಸುವ ಮತ್ತು ಬ್ಯಾಂಕುಗಳ ಗಾತ್ರವನ್ನು ದೊಡ್ಡದು ಮಾಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಸಲಹೆ ನೀಡಲು ಮತ್ತು ಶಿಫಾರಸ್ಸು ಮಾಡಲು ಅಂದಿನ ಸರ್ಕಾರ 1991ರಲ್ಲಿ ರಿಸರ್ವ್‌ ಬ್ಯಾಂಕ್‌ನ ಮಾಜಿ ಗವರ್ನರ್‌ ಎನ್‌. ನರಸಿಂಹನ್‌ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿಯು 1993ರಲ್ಲಿ ಬ್ಯಾಂಕುಗಳ ವಿಲೀನದ ನಿಟ್ಟಿನಲ್ಲಿ ವಿಸ್ತೃತ ವರದಿ ನೀಡಿತ್ತು. 1998ರಲ್ಲಿ ನರಸಿಂಹನ್‌ ಸಮಿತಿ 1992ರಿಂದ ಬ್ಯಾಂಕಿಂಗ್‌ ವ್ಯವಸ್ಥೆಯ ರಿವ್ಯೂ ಮಾಡಿ ಇನ್ನೊಂದು ವರದಿಯನ್ನು ನೀಡಿ, ವಿಲೀನಕ್ಕೆ ಗಂಭೀರ ಚಿಂತನ-ಮಂಥನ ನಡೆಸಿತು.

ಆದರೆ, ಸರ್ಕಾರಗಳ ಬದಲಾವಣೆ, ರಾಜಕೀಯ ಇಚ್ಛಾಶಕ್ತಿಯ ಕೊರತೆ, ವಿಲೀನದ ಮಾನದಂಡದ ಬಗೆಗೆ ಏಕಾಭಿಪ್ರಾಯದ ಕೊರತೆ, ಕಾರ್ಮಿಕ ಸಂಘಗಳ ವಿರೋಧ ಮತ್ತು ಕೆಲವು ರಾಜಕೀಯ ಒತ್ತಡದ ಕಾರಣಗಳಿಂದಾಗಿ, ವಿಲೀನದ ಪರಿಕಲ್ಪನೆ ಅನುಷ್ಠಾನಗೊಳ್ಳಲಿಲ್ಲ ಮತ್ತು ಕನಿಷ್ಠ ಈ ನಿಟ್ಟಿನಲ್ಲಿ ನೀಲನಕ್ಷೆಯನ್ನು ಸಿದ್ಧಪಡಿಸಲೂ ಸಾಧ್ಯವಾಗಿಲ್ಲ. 1998ರಿಂದ 2017ರವರೆಗೆ ಬ್ಯಾಂಕುಗಳ ವಿಲೀನ ಚರ್ಚೆಗೆ ಮತ್ತು ವಿಸ್ತೃತ ಅಧ್ಯಯನಕ್ಕೆ ಸೀಮಿತವಾಗಿ, “ಗಣೇಶನ ಮದುವೆಯೂ ಬ್ಯಾಂಕುಗಳ ವಿಲೀನವೂ’ ಎನ್ನುವ ಟೀಕೆಗೆ ಒಳಗಾಗಿತ್ತು. ಹಣಕಾಸು ಮಂತ್ರಿಗಳಾಗಿದ್ದ‌ ಪ್ರಣಬ್‌ ಮುಖರ್ಜಿ, ಪಿ. ಚಿದಂಬರಂ ಬ್ಯಾಂಕುಗಳ ವಿಲೀನದ ಅವಶ್ಯಕತೆ ಮತ್ತು ಅರ್ಜೆನ್ಸಿಯನ್ನು ಲಭ್ಯ ಇರುವ ಪ್ರತಿ ವೇದಿಕೆಯಲ್ಲಿ ಪ್ರತಿಪಾದಿಸಿದರೇ ವಿನಃ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡಲು ಹಿಂದೇಟು ಹಾಕಿದರು.

ನರೇಂದ್ರ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಹಣಕಾಸು ಮಂತ್ರಿಯಾಗಿ ಅರುಣ್ ಜೇಟ್ಲಿಯವರು, ಒಂದು ಕಿಲೋಮೀಟರ್‌ ರಸ್ತೆಯಲ್ಲಿ ಡಜನ್‌ ಬ್ಯಾಂಕುಗಳನ್ನು ತೆರೆದು, ಒಂದು ಬ್ಯಾಂಕ್‌ನ ಬಿಜಿನೆಸ್‌ನ್ನು ಇನ್ನೊಂದು ಬ್ಯಾಂಕ್‌ ಕಸಿಯುಲು ಅವಕಾಶ ಕೊಡುತ್ತಾ ಬ್ಯಾಂಕಿಂಗ್‌ ಉದ್ಯಮವನ್ನು ನಡೆಸಲಾಗದು ಎಂದು ಬ್ಯಾಂಕುಗಳ ವಿಲೀನದ ನಿಟ್ಟಿನಲ್ಲಿ ಕ್ರಿಯಾಶೀಲರಾದರು. ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಮತ್ತು ಉದ್ಯಮದಲ್ಲಿ ಸಾಕಷ್ಟು ಸುಧಾರಣೆ ಆಗಿಲ್ಲ ಎನ್ನುವ ಟೀಕೆಯೂ ಸ್ವಲ್ಪ ದೊಡ್ಡದಾಗಿ ಕೇಳುತ್ತಿರಲು ಮತ್ತು ವಿಶ್ವ ಬ್ಯಾಂಕ್‌ ಕೂಡಾ ಪರೋಕ್ಷವಾಗಿ ನೆನಪಿಸುತ್ತಿರಲು, ಏಪ್ರಿಲ್‌ 1, 2017ರಂದು ಸ್ಟೇಟ್‌ ಬ್ಯಾಂಕ್‌ನ 5 ಸಹವರ್ತಿ ಬ್ಯಾಂಕ್‌ಗಳನ್ನು ಮತ್ತು ಭಾರತೀಯ ಮಹಿಳಾ ಬ್ಯಾಂಕನ್ನು ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದಲ್ಲಿ ವಿಲೀನಗೊಳಿಸಿತು.

Advertisement

ಸ್ಟೇಟ್‌ ಬ್ಯಾಂಕ್‌ ಸಹವರ್ತಿ ಬ್ಯಾಂಕುಗಳು ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ರೀತಿ ಕಾರ್ಯ ವೈಖರಿ, ನೀತಿ ನಿಯಮಾವಳಿ, ಪದ್ಧªತಿಗಳನ್ನು ಮತ್ತು ಟೆಕ್ನಿಕಲ್‌ ಪ್ಲಾಟ್‌ಫಾರ್ಮ್ ಹೊಂದಿದ್ದು, ವಿಲೀನ ಪ್ರಕ್ರಿಯೆ ಸುಗಮವಾಗಿ, ಯಾವುದೇ ಅಡತಡೆ, ಅಡಚಣೆ, ವಿರೋಧವಿಲ್ಲದೇ clinical precision ರೀತಿ ನಡೆದು ಹೋಯಿತು. ವಿಲೀನದ ನಂತರದ ದಿನಗಳಲ್ಲಿ ಸ್ಟೇಕ್‌ ಹೋಲ್ಡರ್‌ಗಳಿಂದ ಯಾವುದೇ ರೀತಿಯ ದೂರುಗಳು ಬರದಿರುವುದು, ವಿಲೀನದ ನಿಟ್ಟಿನಲ್ಲಿ ಮುಂದಿನ ಹೆಜ್ಜೆ ಇಡುವಂತೆ ಬ್ಯಾಂಕುಗಳನ್ನು ಉತ್ತೇಜಿಸಿದವು. ಇದರಿಂದ ಉತ್ತೇಜಿತವಾದ ಸರ್ಕಾರ ವಿಲೀನದ ಎರಡನೇ ಸುತ್ತಿನಲ್ಲಿ ವಿಭಿನ್ನ ಕಾರ್ಯ ವೈಖರಿ, ಭೌಗೋಳಿಕ, ಸಾಂಸ್ಕೃತಿಕ, ಭಾಷಾ ಮತ್ತು ತಂತ್ರಜ್ಞಾನ ವೇದಿಕೆ ಹಿನ್ನೆಲೆಯ ಕರ್ನಾಟಕ ಮೂಲದ “ವಿಜಯಾ ಬ್ಯಾಂಕ್‌’ ಮತ್ತು ಮಹಾರಾಷ್ಟ್ರ ಮೂಲದ “ದೇನಾ ಬ್ಯಾಂಕ್‌’ಗಳನ್ನು ಗುಜರಾತ್‌ ಮೂಲದ “ಬ್ಯಾಂಕ್‌ ಆಫ್ ಬರೋಡಾ’ದಲ್ಲಿ ವಿಲೀನಗೊಳಿಸಿತು. ಏಪ್ರಿಲ್‌ 1, 2019ರಂದು ಕಾರ್ಯರೂಪಕ್ಕೆ ಬಂದ ಈ ವಿಲೀನ ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿದ್ದು, ಸರ್ಕಾರವು ಬ್ಯಾಂಕುಗಳ ವಿಲೀನವನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸಲು ದಾಪುಗಾಲು ಹಾಕುತ್ತಿದೆ. ವರದಿಗಳ ಪ್ರಕಾರ ಈ ಕ್ಯಾಲೆಂಡರ್‌ ಅಥವಾ ಹಣಕಾಸು ವರ್ಷ ಮುಗಿಯುವ ಮೊದಲು ಬ್ಯಾಂಕುಗಳ ಮೆಗಾ ವಿಲೀನ ಪೂರ್ಣವಾಗುವ ಸಂಭವವಿದೆ.

ಮುಂದಿನ ಬ್ಯಾಂಕ್‌ ವಿಲೀನಗಳು ಯಾವುವು?
ಹಣಕಾಸು ಮಂತ್ರಾಲಯದ ಚಿಂತನೆ ಮತ್ತು ಕಾರ್ಯ ಸೂಚಿಯಂತೆ ದೇಶದಲ್ಲಿ ಒಟ್ಟೂ ಬ್ಯಾಂಕುಗಳ ಸಂಖ್ಯೆ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಸೇರಿ 6 ಬ್ಯಾಂಕುಗಳಿಗೆ ಇಳಿಯುವ ಸಾಧ್ಯತೆ ಇದೆ. ಯಾವ ಬ್ಯಾಂಕ್‌ನಲ್ಲಿ ಯಾವ ಬ್ಯಾಂಕುಗಳು ವಿಲೀನವಾಗಬಹುದು ಎನ್ನುವ ಬಗೆಗೆ ನಿರ್ದಿಷ್ಟ ಮತ್ತು ನಿಖರ ಮಾಹಿತಿ ಇನ್ನೂ ಹೊರಬರಬೇಕಾಗಿದೆ. ಕೆಲವು ಮಾಧ್ಯಮಗಳ ವರದಿ ಪ್ರಕಾರ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌, ಯೂನಿಯನ್‌ ಬ್ಯಾಂಕ್‌ ಮತ್ತು ಬ್ಯಾಂಕ್‌ ಆಫ್ ಇಂಡಿಯಾಗಳನ್ನು ಪೇರೆಂಟ್‌ ಅಥವಾ ಮಾತೃ ಬ್ಯಾಂಕ್‌ಗಳೆಂದು ಗುರುತಿಸಿದ್ದು, ಇವುಗಳಲ್ಲಿ ಕ್ರಮವಾಗಿ ಈ ಕೆಳಗಿನಂತೆ ಉಳಿದ ಸಣ್ಣ ಮತ್ತು ಮಧ್ಯಮ ಪ್ರಮಾಣದ ಬ್ಯಾಂಕುಗಳನ್ನು ವಿಲೀನಗೊಳಿಸುವ ಚಿಂತನೆ ನಡೆದಿದೆ.
∙ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌: ಓರಿಯಂಟಲ್‌ ಬ್ಯಾಂಕ್‌ ಆಫ್ ಕಾಮರ್ಸ್‌, ಅಲಹಾಬಾದ್‌ ಬ್ಯಾಂಕ್‌, ಇಂಡಿಯನ್‌ ಬ್ಯಾಂಕ್‌ ಮತ್ತು ಕಾರ್ಪೊರೇಷನ್‌ ಬ್ಯಾಂಕ್‌
∙ ಬ್ಯಾಂಕ್‌ ಆಫ್ ಇಂಡಿಯಾ: ಆಂಧಾÅ ಬ್ಯಾಂಕ್‌ ಮತ್ತು ಬ್ಯಾಂಕ್‌ ಆಫ್ ಮಹಾರಾಷ್ಟ್ರ
∙ ಕೆನರಾ ಬ್ಯಾಂಕ್‌: ಯುಕೋ ಬ್ಯಾಂಕ್‌, ಸಿಂಡಿಕೇಟ್‌ ಬ್ಯಾಂಕ್‌ ಮತ್ತು ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌
∙ ಯೂನಿಯನ್‌ ಬ್ಯಾಂಕ್‌ ಇಂಡಿಯಾ: ಐಡಿಬಿಐ ಬ್ಯಾಂಕ್‌ ಮತ್ತು ಸೆಂಟ್ರಲ್‌ ಬ್ಯಾಂಕ್‌ ಆಫ್ ಇಂಡಿಯಾ ಮತ್ತು ಯುನೈಟೆಡ್‌ ಬ್ಯಾಂಕ್‌ ಆಫ್ ಇಂಡಿಯಾ ಈ ರೀತಿ ದೇಶದಲ್ಲಿನ ಸಾರ್ವಜನಿಕ ರಂಗದ ಬ್ಯಾಂಕುಗಳ ಸಂಖ್ಯೆಯನ್ನು 21ರಿಂದ 6ಕ್ಕೆ ಇಳಿಸುವ ದೂರಗಾಮಿ ಚಿಂತನೆ ರೂಪುಗೊಳ್ಳುವ ಸಾಧ್ಯತೆ ಇದೆ. ಇದು ಅಂತಿಮ ಪಟ್ಟಿಯಲ್ಲ. ವಿಲೀನದ ಸಾಧ್ಯಾಸಾಧ್ಯತೆಯನ್ನು ವಿವಿಧ ಕೋನಗಳಲ್ಲಿ ನೋಡಿ, ವಿಶ್ಲೇಷಿಸಿ, ಅಭ್ಯಸಿಸಿ ಯೋಗ್ಯವಾದ ಮತ್ತು ಕಾರ್ಯಸಾಧ್ಯವಾದ ಸೂತ್ರವನ್ನು ರೂಪಿಸುವ ಕರಡು ಪಟ್ಟಿ. ಅಂತಿಮ ನಿರ್ಣಯ ಹೊರಹೊಮ್ಮುವಾಗ ಈ ಪಟ್ಟಿಯಲ್ಲಿ ಕೆಲವು ಬದಲಾವಣೆಗಳನ್ನು ನಿರೀಕ್ಷಿಸಬಹುದು. ಭಾರತದಲ್ಲಿ 159 ಶೆಡ್ನೂಲ್ಡ್‌ ಕಮರ್ಷಿಯಲ್‌ ಬ್ಯಾಂಕುಗಳು ಇದ್ದು 1,44,952 ಶಾಖೆಗಳನ್ನು ಹೊಂದಿವೆ. ಈ ಸಂಖ್ಯೆಯನ್ನು ತುರ್ತಾಗಿ ಇಳಿಸುವ ಅವಶ್ಯಕತೆ ಇದೆ.

ವಿಲೀನದ ಹಿಂದಿನ ಉದ್ದೇಶಗಳೇನು ಮತ್ತು ಈ ವಿಲೀನಕ್ಕೆ ಯಾಕಿಷ್ಟು ಅವಸರ?

ಬ್ಯಾಂಕುಗಳ ನಿರ್ವಹಣಾ ವೆಚ್ಚವನ್ನು ತಗ್ಗಿಸುವುದು ಮತ್ತು ತನ್ಮೂಲಕ ಸುಸ್ತಿ ಸಾಲವನ್ನು ಮ್ಯಾನೇಜ್‌ ಮಾಡುವುದು. ವಿದೇಶಿ ಬ್ಯಾಂಕುಗಳಿಗೆ ಹೋಲಿಸಿದರೆ ನಮ್ಮ ಬ್ಯಾಂಕುಗಳ ಕ್ಯಾಪಿಟಲ್‌ ಬೇಸ್‌ ತುಂಬಾ ಕಡಿಮೆ. ಬ್ಯಾಂಕುಗಳ ಕ್ಯಾಪಿಟಲ್‌ ಬೇಸ್‌ ತಂಬಾ ಕಡಿಮೆ ಇರುವುದರಿಂದ ಕೆಲವು ವಿದೇಶಿ ಬ್ಯಾಂಕುಗಳು ಭಾರತೀಯ ಬ್ಯಾಂಕುಗಳ ಸಂಗಡ ಹಣಕಾಸು ವ್ಯವಹಾರ ನಡೆಸಲು ಹಿಂದೇಟು ಹಾಕುತ್ತವೆಯಂತೆ. ಇದೇ ಕಾರಣಕ್ಕೆ ಒಂದು ವಿದೇಶಿ ಬ್ಯಾಂಕು ಭಾರತೀಯ ಬ್ಯಾಂಕ್‌ ಒಂದರ Letter Of Creditನ್ನ ಮಾನ್ಯ ಮಾಡಲು ಮೀನ ಮೇಷ ಎಣಿಸಿತ್ತಂತೆ. ಸ್ಟೇಟ್‌ ಬ್ಯಾಂಕ್‌ನ ಸಹವರ್ತಿ ಬ್ಯಾಂಕುಗಳು ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದಲ್ಲಿ ವಿಲೀನವಾಗುವ ತನಕ, ಯಾವುದೇ ಭಾರತೀಯ ಬ್ಯಾಂಕ್‌, ಜಗತ್ತಿನ 100 ಅತಿ ದೊಡ್ಡ ಬ್ಯಾಂಕುಗಳ ಪಟ್ಟಿಯಲ್ಲಿ ಇರಲಿಲ್ಲ. ಬ್ಯಾಂಕುಗಳ ವಿಲೀನದಿಂದ ಬ್ಯಾಂಕುಗಳ ಗಾತ್ರ ದೊಡ್ಡದಾಗುತ್ತಿದ್ದು, ಅಂತಾರಾಷ್ಟ್ರೀಯವಾಗಿ ಸ್ಪರ್ಧಾತ್ಮಕವಾಗುತ್ತವೆ ಮತ್ತು ಕ್ಯಾಪಿಟಲ್‌ ಬೇಸ್‌ ಹೆಚ್ಚುವುದರಿಂದ ರಿಸರ್ವ್‌ ಬ್ಯಾಂಕ್‌ ಕ್ಯಾಪಿಟಲ್‌ ಮರುಪೂರಣ ಮಾಡುವ ಅವಶ್ಯಕತೆ ಕಡಿಮೆಯಾಗುತ್ತದೆ. ಸಾವಿರಾರು ಕೋಟಿಯ ಸಾಲದ ಬೇಡಿಕೆಯನ್ನು ಬೇರೆ ಬ್ಯಾಂಕುಗಳ ಸಹಾಯವಿಲ್ಲದೇ ಏಕಾಂಗಿಯಾಗಿ ನಿರ್ಧರಿಸಬಹುದು. ಸಣ್ಣ ಬ್ಯಾಂಕುಗಳ ಬಿಜಿನೆಸ್‌ ಅವಕಾಶಗಳು ಭೌಗೋಳಿಕವಾಗಿ, ವ್ಯವಹಾರ ಪ್ರಮಾಣದ ದೃಷ್ಟಿಯಲ್ಲಿ ಮತ್ತು ಸೀಮಿತವಾಗಿದ್ದು, ದೊಡ್ಡ ಬ್ಯಾಂಕುಗಳ ಮಧ್ಯೆ ವ್ಯವಹಾರಕ್ಕಾಗಿ ಸೆಣಸಬೇಕಾಗುತ್ತದೆ. ಬ್ಯಾಂಕ್‌ ಶಾಖೆಗಳ ದಟ್ಟಣೆ ಕಡಿಮೆಯಾಗಿ, ಎಲ್ಲಾ ಬ್ಯಾಂಕುಗಳು ಬಿಜಿನೆಸ್‌ ಪಡೆಯುವಂತಾಗುತ್ತದೆ.

ಬ್ಯಾಂಕುಗಳ ವಿಲೀನದಿಂದ ಶಾಖೆಗಳ over lapping ಅಗುತ್ತಿದ್ದು, ಕೆಲವು ಶಾಖೆಗಳ rationalisation (ಮುಚ್ಚುವಿಕೆ ಅಥವಾ ಸ್ಥಳಾಂತರ) ಅನಿವಾರ್ಯವಾಗುತ್ತದೆ. ಸ್ಟೇಟ್‌ ಬ್ಯಾಂಕ್‌ ಸಹವರ್ತಿ ಬ್ಯಾಂಕುಗಳು ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದಲ್ಲಿ ವಿಲೀನವಾದಾಗ ಸುಮಾರು ಒಂದು ಸಾವಿರ ಶಾಖೆಗಳನ್ನು rationalisationಗೆ ಒಳಪಡಿಸಲಾಗಿದೆಯಂತೆ. ಬ್ಯಾಂಕ್‌ ಆಫ್ ಬರೋಡಾದಲ್ಲಿ ವಿಜಯಾ ಬ್ಯಾಂಕ್‌ ಮತ್ತು ದೇನಾ ಬ್ಯಾಂಕುಗಳನ್ನು ವಿಲೀನಗೊಳಿಸಿದಾಗ ಸುಮಾರು 800-900 ಶಾಖೆಗಳು rationalisationಗೆ ಒಳಪಡುತ್ತಿದೆಯಂತೆ. ಮುಂದಿನ ದಿನಗಳಲ್ಲಿ ಆಗುವ ವಿಲೀನದಿಂದ ಈ ಸಂಖ್ಯೆ ಗಮನಾರ್ಹವಾಗಿ ಏರುತ್ತಿದ್ದು, ಉದ್ಯೋಗ ನಷ್ಟ ಮತ್ತು ಬ್ಯಾಂಕುಗಳಲ್ಲಿ ಉದ್ಯೋಗ ಕಡಿತದ ಹೆಸರಿನಲ್ಲಿ ಬ್ಯಾಂಕ್‌ ಕಾರ್ಮಿಕರ ಸಂಘಗಳು ಬೀದಿಗಿಳಿಯುವುದನ್ನು ಅಲ್ಲಗಳೆಯಲಾಗದು.

ಒಂದು ಕಡೆ ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಟಾಪ್‌ ಗೇರ್‌ನಲ್ಲಿ ಇದ್ದರೆ, ಇನ್ನೊಂದು ಕಡೆ ಹೊಸ ಖಾಸಗಿ ಬ್ಯಾಂಕುಗಳನ್ನು ತೆರೆಯಲು ಅನುಮತಿ ನೀಡಲಾಗುತ್ತಿದೆ. ಸಾರ್ವಜನಿಕ ರಂಗದ ಬ್ಯಾಂಕುಗಳ ಶಾಖಾ ವಿಸ್ತರಣೆಗೆ ಮನಸ್ವೀ ಅನುಮತಿ ಕೊಡುವಾಗ ಸರ್ಕಾರ ಇಂಥ ಬೆಳವಣಿಗೆಯನ್ನು ಚಿಂತಿಸಲಿಲ್ಲವೇಕೆ ಎಂದು ಕೇಳುವ ಬ್ಯಾಂಕ್‌ ಕಾರ್ಮಿಕ ಸಂಘಗಳ ಪ್ರಶ್ನೆಯಲ್ಲಿ ಅರ್ಥವಿದೆ. ಬ್ಯಾಂಕ್‌ ಶಾಖೆಗಳನ್ನು rationalisation ಗೆ ಒಳಪಡಿಸುವಾಗ ಲಾಭ ಗಳಿಸದ ಗ್ರಾಮಾಂತರ ಶಾಖೆಗಳು ಗುರಿಯಾಗುವ ಸಂಭವ ಹೆಚ್ಚಾಗಿರುವುದರಿಂದ ದೇಶದ ಗ್ರಾಮೀಣ ಭಾಗಗಳು ಬ್ಯಾಂಕಿಂಗ್‌ ಸೇವೆಯಿಂದ ವಂಚಿತರಾ ಗಬಹುದು ಎನ್ನುವ ಅವರ ಆತಂಕದಲ್ಲಿ ತಥ್ಯವಿಲ್ಲದಿಲ್ಲ. ಬ್ಯಾಂಕುಗಳ ವಿಲೀನ ಎನ್ನುವ ದಶಕಗಳ ಚಿಂತನೆ ಒಂದು ತಾರ್ಕಿಕ ಅಂತ್ಯ ಕಾಣುವ ಕಾಲ ಸನ್ನಿಹಿತವಾಗಿದೆ.

-ರಮಾನಂದ ಶರ್ಮಾ
ನಿವೃತ್ತ ಬ್ಯಾಂಕರ್‌

Advertisement

Udayavani is now on Telegram. Click here to join our channel and stay updated with the latest news.

Next