Advertisement

Smell of First Rain: ಹೊಸಮಳೆಯ ಮೃಣ್ಮಯ ಗಂಧ

03:33 PM Apr 24, 2024 | Team Udayavani |

ಕಾಲಕ್ಕನುಸಾರವಾಗಿ ಸಜ್ಜುಗೊಳ್ಳುವುದನ್ನು ಪ್ರಕೃತಿಯನ್ನು ನೋಡಿಯೇ ಕಲಿಯಬೇಕು. ಕುಡಿಯುವ ಸೆಖೆಯಿಂದ ತಂಪಿನ ಶೈತ್ಯದ ಹವಾಗುಣಗಳನ್ನು ಕಾಲಕ್ಕೆ ತಕ್ಕಂತೆ ಪ್ರಕೃತಿಯು ಅನುಸರಿಸಿ ಪಸರಿಸುತ್ತದೆ. ಸೆಖೆಯ ಧಗೆಗೆ ಬಸವಳಿಯುವ ಬಿಸಿಗಾಲದ ಮಧ್ಯಕಾಲದಲ್ಲಿ ಅಲ್ಲೊಂಂದು ಇಲ್ಲೊಂದು ಬೀಸಿದ ಮಳೆ ಸ್ವಲ್ಪಮಟ್ಟಿನ ಬದಲಾವಣೆಯಂತೂ ನೀಡಿವೆ.

Advertisement

ನೀವು ನೋಡಿರಬಹುದು, ಮೊದಲಮಳೆ ಬೀಸುವುದು ಸಂಜೆಯ ಮೇಲೆಯೇ. ಅಲ್ಲಲ್ಲಿ ಬಿಸಿಗಾಳಿಯ ಸುಳಿ ಸುಳಿದು, ತಂಪನೆಯ ಗಾಳಿ ಅಗಂತುಕನಂತೆ ಬಂದು ಧೂಳೆಬ್ಬಿಸಿದಾಗ ಮಳೆಬರುವ ಗುಮಾನಿ ಏರ್ಪಡುವುದು. ಮೊದಲ ಹನಿ ಬಿದ್ದಾಗಲೇ ಸಂಶಯ ನಿವಾರಿಸಿ ಸ್ಪಷ್ಟವಾಗುವುದು.

ಇಷ್ಟಕ್ಕಾಗಲೇ ಗುಡುಗು ತಡವರಿಸಿ ಢವಗುಟ್ಟುವುದು ಮಳೆಯ ಬರುವಿಕೆಯ ಪೂರ್ವರಂಗದ ಸಜ್ಜಿಕೆಯಂತೆಯೇ. ಮೊದಲ ಮಳೆಯ ಹನಿಗಳು ದೊಡ್ಡ ಗಾತ್ರದವು. ಕೆಲವೊಮ್ಮೆ ಮೋಡ ಕರಗುವ ಆತುರದಲ್ಲಿ ಆಲಿಕಲ್ಲಿನ ಮಳೆಯಾಗುವುದೂ ಮೊದಲ ಸೇಚನದಲ್ಲೇ. ಸಂಜೆಯಾಗುವ ಹೊತ್ತಿಗೆ, ಹಗಲು ಆರುವ ಸಂಧ್ಯೆಗೆ, ಜಗತ್ತೆಲ್ಲವೂ ಆತುರದಲ್ಲಿರುವಾಗುವಾಗಲೇ ಮೊದಲ ಮಳೆ ಭೇಟಿ ನೀಡುವುದು.

ಮಳೆ ದಬದಬನೆ ಹನಿಯುವುದು. ಅದು ಹನಿಸುವುದಕ್ಕಿಂತ ಹೆಚ್ಚಿನದೇ. ಗಾಳಿಯಾಡುವ ಹೊತ್ತಿಗೆ ಕಿಟಕಿ ಬಾಗಿಲುಗಳ ಸಂದಿಯಲ್ಲೆಲ್ಲಾ ನುಸುಳಿ ಮಳೆ ಮನ-ಮನೆ ಮುಟ್ಟುವುದು. ಮೂಲೆಯಲ್ಲಿಟ್ಟ, ಜಂತಿಗೆ ನೇತುಹಾಕಿದ, ಮೈಮುದುರಿ ಕುಳಿತಿದ್ದ ಕೊಡೆಗೆ ಮೈಕೊಡವಿ ಜಡ ತೆಗೆಯುವ ಸಮಯ. ರೈನ್‌ ಕೋಟ್‌, ಛತ್ರಿಯ ಆವಶ್ಯಕತೆಯನ್ನು ನೆನಪುಮಾಡುವ ಮಳೆಯದು. ಅರ್ಧ ತಾಸಿನ ಪಾಡಿಗೆ ಈ ಮಳೆ ಅಡ್ಡಿಯಿಲ್ಲ.

ರಸ್ತೆ, ಹಳ್ಳ, ಗುಂಡಿಗಳಲೆಲ್ಲಾ ಭೇದವೆಣಿಸದೆ ತುಂಬಿ ಹರಿಯುವುದು ಮಳೆ. ಮನೆಯೊಳಗೂ ನುಸುಳಿ ಪ್ರವಾಹವಾಗುವಷ್ಟು ಜೋರಿನ ಮಳೆಯಿದು. ಮಳೆಗೆ ಹೊಮ್ಮುವ ಮಣ್ಣಿನ ವಾಸನೆ, ನೆಲದ ಮೇಲಾಗುವ ಸುಮಪಾತದ ಚಂದ ಹೇಳತೀರದು. ಮಳೆ ಹನಿಗಳು ಮಣ್ಣಿಗೆ ತಾಕಿ, ಕಣಗಳಿಗೆ ಸ್ಪರ್ಶಿಸಿ ಧೂಳು ಸುಗಂಧವಾಗಿ ಹಬೆಯಾಡಲು ಆರಂಭವಾಗುತ್ತದೆ.

Advertisement

ಗಂಧವತೀ ಪೃಥ್ವೀ ಅಂದದ್ದು ಅದಕ್ಕೇ. ಅದರೊಡನೆ ಗಾಳಿ-ಮಳೆಗೆ ಭೂಮಿಯನ್ನು ಅಪ್ಪುವ ಬಗೆ-ಬಗೆಯ ಹೂವುಗಳು ಗಂಧವನ್ನು ಹೆಚ್ಚಿಸುತ್ತವೆ. ಈ ಮಾಸಕ್ಕೆ ಬಿರಿಯುವ ಕೆಂಪು ಹಳದಿ ಹೂಗಳು ನೆಲವನ್ನು ಅಲಂಕರಿಸಿ ಶೋಭಿಸುತ್ತವೆ. ಸಂಜೆಯ ಬೀದಿ ದೀಪಗಳ ಬೆಳಕನ್ನು ಮಳೆಯ ಹನಿಗಳು ಚದುರಿಸಿ ಹನಿಗಳು ಮಿನುಗುವುದನ್ನು ನೋಡುವುದೇ ಅಂದ. ಮಾರ್ಚ್‌ ಕೊನೆಗೆ ಏಪ್ರಿಲ್‌ ಆರಂಭಕ್ಕೆ ಶುರುವಾಗುವುದು ಪರಿಸರಣ ಮಳೆ.

ಸಂವಹನೀಯ ಮಳೆಯೆಂದು ಇನ್ನೊಂದು ಹೆಸರು. ವಾತಾವರಣ ಕುದಿದು, ರೇಜಿಗೆಯಾಗುವಷ್ಟು ಬೆವರಿ, ಸಂಜೆಗೆ ತಂಪ ತರುವ ಮಳೆ ಇದು. ಗಾಳಿ ಮತ್ತು ಮಳೆಗೆ ಆಸ್ತಿ-ಪ್ರಾಣ ಹಾನಿಗಳಾಗುವುದೂ ಇದೆ. ಮರಗಳ ಕೊಂಬೆ ಮುರಿದು ಬೀಳುವುದು, ನೀರ್ಗೊಳವೆಗಳು ತುಂಬಿ ಹರಿದು ಕಸವೆಲ್ಲಾ ರಸ್ತೆಗೆ ಪಸರಿಸುವುದು, ಹೂಗಳು ಪಾದಚಾರಿ ಪಥಕ್ಕೆಲ್ಲಾ ಹರಡಿ ಜಾರುವ ಸನ್ನಿವೇಶಗಳೆಲ್ಲವೂ ಮೊದಲ ಮಳೆಗೆ ದಾಖಲಾಗುವ ಸಂಗತಿಗಳು.

ನಗರವೊಂದು ಮಳೆಗಾಲಕ್ಕೆ ಹೇಗೆ ಸಜ್ಜುಗೊಳ್ಳಬೇಕೆಂಬ ದೀರ್ಘಾವಲೋಕನಗಳು ನಡೆಯುವುದೇ ಮೊದಲಮಳೆಯ ಹೊತ್ತಿಗೆ. ಹೋಳಿಹುಣ್ಣಿಮೆಯ ಅನಂತರ ವಸಂತಾಗಮನ ಶುರು. ಮಾವಿನ ಮಳೆ, ಚೈತ್ರದಮಳೆ, ಬೈಸಾಖೀ ಮಳೆ ತದನಂತರ ಆರಂಭವೇ. ಬಾರಿಯ ಹನಿಗಳು ಸೇಚನವಾದರೆ ಸೆಖೆ ದೀರ್ಘ‌ವಾಗುವ ನಂಬಿಕೆ. ಎಷ್ಟಾದರೂ ಸೆಖೆಗಾಲವಲ್ಲವೇ.

ಶಿಶಿರದ ಕೊನೆಗೆ ವರ್ಷದ ಹೊಸ ಮಳೆಯ ಆಗಮನ ರಾಜ್ಯಾದ್ಯಂತ ಆಗಿದೆ. ಸಂವತ್ಸರದ ಕೊನೆಯ ಮಳೆಯಿದು. ಆಯಾ ವರುಷದ ಜೂನ್‌ ಒಂದರಿಂದ ಗಣನೆಗೆ ಬರುವ ಜಲಶಾಸ್ತ್ರದ ಪ್ರಕಾರವೂ ಈ ಹೊಸ ಮಳೆ ಹಳತೇ. ಹೊಸಮಳೆಯ ಬೀಸಗೆ ಕೆರೆಕಟ್ಟೆ ತುಂಬದಿದ್ದರೂ, ಸೆಖೆ ದ್ವಿಗುಣವಾದರೂ, ವಿದ್ಯುತ್‌ ಸ್ಥಗಿತವಾದರೂ ಮೊದಲ ಮಳೆಯ ಅನುಭೂತಿ ವಿಶಿಷ್ಟ. ಮಳೆ ಚಂಚಲವಾಗಿಯಾದರೂ ಬರುತ್ತಿರಲಿ. ಏಕೆಂದರೆ ಮಳೆಯೆಂಬುದು ಸದಾ ಚಿಗುರೊಡೆಯುವ ಆಶಾಭಾವನೆ.

ವಿಶ್ವನಾಥ ಭಟ್‌

ಧಾರವಾಡ

Advertisement

Udayavani is now on Telegram. Click here to join our channel and stay updated with the latest news.

Next