Advertisement

Prisons: ಜೈಲುಗಳ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದ ಸುಪ್ರೀಂ ಸಮಿತಿ

11:15 PM Aug 31, 2023 | Team Udayavani |

ಕಾರಾಗೃಹಗಳ ಸುಧಾರಣೆಗಾಗಿನ ಸುಪ್ರೀಂ ಕೋರ್ಟ್‌ನ ಸಮಿತಿ ಗುರು ವಾರ ತನ್ನ ವರದಿಯನ್ನು ಸಲ್ಲಿಸಿದ್ದು ದೇಶದಲ್ಲಿರುವ ಜೈಲುಗಳು ಮತ್ತು ಕೈದಿಗಳ ದಯನೀಯ ಸ್ಥಿತಿಯ ಬಗೆಗೆ ಬೆಳಕು ಚೆಲ್ಲಿದೆ. ಜೈಲುಗಳಲ್ಲಿನ ಮೂಲಸೌಕರ್ಯಗಳು, ಕೈದಿಗಳ ಸ್ಥಿತಿಗತಿ, ಕೈದಿಗಳ ಅಸಹಜ ಸಾವು, ಕಾರಾ ಗೃಹಗಳಲ್ಲಿನ ಅಧಿಕಾರಿಗಳು ಮತ್ತು ಸಿಬಂದಿಯ ಕೊರತೆ, ಮಂಗಳಮುಖೀ ಕೈದಿಗಳ ಪರಿಸ್ಥಿತಿ ಸಹಿತ ಎಲ್ಲ ಅಂಶಗಳ ಬಗೆಗೆ ಈ ವರದಿಯಲ್ಲಿ ಸಮಿತಿ ಅಂಕಿಅಂಶಗಳ ಸಹಿತ ಸವಿಸ್ತಾರವಾಗಿ ವಿವರಿಸಿ ಇವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹಲವಾರು ಪ್ರಮುಖ ಶಿಫಾರಸುಗಳನ್ನು ಮಾಡಿದೆ. ಅಷ್ಟು ಮಾತ್ರವಲ್ಲದೆ 2016ರ ಮಾದರಿ ಕಾರಾಗೃಹ ಕೈಪಿಡಿಯನ್ನು ಶೀಘ್ರವೇ ಪುನರ್‌ ವಿಮರ್ಶಿಸಿ ಹಾಲಿ ಪರಿಸ್ಥಿತಿಗನುಗುಣವಾದ ಹೊಸ ಕೈಪಿಡಿಯನ್ನು ರಚಿಸಿ ಜಾರಿಗೆ ತರುವ ಅಗತ್ಯತೆಯ ಬಗೆಗೆ ಒತ್ತಿ ಹೇಳಿದೆ.

Advertisement

ದೇಶದ ಜೈಲು ಗ ಳ ಲ್ಲಿ ಹೆಚ್ಚುತ್ತಿರುವ ಕೈದಿಗಳ ಸಂಖ್ಯೆಗನುಗುಣವಾಗಿ ಜೈಲುಗಳ ಸಂಖ್ಯೆಯಾಗಲೀ, ಮೂಲಸೌಕರ್ಯವಾಗಲೀ, ಸಿಬಂದಿ ಯಾಗಲೀ ಹೆಚ್ಚುತ್ತಿಲ್ಲ. ಸಣ್ಣಪುಟ್ಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿ ಗಳನ್ನು ಬಂಧಿಸಿ ಅವರನ್ನು ಜೈಲುಗಳಿಗೆ ಕಳುಹಿಸುವುದು, ಪ್ರಕರಣಗಳ ತನಿಖೆ ಮತ್ತು ವಿಚಾರಣೆ ಪ್ರಕ್ರಿಯೆಯಲ್ಲಿನ ವಿಳಂಬದ ಕಾರಣದಿಂದಾಗಿಯೂ ಜೈಲುಗಳಲ್ಲಿ ಕೈದಿಗಳ ದಟ್ಟಣೆ ಹೆಚ್ಚುವಂತಾಗಿದೆ. ಇತ್ತ ಒಂದಿಷ್ಟು ಗಮನ ಹರಿಸಿದ್ದೇ ಆದಲ್ಲಿ ಜೈಲುಗಳ ಪರಿಸ್ಥಿತಿಯಲ್ಲಿ ಕೊಂಚ ಸುಧಾರಣೆಯಾದೀತು ಎಂದು ಸುಪ್ರೀಂ ನಿವೃತ್ತ ನ್ಯಾ| ಅಮಿತಾವ ರಾಯ್‌ ನೇತೃತ್ವದ ತ್ರಿಸದಸ್ಯ ಸಮಿತಿ ಅಭಿಪ್ರಾಯಪಟ್ಟಿದೆ. ವಿಚಾರಣಾಧೀನ ಕೈದಿಗಳ ಪ್ರಕರಣಗಳ ಪರಾಮರ್ಶೆ ಸಮಿತಿ ವ್ಯವಸ್ಥೆಯನ್ನು ಜಿಲ್ಲಾ ಮಟ್ಟದಲ್ಲಿ ಜಾರಿಗೆ ತರುವುದು, ತ್ವರಿತಗತಿಯಲ್ಲಿ ತನಿಖೆ ಮತ್ತು ವಿಚಾರಣ ಪ್ರಕ್ರಿಯೆ ನಡೆಸುವುದು, ಸಣ್ಣಪುಟ್ಟ ಪ್ರಕರಣಗಳು ಹಾಗೂ 5 ಮತ್ತು ಅದಕ್ಕಿಂತ ಹೆಚ್ಚಿನ ವರ್ಷಗಳಿಂದ ವಿಚಾರಣೆ ಬಾಕಿ ಉಳಿದಿರುವ ಪ್ರಕರಣಗಳ ವಿಲೇವಾರಿಗಾಗಿ ವಿಶೇಷ ತ್ವರಿತಗತಿಯ ನ್ಯಾಯಾಲಯಗಳ ಸ್ಥಾಪನೆ, ವಿಳಂಬಿತ ಪ್ರಕರಣಗಳ ವಿಚಾರಣೆಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಮತ್ತು ಸೆಷನ್ಸ್‌ ಕೋರ್ಟ್‌ಗಳ ಮೇಲೆ ಆಯಾಯ ರಾಜ್ಯಗಳ ಹೈಕೋರ್ಟ್‌ಗಳು ನಿಗಾ ಇರಿಸುವ ಜತೆಯಲ್ಲಿ ಕಾಲಕಾಲಕ್ಕೆ ಸೂಕ್ತ ನಿರ್ದೇಶನಗಳನ್ನು ನೀಡುವುದು… ಈ ಎಲ್ಲ ಕ್ರಮಗಳನ್ನು ಕೈಗೊಂಡಲ್ಲಿ ಕಾರಾಗೃಹಗಳಲ್ಲಿನ ಕೈದಿಗಳ ದಟ್ಟಣೆಯನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದೆ.

ಸಿಬಂದಿ ಕೊರತೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರಾಗೃಹ ಇಲಾಖೆ ತ್ವರಿತ ಕ್ರಮ ಕೈಗೊಳ್ಳಬೇಕು. ಜೈಲುಗಳಲ್ಲಿ ಸಂಭವಿಸುತ್ತಿರುವ ಅಸಹಜ ಸಾವುಗಳಲ್ಲಿ ಕೈದಿಗಳ ಆತ್ಮಹತ್ಯೆಯ ಸಂಖ್ಯೆಯೇ ಅಧಿಕವಾಗಿದ್ದು ಇದನ್ನು ತಡೆಯುವ ನಿಟ್ಟಿನಲ್ಲಿ ಕಾರಾಗೃಹ ಕಟ್ಟಡಗಳ ನಿರ್ಮಾಣದ ಸಂದರ್ಭ­ದಲ್ಲಿಯೇ ವಿನ್ಯಾಸದಲ್ಲಿ ಆವಶ್ಯಕ ಮಾರ್ಪಾಡುಗಳನ್ನು ಮಾಡಬೇಕು. ಕೈದಿಗಳಿಗೆ ಸರಕಾರಿ ಆರೋಗ್ಯ ವಿಮಾ ಸೌಲಭ್ಯಗಳಡಿ ಆರೋಗ್ಯ ಸೇವೆ ಒದಗಿಸಲು ಕ್ರಮ ಕೈಗೊಳ್ಳಬೇಕು. ಮಂಗಳಮುಖೀ ಕೈದಿಗಳಿಗೂ ಕೈದಿಗಳಿಗೆ ನೀಡಲಾಗುವ ಎಲ್ಲ ಸೌಕರ್ಯಗಳನ್ನು ಒದಗಿಸಬೇ ಕು ಎಂದು ಸಮಿತಿ ತಿಳಿ ಸಿದೆ. ಕಾರಾಗೃಹಗಳ ದಯನೀಯ ಪರಿಸ್ಥಿತಿಯ ಬಗೆಗೆ ಪ್ರತೀ ಬಾರಿ ಪ್ರಸ್ತಾವ ವಾಗಿ ಚರ್ಚೆಗಷ್ಟೇ ಸೀಮಿತಗೊಳ್ಳುತ್ತಿದ್ದು ಈ ಬಾರಿಯಾದರೂ ಸುಪ್ರೀಂ ಕೋರ್ಟ್‌ ಸಮಿತಿ ಮಾಡಿರುವ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ದೇಶದ ನ್ಯಾಯಾಂಗ ವ್ಯವಸ್ಥೆ ಮತ್ತು ಸರಕಾರ ಕಾರ್ಯೋ ನ್ಮುಖವಾಗಬೇಕು. ಕೈದಿಗಳ ಹಕ್ಕಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಸರಕಾರದ್ದಾಗಿದೆ ಎಂಬುದನ್ನು ಮರೆಯಬಾರದು.

Advertisement

Udayavani is now on Telegram. Click here to join our channel and stay updated with the latest news.

Next