Advertisement

ತಾನೇ ಕಟ್ಟಿದ ಕಟ್ಟಡದಲ್ಲಿ ಪ್ರಾಣ ಬಿಟ್ಟ ಮೇಲ್ವಿಚಾರಕ!

03:24 PM Mar 26, 2019 | Team Udayavani |
ಧಾರವಾಡ: ಕಿಲ್ಲರ್‌ ಕಟ್ಟಡ ಕಾಮಗಾರಿ ಆರಂಭದಿಂದಲೂ ಆ ಕಟ್ಟಡದ ಮೇಲುಸ್ತುವಾರಿ ವಹಿಸಿಕೊಂಡು ಹಂತ-ಹಂತವಾಗಿ ಕಟ್ಟಡದಲ್ಲಿ ಅಂತಸ್ತು ಏರಿಸುವಲ್ಲಿ ಕಾಳಜಿ ವಹಿಸಿದ್ದು ಆ ಕಟ್ಟಡದ ಸೂಪರ್‌ವೈಸರ್‌ ಆಗಿದ್ದ ಸಹದೇವ ಸಾಳುಂಕೆ.
ಆದರೆ, ತಾವೇ ಕಾಳಜಿಯಿಂದ ಮೇಲೇರಿಸಿದ್ದ ಕಟ್ಟಡದ ಅಡಿಯಲ್ಲಿಯೇ ಸಿಲುಕಿ ಅವರು ಪ್ರಾಣಬಿಟ್ಟರು!
ಕಟ್ಟಡದ ಕಾಮಗಾರಿ ಆರಂಭಕ್ಕೂ ಮೊದಲು ಅದರ ಸೂಪರ್‌ವೈಸರ್‌ ಆಗಿ ನೇಮಕಗೊಂಡವರು ಸಹದೇವ ಸಾಳುಂಕೆ (50). ಕಟ್ಟಡದ ಪ್ರತಿಯೊಂದು ಕಾಮಗಾರಿಯಲ್ಲೂ ಇವರ ಪಾತ್ರವಿದೆ. ಕಟ್ಟಡಕ್ಕೆ ಬೇಕಾದ ಸಾಮಗ್ರಿ ನೋಡಿಕೊಳ್ಳುವುದರಿಂದ ಹಿಡಿದು ಸಮಯಕ್ಕೆ ಸರಿಯಾಗಿ ಅವುಗಳ ವಿತರಣೆ ಹಾಗೂ ಕೂಲಿ ಕಾರ್ಮಿಕರಿಗೆ ವೇತನ ಕೊಡುವ ಮೇಲುಸ್ತುವಾರಿಯೂ ಇವರದ್ದೇ ಆಗಿತ್ತು. ಅವರ ದಾರುಣ ಸಾವಿಗೆ ಕಾರಣವಾದ ಕಟ್ಟಡವನ್ನು ಅವರೇ ಸಿದ್ಧಪಡಿಸಿಕೊಂಡಂತಾಗಿದ್ದು ಮಾತ್ರ ವಿಪರ್ಯಾಸ. ಈ ಕಟ್ಟಡದ ಅಡಿಯಲ್ಲಿ ಸಿಲುಕಿ ಪ್ರಾಣಬಿಟ್ಟ 19 ಜನರಲ್ಲಿ ಕೊನೆಯದಾಗಿ ಇವರೇ ಶವವಾಗಿ ಹೊರಬಂದರು. ರವಿವಾರ ತಡ ರಾತ್ರಿ ಅವರ ಶವ ಹೊರ ತೆಗೆದಾಗ ಕುಟುಂಬ ವರ್ಗದ ಆಕ್ರಂದನ ಮುಗಿಲು ಬಿಟ್ಟಿತ್ತು.
ತುಂಬು ಕುಟುಂಬ: ಸಹದೇವ ಅವರಿಗೆ ಆರು ಜನ ಹೆಣ್ಣು ಮಕ್ಕಳಿದ್ದು, ಒಬ್ಬ ಮಗನಿದ್ದಾನೆ. ಈ ಪೈಕಿ ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಿಕೊಟ್ಟಿದ್ದು, ಕೀರ್ತಿ, ಆರತಿ, ಹರೀಶ ಎಂಬ ಮಕ್ಕಳು ಇನ್ನೂ ಕಲಿಯುತ್ತಿದ್ದಾರೆ. ತಂದೆ ಕಟ್ಟಡದಡಿ ಸಿಲುಕಿದ ವಿಷಯ ತಿಳಿದು ಮಗಳು ಕೀರ್ತಿ ಆಘಾತಕ್ಕೆ ಒಳಗಾಗಿ ಆಸ್ಪತ್ರೆ ಸೇರಿದ್ದಾರೆ. ಇನ್ನು ಪತಿ ಶವ ಕಂಡು ಆಘಾತದಲ್ಲಿರುವ ಪತ್ನಿ ಮೀನಾಕ್ಷಿ ಅವರನ್ನು ಯಾರಿಂದಲೂ ಸಮಾಧಾನಪಡಿಸಲು ಆಗುತ್ತಿಲ್ಲ.
ಕಟ್ಟಡ ಕುಸಿದ ಮಂಗಳವಾರ ಬೆಳಗ್ಗೆ ಸಹದೇವ ಅವರು ಕೆಲಸಕ್ಕೆ ಹಾಜರಾಗಿ ಮಧ್ಯಾಹ್ನ 3 ಗಂಟೆಗೆ ಊಟಕ್ಕಾಗಿ
ಮನೆಗೆ ಮರಳಿದ್ದರು. ಈ ವೇಳೆ ರೊಟ್ಟಿ, ಪಲೆ ತಿನ್ನುವಷ್ಟರಲ್ಲಿ ಆ ಹೊತ್ತಿಗೆ ಕಟ್ಟಡ ಕಾರ್ಮಿಕರೊಬ್ಬರು ಕೂಲಿ ಕೊಡುವಂತೆ
ಮೊಬೈಲ್‌ ಕರೆ ಮಾಡಿದ್ದರು. ಕರೆ ಸ್ವೀಕರಿಸಿದ ಬಳಿಕ ಊಟದಿಂದ ಅರ್ಧಕ್ಕೆ ಎದ್ದು ಹೋಗಿದ್ದರು. ಕಟ್ಟಡದ ಒಳಗಡೆ ಹೋದ ಐದು ನಿಮಿಷಕ್ಕೆ ಇಡೀ ಕಟ್ಟಡವೇ ಕುಸಿದು ಬಿದ್ದಿದೆ. ಕಟ್ಟಡದಡಿ ಸಿಲುಕಿ 7ನೇ ದಿನಕ್ಕೆ ಅವರ ಶವ ಹೊರ ತೆಗೆಯುವ ಮೂಲಕ ಕಾರ್ಯಾಚರಣೆ ಅಂತ್ಯಗೊಂಡಿದೆ.
ಬದುಕು ಕಟ್ಟಿಕೊಳ್ಳಲು ಬಂದವರು ಪ್ರಾಣವನ್ನೆ  ಬಿಟ್ಟರು ಕಿಲ್ಲರ್‌ ಕಟ್ಟಡದ ಅಡಿ ಸಿಲುಕಿ ಪ್ರಾಣ ಬಿಟ್ಟ 19 ಜನರೂ ತಮ್ಮ ಬದುಕು ಕಟ್ಟಿಕೊಳ್ಳುವ ಸಲುವಾಗಿ ಈ ಕಟ್ಟಡಕ್ಕೆ ಬಂದವರು. ಈ ಪೈಕಿ ಕೆಲವರು ಗೌಂಡಿ, ಲೇಬರ್‌ ಕೆಲಸಕ್ಕಾಗಿ ಬಂದವರಾಗಿದ್ದರು.
ಇನ್ನೂ ಕೆಲವರು ಕಟ್ಟಡದಲ್ಲಿ ಮಳಿಗೆ ಹೊಂದಿದವರು. ಅದಕ್ಕಾಗಿ ಲಕ್ಷಾಂತರ ಹಣ ವ್ಯಯಿಸಿದ್ದಾರೆ. ಕೆಲವರು ಸಾಲ ಮಾಡಿದ್ದರೆ ಇನ್ನೂ ಕೆಲವರು ತಮ್ಮ ಸೈಟ್‌ ಮಾರಿ ಹಾಣ ಹಾಕಿದ್ದರು. ಬದುಕು ನಿರ್ವಹಣೆಯೊಂದಿಗೆ ಭದ್ರ ಭವಿಷ್ಯ ಕಟ್ಟಿಕೊಳ್ಳುವ ಇಚ್ಛೆಯಿಂದ ಬಂದ ಇವರೆಲ್ಲರೂ ಕಿಲ್ಲರ್‌ ಕಟ್ಟಡದಡಿ ಸಿಲುಕಿ ಬದುಕೇ ಕಳೆದುಕೊಳ್ಳುವಂತಾಯಿತು.
ವಾಘು, ನವಲು ಬದುಕಲೇ ಇಲ್ಲ!
ಕಟ್ಟಡದಡಿ ಸಿಲುಕಿದ್ದ ಹೊಲ್ತಿಕೋಟಿಯ ಕೆ.ಆರ್‌. ನಗರದ ನಿವಾಸಿಗಳಾದ ನವಲು ಝೋರೆ (25), ವಾಘು ಝೋರೆ
(35) ಕೊನೆಗೂ ಬದುಕಿ ಬರಲೇ ಇಲ್ಲ. ಇವರಿಗಾಗಿ ಗೌಳಿ ಜನಾಂಗವೇ ಕಳೆದ ಆರು ದಿನಗಳಿಂದ ಘಟನಾ ಸ್ಥಳದಲ್ಲಿ
ಬೀಡುಟ್ಟಿತ್ತು. ಗೌಳಿ ಜನಾಂಗದಿಂದ ಕಟ್ಟಡದ ಕೆಲಸಕ್ಕೆ ಬರುತ್ತಿದ್ದ ನಾಲ್ವರ ಪೈಕಿ ದೀಲೀಪ್‌ ಹಾಗೂ ಸಂಗೀತ ದಂಪತಿ
ಬದುಕುಳಿದಿದ್ದು, ಇವರ ಅಳಿಯರಾದ ನವಲು ಹಾಗೂ ವಾಘು ಮಾತ್ರ ಬದುಕಿ ಬರಲಿಲ್ಲ. ರವಿವಾರ ತಡರಾತ್ರಿ ನಡೆದ ಕಾರ್ಯಾಚರಣೆಯಲ್ಲಿ 17ನೇ ಶವಗಾಗಿ ನವಲು ಹಾಗೂ 18ನೇ ಶವವಾಗಿ ವಾಘು ಅವರನ್ನು ಹೊರ ತೆಗೆಯಲಾಯಿತು. ಇಬ್ಬರು ಬದುಕಿ ಬಂದ ಖುಷಿ ಒಂದೆಡೆಯಾದರೆ, ಇಬ್ಬರು ದಾರುಣ ಸಾವು ಕಂಡ ನೋವು ಈ ಕುಟುಂಬವಷ್ಟೇ ಅಲ್ಲ
ಇಡೀ ಗೌಳಿ ಜನಾಂಗದಲ್ಲಿ ಮಡುಗಟ್ಟಿದೆ.
 ವಾಘುಗೆ ಮದುವೆ ಆಗಿದ್ದು, ಪತ್ನಿ ಸೋನುಬಾಯಿ ಜೊತೆ ಒಂದು ಗಂಡು ಮತ್ತು ಹೆಣ್ಣು ಮಕ್ಕಳಿದ್ದಾರೆ. ನವಲುಗೆ ಮದುವೆ ಆಗಿಲ್ಲ. ಎರಡು ತಿಂಗಳ ಹಿಂದೆಯಷ್ಟೇ ಈತನ ತಂದೆ ಮೃತಪಟ್ಟಿದ್ದು, ಮನೆಯ ಇಡೀ ಜವಾಬ್ದಾರಿ ಈತನ ಮೇಲೆ
ಬಿದ್ದಿದೆ. ವಾಘು ಹಾಗೂ ನವಲು ಅವರ ತಂದೆ ಅಣ್ಣ-ತಮ್ಮಂದಿರಾಗಿರುವ ಕಾರಣ ಇಬ್ಬರೂ ಸಹೋದರರಾಗಿದ್ದು,
ಕುಟುಂಬದ ನೊಗ ಹೊತ್ತಿದ್ದ ಇವರಿಬ್ಬರು ದಾರುಣ ಸಾವು ಕಂಡಿದ್ದು, ಕುಟುಂಬಗಳ ಆಧಾರಸ್ತಂಭಗಳೇ ಕುಸಿದು
ಹೋದಂತಾಗಿದೆ.
ಪಗಾರಕ್ಕಾಗಿ ಬಂದವರು ಹೆಣವಾದರು: ಗೌಳಿ ಜನಾಂಗದಲ್ಲಿ ಐದು ದಿನಗಳ ಕಾಲ ಹೋಳಿ ಹುಣ್ಣಿಮೆ ಆಚರಣೆ
ಮಾಡಲಾಗುತ್ತದೆ. ಹಬ್ಬದಾಚರಣೆ ಹಿನ್ನೆಲೆಯಲ್ಲಿ ಮಂಗಳವಾರ ರಜೆ ಆಗಿದ್ದರೂ ಪಗಾರ ತೆಗೆದುಕೊಳ್ಳಲು
ನವಲು ಹಾಗೂ ವಾಘು ಬಂದಿದ್ದರು. ಆದರೆ, ಪಗಾರ ತೆಗೆದುಕೊಂಡು ಮರಳಿ ಹೋಗಲು ಆಗಲೇ ಇಲ್ಲ. ಪಗಾರ ತೆಗೆದುಕೊಂಡು ಬರುತ್ತಾನೆ ಎಂದು ಕಾಯುತ್ತಿದ್ದ ಕುಟುಂಬದವರಿಗೆ ಅವರ ಶವಗಳು 7 ದಿನಗಳ ಬಳಿಕ ಲಭ್ಯವಾಗಿವೆ. ಹೋಳಿ ಹಬ್ಬ ಆಚರಣೆ ಮಾಡದೇ ಕುಳಿತಿದ್ದ ಗೌಳಿಗರೂ ದುಃಖದ ಮಡುವಿನಲ್ಲಿದ್ದಾರೆ.
ಶಶಿಧರ್‌ ಬುದ್ನಿ
Advertisement

Udayavani is now on Telegram. Click here to join our channel and stay updated with the latest news.

Next